Advertisement

ಹುಂಡಿ ಕದ್ದ ತಂಡ ತೆಲಂಗಾಣದಲ್ಲಿ ಸೆರೆ

01:06 AM Jul 13, 2019 | Team Udayavani |

ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ ಗಡಿ ಜಿಲ್ಲೆಗಳ ದೇವಾಲಯಗಳಲ್ಲಿ ಹುಂಡಿ ಹಣ ದೋಚುತ್ತಿದ್ದ ಕಳ್ಳರ ತಂಡವೊಂದು ತೆಲಂಗಾಣದ ಸೈಬರಬಾದ್‌ ಪೊಲೀಸರ ಬಲೆಗೆ ಬಿದ್ದಿದೆ.

Advertisement

ಆಂಧ್ರದ ಕಡಪ ಜಿಲ್ಲೆಯ ಕೋತಮದ್ರವರಂ ಪ್ರದೇಶದ ಆರು ಆರೋಪಿಗಳನ್ನು ಬಂಧಿಸಿರುವ ಸೈಬರಬಾದ್‌ ಪೊಲೀಸರ ವಿಶೇಷ ತಂಡ, ಆರೋಪಿಗಳು ಕರ್ನಾಟಕ, ಆಂಧ್ರ, ತೆಲಂಗಾಣದ ವಿವಿಧ ಭಾಗಗಳಲ್ಲಿ ನಡೆಸಿದ್ದ ದೇವಾಲಯ ಹುಂಡಿ ಕಳವು ಪ್ರಕರಣಗನ್ನು ಪತ್ತೆಹಚ್ಚಿದೆ. ಈ ಪೈಕಿ ಕೋಲಾರ ಜಿಲ್ಲೆಯ ಆರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದ್ದ ಏಳು ಪ್ರಕರಣಗಳು ಸೇರಿವೆ.

ಆರೋಪಿಗಳಾದ ನಾಗಲೂರಿ ಆದಿನಾರಾಯಣ, ನಾಗಲೂರಿ ಈಶ್ವರಯ್ಯ, ಗುರುನಂದನ್‌, ಆಂಜನೇಯುಲು, ನಾಗಲೂರಿ ಏಸಯ್ಯ, ನಾಗಲೂರಿ ಏಸುರತ್ನಂ, ನಾಗಲೂರಿ ಅಂಜಯ್ಯ ಎಂಬವರಿಂದ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1.25 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ಮೂರು ಬೈಕ್‌ ಜಪ್ತಿ ಮಾಡಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆರೋಪಿಗಳ ಬಂಧನದ ಕುರಿತು ರಾಜ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಾಡಿವಾರೆಂಟ್‌ ಮೂಲಕ ಆರೋಪಿಗಳನ್ನು ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದರು.

ಊರಲ್ಲೇ ವಾಸ: ಆರೋಪಿಗಳ ತಂಡದ ಸದಸ್ಯರು ಪರಸ್ಪರ ಸಂಬಂಧಿಕರಾಗಿದ್ದು, ಹಲವು ವರ್ಷಗಳಿಂದ ದೇವಾಲಯದ ಹುಂಡಿ, ಚಿನ್ನಾಭರಣ ಕಳವು ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಆಂಧ್ರ, ತೆಲಂಗಾಣ, ಕರ್ನಾಟಕ ಗಡಿ ಜಿಲ್ಲೆಗಳನ್ನು ಟಾರ್ಗೆಟ್‌ ಮಾಡಿಕೊಂಡಿರುವ ತಂಡ ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಸ್ಥಳಾಂತರಗೊಳ್ಳುತ್ತಿರುತ್ತಾರೆ.

Advertisement

ನಾಣ್ಯ ನೀಡುತ್ತಿತ್ತು ಸುಳಿವು: ಇಡೀ ತಂಡ ಕುಟುಂಬಗಳ ಜತೆ ದೇವಾಲಯ ಇರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಡೇರೆ ಹಾಕಿಕೊಂಡು ವಾಸಿಸಲು ಆರಂಭಿಸುತ್ತದೆ. ಹಲವು ದಿನಗಳ ಕಾಲ ಊರಿನಲ್ಲಿ ತಿರುಗಾಡಿಕೊಂಡು ಭಕ್ತರ ಸೋಗಿನಲ್ಲಿ ದೇವಾಲಯಗಳಿಗೆ ಪ್ರವೇಶಿಸುತ್ತಿದ್ದರು. ಹುಂಡಿಗೆ ಹಣ ಹಾಕುವವರಂತೆ ನಾಣ್ಯವೊಂದನ್ನು ಹುಂಡಿಗೆ ಹಾಕುತ್ತಿದ್ದರು.

ಹುಂಡಿಯೊಳಗಡೆ ನಾಣ್ಯಬಿದ್ದ ಬಳಿಕ ಸದ್ದಾಗದಿದ್ದರೆ ಹುಂಡಿ ತುಂಬಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಬಳಿಕ ಅದೇ ದಿನ ರಾತ್ರಿ ದೇವಾಲಯಕ್ಕೆ ನುಗ್ಗಿ ಹುಂಡಿ ಹಾಗೂ ದೇವರ ಮೂರ್ತಿಗಳಿಗೆ ಹಾಕಲಾಗುತ್ತಿದ್ದ ಆಭರಣ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದರು ಎಂದು ಸೈಬರಬಾದ್‌ ಪೊಲೀಸರು ಮಾಹಿತಿ ನೀಡಿದರು.

ತೆಲಂಗಾಣದಲ್ಲಿ ನಡೆಯುತ್ತಿದ್ದ ದೇವಾಲಯಗಳ ಸರಣಿ ಕಳ್ಳತನ ಪ್ರಕರಣಗಳಿಂದಾಗಿ ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ತಂಡಕ್ಕೆ ದೇವಾಲಯೊಂದರಲ್ಲಿ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಾಗಿತ್ತು. ಈ ಸುಳಿವು ಆಧರಿಸಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ 50 ಪ್ರಕರಣಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

“ಅಂತಾರಾಜ್ಯ ಕಳ್ಳರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆಸಿದ 11 ದೇವಾಲಯ ಹುಂಡಿ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿ, ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ಬಂಧನ ಹಾಗೂ ಪತ್ತೆಯಾದ ಕೇಸ್‌ಗಳ ಬಗ್ಗೆ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗಿದೆ’
-ವಿ.ಸಿ.ಸಜ್ಜನರ್‌, ಸೈಬರಬಾದ್‌ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next