Advertisement

ಪತ್ನಿ ಕತ್ತು ಹಿಸುಕಿ ಕೊಲೆ

10:39 AM Nov 24, 2017 | |

ಚಿಂಚೋಳಿ: ತಾಲೂಕಿನ ಇರಗಪಳ್ಳಿ ಗ್ರಾಮದಲ್ಲಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿದೆ ಎಂದು ಸುಲೇಪೇಟ ಪೊಲೀಸರು ತಿಳಿಸಿದ್ದಾರೆ. ಇರಗಪಳ್ಳಿ ಗ್ರಾಮದ ನವವಿವಾಹಿತೆ ಸವಿತಾ ರವಿಶಂಕರ ಕಲಶೆಟ್ಟಿ (20) ಮೃತಪಟ್ಟವಳು. ಒಂದೂವರೆ ವರ್ಷಗಳ ಹಿಂದೆಯಷ್ಟೆ ತಾಲೂಕಿನ ಪೋತಂಗಲ್‌ ಗ್ರಾಮದ ಬಸಣ್ಣ ಕಲಶೆಟ್ಟಿ ಎನ್ನುವರ ಮಗಳಾದ ಸವಿತಾ ಎನ್ನಾಕೆಯನ್ನು ಇರಗಪಳ್ಳಿ ಗ್ರಾಮದ ರವಿಶಂಕರ ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು.

Advertisement

ಪತಿ, ಪತ್ನಿ ಮಧ್ಯೆ ಕಳೆದ ಆರು ತಿಂಗಳಿಂದ ಸಂಸಾರದಲ್ಲಿ ಹೊಂದಾಣಿಕೆ ಇರಲಿಲ್ಲ. ನನ್ನ ಮೇಲೆ ಸಂಶಯಪಟ್ಟು ಅನಾವಶ್ಯಕವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನನ್ನ ಪತಿ ನೀಡುತ್ತಿದ್ದಾನೆಂದು ಮೃತಳು ತನ್ನ ತಂದೆ ತಾಯಿಗೆ ತಿಳಿಸಿದ್ದಳು. ಅಲ್ಲದೇ ತನ್ನ ತವರು ಮನೆಯಲ್ಲಿಯೇ ವಾಸವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ
ನ. 20ರಂದು ಗ್ರಾಮಸ್ಥರು ಪತಿ ರವಿಶಂಕರ ಹಾಗೂ ನೆರೆಹೊರೆಯವರು ಎರಡು ಕುಟುಂಬಗಳ ಮಧ್ಯೆ ರಾಜಿ ಸಂಧಾನ ಮಾಡಿದ್ದರಿಂದ ಕುಟುಂಬ ಹಿರಿಯರೊಂದಿಗೆ ಗಂಡನ ಮನೆಗೆ ಬಂದಿದ್ದಳು. ಮತ್ತೆ ಗಂಡ ಹೆಂಡತಿ ಮಧ್ಯೆ ಮಾತಿಗೆ ಮಾತು ಬೆಳೆದು ಇಬ್ಬರು ಜಗಳವಾಡಿದ್ದರು.

ಸಿಟ್ಟಿಗೆದ್ದ ಪತಿ ರವಿಶಂಕರ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆಯ ಕುರಿತು ಮೃತಳ ತಂದೆ ಬಸಣ್ಣ ನೀಡಿದ ದೂರಿನ ಮೇರೆಗೆ ಸುಲೇಪೇಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿ ರವಿಶಂಕರನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್‌ಐ ಪ್ರಭು ದುದ್ದಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next