Advertisement

“ಬರದ’ಬಳ್ಳಾರಿಯಲ್ಲಿ ಈ ಬಾರಿ ಭರ್ಜರಿ ಬಿತ್ತನೆ

04:18 PM Jul 03, 2018 | Team Udayavani |

ಬಳ್ಳಾರಿ: ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಅಧಿಕವಾಗಿದ್ದು, ಕೇವಲ 6 ದಿನಗಳಲ್ಲಿ 10 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಹೀಗಾಗಿ ಸತತ ಬರದಿಂದ ತತ್ತರಿಸಿದ್ದ ರೈತರಲ್ಲಿ ಈ ಬಾರಿಯ ಮುಂಗಾರು ಹಂಗಾಮು ಆಶಾದಾಯಕ ನಿರೀಕ್ಷೆ ಮೂಡಿಸಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸು ಪಡೆದುಕೊಳ್ಳುತ್ತಿದೆ.

Advertisement

ಕಳೆದ ಎರಡೂಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಜೂನ್‌ ತಿಂಗಳ ಮೊದಲ ವಾರದಲ್ಲೇ ಮುಂಗಾರು ಉತ್ತಮ ಆರಂಭ ಪಡೆದುಕೊಂಡಿದೆ. ಈ ಬಾರಿ ವಾಡಿಕೆಗಿಂತಲೂ ಅತ್ಯಧಿಕ ಮಳೆ ದಾಖಲಾಗಿದೆ. ಕೆಲ ದಿನಗಳ ಹಿಂದಷ್ಟೇ ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಪರಿಣಾಮ ಜಲಾಶಯದಲ್ಲಿ ಸುಮಾರು 25 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಜಲಾನಯದ ಪ್ರದೇಶದಲ್ಲಿ ಈಗ ಮತ್ತೆ ಉತ್ತಮ ಮಳೆಯಾಗುತ್ತಿರುವುದರಿಂದ ಆರು ದಿನಗಳಲ್ಲಿ 10 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ.

ಜೂನ್‌ 27 ರಂದು 5,027 ಕ್ಯುಸೆಕ್‌ ಇದ್ದ ಒಳಹರಿವಿನ ಪ್ರಮಾಣ ಜೂನ್‌ 28 ರಂದು 5,135 ಕ್ಯುಸೆಕ್‌ಗೆ ಏರಿದೆ. ಜೂ. 29 ರಂದು 6,465 ಕ್ಯುಸೆಕ್‌ ಹೆಚ್ಚಳವಾಗಿದ್ದು, ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ಜೂ.30 ರಂದು ಒಳಹರಿವಿನ ಪ್ರಮಾಣ ಒಮ್ಮೆಲೆ 25,036 ಕ್ಯುಸೆಕ್‌ಗೆ ಏರಿಕೆಯಾಗಿದೆ. ಜುಲೈ 1ರಂದು 49,424 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದೆ. 

 ಜುಲೈ 2ರಂದು ಒಳಹರಿವಿನ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಸೋಮವಾರ 31,780 ಕ್ಯುಸೆಕ್‌ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ನೀರಿನ ಮಟ್ಟ 1611.47 ಅಡಿ ತಲುಪಿದ್ದು, ಒಟ್ಟು 38.139 ಟಿಎಂಸಿ ನೀರು ಸಂಗ್ರಹವಾಗಿದೆ. 160 ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ಆರು ದಿನಗಳಲ್ಲಿ 10 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 1581.94 ಅಡಿ ಇದ್ದು, 11,258 ಕ್ಯುಸೆಕ್‌ ಒಳಹರಿವಿನ ಪ್ರಮಾಣವಿದ್ದು, ಜಲಾಶಯದಲ್ಲಿ ಕೇವಲ 5.014 ಟಿಎಂಸಿ ನೀರು ಸಂಗ್ರಹವಾಗಿತ್ತು. ಹೀಗಾಗಿ ಹೊರ ಹರಿವನ್ನು ಸ್ಥಗಿತಗೊಳಿಸಲಾಗಿತ್ತು.

ಒಂದೆಡೆ ಜಲಾಶಯದಲ್ಲೂ ನೀರು ಸಂಗ್ರಹವಾಗಿದ್ದರೆ ಮತ್ತೂಂದೆಡೆ ವಾಡಿಕೆಗಿಂತಲೂ ಅತ್ಯಧಿಕ  ಮಳೆಯಾಗಿದೆ. ಹೀಗಾಗಿ ಜಿಲ್ಲೆಯ ಮಳೆಯಾಶ್ರಿತ ತಾಲೂಕುಗಳಲ್ಲಿ ಈಗಾಗಲೇ ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿದೆ. ಇನ್ನು ಜಲಾಶಯದ ನೀರನ್ನು ಅವಲಂಬಿಸಿದ ತಾಲೂಕುಗಳಾದ ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರಗುಪ್ಪ, ಕಂಪ್ಲಿ, ಕುರುಗೋಡಿನಲ್ಲಿ ಭತ್ತ, ಕಬ್ಬು ನಾಟಿ ಆರಂಭಗೊಳ್ಳಬೇಕಿದೆ. ಮಳೆಯಾಶ್ರಿತ ತಾಲೂಕುಗಳ ಪೈಕಿ ಹಡಗಲಿಯಲ್ಲಿ ಅತಿ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ  ತ್ತನೆಯಾಗಿದೆ.ಇನ್ನುಳಿದ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಸಂಡೂರು, ಕೂಡ್ಲಿಗಿ ತಾಲೂಕುಗಳಲ್ಲಿ ಬಿತ್ತನೆ ಕಾರ್ಯ ಬಿರುಸು ಪಡೆದಿದೆ.

Advertisement

 ಸಂಡೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ ತಾಲೂಕಿನ ಅತಿಹೆಚ್ಚು ಪ್ರದೇಶದಲ್ಲಿ ಏಕದಳ ಧಾನ್ಯ ಬಿತ್ತನೆ ನಡೆದಿದೆ. ಈ ಬಾರಿ 2,12,240 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಸದ್ಯ 72,482 ಹೆಕ್ಟೇರ್‌ ಬಿತ್ತನೆಯಾಗಿದೆ. ಸಂಡೂರು ತಾಲೂಕಿನಲ್ಲಿ 3156 ಹೆಕ್ಟೇರ್‌ ಜೋಳ, 6565 ಹೆಕ್ಟೇರ್‌ ಮೆಕ್ಕೆಜೋಳ, ಕೂಡ್ಲಿಗಿ 62790 ಹೆಕ್ಟೇರ್‌ ಜೋಳ, 11960 ಮೆಕ್ಕೆಜೋಳ, ಹಗರಿಬೊಮ್ಮನಳ್ಳಿ 3725 ಹೆಕ್ಟೇರ್‌ ಜೋಳ, 6771 ಹೆಕ್ಟೇರ್‌ ಮೆಕ್ಕೆಜೋಳ, ಹಡಗಲಿ 5570 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿದೆ. 

ಇನ್ನು ದ್ವಿದಳ ಧಾನ್ಯಗಳ ಬಿತ್ತನೆ ಸ್ವಲ್ಪ ಕಡಿಮೆಯಾಗಿದ್ದು, ಇನ್ನುಮೇಲೆ ಚುರುಕು ಪಡೆದುಕೊಳ್ಳುವ ಸಾಧ್ಯತೆಯಿದೆ. ಈ ವರೆಗೆ 5,993 ಹೆಕ್ಟೇರ್‌ನಲ್ಲಿ ತೊಗರಿ, 154 ಹೆಕ್ಟೇರ್‌ಲ್ಲಿ ಹುರುಳಿ ಹೆಸರು 477, ಅಲಸಂದಿ 240 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅದೇರೀತಿ ಜಿಲ್ಲೆಯ ತಾಲೂಕುವಾರು ಬೇಡಿಕೆಯಿರುವ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡುತ್ತಿರುವ ಕೃಷಿ ಇಲಾಖೆಯು ಈ ವರೆಗೆ 3840.46 ಕ್ವಿಂಟಲ್‌ ಬೀಜವನ್ನು ರೈತರಿಗೆ ವಿತರಿಸಿದೆ. ಈ ಪೈಕಿ 2892 ಕ್ವಿಂಟಲ್‌ ನಲ್ಲಿ 1950 ಕ್ವಿಂಟಲ್‌ ಭತ್ತ ವಿತರಿಸಲಾಗಿದೆ. ಜೋಳ 650 ಕ್ವಿಂಟಲ್‌ ನಲ್ಲಿ 372, ರಾಗಿ 65 ಕ್ವಿಂಟಲ್‌ನಲ್ಲಿ 25, ಮೆಕ್ಕೆಜೋಳ 6508 ಕ್ವಿಂಟಲ್‌ ಲ್ಲಿ 3178, ಸಜ್ಜೆ 578 ಕ್ವಿಂಟಲ್‌ನಲ್ಲಿ 224, ತೊಗರಿ 900 ಕ್ವಿಂಟಲ್‌ನಲ್ಲಿ 663, ಹೆಸರು 40 ಕ್ವಿಂಟಲ್‌ನಲ್ಲಿ 32 ಕ್ವಿಂಟಲ್‌ ವಿತರಣೆಯಾಗಿದ್ದು, ಇನ್ನಿತರೆ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಅಲ್ಲದೇ, ಈ ಬಾರಿ ನಿರೀಕ್ಷೆಗೂ ಮೀರಿ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದ್ದು, ನಿಗದಿತ ಅವಧಿಯಲ್ಲೇ ಎಚ್‌ಎಲ್‌ಸಿ, ಎಲ್‌ಎಲ್‌ಸಿ ಕಾಲುವೆಗಳಿಗೆ ನೀರು ಹರಿಯುವ ವಿಶ್ವಾಸದಲ್ಲಿರುವ ರೈತರು ಈಗಾಗಲೇ ಬಿತ್ತನೆ ಪೂರ್ವ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next