Advertisement

Wildlife Doctors: ರಾಜ್ಯದಲ್ಲಿ ಇರೋದು ಕೇವಲ ನಾಲ್ವರು ವನ್ಯಜೀವಿ ವೈದ್ಯರು!

02:56 PM Dec 18, 2023 | Nagendra Trasi |

ಶಿವಮೊಗ್ಗ: ಹುಲಿ, ಚಿರತೆ, ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಅಗ್ರಗಣ್ಯ ಸ್ಥಾನದಲ್ಲಿರುವ ಇಡೀ ರಾಜ್ಯದಲ್ಲಿ ಇರುವುದು ನಾಲ್ಕೇ ಮಂದಿ ವನ್ಯಜೀವಿ ವೈದ್ಯಾಧಿಕಾರಿಗಳು. ಅವರು ಕೂಡ ಪೂರ್ಣಾವಧಿ ಅಲ್ಲ! ಭಾರತದ ಶೇ.20ರಷ್ಟು ಆನೆ ಸಂತತಿ, ಶೇ.18ರಷ್ಟು ಹುಲಿ ಸಂತತಿ, ಐದು ರಾಷ್ಟ್ರೀಯ ಉದ್ಯಾನವನಗಳು ಹಾಗೂ 30 ವನ್ಯಜೀವಿ ಅಭಯಾರಣ್ಯಗಳು ರಾಜ್ಯದಲ್ಲಿವೆ. 13 ಅರಣ್ಯ ವೃತ್ತ ಹಾಗೂ 600 ಅರಣ್ಯ ವಲಯಗಳಿವೆ. ಪ್ರತಿ ಜಿಲ್ಲೆ ಅಥವಾ ಪ್ರತಿ ವೃತ್ತಕ್ಕೆ ಒಬ್ಬರು ವನ್ಯಜೀವಿ ವೈದ್ಯಾಧಿಕಾರಿಗಳ ಅವಶ್ಯಕತೆ ಇದೆ. ಆದರೆ, ನಾಲ್ಕೇ ನಾಲ್ಕು ವನ್ಯಜೀವಿ ವೈದ್ಯರು ಕಾರ್ಯನಿರ್ವಹಿಸಬೇಕಾದ ದುಸ್ಥಿತಿ ಎದುರಾಗಿದೆ. ಈ ಕೊರತೆ ನೀಗಿಸಲು ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಶಾರ್ಪ್‌ ಶೂಟರ್‌ ಗಳಾಗಿ ಬಳಸಿಕೊಳ್ಳಲಾಗುತ್ತಿದೆ.

Advertisement

ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದರೂ ಅರಣ್ಯ ಇಲಾಖೆ ಪೂರ್ಣ ಪ್ರಮಾಣದ ವನ್ಯಜೀವಿ ವೈದ್ಯಾಧಿಕಾರಿಗಳ ನೇಮಕ ಮಾಡುತ್ತಿಲ್ಲ. ಕಳೆದ ಒಂದು ವರ್ಷದಲ್ಲಿ ವನ್ಯಜೀವಿಗಳ ದಾಳಿಗೆ 10ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ನಾಗರಿಕರಷ್ಟೇ ಅಲ್ಲದೆ, ಅರಣ್ಯ ಅಧಿಕಾರಿಗಳೂ ಇದ್ದಾರೆ. ಏಪ್ರಿಲ್‌ನಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿದ್ದ ಆನೆಯೊಂದು ವೈದ್ಯಾಧಿಕಾರಿ ಮೇಲೆಯೇ ದಾಳಿ ಮಾಡಿತ್ತು. ಸೆಪ್ಟೆಂಬರ್‌ನಲ್ಲಿ ಶಾರ್ಪ್‌ ಶೂಟರ್‌ ವೆಂಕಟೇಶ್‌ ಅವರನ್ನು ಬಲಿ ಪಡೆದಿತ್ತು. ಕಳೆದ ಕೆಲ ದಿನಗಳ ಹಿಂದೆ ಅರವಳಿಕೆ ಹೆಚ್ಚಾಗಿ ಒಂದು ಆನೆ ಸಹ ಮೃತಪಟ್ಟಿತ್ತು.

ಶಿವಮೊಗ್ಗದಲ್ಲಿ ಮಹಿಳೆಯೊಬ್ಬರನ್ನು ಚಿರತೆ ತಿಂದು ಹಾಕಿತ್ತು. ಇತ್ತೀಚೆಗಷ್ಟೇ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ ಅಸುನೀಗಿದ್ದಾನೆ. ಹೀಗೆ ಸಂಘರ್ಷದ ಹಾದಿ ದೊಡ್ಡದಿದೆ. ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಮೂರ್‍ನಾಲ್ಕು ಆನೆಗಳಿದ್ದ ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯ, ಭದ್ರಾ ಅಭಯಾರಣ್ಯ, ಹಾಸನ, ಚಿಕ್ಕಮಗಳೂರಿನಲ್ಲಿ ಹಿಂಡು ಹಿಂಡು ಆನೆಗಳು ಕಂಡುಬರುತ್ತಿವೆ. ಹುಲಿ, ಚಿರತೆ, ಕರಡಿ ಹಾವಳಿ ವಿಪರೀತವಾಗಿದೆ. ಅರಣ್ಯದಂಚಿನ ಗ್ರಾಮಗಳೇ ಅವುಗಳ ಟಾರ್ಗೆಟ್‌. ಪ್ರತಿದಿನ ರಾತ್ರಿ ದಾಳಿ ಮಾಡಿ ಆಹಾರ ಬೆಳೆಗಳನ್ನು ಹಾಳು ಮಾಡುತ್ತಿವೆ. ಇದನ್ನು ತಡೆಯುವ ಅರಣ್ಯ ಇಲಾಖೆ ಪ್ರಯತ್ನಗಳು ಫಲಪ್ರದವಾಗುತ್ತಿಲ್ಲ.

ನಾಲ್ಕೇ ಮಂದಿ ಡಾಕ್ಟರ್‌: ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಆನೆ ತೂಕ, ವಯಸ್ಸು ಅಂದಾಜಿನ ಮೇಲೆ ಇಷ್ಟೇ ಪ್ರಮಾಣ ಅರವಳಿಕೆ ನೀಡಬೇಕೆಂಬ ನಿಯಮವಿದೆ. ಇದಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ವೈದ್ಯಾಧಿಕಾರಿಗಳು ನೇತೃತ್ವ ವಹಿಸುತ್ತಾರೆ. ಬಂಡೀಪುರ, ಹುಣಸೂರು, ಮೈಸೂರು, ಶಿವಮೊಗ್ಗದಲ್ಲಿ ಮಾತ್ರ ವನ್ಯಜೀವಿ ವೈದ್ಯಾಧಿಕಾರಿಗಳಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ವನ್ಯಜೀವಿ ಹಿಡಿಯುವ ಕಾರ್ಯಾಚರಣೆ ಇದ್ದರೆ ಅದಕ್ಕೆ ಇವರೇ ಹೋಗುತ್ತಾರೆ. ಯಾವುದೇ ಪ್ರಾಣಿ, ಎಷ್ಟೇ ದೂರವಿದ್ದರೂ ನಿಖರವಾಗಿ ಡಾರ್ಟ್‌ ಮಾಡುವಷ್ಟು ಪರಿಣತಿ ಇವರಿಗಿದೆ. ಅನೇಕ ವರ್ಷಗಳಿಂದ ಯಶಸ್ವಿ ಕಾರ್ಯಾಚರಣೆ
ಮಾಡುತ್ತಿರುವ ಇವರಿಗೆ ಇತ್ತೀಚಿನ ವರ್ಷಗಳು ಸವಾಲಾಗಿವೆ. ವೈದ್ಯಾಧಿಕಾರಿಗಳಲ್ಲದೇ ಅನುಭವದ ಆಧಾರದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಶಾರ್ಪ್‌ ಶೂಟರ್‌ಗಳಾಗಿ ಬಳಸಿಕೊಳ್ಳಲಾಗುತ್ತಿದೆ!

ಯಾವುದೇ ಕಾರ್ಯಾಚರಣೆಯಲ್ಲಿ ಕನಿಷ್ಟ ಇಬ್ಬರು ವೈದ್ಯಾಧಿಕಾರಿಗಳು ಇರುವುದು ಅವಶ್ಯ. ಇಲ್ಲಿ ಅದು ಪಾಲನೆಯಾಗುತ್ತಿಲ್ಲ. ಅರಣ್ಯ ಇಲಾಖೆ ವೈದ್ಯಾಧಿಕಾರಿಗಳು ಬಿಟ್ಟರೆ ರಾಜ್ಯದಲ್ಲಿರುವ ಮೃಗಾಲಯಗಳಲ್ಲಿ ವನ್ಯಜೀವಿ ವೈದ್ಯಾಧಿಕಾರಿಗಳು ಇದ್ದಾರೆ. ಮೃಗಾಲಯದಲ್ಲಿ ನೂರಾರು ವಿವಿಧ ಪ್ರಭೇದಗಳ ಪ್ರಾಣಿ, ಪಕ್ಷಿಗಳು ಇದ್ದು ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆ, ಸವಾಲುಗಳು ಇರುತ್ತವೆ. ಇವರನ್ನು ವನ್ಯಜೀವಿ ಸೆರೆ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳುವುದು ವಿರಳ.

Advertisement

ಮಧ್ಯಪ್ರದೇಶ ಮಾದರಿಯಾಗಲಿ
ಮಧ್ಯಪ್ರದೇಶದಲ್ಲಿ ವನ್ಯಜೀವಿಗಳ ಅಧ್ಯಯನ, ತರಬೇತಿ ಪಡೆದ ಪೂರ್ಣಾವಧಿ ವೈದ್ಯರನ್ನು ಅರಣ್ಯ ಇಲಾಖೆ ನೇಮಕ ಮಾಡಿಕೊಂಡಿದೆ. ಇವರು ನಿವೃತ್ತಿಯಾಗುವವರೆಗೂ ಇಲಾಖೆ ಸೇವೆಯಲ್ಲೇ ಇರುತ್ತಾರೆ. ಕರ್ನಾಟಕದಲ್ಲಿ ಹಂಗಾಮಿ ವೈದ್ಯರಾಗಿ ನೇಮಕಗೊಳ್ಳುವ ಇವರು ಪೂರ್ಣಾವಧಿ ಪೂರೈಸುವುದು ತುಂಬಾ ವಿರಳ. ಪಶು ವೈದ್ಯಾಧಿಕಾರಿಗಳಾದರೆ ಡ್ರಾಯಿಂಗ್‌ ಆಫೀಸರ್‌ ಆಗಿರುವ ಇವರಿಗೆ ಅರಣ್ಯ ಇಲಾಖೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿರುವುದಿಲ್ಲ. ಅರಣ್ಯಾಧಿಕಾರಿಗಳು
ಹಾಗೂ ವೈದ್ಯಾಧಿಕಾರಿಗಳ ನಡುವೆ ಒಂದು ಸಂಘರ್ಷ ಇದ್ದೇ ಇರುತ್ತದೆ. ದೀರ್ಘ‌ ಅವಧಿಗೆ ಸೇವೆ ಸಲ್ಲಿಸುವುದು ವಿರಳ.

ಹೊಸಬರು ಬಂದು ಮತ್ತೆ ಅನುಭವ ಪಡೆಯಬೇಕು. ಪೂರ್ಣ ಪ್ರಮಾಣದ ವನ್ಯಜೀವಿ ವೈದ್ಯಾಧಿಕಾರಿಗಳ ನೇಮಕದಿಂದ ಇಲಾಖೆಗೆ ಹೆಚ್ಚಿನ ಅನುಕೂಲವಿದೆ. ಯಾವುದೇ ವೈದ್ಯಾಧಿಕಾರಿ ಕಾರ್ಯಾಚರಣೆಗೆ ಹೋದರೆ ಅದು ಎಷ್ಟು ದಿನ ಹಿಡಿಯುತ್ತದೆ ತಿಳಿಯಲ್ಲ. ಇಂತಹ ಸಂದರ್ಭಗಳಲ್ಲಿ ಬಿಡಾರದ ಆನೆಗಳಿಗೆ ಚಿಕಿತ್ಸೆ, ಆರೈಕೆಗೆ ತೊಂದರೆಯಾಗುತ್ತದೆ. ಕನಿಷ್ಟ ವಿಭಾಗವಾರು ವೈದ್ಯಾಧಿಕಾರಿಗಳ ನೇಮಕವಾದರೆ ಮಾನವ-ಪ್ರಾಣಿ ಸಂಘರ್ಷ ನಿಯಂತ್ರಣ ಮಾಡಬಹುದು ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ನಮ್ಮ ಅರಣ್ಯ ಇಲಾಖೆಯಲ್ಲಿ ಪರಿಣತಿ ಹೊಂದಿದ ವನ್ಯಜೀವಿ ವೈದ್ಯಾಧಿಕಾರಿಗಳಿಲ್ಲ. ಪಶು ವೈದ್ಯ ಇಲಾಖೆಯಿಂದ ಇವರು ಬರುತ್ತಾರೆ. ಮೂರ್‍ನಾಲ್ಕು ವರ್ಷ ಅನುಭವ ಪಡೆದು ಹೋಗುತ್ತಾರೆ. ಹೊಸಬರು ಬಂದು ಎಬಿಸಿಡಿಯಿಂದ ಕಲಿಯಬೇಕು. ಮಧ್ಯಪ್ರದೇಶದಲ್ಲಿ ತರಬೇತಿ ಪಡೆದ ವನ್ಯಜೀವಿ ವೈದ್ಯಾಧಿಕಾರಿಗಳ ಕೇಡರ್‌ ಇದೆ. ಅದೇ ರೀತಿ ರಾಜ್ಯದಲ್ಲೂ ಆಗಬೇಕು.
● ಜೋಸೆಫ್‌ ಹೂವರ್‌, ವನ್ಯಜೀವಿ ಮಂಡಳಿ ಮಾಜಿ ಸದಸ್ಯ

● ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next