Advertisement

ಭರವಸೆಯ ಬೆಳಕು ಮೂಡಿಸಿದ ಜಿಲ್ಲಾಧಿಕಾರಿಗಳ ನಡೆ

01:54 AM Feb 24, 2021 | Team Udayavani |

ಸರಕಾರವೇ ಮನೆ ಬಾಗಿಲಿಗೆ ಹೋಗಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಮಹತ್ವಾಕಾಂಕ್ಷಿ “ಹಳ್ಳಿಗಳ ಕಡೆ-ಜಿಲ್ಲಾಧಿಕಾರಿಗಳ ನಡೆ’ ಕಾರ್ಯಕ್ರಮ ಗ್ರಾಮೀಣರಲ್ಲಿ ಭರವಸೆಯ ಬೆಳಕು ಮೂಡಿಸುವಲ್ಲಿ ಯಶ ಕಂಡಿದೆ. ಹಳ್ಳಿಗಾಡಿನ ದುಃಖ-ದುಮ್ಮಾನಗಳನ್ನು ಖುದ್ದಾಗಿ ಆಲಿಸಿದ ಜಿಲ್ಲಾವಾರು ಅಧಿಕಾರಿಗಳು ಅವುಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸುವ ಮೂಲಕ ಕಾರ್ಯಕ್ರಮದ ಉದ್ದೇಶ ಫ‌ಲಪ್ರದಗೊಳಿಸುವಲ್ಲಿ ಶ್ರಮಿಸಿದ್ದಾರೆ.

Advertisement

80ಕ್ಕೂಹೆಚ್ಚು ಅರ್ಜಿ ಇತ್ಯರ್ಥ
ಕಲಬುರಗಿ: ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾ ° ಗ್ರಾಮ ವಾಸ್ತವ್ಯ ಮಾಡಿ ಒಂದೇ ದಿನದಲ್ಲಿ 80ಕ್ಕೂ ಅಧಿಕ ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಿದ್ದಾರೆ. ಒಟ್ಟಾರೆ 350ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದವು. ಇದರಲ್ಲಿ ಶನಿವಾರ ಒಂದೇ ದಿನ 80 ಅರ್ಜಿ ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ. 100ಕ್ಕೂ ಹೆಚ್ಚು ಅರ್ಜಿಗಳನ್ನು ಜಿಲ್ಲಾಧಿಕಾರಿಗಳೇ ಖುದ್ದಾಗಿ ಪರಿಶೀಲಿಸಿ ಪರಿಹಾರ ಕಲ್ಪಿಸಿದ್ದಾರೆ.

ವೃದ್ಧಾಪ್ಯ, ವಿಧವಾ ವೇತನ ಮಂಜೂರು
ಬೆಳಗಾವಿ: ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ಜಿಲ್ಲಾ ಧಿಕಾರಿ ಎಂ.ಜಿ. ಹಿರೇಮಠ ಗ್ರಾಮ ವಾಸ್ತವ್ಯ ನಡೆಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಸ್ಥಳದಲ್ಲಿಯೇ ಕೆಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ವಾಸ್ತವ್ಯ ಫಲಪ್ರದವಾಗಿದೆೆ. ಜಿಲ್ಲಾ ಧಿಕಾರಿಗಳು ಇಡೀ ದಿನ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ಆಲಿಸಿದರು. ಅಗತ್ಯ ಕೆಲಸಗಳನ್ನು ಸಂಬಂಧಿ ಸಿದ ಅಧಿ ಕಾರಿಗಳೊಂದಿಗೆ ಚರ್ಚಿಸಿ ಮಾಡಿ ಕೊಡುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ.

ಅಗಸನಹಳ್ಳಿಗೆ ಬಂತು ಸರಕಾರಿ ಬಸ್‌!
ದಾವಣಗೆರೆ: ಈವರೆಗೆ ಸರಕಾರಿ ಬಸ್‌ ಓಡಾಡದ ಜಗಳೂರು ತಾಲೂಕಿನ ಅಗಸನಹಳ್ಳಿಯಲ್ಲಿ ಈಗ ಬಸ್‌ ಸಂಚಾರ ಆರಂಭಗೊಂಡಿದ್ದು, ಗ್ರಾಮಸ್ಥರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಗ್ರಾಮಸ್ಥರ ಬಹು ದಶಕಗಳ ಬಸ್‌ ಬೇಡಿಕೆ ಸಾಕಾರಗೊಳ್ಳಲು ಕಾರಣವಾಗಿದ್ದು “ಜಿಲ್ಲಾಧಿಕಾರಿ ನಡಿಗೆ ಹಳ್ಳಿ ಕಡೆಗೆ’ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕಾಗಿ ಡೀಸಿ ಮಹಾಂತೇಶ ಬೀಳಗಿ ಜಿಲ್ಲಾ ಕೇಂದ್ರದಿಂದ ದೂರವಿರುವ ಗಡಿ ಗ್ರಾಮ ಬಸವನಕೋಟೆ-ಅಗಸನಹಳ್ಳಿ ಆಯ್ಕೆ ಮಾಡಿಕೊಂಡು ಅಂದು ರಾತ್ರಿ ಗ್ರಾಮದಲ್ಲಿಯೇ ವಾಸ್ತವ್ಯ ಮಾಡಿದ್ದರು. ವಾಸ್ತವ್ಯದ ಮರು ದಿನದಿಂದಲೇ ಗ್ರಾಮಕ್ಕೆ ಸರಕಾರಿ ಬಸ್‌ ಸಂಚಾರ ಆರಂಭವಾಗಿದೆೆ.

ಡಿಸಿ ಸಮ್ಮುಖ ಸಮಸ್ಯೆಗಳ ನಿವಾರಣೆ
ಕೋಲಾರ: ಜಿಲ್ಲೆಯ ಆರು ತಾಲೂಕುಗಳಲ್ಲಿ ಆರು ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಾಯಿತು. ಕೋಲಾರ ಕೆಂಬೋಡಿ ಹಾಗೂ ನಾಚಹಳ್ಳಿಯ ಗ್ರಾಮ ವಾಸ್ತವದಲ್ಲಿ ಡಿಸಿ ಡಾ| ಸೆಲ್ವಮಣಿ ಭಾಗವಹಿಸಿದ್ದರು. ಉಳಿದಂತೆ ಮಾಲೂರಿನ ಗೊಡಗನಹಳ್ಳಿ, ಕೆಜಿಎಫ್ನ ಪೀಲವಾರ, ಬಂಗಾರಪೇಟೆಯ ನರಿನತ್ತ ಮತ್ತು ಶ್ರೀನಿವಾಸಪುರದ ದಿಗುವ ಮೊರಂಕಿಂದಪಲ್ಲಿಯಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು. ಎಲ್ಲ ಗ್ರಾಮ ವಾಸ್ತವ್ಯದಲ್ಲಿಯೂ ಪಿಂಚಣಿ, ಮತದಾರರ ಚೀಟಿ ಇತ್ಯಾದಿ ಅಹವಾಲುಗಳು ಸ್ಥಳದಲ್ಲೇ ಬಗೆಹರಿದಿವೆ.

Advertisement

ಕಣಕುಪ್ಪೆಗೆ ಮಾ.1ರಿಂದ ಬಸ್‌
ಚಿತ್ರದುರ್ಗ: ಅಧಿಕಾರಿಗಳು ವಾಸ್ತವ್ಯ ಮಾಡಿದ ಗ್ರಾಮಗಳಲ್ಲಿ ಜನರು ಸಲ್ಲಿಸಿದ್ದ ಅರ್ಜಿಗಳ ಪೈಕಿ ಶೇ.70ರಷ್ಟು ಸ್ಥಳದಲ್ಲೇ ಇತ್ಯರ್ಥವಾಗಿವೆ. ಡಿಸಿ ಕವಿತಾ ಎಸ್‌. ಮನ್ನಿಕೇರಿ ವಾಸ್ತವ್ಯ ಮಾಡಿದ್ದ ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ ಗ್ರಾಮಕ್ಕೆ ಅಗತ್ಯವಿರುವ ಸಾರಿಗೆ ವ್ಯವಸ್ಥೆಯನ್ನೂ ಮಾಡಿದ್ದು, ಮಾ.1 ರಿಂದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸಲಿದೆ. ಇದಲ್ಲದೆ ಗ್ರಾಮದ ಮಹಿಳೆಯೊಬ್ಬರಿಗೆ ಉದ್ಯೋಗಿನಿ ಯೋಜನೆಯಡಿ 2 ಲಕ್ಷ ರೂ. ಸಾಲ ಮಂಜೂರಾಗಿದೆ. ಇದರೊಟ್ಟಿಗೆ 9 ಜನರಿಗೆ ಮಾಸಾಶನ, 10 ಜನರಿಗೆ ಪೌತಿ ಖಾತೆ, 4 ಜನರ ಪಹಣಿ ತಿದ್ದುಪಡಿ, 3 ಜನ ವಿಕಲಚೇತನರಿಗೆ ವ್ಹೀಲ್‌ಚೇರ್‌, 6 ಶ್ರವಣ ಸಾಧನ, 7 ಭಾಗ್ಯಲಕ್ಷ್ಮೀ ಬಾಂಡ್‌ ಹಾಗೂ 7 ಜನರಿಗೆ ಕೃಷಿ ಉಪಕರಣ ನೀಡಲಾಗಿದೆ. ಗ್ರಾಮದಲ್ಲಿ ಹೈಮಾಸ್ಟ್‌ ದೀಪ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ.

ಫಲಪ್ರದವಾದ ಕೋಗಿಲಗೇರಿ ಗ್ರಾಮ ವಾಸ್ತವ್ಯ
ಧಾರವಾಡ: ಅಳ್ನಾವರ ತಾಲೂಕಿನ ಕೋಗಿಲಗೇರಿ ಗ್ರಾಮದಲ್ಲಿ ನಡೆದ ಡಿಸಿ ಡಾ| ನಿತೇಶ ಪಾಟೀಲ ಗ್ರಾಮವಾಸ್ತವ್ಯ ಬಹುತೇಕ ಫಲಪ್ರದವಾಗಿದ್ದು, ಗ್ರಾಮಸ್ಥರು ಹರ್ಷಗೊಂಡಿದ್ದಾರೆ. ವಿಧವಾ ವೇತನ, ಪಿಂಚಣಿ ಸೇರಿ ಎಲ್ಲ ಸಮಸ್ಯೆಗಳಿಗೂ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಿದೆ. ಜಿಲ್ಲಾ ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶ್ಮಶಾನಭೂಮಿಗೆ ಗುರುತು ಕಲ್ಲು ಹಾಕಿಸಿದ್ದಾರೆ. ಧಾರವಾಡ ಜಿಲ್ಲಾದ್ಯಂತ ಏಳು ತಾಲೂಕಿನ ಹಳ್ಳಿಗಳಲ್ಲಿ ನಡೆದ ಗ್ರಾಮ ವಾಸ್ತವ್ಯದಲ್ಲಿ ಒಟ್ಟು 488 ಅರ್ಜಿಗಳು ಸಲ್ಲಿಕೆಯಾಗಿದ್ದು, 202 ಅರ್ಜಿಗಳನ್ನು ಸ್ಥಳದಲ್ಲಿಯೇ ಅಧಿಕಾರಿಗಳು ಪರಿಹರಿಸಿದ್ದಾರೆ. 286 ಅರ್ಜಿಗಳು ಬಾಕಿ ಉಳಿದುಕೊಂಡಿವೆ.

ಬಳ್ಳಾರಿಯಲ್ಲಿ 41 ಫಲಾನುಭವಿಗಳಿಗೆ ಆದೇಶ
ಬಳ್ಳಾರಿ: ಹೊಸಪೇಟೆ ತಾಲೂಕು ತಿಮ್ಮಲಾಪುರ ಗ್ರಾಮದಲ್ಲಿ ಡೀಸಿ ಪವನ್‌ಕುಮಾರ್‌ ಮಾಲಪಾಟಿ ಒಂದೇ ದಿನದಲ್ಲಿ ಪಿಂಚಣಿ, ಪೌತಿ, ಭಾಗ್ಯಲಕ್ಷಿ ¾à ಸೇರಿ 42 ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಿಸಿದ್ದಾರೆ. ಗ್ರಾಮಸ್ಥರಿಂದ ಕಂದಾಯ, ಆರ್‌ಡಿಪಿಆರ್‌, ತೋಟಗಾರಿಕೆ ಇಲಾಖೆ ಸೇರಿ ಒಟ್ಟು 394 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಸುಮಾರು 217 ಅರ್ಜಿಗಳು ವಸತಿ ಯೋಜನೆಯಡಿ ಸಲ್ಲಿಕೆಯಾಗಿದ್ದವು. ಹಲವು ವರ್ಷಗಳಿಂದ ಖಾಸಗಿ ನಿವೇಶನದಲ್ಲಿ ಇದ್ದ ಸರಕಾರಿ ಶಾಲೆ ಹೆಸರಿಗೆ ಸ್ಥಳ ನೋಂದಾಯಿಸಿ ಆದೇಶ ಪ್ರತಿಯನ್ನು ಸ್ಥಳದಲ್ಲೇ ವಿತರಿಸಿದ್ದಾರೆ.

ಬಾಗಲಕೋಟೆ:79 ಅರ್ಜಿ ಇತ್ಯರ್ಥ
ಬಾಗಲಕೋಟೆ: ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ. ರಾಜೇಂದ್ರ ಸ್ವತಃ ಜಮಖಂಡಿ ತಾಲೂಕಿನ ಹುಲ್ಯಾಳದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ವೇಳೆ ಒಟ್ಟು 188 ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 95 ಅರ್ಜಿ ಬಂದಿದ್ದವು. ಅದರಲ್ಲಿ 79 ಅರ್ಜಿ ವಿಲೇವಾರಿ ಮಾಡಲಾಗಿದೆ. ಇನ್ನುಳಿದ ಅರ್ಜಿಗಳು ಬೇರೆ ಇಲಾಖೆಗಳಿಗೆ ಸಂಬಂಧಿಸಿದ್ದು, ಆ ಇಲಾಖೆಗೆ ರವಾನೆ ಮಾಡಲಾಗಿದೆ. ಗ್ರಾಮಸ್ಥರು ಶ್ಮಶಾನ ಭೂಮಿ ಬೇಡಿಕೆ ಇಟ್ಟಿದ್ದು, ಸ್ಥಳೀಯ ಮಠವೊಂದರ ಸ್ವಾಮೀಜಿಗಳ ಮನವೊಲಿಸಿ ಅವರಿಗೆ ಸೇರಿದ 20 ಗುಂಟೆ ಜಾಗೆಯನ್ನು ಸರಕಾರದ ನಿಯಮಾನುಸಾರ ಖರೀದಿಸಿ, ಶ್ಮಶಾನಕ್ಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಮೃತ ರೈತನ ಮನೆಗೆ ಬಂತು ಪಿಂಚಣಿ ಆದೇಶ
ಗದಗ: ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದಲ್ಲಿ ಡಿಸಿ ಗ್ರಾಮವಾಸ್ತವ್ಯದಿಂದ ರೈತ ಕುಟುಂಬವೊಂದಕ್ಕೆ ನೆಮ್ಮದಿ ತಂದಿದೆ. ಕೆಲವು ತಿಂಗಳ ಹಿಂದೆಯಷ್ಟೇ ರೈತ ವೀರಯ್ಯ ಸಂಗಯ್ಯ ಗದಗಿನಮಠ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಮನೆ ನಿರ್ವಹಣೆಗಾಗಿ ಸರಕಾರದಿಂದ ಪರಿಹಾರ ಹಣ ಬಿಡುಗಡೆ ಮತ್ತು ಅವಲಂಬಿತರಿಗೆ ಪಿಂಚಣಿಗಾಗಿ ಕುಟುಂಬಸ್ಥರು ಕಚೇರಿಗಳಿಗೆ ಅಲೆಯುವಂತಾಗಿತ್ತು. ಈ ಕುರಿತು ಮಾಹಿತಿ ಪಡೆದ ಡಿಸಿ ಎಂ. ಸುಂದರೇಶ ಬಾಬು ಮೃತ ರೈತರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸ್ಥಳದಲ್ಲಿಯೇ ಪಿಂಚಣಿ ಆದೇಶ ಪ್ರತಿ ನೀಡಿ, ಶೀಘ್ರವೇ ಪರಿಹಾರ ಮೊತ್ತ ಒದಗಿಸುವ ಮತ್ತು ರೈತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ ಕಡಿಮೆಗೊಳಿಸುವಂತೆ ಬ್ಯಾಂಕ್‌ ಅ ಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಭರವಸೆ ನೀಡಿದರು.

ಚಿಕ್ಕಮಗಳೂರಿನಲ್ಲಿ 98 ಅರ್ಜಿ ಇತ್ಯರ್ಥ
ಚಿಕ್ಕಮಗಳೂರು: ತಾಲೂಕಿನ ಲಕ್ಯಾ ಹೋಬಳಿ ಕುರುಬರ ಬೂದಿಹಾಳ್‌ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಪ್ರಭಾರ ಜಿಲ್ಲಾ ಧಿಕಾರಿ ಹಾಗೂ ಜಿಪಂ ಸಿಇಒ ಎಸ್‌. ಪೂವಿತಾ, ಮತ್ತಿತರ ಇಲಾಖೆ ಅಧಿಕಾರಿಗಳು ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿದ್ದಾರೆ. ಕಂದಾಯ ಇಲಾಖೆಗೆ ಸಂಬಂ ಧಿಸಿದಂತೆ 174 ಅಹವಾಲು ಸ್ವೀಕಾರ ಮಾಡಿದ್ದು, ಸ್ಥಳದಲ್ಲೇ 98 ಅಹವಾಲುಗಳು ಇತ್ಯರ್ಥವಾಗಿದೆ. 14 ಅಹವಾಲುಗಳು ಬಾಕಿಯಿವೆ.

ಶಿವಮೊಗ್ಗದಲ್ಲಿ ಶೇ.70 ಅರ್ಜಿ ಇತ್ಯರ್ಥ
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ತಡಸನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಗ್ರಾಮಸ್ಥರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಹಲವು ದಿನಗಳಿಂದ ಬಾಕಿ ಉಳಿದಿದ್ದ ಅರ್ಜಿಗಳು, ಹೊಸ ಬೇಡಿಕೆಗಳಿಗೆ ಮನ್ನಣೆ ಸಿಕ್ಕಿದೆ. ಸಾರ್ವಜನಿಕ ಸಭೆಯಲ್ಲೂ ಅನೇಕ ಅಹವಾಲು ಸಲ್ಲಿಕೆಯಾಗಿದ್ದು 197 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಶೇ.70 ರಷ್ಟು ಅರ್ಜಿಗಳು ಜಮೀನು ದಾರಿ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ. ಉಳಿದಂತೆ ನಿವೇಶನ ಕೋರಿಯೂ ಅರ್ಜಿ ಸಲ್ಲಿಕೆಯಾಗಿವೆ.

ಶೇ.40 ಅರ್ಜಿ ಸ್ಥಳದಲ್ಲೇ ಸಮಸ್ಯೆ ಇತ್ಯರ್ಥ
ಕೊಪ್ಪಳ: ಯಲಬುರ್ಗಾ ತಾಲೂಕಿನ ಹಿರೇವಡ್ರಕಲ್‌ ಗ್ರಾಮದಲ್ಲಿ ಶೇ.40ರಷ್ಟು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡುವ ಮೂಲಕ ಮೊದಲ ಹಂತದಲ್ಲಿ ಉತ್ತಮ ಫಲಶ್ರುತಿ ಕಂಡಿದೆ. ಹಿರೇವಡ್ರಕಲ್‌ನಲ್ಲಿ ಫೆ.20ರಂದು ನಡೆದ ಗ್ರಾಮ ವಾಸ್ತವ್ಯದಲ್ಲಿ ಡಿಸಿ ಸೇರಿ 20ಕ್ಕೂ ಹೆಚ್ಚು ಇಲಾಖೆಗಳ ಜಿಲ್ಲಾಮಟ್ಟದ ಅಧಿ ಕಾರಿಗಳು ವಾಸ್ತವ್ಯ ಮಾಡಿದ್ದರು. ಗ್ರಾಮಸ್ಥರಿಂದ ಸಲ್ಲಿಕೆಯಾದ 373 ಅರ್ಜಿಗಳಲ್ಲಿ 148 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡಿದ್ದರೆ, 225 ಅರ್ಜಿಗಳ ಇತ್ಯರ್ಥಕ್ಕೆ ಕಾಲಮಿತಿಯ ಗಡುವು ನೀಡಿದ್ದಾರೆ.

“ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗಳ ಕಡೆಗೆ’ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಿದೆ. ಸುಮಾರು 50ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅದರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಅಭಿವೃದ್ಧಿಗೆ ಸಂಬಂಧಿ ಸಿದ ಅರ್ಜಿಗಳೂ ಇದ್ದವು. ಅವುಗಳನ್ನು ಹೊರತುಪಡಿಸಿ, ಸ್ಥಳದಲ್ಲೇ ಮಾಡಬಹುದಾದ ಕೆಲಸಗಳನ್ನು ಗರಿಷ್ಠ ಮಟ್ಟದಲ್ಲಿ ಮಾಡಿದ್ದು, ತೃಪ್ತಿ ತಂದಿದೆ.
– ಎಂ. ಸುಂದರೇಶ್‌ ಬಾಬು, ಗದಗ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next