Advertisement

4000 ಜನಸಂಖ್ಯೆ ಇರುವ ಈ ಪುಟ್ಟ ಹಳ್ಳಿಯಲ್ಲಿದ್ದಾರೆ 150 ಮಂದಿ ವೈದ್ಯರು

07:37 PM Feb 19, 2023 | Team Udayavani |

ಆಂಧ್ರಪ್ರದೇಶ: ಅದೊಂದು 4000 ಜನಸಂಖ್ಯೆ ಇರುವ ಪುಟ್ಟ ಹಳ್ಳಿ, ಈ ಹಳ್ಳಿಯಲ್ಲಿರುವುದು 7 ತರಗತಿವರೆಗಿನ ಶಾಲೆ ಆದರೆ ಈ ಪುಟ್ಟ ಹಳ್ಳಿಯಲ್ಲಿ ಕಲಿತ ಸುಮಾರು 150 ಮಂದಿ ವೈದ್ಯರಾಗಿ ಉನ್ನತ ಹುದ್ದೆಯಲ್ಲಿ ದೇಶ ವಿದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ಹೌದು ಇದು ನಂಬಲೇ ಬೇಕಾದ ವಿಚಾರ, ಆಂಧ್ರಪ್ರದೇಶದ ಅಮದಲವಾಲಸ ಮಂಡಲ್‌ನಲ್ಲಿರುವ ಕಾನುಗುಲವಾಲಸ ಎಂಬ ಪುಟ್ಟ ಹಳ್ಳಿಯೇ ಈಗ ಹೆಚ್ಚು ಪ್ರಸಿದ್ದಿ ಪಡೆದ ಹಳ್ಳಿಯಾಗಿದೆ.
ಈ ಹಳ್ಳಿಯಲ್ಲಿ 500 ಕುಟುಂಬಗಳು ವಾಸಿಸುತ್ತಿದ್ದು, ಸುಮಾರು 2,200 ಮತದಾರರಿದ್ದಾರೆ. ಮಂಡಲ ಪ್ರಧಾನ ಕಚೇರಿಯಿಂದ ಈ ಗ್ರಾಮಕ್ಕೆ ಕೇವಲ 2 ಕಿ.ಮೀ.ಗಳಷ್ಟೇ ದೂರವಿದ್ದರೂ, ಕೇವಲ ಪ್ರಾಥಮಿಕ ಶಿಕ್ಷಣ ಮಾತ್ರ ಈ ಹಳ್ಳಿಯಲ್ಲಿ ಪಡೆಯಬಹುದಾಗಿತ್ತು. ಆದರೂ ಈ ಹಳ್ಳಿಯಲ್ಲಿ ಸುಮಾರು 1970ರಿಂದ ಇಂದಿನವರೆಗೆ ಸುಮಾರು 150 ಮಂದಿ ವೈದ್ಯರಾಗಿ ಸರಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹಳ್ಳಿಯ ವೈದ್ಯರ ಹಿನ್ನೆಲೆ : 1970 ರ ದಶಕದಲ್ಲಿ ಗ್ರಾಮದ ಮೊದಲ ವೈದ್ಯರಾದ ಬೆಂಡಿ ಚಂದ್ರ ರಾವ್ ಅವರಿಂದ ಕಾರ್ಯ ಪ್ರಾರಂಭವಾಯಿತು, ನಂತರ ಗ್ರಾಮದ ನೂಕಾ ಭಾಸ್ಕರ ರಾವ್ ಅವರು ಚಂದ್ರರಾವ್ ಅವರಿಂದ ಸ್ಫೂರ್ತಿ ಪಡೆದರು ಎಂಬುದು ಇಲ್ಲಿನ ಸ್ಥಳೀಯರ ಮಾತು, ಅಷ್ಟು ಮಾತ್ರವಲ್ಲದೆ ಈ ಜೋಡಿ ವೈದ್ಯರು ಈ ಊರಿನಲ್ಲಿ ವೈದ್ಯಕೀಯ ಅಧ್ಯಯನದತ್ತ ಆಸಕ್ತಿ ತೋರಿಸಲು ಪ್ರಾರಂಭಿಸಿದ ಅನೇಕ ಯುವಕರಿಗೆ ಸ್ಫೂರ್ತಿಯಾಗಿದ್ದರಂತೆ. ಈ ಗ್ರಾಮವು 1985 ರಿಂದ ಪ್ರತಿ ವರ್ಷ ಕನಿಷ್ಠ ಎರಡರಿಂದ ಐದು ವೈದ್ಯರನ್ನು ಸೃಷ್ಟಿ ಮಾಡುತ್ತಿದೆಯಂತೆ.

ಕನುಗುಲವಲಸೆಯಲ್ಲಿ ಕಲಿತ ವೈದ್ಯರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ, ವಿಶಾಖಪಟ್ಟಣದ ಕಿಂಗ್ ಜಾರ್ಜ್ ಆಸ್ಪತ್ರೆ, ಏಮ್ಸ್ ಮಂಗಳಗಿರಿ, ನಿಮ್ಸ್ ಹೈದರಾಬಾದ್ ಮತ್ತು ದೇಶದ ಇತರ ಪ್ರತಿಷ್ಠಿತ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ಗ್ರಾಮದ ಕೆಲವು ವೈದ್ಯರು ವಿದೇಶದ ವಿವಿಧ ಆಸ್ಪತ್ರೆಗಳು ಮತ್ತು ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದಾರಂತೆ.

Advertisement

ಈ ಕುರಿತು ಮಾತನಾಡಿದ ನೂಕಾ ಭಾಸ್ಕರ ರಾವ್, “ನಾನು ಕೃಷಿ ಕುಟುಂಬದಿಂದ ಬಂದವನು ಮತ್ತು ನನ್ನ ಪೋಷಕರು ಅನಕ್ಷರಸ್ಥರು. ನಮ್ಮ ಗ್ರಾಮದ ಮೊದಲ ವೈದ್ಯರಾಗಿದ್ದ ಬೆಂಡಿ ಚಂದ್ರರಾವ್ ಅವರ ಪ್ರೇರಣೆಯಿಂದ 1971ರಲ್ಲಿ ನಾನು ಎಂಬಿಬಿಎಸ್ ಮುಗಿಸಿ ವೈದ್ಯನಾದೆ. ಅಮದಾಲವಲಸದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಅಭ್ಯಾಸ ಮಾಡಿ ನಂತರ ಸರ್ಕಾರಿ ಸೇವೆಗೆ ಸೇರಿದ್ದೇನೆ. ನಾನು 2006 ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಡಾ.ಬೊಡ್ಡೆಪಾಲು ಸುರೇಶ್, “ನಮ್ಮ ಗ್ರಾಮದಲ್ಲಿ ಇಂದಿನ ಪೀಳಿಗೆಯ ಯುವಕರಿಗೆ ವೈದ್ಯನಾಗುವುದು ಗುರಿಯಾಗಿದೆ. ಬಹುಪಾಲು ಯುವಕರು ವೈದ್ಯಕೀಯ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ನಮ್ಮ ಹಿರಿಯರ ಮಾರ್ಗದರ್ಶನ ಯುವಕರು ವೈದ್ಯರಾಗಲು ಸಹಕಾರಿಯಾಗಿದೆ. ಅಷ್ಟುಮಾತ್ರವಲ್ಲದೆ ಇಲ್ಲಿನ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದೇನೆ ಅಷ್ಟುಮಾತ್ರವಲ್ಲದೆ ಹಳ್ಳಿಯಿಂದ ಬರುವ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಜೊತೆಗೆ ಅವರ ಪ್ರಯಾಣ ವೆಚ್ಚವನ್ನೂ ತಾವೇ ಭರಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಸಮರಕ್ಕಿಳಿದ ಡಿ.ರೂಪಾ ; ಖಾಸಗಿ ಫೋಟೋಗಳ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next