Advertisement

ಚಿತ್ರಮಂದಿರಗಳೂ ಸ್ಥಳೀಯ ಆರ್ಥಿಕತೆಯೂ…

12:26 AM Jul 25, 2021 | Team Udayavani |

ಚಿತ್ರಮಂದಿರಗಳು ಮನೋರಂಜನೆಯ ಕೇಂದ್ರಗಳಷ್ಟೇ ಅಲ್ಲ. ಅವುಗಳ ಸುತ್ತಮುತ್ತ ಇರುವ ಅಂಗಡಿಮುಂಗಟ್ಟು, ತಿಂಡಿತಿನಸು ಹೀಗೆ ಸ್ಥಳೀಯ ಆರ್ಥಿಕತೆಯ ಒಂದು ಪೋಷಕ ಬಿಂದೂವೂ ಹೌದು. ಈ ಹಿನ್ನೆಲೆಯಲ್ಲಿ ಸಿನೆಮಾ ಮಂದಿರಗಳು ಉಳಿಯಬೇಕು ಎಂಬುದು ಹೊಸಬಗೆಯ ಚಿಂತನೆ.

Advertisement

ಚಿತ್ರಮಂದಿರಗಳು “ಭರ್ತಿಯಾಗಿವೆ’ ಎಂಬ ತೂಗುಫ‌ಲಕ ಕಾಣಬೇಕಿದ್ದ ಸಂದರ್ಭದಲ್ಲಿ ಸಿನೆಮಾ ಮಂದಿರಗಳೇ ಕಾಣೆಯಾಗುತ್ತಿವೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಏಕಪರದೆ (ಸಿಂಗಲ್‌ ಸ್ಕ್ರೀನ್‌) ಸೌಲಭ್ಯ ಹೊಂದಿರುವ ಸಿನೆಮಾ ಮಂದಿರಗಳು ನಿಧಾನವಾಗಿ ಇತಿಹಾಸದ ಪುಟಗಳಿಗೆ ಸೇರುತ್ತಿವೆ. ಕೋವಿಡ್‌-19ಗೂ ಮುನ್ನ ಆಗಲೋ ಈಗಲೋ ಈ ಸುದ್ದಿ ಕೇಳಿಬರುತ್ತಿತ್ತು. ಕೆಲವು ನಗರಗಳಲ್ಲಿ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಿಗೆ ಹೊಸ ರೂಪ (ನವೀಕರಣ) ಕೊಡುವ ಪ್ರಯತ್ನಗಳು ನಡೆಯುತ್ತಿದ್ದವು. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಹೆಚ್ಚೆಂದರೆ 6 ತಿಂಗಳು ಸಿನೆಮಾ ಮಂದಿರಗಳು ಕಾರ್ಯ ನಿರ್ವಹಿಸಿರಬಹುದು.

ಈಗ ರಾಜ್ಯ ಸರಕಾರ ಸಿನೆಮಾ ಮಂದಿರ ತೆರೆಯಲು ಸಮ್ಮತಿಸಿದೆ. ಅದೂ ಶೇ. 50 ರಷ್ಟು ಆಸನ ಸಾಮರ್ಥ್ಯದಲ್ಲಿ. ಹಲವು ಚಿತ್ರಗಳು ಬಿಡುಗಡೆಗಾಗಿ ಸಾಲಿನಲ್ಲಿ ನಿಂತಿವೆ. ಆದರೆ ಬಹುತೇಕ ನಿರ್ಮಾಪಕರಿಗೆ ಈ ಅರ್ಧ ತುಂಬುವ ಟಾಕೀಸಿಗೆ ಸಿನೆಮಾ ಬಿಡುಗಡೆ ಮಾಡಲು ಮನಸ್ಸಿಲ್ಲ. ಇದು ಚಿತ್ರ ನಿರ್ಮಾಪಕ, ವಿತರಕ ಹಾಗೂ ಸಿನೆಮಾ ಮಂದಿರ ಮಾಲಕನಿಗೂ ನಷ್ಟವೇ. ಹಾಗಾಗಿ ಯಾರೂ ಮುಂದೆ ಬರುತ್ತಿಲ್ಲ. ಸಿನೆಮಾ ಮಂದಿರ ಯಾವಾಗ ಆರಂಭವಾಗುತ್ತದೆ ಎಂಬ ಗೊಂದಲ ಇನ್ನೂ ಬಗೆಹರಿದಿಲ್ಲ.

ಸಿನೆಮಾ ಮಂದಿರಗಳು ಏಕೆ ಬೇಕು?
ಈ ಪ್ರಶ್ನೆಯೇ ಬಹಳ ಮುಖ್ಯವಾದುದು. ಏಕ ಪರದೆ ಸಿನೆಮಾ ಮಂದಿರಗಳು ಯಾಕೆ ಬದುಕಬೇಕು ಎಂಬ ಪ್ರಶ್ನೆಗೆ ಸರಕಾರ ಮತ್ತು ನಾವು (ಸಮಾಜ) ಉತ್ತರ ಕಂಡುಕೊಳ್ಳಬೇಕಾದ ಕಾಲ ವಿದು. ಈಗಾಗಲೇ ಉಲ್ಲೇಖೀಸಿದಂತೆ ದಿನೇದಿನೆ ಸಿನೆಮಾ ಮಂದಿರಗಳು ಮುಚ್ಚತೊಡಗಿವೆ. 1985 ರ ಸಂದರ್ಭದಲ್ಲಿ 1,200 ಸಿನೆಮಾ ಮಂದಿರಗಳಿದ್ದ ರಾಜ್ಯದಲ್ಲೀಗ ಸಂಖ್ಯೆ 630ಕ್ಕೆ ಇಳಿದಿದೆ. ಈ ಸಂಖ್ಯೆ ಕಳೆದ ವರ್ಷದ್ದು. ಈಗಿನ ಲೆಕ್ಕ ಇನ್ನೂ ಕೊಂಚ ತಗ್ಗಿರಲೂಬಹುದು. ಒಮ್ಮೆ ಸಿನೆಮಾ ಮಂದಿರ ತೆರೆದಾಗ ಇತ್ತೀಚಿನ ಸಂಖ್ಯೆ ಸಿಗ ಬಹುದು. ಬೆಂಗಳೂರಿನಂಥ ನಗರದಲ್ಲೇ 140 ಚಿತ್ರಮಂದಿರಗಳಿವೆ. ಇನ್ನುಳಿದಂತೆ ಜಿಲ್ಲೆಗಳಲ್ಲೂ ಹತ್ತಾರು ಚಿತ್ರಮಂದಿರಗಳಿವೆ.
ಹಲವು ದಶಕಗಳ ಹಿಂದೆ ಸಿನೆಮಾ ಮಂದಿರಗಳ ಆರಂಭಕ್ಕೆ ಅನುಮತಿ ನೀಡಿದ ಸರಕಾರದ ಹಿಂದೆ ಇದ್ದ ಉದ್ದೇಶಗಳು ಸ್ಪಷ್ಟ. ಮೊದಲನೆಯದಾಗಿ ಅದೊಂದು ಉದ್ಯಮ. ಒಂದಿಷ್ಟು ಉದ್ಯೋಗ, ಆದಾಯ ಎಲ್ಲವೂ ಸಾಧ್ಯ. ಎರಡನೆಯದಾಗಿ ಪ್ರಜೆಗಳ ಮನೋಲ್ಲಾಸಕ್ಕೆ ಒಂದು ಮಾಧ್ಯಮ. ಮೂರನೆಯದಾಗಿ ಸ್ಥಳೀಯ ಆರ್ಥಿಕತೆಯ ಪ್ರಮುಖ ಬಿಂದು.

ಇಂದು ಕನ್ನಡ ಚಿತ್ರರಂಗ ಬಹುಕೋಟಿ ಉದ್ಯಮ. ಈ ಉದ್ಯಮದ ಪ್ರಮುಖ ಕೊಂಡಿ ಸಿನೆಮಾ ಮಂದಿರಗಳೂ ಸಹ. ನಿರ್ಮಾಣವಾದ ಚಿತ್ರಗಳು ಪ್ರೇಕ್ಷಕರನ್ನು ತಲುಪಬೇಕೆಂದರೆ ಚಿತ್ರ ಮಂದಿರಗಳೇ ಆಧಾರ. ಈ ಸಂದರ್ಭದಲ್ಲಿ ಪರ್ಯಾವೆನಿಸುವ ಮಾಧ್ಯಮ ಮತ್ತು ಮಾರ್ಗ ಗಳು ಸೃಷ್ಟಿಯಾಗಿರಬಹುದು. ಆದರೂ ಸಿನೆಮಾ ಮಂದಿರಗಳು ಉಳಿವು ಅಗತ್ಯವಿದೆ.

Advertisement

ಸರಕಾರಗಳು ಏಕ ಪರದೆ ಸಿನೆಮಾ ಮಂದಿರ ಗಳನ್ನು ಉಳಿಸಲು ಕೆಲವು ಕ್ರಮಗಳನ್ನು ಜರುಗಿಸಿದೆ. ತನ್ನ ಚಲನಚಿತ್ರ ಉದ್ಯಮ ಪರ ನೀತಿಯಲ್ಲಿ ಏಕಪರದೆ ಸಿನೆಮಾ ಮಂದಿರಗಳ ನವೀಕರಣ (ತಾಂತ್ರಿಕತೆ ಇತ್ಯಾದಿ)ಕ್ಕೆ 25 ಲಕ್ಷ ರೂ. ಗಳ ನೆರವು ನೀಡುತ್ತಿದೆ. ಹೊಸ ಜನತಾ ಥಿಯೇಟರ್‌ಗಳ ನಿರ್ಮಾಣಕ್ಕೆ 50 ಲಕ್ಷ ರೂ. ಗಳನ್ನು ಕೊಡುತ್ತಿದೆ. ಬಹುಪರದೆಗಳಿದ್ದರೆ ತಲಾ ಎರಡು ಪರದೆಗಳಿಗೆ ಒಟ್ಟು ಒಂದು ಕೋಟಿ ರೂ. ಸಹಾಯಧನ ನೀಡು ತ್ತಿದೆ. ಈ ಸಹಾಯಧನ ಪಡೆದ ಮೇಲೆ ಕನ್ನಡದ ಚಿತ್ರಗಳನ್ನು ಪ್ರದರ್ಶಿಸಬೇಕು. ಇದು ಕನ್ನಡ ಚಿತ್ರರಂಗವನ್ನು ಉಳಿಸಲು ಇರುವಂಥದ್ದು.

ಈಗ ಏನಾಗಿದೆ?
ಕೋವಿಡ್‌ 19 ನ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿನೆಮಾ ಮಂದಿರಗಳು ಮುಚ್ಚಿದ್ದವು. ಈಗ ತೆರೆಯಬೇಕೆಂದರೆ ಆಸ್ತಿ ತೆರಿಗೆ, ನಿಗದಿತ ವಿದ್ಯುತ್‌ ಬಿಲ್‌, ನೀರಿನ ಕಂದಾಯದಿಂದ ವಿನಾಯಿತಿ ಕೊಡಿ ಎಂದು ಸರಕಾರವನ್ನು ಕೋರಲಾಗಿತ್ತು. ಈಗ ಸರಕಾರ ಆಸ್ತಿ ತೆರಿಗೆಯಿಂದ ವಿನಾಯಿತಿ ಕೊಟ್ಟಿದೆ. ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳಲ್ಲಿ ಸರಕಾರಗಳು ಉಳಿದ ವಿನಾಯಿತಿಯನ್ನೂ ನೀಡಿವೆ. ಇಲ್ಲಿಯೂ ಕೊಡಿ ಎಂಬುದು ಸಿನೆಮಾ ಉದ್ಯಮದವರ ಆಗ್ರಹ.

ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್‌ ಹೇಳುವ ಪ್ರಕಾರ, “ನಮ್ಮದು ಉದ್ಯಮ ನಿಜ. ಅದರೊಂದಿಗೆ ಜನರ ಒತ್ತಡ ಕಳೆಯುವ, ಮನೋವಿಕಾಸಕ್ಕೆ ಪೂರಕವೆನಿಸುವ ಮಾಧ್ಯಮವಾಗಿಯೂ ಕೆಲಸ ಮಾಡುತ್ತಿದ್ದೇವೆ. 2 ವರ್ಷಗಳಿಂದ ಸಿನೆಮಾ ಮಂದಿರಗಳು ಕಾರ್ಯ ನಿರ್ವಹಿಸಿಲ್ಲ. ವಹಿವಾಟೇ ನಡೆಸದೇ ನಾವು ಬಳಸದ ವಿದ್ಯುತ್‌, ನೀರಿಗೆ ದುಡ್ಡು ಕೊಡಿ ಎಂದರೆ ಕೊಡುವುದು ಹೇಗೆ’ ಎಂಬುದು ಅವರ ಪ್ರಶ್ನೆ.

ಸಿನೆಮಾ ಮಂದಿರಗಳು ಮನೋಲ್ಲಾಸ ತುಂಬುವ ಮನೆಗಳೆಂಬುದು ಅಕ್ಷರಶಃ ಸತ್ಯ. ಅದೊಂದು ಮನೆ ಗೆಳೆಯನಿದ್ದ ಹಾಗೆಯೇ. ಸರಕಾರ ಈ ಉದ್ಯಮದ ಆರಂಭಕ್ಕೆ ಒಪ್ಪಿಗೆ ನೀಡಿದ್ದರ ಹಿಂದೆ ಇದ್ದ ಮತ್ತೂಂದು ಅಂತರ್ಗತ ಉದ್ದೇಶವೆಂದರೆ, ಇದೊಂದು ಪ್ರಭಾವಿ ಮಾಧ್ಯಮ. ದೇಶ ಅಭಿವೃದ್ಧಿಗೆ ಪೂರಕವಾದ ಹಲವು ಸಂಗತಿಗಳನ್ನು ಹೇಳಲು ಈ ಮಾಧ್ಯಮವನ್ನು ಬಳಸಿಕೊಳ್ಳಬಹುದು ಎಂಬುದೂ ಕೂಡ. ಎಂಟು ದಶಕಗಳಲ್ಲಿ ಸಾವಿರಾರು ಚಲನಚಿತ್ರಗಳು ಸಮಾಜದ ಆರೋಗ್ಯ ಕಾಪಾಡುವತ್ತ, ಪ್ರೇರಣೆಯಾಗುತ್ತ, ದೇಶದ ಅಭಿವೃದ್ಧಿಯಲ್ಲಿ ಪರೋಕ್ಷ ಾಗಿ ಪಾಲ್ಗೊಳ್ಳುವಂತೆ ಪ್ರಜೆಗಳನ್ನು ಪ್ರೇರೇಪಿಸುತ್ತಾ, ಕೆಲವು ಸಂದರ್ಭಗಳಲ್ಲಿ ಆಳುವವರನ್ನು ಎಚ್ಚರಿಸುತ್ತಲೂ ಬಂದಿದೆ. ಇದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.

ಮತ್ತೂಂದು ನೆಲೆ
ಚಿತ್ರಮಂದಿರಕ್ಕೆ ಮತ್ತೂಂದು ನೆಲೆಯಿದೆ. ಅದು ಬಹಳ ಪ್ರಮುಖವಾದ ನೆಲೆ. ಇದು ವರೆಗೂ ಉಪೇಕ್ಷೆಗೆ ಒಳಗಾಗಿದೆ. ಅದುವೇ ಸ್ಥಳೀಯ ಆರ್ಥಿಕತೆಯ ಕೊಂಡಿಯೆಂಬುದು. ಒಂದು ಚಿತ್ರಮಂದಿರ ಸೀಮಿತ ಸಂಖ್ಯೆಯ ನೇರ ಉದ್ಯೋಗಳನ್ನು ಸೃಷ್ಟಿಸಿದರೂ ಹೆಚ್ಚಿನ ಪರೋಕ್ಷ ಉದ್ಯೋಗ, ಉದ್ಯಮಕ್ಕೂ ಅವಕಾಶ ನೀಡುತ್ತದೆ. ಒಂದು ನಗರ ಅಥವಾ ಪಟ್ಟಣದಲ್ಲಿ ಒಂದು ಸಿನೆಮಾ ಮಂದಿರವೂ ಉಳಿದ ಸ್ಥಳೀಯ ಆರ್ಥಿಕತೆಯ ಬಿಂದುಗಳಂತೆಯೇ ಪ್ರಮುಖವಾದ ಬಿಂದು (ದೇಗುಲಗಳು, ಗುಡಿ ಕೈಗಾರಿಕೆಗಳು ಇತ್ಯಾದಿ).

ಲಭ್ಯ ಮಾಹಿತಿ ಪ್ರಕಾರ ರಾಜ್ಯದ ಸುಮಾರು 630 ಚಿತ್ರಮಂದಿರಗಳಲ್ಲಿ 10 ಸಾವಿರ ಮಂದಿ ಉದ್ಯೋಗಿಗಳಿದ್ದಾರೆ. ಇವರ ಕುಟುಂಬಗಳಿವೆ (ಸರಕಾರ ಚಿತ್ರರಂಗದ ವ್ಯಾಪ್ತಿಯಲ್ಲೇ ಇವರನ್ನೂ ಪರಿಗಣಿಸಿ 3 ಸಾವಿರ ರೂ. ಪರಿಹಾರ ಘೋಷಿಸಿದೆ). ಒಂದು ಚಿತ್ರಮಂದಿರಕ್ಕೆ ಹೊಂದಿಕೊಂಡು ಹತ್ತಾರು ಅಂಗಡಿ, ವ್ಯಾಪಾರ ಸಂಸ್ಥೆಗಳಿರುತ್ತವೆ. ಅವರೆಲ್ಲರೂ ಬದುಕುವುದು ಒಂದು ಚಿತ್ರಮಂದಿರ ನಡೆಯುವುದರಿಂದಲೇ. ಆ ಹಣ ಬಳಕೆಯಾಗುವುದು ಸ್ಥಳೀಯವಾಗಿಯೇ. ಅಲ್ಲಿನ ಹಣದ ಹರಿವು ನಿಂತರೆ ಸ್ಥಳೀಯ ಆರ್ಥಿಕತೆಯ ಒಂದು ಹರಿವಿನ ಮೂಲ ಮುಚ್ಚಿದಂತೆಯೇ.

ನಮಗೆ ಇದು ಬಹಳ ಸಣ್ಣ ಸಂಗತಿಯಾಗಿ ಕಾಣಬಹುದು. ಆದರೆ ಪ್ರತಿ ನಗರಗಳು ಸ್ಥಳೀಯ ಸ್ವಾವಲಂಬನೆಯ ಸಾಧ್ಯತೆಗಳನ್ನು ಕಳೆದುಕೊ ಳ್ಳುತ್ತಿರುವ ಈ ಕಾಲದಲ್ಲಿ ಒಂದಿಷ್ಟು ವಲಸೆಗಳನ್ನು ತಡೆಯುವಲ್ಲಿ ಇಂಥ ಹಲವು ಬಿಂದುಗಳು ಸಹಾಯವಾಗಬಹುದು.

ಹೀಗಾಗಿ ರಾಜ್ಯ ಸರಕಾರ, ಹೊಸ ಥಿಯೇಟರ್‌ಗಳ ಆರಂಭಕ್ಕೆ ಪ್ರೋತ್ಸಾಹಕ್ರಮಗಳನ್ನು ಕೈಗೊಂ ಡಂತೆಯೇ ಇರುವ ಥಿಯೇಟರ್‌ಗಳನ್ನು ಉಳಿಸಿ ಕೊಳ್ಳಲೂ ಕೆಲವು ವಿಶೇಷ ಉಪಕ್ರಮಗಳನ್ನು ಕೈಗೊಳ್ಳಬೇಕು. ಆದಾಯದ ಏಕಮಾತ್ರ ಕೋನದಿಂದ ನೋಡುವುದು ನಿಲ್ಲಿಸಬೇಕು. ಮನೋಲ್ಲಾಸ ಮತ್ತು ಸ್ಥಳೀಯ ಆರ್ಥಿಕತೆಯ ದೃಷ್ಟಿಯಿಂದಲೂ ಈ ಸಮಸ್ಯೆಯನ್ನು ನೋಡ ಬೇಕು. ತರುವಾಯ ಸೂಕ್ತ ತೀರ್ಮಾನ ಕೈಗೊಳ್ಳಲು ಇದು ಸಕಾಲ.

ಯಾಕೆಂದರೆ, ನಗರ ಅಥವಾ ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿರುವ ಚಿತ್ರಮಂದಿರಗಳ ಮಾಲಕರು, ಖಾಲಿ ಜಾಗವೇ ಹೆಚ್ಚು ಲಾಭ ಎಂದು ಆಲೋಚಿಸಿ ಕಾರ್ಯ ಪ್ರವೃತ್ತರಾದರೆ ಬರೀ ಸಿನೆಮಾ ಮಂದಿರಗಳು ಸಾಯವುದಿಲ್ಲ. ಬದಲಾಗಿ ಸ್ಥಳೀಯ ಆರ್ಥಿಕತೆಯ ಬೇರಿನ ಒಂದು ಪ್ರಮುಖ ನರ ಸಾಯುತ್ತದೆ. ಇದರ ಪರಿಣಾಮ ತತ್‌ಕ್ಷಣ ಗೊತ್ತಾಗದು, ಭವಿಷ್ಯದಲ್ಲಿ ಸ್ಥಳೀಯ ಆರ್ಥಿಕತೆಯೆಂಬ ಮರವೇ ಸಾಯಬಹುದು.

– ಅರವಿಂದ ನಾವಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next