Advertisement

ಅಧಿಕಾರದಲ್ಲಿರುವವರೇ ಮಂದಿರ ಮರೆತಿದ್ದಾರೆ!

06:10 AM Dec 10, 2018 | Team Udayavani |

ಹೊಸದಿಲ್ಲಿ: ‘ಈಗ ಅಧಿಕಾರದಲ್ಲಿ ಇರುವವರೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಈಗ ಮರೆತಿದ್ದಾರೆ’ – ಹೀಗೆಂದು ಆರೆಸ್ಸೆಸ್‌ನ ಸರ ಕಾರ್ಯವಾಹ ಸುರೇಶ್‌ ಭಯ್ಯಾಜಿ ಜೋಶಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಅಗತ್ಯ ಬಿದ್ದರೆ ಮಂದಿರ ನಿರ್ಮಾಣ ವಿಚಾರದಲ್ಲಿ ಸೂಕ್ತ ಕಾನೂನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ರವಿವಾರ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಬೃಹತ್‌ ಜಾಥಾದಲ್ಲಿ ಮಾತನಾಡಿದ ಅವರು, ‘ಈಗ ಅಧಿಕಾರದಲ್ಲಿರುವವರು ರಾಮ ಮಂದಿರ ನಿರ್ಮಾಣದ ವಾಗ್ಧಾನ ಮಾಡಿದ್ದರು. ಅವರು ಜನರ ಅಭಿಪ್ರಾಯ ಕೇಳಬೇಕು ಮತ್ತು ಅವರ ಬೇಡಿಕೆ ಈಡೇರುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಧಿಕಾರದಲ್ಲಿರುವವರಿಗೆ ಜನರ ಭಾವನೆಗಳ ಬಗ್ಗೆ ಗೊತ್ತಿದೆ. ದೇಶಕ್ಕೆ ರಾಮ ರಾಜ್ಯ ಬೇಕಾಗಿದೆ. ಹಾಗಂತ ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇವೆ’ ಎಂದಿದ್ದಾರೆ.

1.5 ಲಕ್ಷ ಮಂದಿ ಭಾಗಿ


ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 1.5 ಲಕ್ಷಕ್ಕೂ ಅಧಿಕ ಮಂದಿ ಸಾಧುಗಳು-ಸಂತರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಈ ಜಾಥಾದಲ್ಲಿ ಭಾಗವಹಿಸಿದ್ದಾರೆ. ಅಯೋಧ್ಯೆಯಲ್ಲಿನ ಜಮೀನು ಯಾರಿಗೆ ಸೇರಬೇಕು ಎಂಬ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿದ್ದು, ಜನವರಿಯಿಂದ ವಿಚಾರಣೆ ಆರಂಭವಾಗಲಿದೆ. ವಿಎಚ್‌ಪಿ ಅಧ್ಯಕ್ಷ ವಿಷ್ಣು ಸದಾಶಿವ ಕೋಕ್ಜೆ ಮತ್ತು ಸಂಘಟನೆಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಸಹಿತ ಪ್ರಮುಖರು ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಪ್ರಯಾಗ್‌ ರಾಜ್‌ನಲ್ಲಿ ಈ ಅಭಿಯಾನ ಕೊನೆಗೊಳ್ಳಲಿದೆ. ಜ.31, ಫೆ.1ರಂದು ಕೊನೆಯ ಹಂತದ ಧರ್ಮ ಸಂಸತ್‌ ನಡೆಯಲಿದೆ.



Advertisement

Udayavani is now on Telegram. Click here to join our channel and stay updated with the latest news.

Next