Advertisement

ಮತ್ತೆ ಚಿಗುರೊಡೆದ ತೃತೀಯ ರಂಗದ ಕನಸು:  ಕೆಸಿಆರ್‌ ಲೆಕ್ಕಾಚಾರ

06:00 AM Mar 06, 2018 | |

ತೆಲಂಗಾಣದಲ್ಲಿ ಈಗಾಗಲೇ ಕೆಸಿಆರ್‌ ಸರಕಾರದ ವಿರುದ್ಧ ಚಿಕ್ಕದೊಂದು ಅಸಮಾಧಾನವಿದೆ. ಭ್ರಷ್ಟಾಚಾರವೂ ವ್ಯಾಪಕವಾಗಿ ನಡೆಯುತ್ತಿದೆ ಎಂಬ ಆರೋಪವಿದೆ. 

Advertisement

ಈಶಾನ್ಯದ ಮೂರು ರಾಜ್ಯಗಳಲ್ಲಿ ಬಿಜೆಪಿ ಮಾಡಿದ ಸಾಧನೆ ಮತ್ತೂಮ್ಮೆ ತೃತೀಯ ರಂಗದ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ವಿಶೇಷವೆಂದರೆ ಈ ಸಲ ತೃತೀಯ ರಂಗದ ಕನಸನ್ನು ಬಿತ್ತಿದವರು ಇಷ್ಟರ ತನಕ ರಾಷ್ಟ್ರೀಯ ರಾಜಕಾರಣದಲ್ಲಿ ಏನೇನೂ ಅಲ್ಲದ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌. 2019ರ ಮಹಾ ಚುನಾವಣೆಯಲ್ಲಿ ಬಿಜೆಪಿಯನ್ನು ಸಶಕ್ತವಾಗಿ ಎದುರಿಸಬೇಕಾದರೆ ತೃತೀಯ ರಂಗ ಅನಿವಾರ್ಯ ಎಂದು ಅವರು ಹೇಳಿರುವುದು ನಿಜ. ಆದರೆ ಈ ತೃತೀಯ ರಂಗದಲ್ಲಿ ಕಾಂಗ್ರೆಸ್‌ ಇರುವುದಿಲ್ಲ ಎನ್ನುವ ವಿಚಾರಕ್ಕೆ ಎಷ್ಟು ಪಕ್ಷಗಳು ಸಹಮತ ಸೂಚಿಸುತ್ತವೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ. ಆದರೆ ಸದ್ಯ ಕೆಸಿಆರ್‌ ಪ್ರಸ್ತಾವ ರಾಜಕೀಯ ವಲಯದಲ್ಲಿ ಸಣ್ಣದೊಂದು ಸಂಚಲವನ್ನುಂಟು ಮಾಡುವಲ್ಲಿ ಯಶಸ್ವಿಯಾಗಿದೆ. ಪಶ್ಚಿಮ ಬಂಗಾಳದಿಂದ ಮಮತಾ ಬ್ಯಾನರ್ಜಿ ಸ್ವತಹ ಕೆಸಿಆರ್‌ಗೆ ಫೋನ್‌ ಮಾಡಿ ಬೆಂಬಲ ಸೂಚಿಸಿದ್ದಾರೆ. ಅಂತೆಯೇ ಅಸಾದುದ್ದೀನ್‌ ಓವೈಸಿ, ಜಾರ್ಖಂಡ್‌ನ‌ ಹೇಮಂತ್‌ ಸೊರೇನ್‌ ಸೇರಿ ಹಲವು ಪ್ರಾದೇಶಿಕ ನಾಯಕರು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. 

ಹಾಗೇ ನೋಡಿದರೆ 2014ರ ಮಹಾ ಚುನಾವಣೆಗೂ ಮೊದಲೇ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಸಮಾನ ದೂರದಲ್ಲಿರುವ ತೃತೀಯ ರಂಗ ರಚಿಸುವ ಪ್ರಯತ್ನ ನಡೆದಿತ್ತು. ಆದರೆ ಈ ಐಡಿಯಾ ಹೊಳೆದಷ್ಟೇ ವೇಗವಾಗಿ ನೇಪಥ್ಯಕ್ಕೆ ಸರಿಯಿತು. ಅನಂತರ ಬಿಹಾರದಲ್ಲಿ ನಿತೀಶ್‌ ಕುಮಾರ್‌ ಮತ್ತು ಲಾಲೂ ಪ್ರಸಾದ್‌ ಯಾದವ್‌ ಸೇರಿಕೊಂಡು ಮಹಾ ಘಟಬಂಧನ್‌ ರಚಿಸಿ ಬಿಜೆಪಿಯನ್ನು ಮಣಿಸಿದಾಗ ಮತ್ತೂಮ್ಮೆ ತೃತೀಯ ರಂಗದ ಕುರಿತಾದ ಚರ್ಚೆ ಜೋರಾಯಿತು. ನಿತೀಶ್‌ ಕುಮಾರ್‌ ಅವರನ್ನೇ ತೃತೀಯ ರಂಗದ ಮುಂಚೂಣಿಯಲ್ಲಿ ನಿಲ್ಲಿಸುವುದು ಅರ್ಥಾತ್‌ ಪ್ರಧಾನಿ ಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವುದು ಎಂಬಲ್ಲಿವರೆಗೆ ಮಾತುಕತೆ ಮುಂದುವರಿದಿತ್ತು. ಆದರೆ ನಿತೀಶ್‌ ಮಹಾ ಘಟಬಂಧನ್‌ಗೆ ಕೈಕೊಟ್ಟು ಎನ್‌ಡಿಎ ಪಾಳೆಯ ಸೇರಿದ ಬಳಿಕ ಕೋಲ್ಡ್‌ ಸ್ಟೋರೇಜ್‌ ಸೇರಿದ್ದ ತೃತೀಯ ರಂಗ ಎಂಬ ಮೊಟ್ಟೆಗೆ ಇದೀಗ ಕೆಸಿಆರ್‌ ಕಾವು ಕೊಡಲು ತೊಡಗಿದ್ದು ಕುತೂಹಲಕಾರಿ ಬೆಳವಣಿಗೆ.  

ಇತಿಹಾಸವನ್ನು ಗಮನಿಸಿದಾಗ ದೇಶದಲ್ಲಿ ತೃತೀಯ ರಂಗ ಘೋರವಾಗಿ ವಿಫ‌ಲಗೊಂಡಿರುವುದಕ್ಕೆ ಧಾರಾಳ ಉದಾಹರಣೆಗಳು ಸಿಗುತ್ತವೆ. ತುರ್ತು ಪರಿಸ್ಥಿತಿಯ ಬಳಿಕ 1977ರಲ್ಲಿ ಜನತಾ ದಳ ಹೆಸರಿನಲ್ಲಿ ತೃತೀಯ ರಂಗ ಸರಕಾರ ಅಸ್ತಿತ್ವಕ್ಕೆ ಬಂದರೂ ಅದು ಅಲ್ಪಾಯುವಾಗಿತ್ತು. ಇಂದಿರಾ ಗಾಂಧಿಗೆ ರಾಜಕೀಯ ಮರುಜನ್ಮ ಕೊಟ್ಟದ್ದಷ್ಟೇ ಇದರ ಸಾಧನೆ. ಅನಂತರ 1993 ಮತ್ತು 1996ರಲ್ಲಿ ತೃತೀಯ ರಂಗದ ಪ್ರಯೋಗ ಮಾಡಿದಾಗ ಒಂದೋ ಕಾಂಗ್ರೆಸ್‌ ಇಲ್ಲವೇ ಬಿಜೆಪಿ ಬೆಂಬಲ ನೀಡಿದ್ದವು. ಆದರೆ ಈ ಸರಕಾರಗಳು ಕೂಡ ಹೆಚ್ಚು ಸಮಯ ಬಾಳಲಿಲ್ಲ. ಈ ಹಿನ್ನೆಲೆಯನ್ನು ಗಮನಿಸಿದಾಗ ದೇಶದಲ್ಲಿ ತೃತೀಯ ರಂಗಕ್ಕೆ ಭವಿಷ್ಯವಿಲ್ಲ ಎನ್ನಬೇಕಾಗುತ್ತದೆ. 

ಆದರೆ ಕೆಸಿಆರ್‌ ತೃತೀಯ ರಂಗದ ಕನಸಿನ ಹಿಂದೆ ಬೇರೆಯೇ ಲೆಕ್ಕಾಚಾರ ಇದೆ ಎನ್ನಲಾಗುತ್ತಿದೆ. 2014ರಲ್ಲಿ ಜಯಲಲಿತಾ ತಾನು ಪ್ರಧಾನಿಯಾಗುವ ಕನಸೊಂದನ್ನು ಬಿತ್ತಿದ್ದರು. ಜಯಲಲಿತಾ ಮುಂದಿನ ಪ್ರಧಾನಿ ಎಂದು ಸಾರುವ ಕೆಲವು ಬ್ಯಾನರ್‌ಗಳು ಕೂಡ ತಮಿಳುನಾಡಿನಲ್ಲಿ ಕಾಣಿಸಿಕೊಂಡಿದ್ದವು. ಉಳಿದ ರಾಜ್ಯಗಳಲ್ಲಿ ಈ ವಿಚಾರ ಹೆಚ್ಚು ಚರ್ಚೆಗೆ ಬರದಿದ್ದರೂ ತಮಿಳುನಾಡಿನಲ್ಲಿ ಮಾತ್ರ ಜಯಲಲಿತಾರ ಈ ಜೂಜು ಯಶಸ್ವಿಯಾಗಿತ್ತು. ತಮಿಳು ಅಸ್ಮಿತೆಯೆಂಬ ಭಾವನಾತ್ಮಕ ಅಂಶವನ್ನು ಬಡಿದೆಬ್ಬಿಸಿ ಪ್ರಬಲ ಮೋದಿ ಅಲೆಯ ನಡುವೆಯೂ ಅವರ ಪಕ್ಷ 39 ಸ್ಥಾನಗಳ ಪೈಕಿ 37ನ್ನು ಬಾಚಿಕೊಂಡಿತ್ತು. ತೆಲಂಗಾಣದಲ್ಲಿ ಈಗಾಗಲೇ ಕೆಸಿಆರ್‌ ಸರಕಾರದ ವಿರುದ್ಧ ಚಿಕ್ಕದೊಂದು ಅಸಮಾಧಾನವಿದೆ. ಭ್ರಷ್ಟಾಚಾರವೂ ವ್ಯಾಪಕವಾಗಿ ನಡೆಯುತ್ತಿದೆ ಎಂಬ ಆರೋಪವಿದೆ. ಆಡಳಿತ ವಿರೋಧಿ ಅಲೆ ಸೃಷ್ಟಿಯಾದರೆ ಮುಂದೆ ಅಧಿಕಾರ ಕಷ್ಟವಾಗಬಹುದು. ಹೀಗಾಗಿ ಕೆಸಿಆರ್‌, ಜಯಲಲಿತಾ ತಂತ್ರದ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ. ಅದೇ ರೀತಿ ಅವಿಭಜಿತ ಆಂಧ್ರದಲ್ಲಿ ಒಟ್ಟು 33 ಲೋಕಸಭಾ ಸ್ಥಾನಗಳಿವೆ. ಚಂದ್ರಬಾಬು ನಾಯ್ಡು ಜತೆಗೆ ಹೊಂದಾಣಿಕೆ ಮಾಡಿ, ತೆಲುಗು ಅಭಿಮಾನವನ್ನು ಮುಂದಿಟ್ಟುಕೊಂಡು 25ಕ್ಕೆ ಮೇಲ್ಪಟ್ಟು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾದರೆ ರಾಷ್ಟ್ರಮಟ್ಟದಲ್ಲೂ ಒಂದು ನಿರ್ಣಾಯಕ ಶಕ್ತಿಯಾಗಬಹುದು ಎಂಬ ಲೆಕ್ಕಾಚಾರವೂ ಕೆಸಿಆರ್‌ ಮನಸ್ಸಿನಲ್ಲಿರುವ ಸಾಧ್ಯತೆಯಿದೆ. ಚಿಕ್ಕ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಿ ತೃತೀಯ ರಂಗ ರಚಿಸುವುದು ಸವಾಲಿನ ಕೆಲಸವೇ ಸರಿ. ಆದರೆ ದೇಶದ ರಾಜಕೀಯ ಒಂದೇ ಪಕ್ಷದ ಕೈಯಲ್ಲಿ ಕೇಂದ್ರೀಕೃತವಾಗುತ್ತಿರುವ ಅಪಾಯಕಾರಿ ಸನ್ನಿವೇಶದಲ್ಲಿ ಹೀಗೊಂದು ಪ್ರಯತ್ನ ಪ್ರಾರಂಭ ಆಗಿರುವುದು ಸಕಾರಾತ್ಮಕ ನಡೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next