Advertisement

ಕುಂದಾಪುರ: ಸರ್ವಿಸ್‌ ರಸ್ತೆ ಪಕ್ಕ ಪಾದಚಾರಿ ರಸ್ತೆಯೇ ಇಲ್ಲ!

01:05 AM Dec 05, 2018 | Karthik A |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಸಂಚಾರ ಬದಲಿ ವ್ಯವಸ್ಥೆಯನ್ನು ಸರ್ವಿಸ್‌ ರಸ್ತೆಯಲ್ಲಿ ಮಾಡಿದ್ದರೂ ಪಾದಚಾರಿಗಳ ಓಡಾಟಕ್ಕೆ ಯಾವುದೇ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಇದರಿಂದಾಗಿ ನಿತ್ಯ ಪ್ರಯಾಣದವರು, ವಿವಿಧ ಕಚೇರಿಗಳಿಗೆ ಹೋಗುವವರು ಸಂಕಷ್ಟಕ್ಕೆ ಈಡಾಗಿದ್ದಾರೆ.

Advertisement

ಬದಲಾದ ದಾರಿ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಪ್ರಮುಖ ವಾಹನಗಳು ಓಡಾಟ ನಡೆಸಲು ಕಾಮಗಾರಿಯ ನೆಪವೊಡ್ಡಿ ತಡೆ ಒಡ್ಡಲಾಗಿದೆ. ಇದರಿಂದಾಗಿ ಎರಡೂ ಕಡೆಗಳಲ್ಲಿ ಸರ್ವಿಸ್‌ ರಸ್ತೆಯಲ್ಲಿ ಘನ ವಾಹನಗಳ ಓಡಾಟ ನಡೆಯುತ್ತಿದೆ. ಕೋಟೇಶ್ವರ ಕಡೆಯಿಂದ ಬರುವ ವಾಹನಗಳು ವಿನಾಯಕ ಥಿಯೇಟರ್‌ ಸಮೀಪ ಸರ್ವಿಸ್‌ ರಸ್ತೆಯನ್ನು ಪ್ರವೇಶಿಸಿ ಕುಂದಾಪುರದ ಶಾಸ್ತ್ರಿ ಸರ್ಕಲ್‌ವರೆಗೆ ಆಗಮಿಸುತ್ತವೆ. ಅದೇ ರೀತಿ ಕುಂದಾಪುರ ಕಡೆಯಿಂದ ಹೋಗುವ ವಾಹನಗಳು ಬೊಬ್ಬರ್ಯನ ಕಟ್ಟೆ ಸಮೀಪ ಸರ್ವಿಸ್‌ ರಸ್ತೆಯಲ್ಲಿ  ಕೆಎಸ್‌ಆರ್‌ಟಿಸಿ ಡಿಪೋವನ್ನು ದಾಟಿ ಬಸ್ರೂರು ಮೂರುಕೈ ರಸ್ತೆಯನ್ನು  ಹಾದು ವಿನಾಯಕ ಥಿಯೇಟರ್‌ನಲ್ಲಿ ಮುಖ್ಯ ರಸ್ತೆಯನ್ನು ಸೇರಿಕೊಳ್ಳುತ್ತವೆ.

ಕಚೇರಿಗಳು
ರಸ್ತೆಯ ಎರಡೂ  ಭಾಗದಲ್ಲಿ ಮೆಸ್ಕಾಂ, ಕೆ.ಪಿ.ಟಿ.ಸಿ.ಎಲ್‌., ಎಲ್‌.ಐ.ಸಿ. ಕಚೇರಿ, ಗ್ರಂಥಾಲಯ, ಲೋಕೋಪಯೋಗಿ ಇಲಾಖೆ ಕಚೇರಿ, ಬೊಬ್ಬರ್ಯನ ಕಟ್ಟೆ ಸೇರಿದಂತೆ ಜನ ನಿತ್ಯ ಉಪಯೋಗಿಸುವಂತಹ ಅನೇಕ ಪ್ರದೇಶಗಳು, ಮೈದಾನಗಳು ಇವೆ. ಶಾಲೆಯೂ ಇದೆ. ಆದರೆ ನಡೆದಾಡಲು ಅಸಾಧ್ಯವಾದಂತಹ ಪರಿಸ್ಥಿತಿ ಇದೆ. ನಿತ್ಯವೂ ಓಡಾಟ ಮಾಡುವ ನಗರ ನಿವಾಸಿಗಳಿಗೆ ಇದರಿಂದಾಗಿ ತೊಂದರೆಯಾಗಿದೆ. ಬಸ್‌ ನಿಲುಗಡೆ ಎಲ್ಲೆಲ್ಲೋ ಆಗುವ ಕಾರಣ ಸೂಕ್ತ ಸ್ಥಳಕ್ಕೆ ಓಡಾಟಕ್ಕೆ ಬಸ್‌ ಹಿಡಿಯಲು ಈ ರಸ್ತೆಯನ್ನು ಬಳಸುವುದು ಅನಿವಾರ್ಯ. ಈ ಬಗ್ಗೆ ತುರ್ತು ಗಮನ ಹರಿಸುವ ಆವಶ್ಯಕತೆ ಇದೆ.

ಫ‌ುಟ್‌ಪಾತ್‌ ಇರಬೇಕಾದ ಸ್ಥಳದಲ್ಲಿ ಕಾಮಗಾರಿ ಸರಕು
ಶಾಸ್ತ್ರಿ ಸರ್ಕಲ್‌ನಿಂದ ವಿನಾಯಕ ಥಿಯೇಟರ್‌ವರೆಗೆ ಎರಡೂ ಸರ್ವಿಸ್‌ ರಸ್ತೆಗಳಲ್ಲಿ ಪಾದಚಾರಿಗಳಿಗೆ ನಡೆದಾಡಲು ವ್ಯವಸ್ಥೆ ಇಲ್ಲ. ಪಾದಚಾರಿ ರಸ್ತೆ ಇದ್ದರೂ ಕೂಡ ಅದರಲ್ಲಿ ಕಾಮಗಾರಿಗಾಗಿ ತಂದಿಟ್ಟ ಇಟ್ಟಿಗೆಗಳು, ಕೆಲವೊಂದು ಅಂಗಡಿಗಳ ವಸ್ತುಗಳು, ಅಲ್ಲಲ್ಲಿ ಅಡ್ಡರಸ್ತೆಗಳು ಇರುವ ಕಾರಣ ನಡೆದಾಡಲು ಕಷ್ಟಪಡುವಂತಾಗಿದೆ. ಕಾಮಗಾರಿಯ ನೆಪದಲ್ಲಿ ಅಲ್ಲಲ್ಲಿ ಫುಟ್‌ಪಾತ್‌ ಮೇಲೆ ಮಣ್ಣಿನ ರಾಶಿಯನ್ನು ಹಾಕಲಾಗಿದೆ. ಕೆಲವೆಡೆ ಫುಟ್‌ಪಾತ್‌ ಇಲ್ಲವೇ ಇಲ್ಲ ಇಂತಹ ಸ್ಥಿತಿಯಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ದೂರಪ್ರಯಾಣದ ಘನ ವಾಹನಗಳು ಅತಿವೇಗದಿಂದ ಈ ರಸ್ತೆಯಲ್ಲಿ ಚಲಿಸುವ ಕಾರಣ ಓಡಾಟ ನಡೆಸಲು ಜನ ಪರದಾಡುತ್ತಿದ್ದಾರೆ. ಅಂತೆಯೇ ಸಿಟಿ ಬಸ್‌ಗಳು ಜನರನ್ನು ಹತ್ತಿ ಇಳಿಸಲು ಕೂಡ ಈ ರಸ್ತೆಯಲ್ಲಿ ತತ್ಕಾಲದ ನಿಲುಗಡೆ ಕೊಡುವ ಕಾರಣ ವಾಹನಗಳ ಓಡಾಟಕ್ಕೆ ತೊಂದರೆಯಾಗುವುದರ ಜತೆಗೆ ಪಾದಚಾರಿಗಳೂ ಸಂಕಷ್ಟ ಪಡುವಂತಾಗಿದೆ.

ನಡೆದಾಡಲೂ ಕಷ್ಟವಾಗಿದೆ
ಪಾದಚಾರಿ ರಸ್ತೆಯಲ್ಲಿ ಹಲವೆಡೆ ತಡೆ ಇರುವುದರಿಂದ, ಕೆಲವೆಡೆ ಪಾದಚಾರಿ ರಸ್ತೆಯೇ ಇಲ್ಲದ ಕಾರಣ ಕಚೇರಿಗಳಿಗೆ ಹೋಗಲು ಕೂಡ ಕಷ್ಟವಾಗುತ್ತಿದೆ.
– ಸತೀಶ್‌ ಶೆಟ್ಟಿ, ಮಾಜಿ ಸದಸ್ಯರು, ಪುರಸಭೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next