Advertisement

ಹೊಸ ಸವಾಲು ಎದುರಿಸಲು ಈಗಲೇ ಯೋಚಿಸಿ 

10:16 AM Mar 19, 2022 | Team Udayavani |

ದಾವಣಗೆರೆ: ನಾವು ಬದಲಾವಣೆಯ ಕಾಲ ಘಟ್ಟದಲ್ಲಿದ್ದೇವೆ. ಯಾವ ರೀತಿಯ ಬದಲಾವಣೆಯಾಗುತ್ತಿದೆ? ಇದರ ಪರಿಣಾಮ ಏನಾಗುತ್ತದೆ ಎಂಬುದರ ಬಗ್ಗೆ ದಲಿತ ಸಂಘಟನೆಗಳು ಈಗಲೇ ಯೋಚಿಸಬೇಕು. ದಲಿತ ಪ್ರಜ್ಞೆಯ ಮರು ನಿರೂಪಣೆ ಆಗಬೇಕು ಎಂದು ಖ್ಯಾತ ಸಾಹಿತಿ, ಪ್ರಗತಿಪರ ಚಿಂತಕ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದರು. ನಗರದ ಪಾರ್ವತಮ್ಮ ಶಾಮನೂರು ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಪ್ರೊ| ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ರಾಜ್ಯಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಏಕವ್ಯಕ್ತಿ ನಾಯಕತ್ವ, ಏಕ ಸಂಸ್ಕೃತಿ, ಏಕಧರ್ಮ ಪ್ರತಿಪಾದಿಸಲಾಗುತ್ತಿದೆ. ಖಾಸಗೀಕರಣ, ಉದಾರೀಕರಣ ಪ್ರೋತ್ಸಾಹಿಸಲಾಗುತ್ತಿದೆ. ಶ್ರೇಣಿಕರಣದಲ್ಲಿ ಸ್ಥಿತ್ಯಂತರವಾಗಿ, ಒಳಶ್ರೇಣಿಕರಣ ಶುರುವಾಗಿದೆ. ಉದಾರೀಕರಣ ಉಳ್ಳವರ ಉದರೀಕರಣವಾಗಿದೆ. ಇಂತಹ ಹೊಸ ಸಂದರ್ಭವನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಸಂಘಟನೆಗಳು ಚಿಂತಿಸಬೇಕು ಎಂದರು.

ದಲಿತ ಸಂಘಟನೆಗಳು ತಮ್ಮ ಮೂಲ ಆಶಯದ ಜತೆಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಹ ಒಟ್ಟಾಗಿ ಯೋಚನೆ ಮಾಡಬೇಕಿದೆ. ಇಂದು ಎದುರಾಗುತ್ತಿರುವ ಹೊಸ ಸವಾಲು ಎದುರಿಸಲು ಸಿದ್ಧರಾಗದಿದ್ದರೆ ಆತ್ಮವಂಚಕರ ನಡುವೆ ಆತ್ಮಬಲ ಕಳೆದುಕೊಳ್ಳಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ದಲಿತರಿಗೆ, ಶೋಷಿತರಿಗೆ, ಬಡವರಿಗೆ ಸೋಲಾಗುತ್ತದೆ ಎಂದು ಬರಗೂರು ರಾಮಚಂದ್ರಪ್ಪ ಎಚ್ಚರಿಕೆ ನೀಡಿದರು.

ಪಂಚೇಂದ್ರೀಯ ವಂಚಿತ ಪ್ರಭುತ್ವ

ದೇಶದ ಸಂವಿಧಾನ ಪ್ರತಿ ಸುಡುವ ಹಾಗೂ ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಮಾಡುವ ಘಟನೆ ದೆಹಲಿಯ ಜಂತರ್‌ ಮಂತರ್‌ನಲ್ಲಿ 2018ರಲ್ಲಿ ನಡೆಯಿತು. ಇನ್ನು ಗಾಂಧೀಜಿಯವರ ಪುಣ್ಯತಿಥಿಯಂದು ಗಾಂಧೀಜಿಯವರ ಭಾವಚಿತ್ರಕ್ಕೆ ಗುಂಡು ಹೊಡೆಯುವ ಅಣುಕು ಪ್ರದರ್ಶನ ನಡೆಯಿತು. ಇಂದು ಸಮಾಜ ಎತ್ತ ಸಾಗುತ್ತಿದೆ ಹಾಗೂ ಹೇಗೆ ಬದಲಾಗುತ್ತಿದೆ ಎಂಬುದಕ್ಕೆ ಈ ಎರಡು ಘಟನೆಗಳು ಸಾಕು ಎಂದರು. ಜಾತಿ ವಿನಾಶವಾಗಬೇಕಿತ್ತು. ಆದರೆ, ಜಾತಿ ವಿಕಾಸವಾಗುತ್ತಿದೆ. ಆರ್ಥಿಕ ಅವಿವೇಕದಿಂದ ಮಾನವೀಯತೆ ಮರೆಯಾಗುತ್ತಿದೆ. ಸಾಮಾಜಿಕ ವಿವೇಕದ ಜಾಗದಲ್ಲಿ ಆರ್ಥಿಕ ವಿವೇಕ ಮುಂದೆ ಬಂದಿದೆ. ಕೋಮುಸೌರ್ಹಾದದ ಬದಲಾಗಿ ಕೋಮು ಸಂಘರ್ಷ ಹೆಚ್ಚಾಗುತ್ತಿದೆ. ಬಹುತ್ವ ಭಾರತದ ಬದಲಾಗಿ ಏಕತ್ವ ಭಾರತ ಮೇಲುಗೈ ಸಾಧಿಸುತ್ತಿದೆ. ಇಂದು ಭಾರತದ ಬೀದಿ ಸ್ವತ್ಛ ಮಾಡುವ ಕೆಲಸ ನಡೆದಿದೆ. ಆದರೆ, ಭಾವ ಭಾರತ ಸ್ವತ್ಛ ಮಾಡುವ ಕೆಲಸ ಆಗುತ್ತಿಲ್ಲ. ಇಂದು ನಾವು ಪಂಚೇಂದ್ರೀಯ ವಂಚಿತ ಪ್ರಜಾಪ್ರಭುತ್ವದ ಕಾಲದಲ್ಲಿದ್ದೇವೆ ಎಂದು ವಿಷಾದಿಸಿದರು.

Advertisement

ಪ್ರಾಣಕ್ಕೂ ಪಕ್ಷದ ಅಂಟು

ಇಂದು ದೇಶದಲ್ಲಿ 1.78 ಕೋಟಿ ಜನರು ಇನ್ನೂ ಕೈಯಲ್ಲಿ ಮಲ ತೆಗೆಯುವವರಿದ್ದಾರೆ. ದೇಶದಲ್ಲಿ  ಒಬ್ಬ ಮಲ ತೆಗೆಯುವ  ವ್ಯಕ್ತಿ ಇದ್ದರೂ ಅದು ಪ್ರಜಾಪ್ರಭುತ್ವಕ್ಕೆ ಅವಮಾನ. ಐದು ದಿನಕ್ಕೊಬ್ಬ ಸಫಾಯಿ ಕರ್ಮಚಾರಿ ಸಾಯುತ್ತಿದ್ದಾನೆ. ಇದನ್ನು ಯಾರೂ ಕೇಳುತ್ತಿಲ್ಲ. ಪ್ರಾಣಕ್ಕೂ ಪಕ್ಷದ ಅಂಟು ಹಚ್ಚಲಾಗುತ್ತಿದೆ. ನಿರುದ್ಯೋಗ ಶೇ.7.2ರಷ್ಟು ಹೆಚ್ಚಾಗಿದೆ. ಕೊರೊನಾ ಕಾಲದಲ್ಲಿ 1.47 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ. ಇಂತಹ ಕೊರೊನಾ ಕಾಲದಲ್ಲಿಯೇ ಶೇ.35ರಷ್ಟು ಕೋಟ್ಯಧಿಪತಿಗಳ ಆದಾಯ ಹೆಚ್ಚಾಗಿದೆ. ಶೇ.74ರಷ್ಟು ದೇಶದ ಸಂಪತ್ತು ಕೇವಲ ಶೇ.ಒಂದರಷ್ಟು ಜನರಲ್ಲಿ ಶೇಖರಣೆಯಾಗಿದೆ. ಶೇ.26ರಷ್ಟು ಸಂಪತ್ತು ಶೇ.99ಜನರಲ್ಲಿ ಹಂಚಿಕೆಯಾಗಿದೆ. ಹೀಗೆ ದೇಶದಲ್ಲಿ ಸಾಮಾಜಿಕ ಅಂತರದ ಜತೆಗೆ ಆರ್ಥಿಕ ಅಂತರವೂ ಅಧಿಕವಾಗಿದೆ. ಡಿಜಿಟಲೀಕರಣದ ಹೆಸರಲ್ಲಿ ಶೇ.60ರಷ್ಟು ಆನ್‌ಲೈನ್‌ ವಿದ್ಯಾಲಯಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಬಡವರಿಗೆ, ಶೋಷಿತರಿಗೆ ಶಿಕ್ಷಣದಿಂದ ವಂಚಿಸಲಾಗುತ್ತಿದೆ ಎಂದರು. ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಕೋಡಿಹಳ್ಳಿ ಆದಿಜಾಂಭವ ಮಠದ ಷಡಕ್ಷರಿ ದೇಶೀಕೇಂದ್ರ ಸ್ವಾಮೀಜಿ, ಚಿತ್ರದುರ್ಗದ ಬಸವ ನಾಗಿದೇವ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಸಮಾವೇಶದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next