Advertisement

ಕಂಡಲ್ಲಿ ಕಸ ಎಸೆದ್ರೆ ಕೂಗುತ್ತೆ ಅಶರೀರವಾಣಿ

11:56 AM Dec 08, 2018 | |

ಬೆಂಗಳೂರು: ಬೆಂಗಳೂರಿನ ಕಸ ಸಮಸ್ಯೆ ಈ ಹಿಂದೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗಲೂ ಅಲ್ಲಲ್ಲಿ ಕಂಡುಬರುವ “ಬ್ಲ್ಯಾಕ್‌ ಸ್ಪಾಟ್‌’ಗಳು ನಗರದ ಅಂದಗೆಡಿಸುತ್ತಿರುವುದು ತಲೆನೋವಾಗಿದೆ. ಆದರೆ, ಈ ಸಮಸ್ಯೆಗೆ ಹುಬ್ಬಳ್ಳಿಯಂತಹ ಸಣ್ಣ ನಗರ ಕಂಡುಕೊಂಡ ಪರಿಹಾರ ರಾಜಧಾನಿ ಬೆಂಗಳೂರಿಗೇ ಮಾದರಿಯಾಗಿದೆ. ಹುಬ್ಬಳ್ಳಿಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿದರೆ, ತಕ್ಷಣ ಅಶರೀರವಾಣಿ ಮೊಳಗುತ್ತದೆ.

Advertisement

ಉದಾಹರಣೆಗೆ ರಸ್ತೆಯಲ್ಲಿ ಹೋಗುತ್ತಿರುವ ವ್ಯಕ್ತಿ ಕೈಯಲ್ಲಿದ್ದ ತ್ಯಾಜ್ಯವನ್ನು ಪಕ್ಕದಲ್ಲೇ ಬಿಸಾಕಿ ಹೋಗುತ್ತಾನೆ. ಕ್ಷಣಾರ್ಧದಲ್ಲಿ ಆ ವ್ಯಕ್ತಿಯನ್ನು ಉದ್ದೇಶಿಸಿ, “ನೀವು ಹೀಗೆ ಕಸ ಚೆಲ್ಲುವುದು ಅಕ್ಷಮ್ಯ. ನಿಮಗೆ ದಂಡ ಕೂಡ ವಿಧಿಸಬಹುದು. ದಯವಿಟ್ಟು ಕಸದ ಬುಟ್ಟಿಯಲ್ಲೇ ಹಾಕಿ’ ಎಂದು ಎಚ್ಚರಿಕೆ ಧ್ವನಿಯೊಂದು ಕೇಳಿಬರುತ್ತದೆ. ಈ ಅಶರೀರವಾಣಿಯಿಂದ ತಬ್ಬಿಬ್ಟಾದ ವ್ಯಕ್ತಿ ತಕ್ಷಣ ತಾನು ಬಿಸಾಡಿದ ಕಸವನ್ನು ಎತ್ತಿ ಬುಟ್ಟಿಗೆ ಹಾಕುತ್ತಾನೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆದಿದ್ದು, ಇದು ಎಲ್ಲರೂ ವಾಣಿಜ್ಯ ನಗರಿಯತ್ತ ನೋಡುವಂತೆ ಮಾಡಿದೆ.  

ಈ ವಿನೂತನ ಪ್ರಯೋಗ ನಿರೀಕ್ಷಿತ ಫ‌ಲ ನೀಡಿದ್ದು, ಯೋಜನೆ ಅನುಷ್ಠಾನಗೊಳಿಸಿದ ಮಾರ್ಗಗಳಲ್ಲಿ “ಬ್ಲ್ಯಾಕ್‌ ಸ್ಪಾಟ್‌’ಗಳು ಸಂಪೂರ್ಣ ಮರೆಯಾಗಿವೆ. ಹಾಗಾಗಿ, ಪಕ್ಕದ ಅಳ್ನಾವರ ಕೂಡ ಈ ವಿಧಾನವನ್ನು ಮಾದರಿಯಾಗಿ ತೆಗೆದುಕೊಂಡು ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ಸರ್ಕಾರ ಕೂಡ ಈ ಪ್ರಯೋಗದ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ  ಸೂಚಿಸಿದೆ. ಬೆಂಗಳೂರು ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದು, ಯಾಕೆ ಈ ಮಾದರಿಯನ್ನು ಪ್ರಾಯೋಗಿಕವಾಗಿ ಅನುಸರಿಸಬಾರದು ಎಂಬ ಮಾತುಗಳು ನಗರಾಭಿವೃದ್ಧಿ ಇಲಾಖೆ ವಲಯದಲ್ಲಿ ಕೇಳಿಬರುತ್ತಿದೆ.  

ಹುಬ್ಬಳ್ಳಿಯಲ್ಲಿ ಅತಿ ಹೆಚ್ಚು ಕಸ ಉತ್ಪತ್ತಿಯಾಗುವ ಮತ್ತು ಬ್ಲ್ಯಾಕ್‌ಸ್ಪಾಟ್‌ಗಳು ಇರುವ ಆಯ್ದ ಎಂಟು ರಸ್ತೆಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಈ ವಿಧಾನ ಅನುಸರಿಸಿದೆ. ಇದಕ್ಕಾಗಿ ಸಿಸಿಟಿವಿ ಹಾಗೂ ಒಂದು ಧ್ವನಿವರ್ಧಕ ಅಳವಡಿಸಲಾಗಿದೆ. ಸಿಸಿ ಕ್ಯಾಮೆರಾದಲ್ಲಿನ ವೀಡಿಯೊ ತುಣುಕುಗಳು ನಿಯಂತ್ರಣಾ ಕೊಠಡಿಗೆ ಬರುತ್ತವೆ. ಇದರಿಂದ ಕುಳಿತಲ್ಲಿಂದಲೇ ಕಸ ಬಿಸಾಡುವುದನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದು. ಇದನ್ನು ಆಧರಿಸಿ ನಿಯಂತ್ರಣಾ ಕೊಠಡಿಯಲ್ಲಿ 24×7 ಕಾರ್ಯನಿರ್ವಹಿಸುವ ಸಿಬ್ಬಂದಿ ಸೂಚನೆ ನೀಡುತ್ತಾರೆ. 

ಎಲ್ಲೆಲ್ಲಿ ಪ್ರಯೋಗ?: ರಸ್ತೆಯುದ್ದಕ್ಕೂ ಸಿಸಿಟಿವಿಗಳನ್ನು ಅಳವಡಿಸಿಲ್ಲ. ಪ್ರಮುಖ ರಸ್ತೆಯಲ್ಲಿ ಬ್ಲ್ಯಾಕ್‌ ಸ್ಪಾಟ್‌ಗಳಿರುವ ಕಡೆಯಲ್ಲಿ ಮಾತ್ರ ಹಾಕಲಾಗಿರುತ್ತದೆ. ಕಸ ಬಿಸಾಕುವಾಗಿ ಹೀಗೆ ಧ್ವನಿವರ್ಧಕದಲ್ಲಿ ಸೂಚನೆಗಳು ಬಂದಾಗ, ಕಸ ಹಾಕುವ ವ್ಯಕ್ತಿಗೆ ಎಲ್ಲರ ಮುಂದೆ ಮುಜುಗರ ಉಂಟಾಗುತ್ತದೆ. ಆದ್ದರಿಂದ ಕಸದ ಬುಟ್ಟಿಯಲ್ಲೇ ಹಾಕುತ್ತಾನೆ. ಇದು ಪ್ರಯೋಗ ಮತ್ತು ಅದರ ಪರಿಣಾಮದಿಂದ ನಮಗೆ ತಿಳಿದುಬಂದಿದೆ.

Advertisement

ಸೂಪರ್‌ ಮಾರ್ಕೆಟ್‌, ಹಳೆಯ ಹುಬ್ಬಳ್ಳಿ, ನ್ಯೂ ಕೋರ್ಟ್‌ ರಸ್ತೆ, ಯು-ಮಾಲ್‌ ಬಳಿ ಸೇರಿದಂತೆ ಹಲವು ಕಡೆಗಳಲ್ಲಿ ಈ ಸಿಸಿಟಿವಿ ಮತ್ತು ಧ್ವನಿವರ್ಧಕ ಅಳವಡಿಸಲಾಗಿದೆ. ಉದ್ದೇಶಿತ ರಸ್ತೆಗಳ ತುಂಬಾ ಈ ಮೊದಲು ಕಸ ಹರಡಿರುತ್ತಿತ್ತು. ಅದರಲ್ಲಿ ಬಿಡಾಡಿ ದನಗಳು ಮತ್ತು ನಾಯಿಗಳು ಬಾಯಿ ಹಾಕಿ ರುವ ದೃಶ್ಯಗಳನ್ನು ಕಾಣುತ್ತಿದ್ದೆವು. ಇದರಿಂದ ರಸ್ತೆಗಳು ಅಂದಗೆಡುವುದರ ಜತೆಗೆ ವಾಹನ ಸಂಚಾರ ದುಸ್ತರವಾಗಿತ್ತು.

ಈಗ ಸಂಪೂರ್ಣ ಬ್ಲ್ಯಾಕ್‌ಸ್ಪಾಟ್‌ ಮುಕ್ತವಾಗಿವೆ. ಜನ ಕೂಡ ನಿರಮ್ಮಳವಾಗಿದ್ದಾರೆ ಎಂದು ಎಚ್‌ಡಿಎಂಸಿ ಪರಿಸರ ವಿಭಾಗದ ಎಂಜಿನಿಯರ್‌ ಗಿರೀಶ್‌ ಹೇಳುತ್ತಾರೆ. ಸಾಮಾನ್ಯವಾಗಿ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿರುವ ಕಸ ವಿಲೇವಾರಿಗೆ ನಾಲ್ಕು ಜನ ಪೌರಕಾರ್ಮಿಕರು ಹಾಗೂ ಒಂದು ಟ್ರ್ಯಾಕ್ಟರ್‌ ಬೇಕಾಗುತ್ತದೆ. ಇದು ಕನಿಷ್ಠ ಎರಡು ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಆದಾಗ್ಯೂ ನೂರಕ್ಕೆ ನೂರರಷ್ಟು ಸ್ವತ್ಛತೆ ಕಷ್ಟ. ನಾವು ಅನುಸರಿಸುತ್ತಿರುವ ವಿಧಾನದಲ್ಲಿ ಸಿಬ್ಬಂದಿ ಅವಶ್ಯಕತೆ ಇಲ್ಲ.

ಜನರಿಗೆ ಸುಲಭವಾಗಿ ಸಂದೇಶ ತಲುಪಿಸುವುದರ ಜತೆಗೆ ಪರಿಣಾಮಕಾರಿ ಕೂಡ ಆಗಿದೆ. ಇದು ಉತ್ತಮ ವಿಧಾನ ಎಂದು ಸರ್ಕಾರದ ಅಂಗಸಂಸ್ಥೆಯಾದ ಸಿಟಿ ಮ್ಯಾನೇಜರ್ ಅಸೋಸಿಯೇಷನ್‌ ಆಫ್ ಕರ್ನಾಟಕ ನಮ್ಮಿಂದ ಮಾಹಿತಿ ಕೇಳಿದೆ. ಈಗಾಗಲೇ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದರು. ಇದೊಂದು ಪರಿಣಾಮಕಾರಿ ವಿಧಾನವಾಗಿದ್ದು, ಬೆಂಗಳೂರಿನ ಯಾವುದಾದರೂ ವಾರ್ಡ್‌ನ ಒಂದು ಏರಿಯಾದಲ್ಲಿ ಈ ಪ್ರಯೋಗ ಮಾಡಬಹುದು ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ. 

ಫ‌ಲಕಾರಿ ಆಗೋದು ಅನುಮಾನ – ಬಿಬಿಎಂಪಿ: ಆದರೆ, ಇದು ಬೆಂಗಳೂರಿನಂತಹ ನಗರದಲ್ಲಿ ಅಳವಡಿಸುವುದು ಕಷ್ಟ. ಈ ಹಿಂದೆ ಸಿಸಿಟಿವಿಗಳನ್ನು ಕೆಲವೆಡೆ ಅಳವಡಿಸಲಾಗಿತ್ತು. ಜನ ಸಿಸಿಟಿವಿಗಳಿದ್ದಲ್ಲಿಂದ ಬಿಟ್ಟು ತುಸು ದೂರದಲ್ಲಿ ಕಸ ಸುರಿಯಲು ಶುರು ಮಾಡಿದರು. ಅಂದರೆ, ಬ್ಲ್ಯಾಕ್‌ಸ್ಪಾಟ್‌ ಮತ್ತೂಂದು ಕಡೆ ಕಾಣಿಸಿಕೊಂಡಿತು. ಹಾಗಾಗಿ ಈ ಪ್ರಯೋಗ ಫ‌ಲಕಾರಿ ಆಗುವುದು ಅನುಮಾನ. ಈಗ ಮಾರ್ಷಲ್‌ಗ‌ಳನ್ನು ನೇಮಿಸಲಾಗಿದ್ದು, ಇದರಿಂದ ಸಮಸ್ಯೆ ಸಂಪೂರ್ಣ ಪರಿಹಾರ ಆಗಲಿದೆ ಎಂದು ಬಿಬಿಎಂಪಿ ಆರೋಗ್ಯ ಮತ್ತು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸಫ‌ìರಾಜ್‌ ಖಾನ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಎಚ್ಚರಿಕೆ ಸಂದೇಶಗಳೇನು?
-ನೀವು ಹೀಗೆ ಕಸ ಚೆಲ್ಲುವುದು ಅಕ್ಷಮ್ಯ
-ನಿಮಗೆ ದಂಡ ಕೂಡ ವಿಧಿಸಬಹುದು
-ದಯವಿಟ್ಟು ಕಸದ ಬುಟ್ಟಿಯಲ್ಲೇ ಕಸ ಹಾಕಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next