Advertisement

ಕಾಲೇಜು-ಆಸ್ಪತ್ರೆ ನಡುವೆ ಸಮನ್ವಯವಿಲ್ಲ

01:05 AM Jul 02, 2019 | Team Udayavani |

ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾಸ್ಪತ್ರೆಗಳ ನಡುವೆ ಸಮನ್ವಯತೆಯ ಕೊರತೆ ಉಂಟಾಗಿದ್ದು, ಇದರ ಪರಿಣಾಮವನ್ನು ರೋಗಿಗಳು ಎದುರಿಸುವಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್‌.ಪಾಟೀಲ್‌ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಭಾರತೀಯ ವೈದ್ಯಕೀಯ ಸಂಘ ರಾಷ್ಟ್ರೀಯ ವೈದ್ಯ ದಿನಾಚರಣೆ ಅಂಗವಾಗಿ ಬೆಂಗಳೂರು ಮೈಡಿಕಲ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪರಿಶೀಲನೆಗೆಂದು ಗುಲ್ಬರ್ಗ, ಬೀದರ್‌ ಮೆಡಿಕಲ್‌ ಕಾಲೇಜಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಡೀನ್‌ ಮತ್ತು ಜಿಲ್ಲಾಸ್ಪತ್ರೆ ವೈದ್ಯರ ನಡುವೆ ಹೊಂದಾಣಿಕೆ ಇಲ್ಲದೆ ರೋಗಿಗಳು ಸಮಸ್ಯೆ ಅನುಭವಿಸುತ್ತಿರುವುದು ಕಂಡು ಬಂದಿತು.

ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ಮುಂದಾಗುತ್ತಿಲ್ಲ. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಂ ಅವರೊಂದಿಗೆ ಚರ್ಚೆ ನಡೆಸಿ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾಸ್ಪತ್ರೆಗಳ ನಡುವೆ ಸಮನ್ವಯತೆ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು.

ರಾಜ್ಯದಲ್ಲಿ ವೈದ್ಯರಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಇತರೆ ರಾಜ್ಯಗಳು ನೀಡುತ್ತಿಲ್ಲ. ಆದರೂ, ರಾಜ್ಯದಲ್ಲಿ ರೋಗಿಗಳಿಗೆ ಸರ್ಕಾರದ ಸೌಲಭ್ಯಗಳು ಸೂಕ್ತ ರೀತಿಯಲ್ಲಿ ಲಭ್ಯವಾಗುತ್ತಿಲ್ಲ. ಇದಕ್ಕೆ ಆಸ್ಪತ್ರೆಗಳ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಚಿಕಿತ್ಸಾ ವೆಚ್ಚ ಪರಿಷ್ಕರಣೆ: ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಗೆ ಖಾಸಗಿ ಆಸ್ಪತ್ರೆಗಳು ನಿರುತ್ಸಾಹ ತೋರುತ್ತಿರುವ ಹಿನ್ನಲೆಯಲ್ಲಿ ಚಿಕಿತ್ಸಾ ವೆಚ್ಚ ಪರಿಷ್ಕರಣೆ ಮಾಡಲಾಗುವುದು. ಪರಿಷ್ಕರಣೆಗೆ ಈಗಾಗಲೇ ತಂಡ ರಚಿಸಲಾಗಿದ್ದು, ಈ ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚೆ ಮಾಡಲು ತಂಡ ರಚನೆ ಮಾಡಲಾಗಿದ್ದು, ಚಿಕಿತ್ಸಗೆ ಅನುಗುಣವಾಗಿ ವೆಚ್ಚ ಭರಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಸಚಿವರು ತಿಳಿಸಿದರು.

Advertisement

ಈ ವೇಳೆ ಡಾ.ಸಂತೋಷ್‌ ಸೋನ್ಸ್‌(ಮಂಗಳೂರು), ಡಾ.ಸುರೇಶ್‌ ಕುಡ್ವ(ಕಾರ್ಕಳ), ಡಾ.ಶಿವಕುಮಾರ್‌ ಬಿ.ಲಕ್ಕೋಲ್‌(ರೋಣ), ಡಾ.ಕೆ.ಜಿ.ಕುಲಕರ್ಣಿ(ಕೊಪ್ಪಳ), ಡಾ.ಮಹಂತೇಶ್‌ ಸಿ.ತಪಶೆಟ್ಟಿ(ಹುಬ್ಬಳ್ಳಿ), ಡಾ.ಜಿ.ಬಿಡಿನಹಲ್‌(ಗದಗ), ಡಾ.ಶಂಭುಲಿಂಗ ಕೆ.ನಾರ(ಬಾಗಲಕೋಟೆ), ಡಾ.ಎಸ್‌.ಎಂ.ಸುರೇಶ್ವರಯ್ಯ(ಬೆಂಗಳೂರು)ಅವರಿಗೆ ಪ್ರಸಕ್ತ ಸಾಲಿನ ಡಾ.ಬಿ.ಸಿ.ರಾಯ್‌ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಐಎಂಎ ಗೌರವ ಕಾರ್ಯದರ್ಶಿ ಡಾ.ಶ್ರೀನಿವಾಸ, ಉಪಸ್ಥಿತರಿದ್ದರು.

ಸಚಿವರಿಗೆ ಮನವಿ: ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘವು ನಕಲಿ ವೈದ್ಯರ ಹಾವಳಿಗೆ ಕಠಿಣ ಕಾನೂನು ಜಾರಿ,ವೈದ್ಯರ ಹಾಗೂ ವೈದ್ಯ ಸಿಬ್ಬಂದಿಯ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಹಲ್ಲೆ ನಿಯಂತ್ರಣ ಕಾಯ್ದೆ ತಿದ್ದುಪಡಿ, ಖಾಸಗಿ ಆಸ್ಪತ್ರೆಗಳ ನೋಂದಾವಣಿ ಪ್ರಕ್ರಿಯೆಯನ್ನು ಸರಳೀಕರಣ, ಖಾಸಗಿ ಆಸ್ಪತ್ರೆಗೆ ಬಡ್ಡಿ ರಹಿತ ಸಾಲ ನೀಡುವ ಕುರಿತು ಸಚಿವರಿಗೆ ಮನವಿ ಸಲ್ಲಿಸಿತು.

ಸರ್ಕಾರ ಬಿದ್ದರೆ ಏನಂತೆ, ಬೇರೆ ಬರುತ್ತದೆ ಚಿಂತೆ ಯಾಕೆ: ವೈದ್ಯರ ದಿನ ಕಾರ್ಯಕ್ರಮಕ್ಕೂ ಮುನ್ನ ಮೈತ್ರಿ ಸರ್ಕಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್‌ ಪಾಟೀಲ್‌, ಆನಂದ ಸಿಂಗ್‌ ರಾಜೀನಾಮೆ ಬಗ್ಗೆ ನನಗೆ ಮಾಹಿತಿ ಇಲ್ಲ. ಸರ್ಕಾರ ಬಿದ್ದರೆ ಏನಂತೆ, ಬೇರೆ ಸರ್ಕಾರ ಬರುತ್ತದೆ. ಸರ್ಕಾರದ ಬಗ್ಗೆ ನಿಮಗ್ಯಾಕೆ ಚಿಂತೆ. ಯಾರು ರಾಜೀನಾಮೆ ಕೊಡಲಿ ಬಿಡಲಿ. ಇವತ್ತು ಡಾಕ್ಟರ್ಸ್‌ ಡೇ ಬನ್ನಿ ಅದನ್ನ ಆಚರಿಸೋಣ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next