Advertisement

ಹಿಂದೆ ಇಬ್ಬರೂ ತೆಲುಗರು ಈಗ ತಮಿಳು ಮೇಯರ್‌?

11:43 AM Sep 20, 2017 | |

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇತ್ತೀಚೆಗೆ ಕನ್ನಡ ಭಾಷೆ ಮತ್ತು ಕನ್ನಡ ಧ್ವಜದ ವಿಚಾರಗಳು ಭಾರಿ ಚರ್ಚೆಗೆ ಕಾರಣವಾಗಿದ್ದವು. ಮೆಟ್ರೋದಲ್ಲಿ ಕನ್ನಡದ ಜತೆಗೇ ಹಿಂದಿಯನ್ನು ಹೇರಿದ್ದರ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದು ರಾಷ್ಟ್ರವೇ ನೋಡುವಂತಾಗಿತ್ತು. ಕನ್ನಡ ಪರ ಹೋರಾಟಕ್ಕೆ ಆಡಳಿತಾರೂಢ ಕಾಂಗ್ರೆಸ್‌ ಕೂಡ ಒತ್ತಾಸೆಯಾಗಿ ನಿಂತಿತ್ತು.

Advertisement

ಹೀಗಿರುವಾಗಲೇ ಕಾಂಗ್ರೆಸ್‌ ನೇತೃತ್ವದ ಬಿಬಿಎಂಪಿಯಲ್ಲಿ ವಿಚಿತ್ರ ಸನ್ನಿವೇಶವೊಂದು ಸೃಷ್ಟಿಯಾಗಿದೆ.  ಅದೇನೆಂದರೆ ರಾಜಧಾನಿಯ ಪ್ರಥಮ ಪ್ರಜೆ ಅಂದರೆ ಮೇಯರ್‌ ಕನ್ನಡಿಗರಲ್ಲದೇ ಬೇರೆ ಭಾಷಿಕರಾಗಿರುವುದು. ಈ ಎರಡು ಅವಧಿಯಲ್ಲಿ ತೆಲುಗರ ಕೈಲಿದ್ದ ಪಾಲಿಕೆ ಚುಕ್ಕಾಣಿ ಈ ಬಾರಿ ತಮಿಳು ಅಭ್ಯರ್ಥಿಯ ಕೈಗೆ ಹೋಗುತ್ತಿರುವುದು ಸದ್ಯ ಚರ್ಚಿತ ಸಂಗತಿಯಾಗಿದೆ. 

ನಗರದ ಆಡಳಿತ ಶಕ್ತಿ ಕೇಂದ್ರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಯಾರಾಗುತ್ತಾರೆ ಎಂಬ ಚರ್ಚೆ ಈಗ ಜೋರಾಗಿದೆ. ರಾಜಧಾನಿಯ ಪ್ರಥಮ ಪ್ರಜೆ ಆಯ್ಕೆ ಆಡಳಿತ ಪಕ್ಷ ಕಾಂಗ್ರೆಸ್‌ ಕೈಯಲ್ಲಿದ್ದು ಮೀಸಲಾತಿ ನಿಯಮಗಳ ಪ್ರಕಾರ ಮೇಯರ್‌ ಹುದ್ದೆ ಎಸ್ಸಿ ಸಮುದಾಯಕ್ಕೆ ಮೀಸಲಾಗಿದೆ. 

ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ತಮಿಳು ಭಾಷಿಕರನ್ನು ಸೆಳೆಯಲು ರಾಜ್ಯ ಕಾಂಗ್ರೆಸ್‌ ತಮಿಳು ಭಾಷೆಯಲ್ಲಿಯೇ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಈಗ ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಹಲವಾರು ತಂತ್ರಗಳನ್ನು ಹೆಣೆಯುತ್ತಿದ್ದು, ಈಗ ತಮಿಳು ಭಾಷಿಕರಿಗೆ ಮೇಯರ್‌ ಸ್ಥಾನ ನೀಡುವುದು ಕೂಡ ಅದರ ಒಂದು ಭಾಗವಾಗುವ ಸಾಧ್ಯತೆ ಇದೆ. 

ಕಾಂಗ್ರೆಸ್‌ನಲ್ಲಿ ಈಗಿರುವ ಕಾರ್ಪೊರೇಟರ್‌ಗಳ ಪೈಕಿ ದೇವರ ಜೀವನಹಳ್ಳಿ ವಾರ್ಡ್‌ ಸಂಪತ್‌ ರಾಜ್‌ ಹಾಗೂ ಸುಭಾಶ್‌ನಗರ ವಾರ್ಡ್‌ನ ಗೋವಿಂದ ರಾಜ್‌ ನಡುವೆ ಪೈಪೋಟಿ ನಡೆದಿದೆ. ಬಿಬಿಎಂಪಿಯಲ್ಲಿ 2015 ರಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಆಡಳಿತ ನಡೆಯುತ್ತಿದ್ದು, ಈಗಾಗಲೇ ಇಬ್ಬರು ಮೇಯರ್‌ ಆಗಿ ಅಧಿಕಾರ ಅನುಭವಿಸಿದ್ದು, ಮೊದಲ ಅವಧಿಯಲ್ಲಿ ಮೇಯರ್‌ ಆಗಿದ್ದ ಮಂಜುನಾಥ ರೆಡ್ಡಿ, ಹಾಲಿ ಮೇಯರ್‌ ಪದ್ಮಾವತಿ ಇಬ್ಬರೂ ತೆಲಗು ಭಾಷಿಕರಾಗಿದ್ದಾರೆ. 

Advertisement

ಈಗ ಪೈಪೋಟಿಯಲ್ಲಿರುವ ದೇವರ ಜೀವನ್‌ ಹಳ್ಳಿ ವಾರ್ಡ್‌ ಕಾರ್ಪೊರೇಟರ್‌ ಸಂಪತ್‌ ರಾಜ್‌ ತಮಿಳು ಭಾಷಿಕರಾಗಿದ್ದು, ಮೂಲ ತಮಿಳುನಾಡಿನ ತಿರುನಾಲ್ವೆಲಿಯಿಂದ ಬೆಂಗಳೂರಿಗೆ ವಲಸೆ ಬಂದವರಾಗಿದ್ದಾರೆ. ಮೇಯರ್‌ ಗಾದಿಗಾಗಿ ಅವರೂ ಸಾಕಷ್ಟು ಪೈಪೋಟಿ ನಡೆಸುತ್ತಿದ್ದು, ವಿಶೇಷವಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸಂಪತ್‌ ರಾಜ್‌ ಬೆನ್ನಿಗೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಪತ್‌ ರಾಜ್‌ ಎಂಜನೀಯರ ಪದವೀಧರರಾಗಿದ್ದು ಗೋವಿಂದ್‌ ರಾಜ್‌ ಅವರಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ, ಈಗಾಗಲೇ ಇಬ್ಬರೂ ತೆಲಗು ಭಾಷಿಕರು ಮಂಜುನಾಥ ರೆಡ್ಡಿ ಹಾಗೂ ಬಲಿಜ ಸಮಾಜದ ಪದ್ಮಾವತಿ ಅಧಿಕಾರ ನಡೆಸಿದ್ದಾರೆ. ಸಂಪತ್‌ ರಾಜ್‌ ಮೇಯರ್‌ ಆಗಿ ಆಯ್ಕೆಯಾದರೆ ತೆಲುಗರಿಂದ ತಮಿಳರ ಕೈಗೆ ಅಧಿಕಾರ ಕೊಟ್ಟಂತಾಗುತ್ತದೆ ಎಂಬ ಮಾತುಗಳು ಕೆಪಿಸಿಸಿ ಪಡಸಾಲೆಯಲ್ಲಿ ಚರ್ಚಿತವಾಗುತ್ತಿವೆ. 

ಕಾಂಗ್ರೆಸ್‌ ಮೂಲಗಳ ಪ್ರಕಾರ  ಕಳೆದ ಹತ್ತು ಹದಿನೈದು ವರ್ಷಗಳ ಬಿಬಿಎಂಪಿ ಇತಿಹಾಸವನ್ನು ಗಮನಿಸಿದರೆ, ತೆಲಗು, ತಮಿಳು ಭಾಷಿಕರೇ ಹೆಚ್ಚಿನ ಅವಧಿಗೆ ಬಿಬಿಎಂಪಿಯಲ್ಲಿ ಮೇಯರ್‌ ಹುದ್ದೆ ಅಲಂಕರಿಸಿದ್ದು, ಕನ್ನಡ ಮಾತೃಭಾಷೆಯವರು ಮೇಯರ್‌ಗಳಾಗಿದ್ದು ತೀರಾ ಕಡಿಮೆ. ಈಗಾಗಲೇ ರಾಜಧಾನಿಯಲ್ಲಿ ಕನ್ನಡಕ್ಕೆ  ಪ್ರಾಧಾನ್ಯತೆ ಸಿಗುತ್ತಿಲ್ಲ ಎಂಬ ಕೂಗು ಜೋರಾಗಿದ್ದು, ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಸ್ವತ ರಾಜ್ಯ ಸರ್ಕಾರವೇ ಪ್ರತಿರೋಧ ಒಡ್ಡಿತ್ತು.

ಅಲ್ಲದೇ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎನ್ನುವ ಕುರಿತಂತೆಯೂ ರಾಜ್ಯ ಸರ್ಕಾರ ಪ್ರಯತ್ನ ನಡೆಸಿತ್ತು. ಆದರೆ, ರಾಜಧಾನಿ ಪ್ರಥಮ ಪ್ರಜೆಯ ಸ್ಥಾನವನ್ನು ಮಾತ್ರ ಅನ್ಯಭಾಷಿಕರ ಕೈಗೆ ಕೊಟ್ಟು ಕೈ ಕಟ್ಟಿ ಕುಳಿತುಕೊಳ್ಳುತ್ತಿದೆ ಎಂಬ ಆರೋಪದ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ರಾಜಧಾನಿಯಲ್ಲಿ ಕನ್ನಡ ಭಾಷಿಕರ ಸಂಖ್ಯೆ ಕುಸಿಯುತ್ತಿದೆ ಎಂಬ ಮಾತು ಕೇಳಿ ಬರುತ್ತಿವೆ.

ಆದರೆ, ರಾಜಧಾನಿ ಪ್ರಥಮ ಪ್ರಜೆಗಳು ಮಾತ್ರ ಅನ್ಯ ಭಾಷಿಕರೇ ಆಗುತ್ತಿರುವುದು ಮುಂದುವರೆದಿದೆ. ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಅನ್ಯ ಭಾಷಿಕರನ್ನು ಸೆಳೆಯಲು ತಮಿಳು ಮತ್ತು ಹಿಂದಿ ಭಾಷಿಕರಿಗಾಗಿ ಅವರ ಭಾಷೆಯಲ್ಲಿಯೇ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿತ್ತು. ಅನ್ಯ ಭಾಷಿಕರನ್ನು ಸೆಳೆಯಲು ತಮ್ಮ ಪಕ್ಷಗಳಲ್ಲಿ ಪ್ರತ್ಯೇಕ ಭಾಷಾವಾರು ಘಟಕಗಳನ್ನು ಮಾಡಿಕೊಳ್ಳುತ್ತಿರುವುದು ಮತ ರಾಜಕಾರಣದ ಒಂದು ಭಾಗವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 

Advertisement

Udayavani is now on Telegram. Click here to join our channel and stay updated with the latest news.

Next