Advertisement

Manso Re: ನಿರ್ದೇಶಕ ಮಂಸೋರೆ ವಿರುದ್ಧ ಕಿರುಕುಳ ದೂರು ನೀಡಿದ ಪತ್ನಿ

12:44 PM Jan 28, 2024 | Team Udayavani |

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ಸ್ಯಾಂಡಲ್‌ವುಡ್‌ ಸಿನಿಮಾ ನಿರ್ದೇಶಕ ಮಂಸೋರೆ ವಿರುದ್ಧ ಪತ್ನಿಗೆ ಮಾನಸಿಕ, ದೈಹಿಕ ಹಿಂಸೆ, ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ. ಮಂಸೋರೆ, ಅವರ ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ಅವರ ಸಹೋದರಿ ಹೇಮಲತಾ ವಿರುದ್ಧ ಅವರ ಪತ್ನಿ ಅಖಿಲಾ ದೂರು ನೀಡಿದ್ದು, ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಗೆ ದೂರು ನೀಡಿರುವ ಮಂಸೋರೆಯವರ ಪತ್ನಿ ಅಖಿಲಾ, “ತಮ್ಮ ಪತಿ ಮಂಸೋರೆ (ಮಂಜುನಾಥ) ವೈವಾಹಿಕ ಜೀವನದ ಆರಂಭದಿಂದಲೂ ಕಿರುಕುಳ ನೀಡುತ್ತಿದ್ದು, ಕೋವಿಡ್‌ ಸಮಯದಲ್ಲಿ ಸಿನಿಮಾ ಮಾಡಲು ತಮ್ಮ ಮನೆಯವರಿಂದ 10 ಲಕ್ಷ ರೂ. ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಮಂಸೋರೆ, ಅವರ ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ಅವರ ಸಹೋದರಿ ಹೇಮಲತಾ, ತಮಗೆ 30 ಲಕ್ಷದ ಎಸ್‌.ಯು.ವಿ ಕಾರು ಕೊಡಿಸಿಕೊಡುವಂತೆ ಪೀಡಿಸುತ್ತಿದ್ದಾರೆ. ಈ ವಿಷಯವನ್ನು ಎಲ್ಲಾದರೂ ಹೇಳಿದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ಪತ್ನಿ ಆರೋಪಕ್ಕೆ ಪ್ರತಿಯಾಗಿ ಆಯುಕ್ತರಿಗೆ ಪತ್ರ :

ಪತ್ನಿಯ ಆರೋಪಕ್ಕೆ ಪ್ರತಿಯಾಗಿ ಸಹಾಯಕ ಪೊಲೀಸ್‌ ಆಯುಕ್ತರಿಗೆ ಪತ್ರವೊಂದನ್ನು ಬರೆದಿರುವ ಮಂಸೋರೆ “ನನ್ನ ಪತ್ನಿಗೆ ಮಾನಸಿಕ ಸಮಸ್ಯೆ ಇದ್ದು, ಚಿಕಿತ್ಸೆ ಸಹ ಪಡೆಯುತ್ತಿದ್ದರು. ಅಲ್ಲದೆ, ನನ್ನ ಪತ್ನಿ, ನನ್ನ ತಾಯಿಯನ್ನು ಮನೆಯಿಂದ ಹೊರಗೆ ಹಾಕುವಂತೆ ಹಠ ಹಿಡಿದಿದ್ದರು. ನನ್ನ ಹಾಗೂ ನನ್ನ ತಾಯಿಯ ಮೇಲೆ ದೈಹಿಕ ಹಲ್ಲೆಯನ್ನು ಸಹ ಮಾಡಿದ್ದಾರೆ. ನಾನು ನನ್ನ ಪತ್ನಿಯ ಕಡೆಯವರಿಂದ ವರದಕ್ಷಿಣೆ ಅಥವಾ ಉಡುಗೊರೆ ಪಡೆದಿಲ್ಲ. ನನ್ನ ಬ್ಯಾಂಕ್‌ ಖಾತೆ ಅಥವಾ ವ್ಯವಹಾರಗಳ ಪರೀಕ್ಷೆಗೊಳಪಡಿಸಬಹುದು. ದೂರು ನೀಡುವ ಮುಂಚೆ ನನ್ನ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದ ದೃಶ್ಯ, ನನ್ನ ಹಾಗೂ ನನ್ನ ತಾಯಿಯ ವಿರುದ್ಧ ನಿಂದನೆ ಮಾಡಿದ, ಹಲ್ಲೆ ಮಾಡಿದ ವಿಡಿಯೋ ಸಾಕ್ಷಿಗಳಿವೆ. ಅವುಗಳನ್ನು ಅರ್ಜಿಯೊಟ್ಟಿಗೆ ನೀಡಿದ್ದೇನೆ” ಎಂದಿದ್ದಾರೆ. ಅಲ್ಲದೆ ”ತಾವು ತಮ್ಮ ಪತ್ನಿಗೆ ಕೊಡಿಸಿದ ಚಿನ್ನಾಭರಣದ ಜೊತೆಗೆ ತಮ್ಮ ಸಿನಿಮಾಕ್ಕೆ ಬಂದಿರುವ ರಾಷ್ಟ್ರಪ್ರಶಸ್ತಿ ಹಾಗೂ ಇತರೆ ಪದಕಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಪತ್ನಿಯ ವಿರುದ್ಧ ದೂರು ಸಲ್ಲಿಸುವ ಉದ್ದೇಶ ನನಗೆ ವೈಯಕ್ತಿಕವಾಗಿ ಇಲ್ಲ. ಆಕೆಯ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಸಿಗಬೇಕೆಂಬುದು ನನ್ನ ಕಾಳಜಿ. ಆದರೆ, ನನ್ನ ಪತ್ನಿ ಸಲ್ಲಿಸಿರುವ ಸುಳ್ಳು ದೂರಗಳ ವಿರುದ್ಧ ನನಗೆ ರಕ್ಷಣೆ ಒದಗಿಸಿ” ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next