Advertisement

ತವರ ಪ್ರೇಕ್ಷಕರ ಕೊರತೆಇದ್ದರೂ ಗೆಲ್ಲುವ ಛಲವಿದೆ

10:43 AM Jul 22, 2017 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಬೇಕಾದ ಪ್ರೊ ಕಬಡ್ಡಿಯ ಆವೃತ್ತಿ ನಾಗ್ಪುರಕ್ಕೆ ಸ್ಥಳಾಂತರವಾಗಿದೆ. ಇದು ಇಲ್ಲಿಯ ಕ್ರೀಡಾಭಿಮಾನಿಗಳಿಗೆ ನಿರಾಸೆ ಉಂಟುಮಾಡಿದೆ. ಹೀಗಾಗಿ ತವರಿನ ಅಭಿಮಾನಿಗಳ ಬೆಂಬಲದ ಕೂಗು ಇಲ್ಲದೇ ಆಟಗಾರರು ಅಂಕಣಕ್ಕೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕಳೆದ ನಾಲ್ಕು ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ನಲ್ಲಿ ಸ್ಟಾರ್‌ ಆಟಗಾರರು ಇದ್ದರೂ 2ನೇ ಆವೃತ್ತಿಯಲ್ಲಿ ರನ್ನರ್‌ ಅಪ್‌ ಪ್ರಶಸ್ತಿ ಬಿಟ್ಟರೆ, ಹೇಳಿಕೊಳ್ಳುವಂತಹ ಪ್ರದರ್ಶನ ಹೊರಬಂದಿಲ್ಲ. ಆದರೆ ಈ ಬಾರಿ ಆಟಗಾರರು ಬದಲಾಗಿದ್ದಾರೆ. ಹೆಚ್ಚಿನ ಯುವ ಆಟಗಾರರ ಸೇರ್ಪಡೆಯಾಗಿದೆ. ಇಂತಹ ಹೊತ್ತಿನಲ್ಲಿ ಬೆಂಗಳೂರು ಬುಲ್ಸ್‌ ತಂಡದ ನಾಯಕ, ಸ್ಟಾರ್‌ ರೈಡರ್‌ ರೋಹಿತ್‌ ಕುಮಾರ್‌ ಮಾಧ್ಯಮಗಳ ಜತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ತಂಡದ ತರಬೇತಿ ಹೇಗಿದೆ? 
ಎಲ್ಲಾ ಆಟಗಾರರು ಬೆಳಗ್ಗಿನ ಜಾವ 5 ಗಂಟೆಗೆ ಅಭ್ಯಾಸ ಆರಂಭಿಸುತ್ತೇವೆ. ಉಪಹಾರದ ನಂತರವೂ ಅಭ್ಯಾಸ ಇರುತ್ತದೆ. ಯುವ ಆಟಗಾರರು ಹೆಚ್ಚಿನ ಉತ್ಸಾಹ  ತೋರಿಸುತ್ತಿದ್ದಾರೆ. ಪ್ರಬಲ ಹೋರಾಟ ನೀಡುತ್ತೇವೆ.

ನಾಯಕತ್ವದ ಒತ್ತಡ ಇದೆಯಾ?
ಹಾಗೇನಿಲ್ಲ, ಕಳೆದ ಎರಡು ಆವೃತ್ತಿಯಲ್ಲಿಯೂ ನಾಯಕನಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಹೀಗಾಗಿ ಯಾವುದೇ ಒತ್ತಡವಿಲ್ಲ. ಆದರೆ ಆಟಗಾರರು ಬದಲಾಗಿದ್ದಾರೆ. ಆರಂಭಿಕ ಪಂದ್ಯಗಳನ್ನು ಆಡಿದ ಮೇಲೆ ನಮ್ಮ ಪ್ರದರ್ಶನದ ಗುಣಮಟ್ಟ ತಿಳಿಯಲಿದೆ.
ಕೂಟದಲ್ಲಿ ಪ್ರತಿಪಂದ್ಯವೂ ಮಹತ್ವದಾಗಿರುತ್ತದೆ. ಹೀಗಾಗಿ ಯಾವುದೇ ಪಂದ್ಯವನ್ನು ನಿರ್ಲಕ್ಷಿಸಲಾಗದು. 

ಈ ಬಾರಿ ತಂಡಕ್ಕೆ ತವರಿನ ಅಂಕಣ ಸಿಕ್ಕಿಲ್ಲ. ಈ ಬಗ್ಗೆ ಏನು ಹೇಳುತ್ತೀರಿ?
ತವರಿನ ಅಂಕಣ ಬೇಕಾಗಿತ್ತು. ಅಭಿಮಾನಿಗಳ ಪ್ರೋತ್ಸಾಹವೂ ಮಹತ್ವದ್ದಾಗಿರುತ್ತದೆ. ಆದರೆ ನಮ್ಮ ಕರ್ತವ್ಯವನ್ನು ನಾವು ಮಾಡುತ್ತೇವೆ. ಬೇರೆ ವಿಚಾರಗಳ ಬಗ್ಗೆ ಯೋಚಿಸಲು ಹೋಗುವುದಿಲ್ಲ.

Advertisement

ಕಬಡ್ಡಿಯಲ್ಲಿ ಫಿಟ್ನೆಸ್ ಬಹಳ ಮಹತ್ವದ್ದು, ಹೀಗಾಗಿ ದೀರ್ಘಾವಧಿ ಕೂಟದಲ್ಲಿ ಸಮಸ್ಯೆ ಆಗುವುದಿಲ್ಲವೆ?
ಫಿಟ್ನೆಸ್ಗಾಗಿ ವ್ಯಾಯಾಮ, ಜಿಮ್‌ ಮಾಡುತ್ತೇವೆ. ದೀರ್ಘಾವಧಿ ಕೂಟ ಸಮಸ್ಯೆ ಎನ್ನಲಾಗದು, ಅದು ನಮಗೆ ಸವಾಲು. ತಂಡದಲ್ಲಿ ಸಾಕಷ್ಟು ಯುವ ಆಟಗಾರರು ಇದ್ದಾರೆ. ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಅವಕಾಶ ಸಿಗಲಿದೆ.

ತಂಡದಲ್ಲಿರುವ ಪ್ರತಿಭೆಗಳ ಬಗ್ಗೆ ನಿಮ್ಮ ಅಭಿಪ್ರಾಯ?
ಚಿಕ್ಕ ವಯಸ್ಸಿನ ಹರೀಶ್‌ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೇಳುವುದನ್ನು ಸರಿಯಾಗಿ ಪಾಲಿಸುತ್ತಾರೆ. ಉಳಿದಂತೆ ಸಚಿನ್‌ ಕುಮಾರ್‌, ಆಶೀಷ್‌ ಕುಮಾರ್‌, ಅಮಿತ್‌, ಪ್ರದೀಪ್‌ ಕೂಟ ಅತ್ಯುತ್ತಮ ಪ್ರತಿಭೆಯಿರುವ ಆಟಗಾರರು.

ಕಂಠೀರವ ಪಡೆಯಲು ಯತ್ನಿಸಿ ವಿಫ‌ಲರಾದೆವು 
ಬೆಂಗಳೂರು:
ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲೇ ಪ್ರೊ ಕಬಡ್ಡಿ ಬೆಂಗಳೂರು ಚರಣವನ್ನು ನಡೆಸಲು ಶಕ್ತಿಮೀರಿ ಯತ್ನಿಸಿದ್ದೇವೆ. ದುರದೃಷ್ಟವಶಾತ್‌ ಅವಕಾಶ ಸಿಗಲಿಲ್ಲ. ಹೀಗಾಗಿ ಪಂದ್ಯಗಳನ್ನು ನಾಗ್ಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬೆಂಗಳೂರು ಬುಲ್ಸ್‌ ತಂಡದ ಸಿಇಓ ಉದಯ್‌ ಸಿನ್ಹ ವಾಲಾ ತಿಳಿಸಿದ್ದಾರೆ.

ನೇರಪ್ರಸಾರ ಸೌಲಭ್ಯ, ಸಾರಿಗೆ, ವಸತಿ ವ್ಯವಸ್ಥೆ, ಭದ್ರತೆ, ಕ್ರೀಡಾಂಗಣದ ಆಸನದ ಸೌಲಭ್ಯ, ಈ ಎಲ್ಲಾ ದೃಷ್ಟಿಯಿಂದ ಕಂಠೀರವ ಕ್ರೀಡಾಂಗಣ ಸೂಕ್ತವಾಗಿತ್ತು. ನಂತರ ಮೈಸೂರು, ಮಂಗಳೂರು ಇತರೆ ಆಯ್ಕೆ ಆಗಿತ್ತು. ಈ ಎರಡು ಸ್ಥಳಗಳಲ್ಲಿ ಸಾರಿಗೆ 
ಸೌಲಭ್ಯ ಸೇರಿದಂತೆ ಕೆಲವು ಸೌಲಭ್ಯಗಳ ಕೊರತೆ ಎದುರಗಾಲಿದೆ. ಹೀಗಾಗಿ ಅನ್ಯರಾಜ್ಯಕ್ಕೆ ವರ್ಗಾವಣೆ ಮಾಡುವುದು ಅನಿವಾರ್ಯವಾಯಿತು ಎಂದು ಉದಯ್‌ ತಿಳಿಸಿದ್ದಾರೆ.

ತಂಡದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಬೆಂಗಳೂರಿನಲ್ಲಿ ನಡೆಯಬೇಕಾದ ಪಂದ್ಯಗಳು ನಾಗ್ಪುರದಲ್ಲಿ ನಡೆಯಲಿದೆ ಅಷ್ಟೇ. ಈ ಬಾರಿ ತಂಡದಲ್ಲಿ ಹೊಸ ಆಟಗಾರರು ಸೇರ್ಪಡೆಯಾಗಿದ್ದಾರೆ. ಕೂಟ ಕೂಡ ದಿರ್ಘಾವಧಿಯಾಗಿರುವುದರಿಂದ ಹೊಸ ಸವಾಲು ಇದೆ. ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next