Advertisement

ಸ್ಮಾರಕಗಳಾಗದ ಹುತಾತ್ಮ ಯೋಧರ ಸಮಾಧಿ 

07:40 AM Feb 19, 2019 | |

ಮಂಡ್ಯ: ದೇಶಕ್ಕಾಗಿ ಹೋರಾಟ ನಡೆಸಿ ವೀರ ಮರಣವನ್ನಪ್ಪಿದ ವೀರಯೋಧರಿಗೆ ನಾವು ಯಾವ ರೀತಿ ಗೌರವ ಸಲ್ಲಿಸುತ್ತಿದ್ದೇವೆ, ಅವರ ಬಲಿದಾನವನ್ನು ಹೇಗೆಲ್ಲಾ ಸ್ಮರಿಸುತ್ತಿದ್ದೇವೆ ಎನ್ನುವುದಕ್ಕೆ ವೀರಯೋಧ ಬಿ.ಕೆ.ಸುಧೀರ್‌ ಉದ್ಯಾನವನವೇ ಪ್ರತ್ಯಕ್ಷ ಸಾಕ್ಷಿ.

Advertisement

ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ನಗರದ ಸ್ವರ್ಣಸಂದ್ರ ಬಡಾವಣೆಗೆ ಹೊಂದಿಕೊಂಡಿರುವ ವೀರಯೋಧನ ಉದ್ಯಾನವನ ಕಳೆದ ಇಪ್ಪತ್ತು ವರ್ಷಗಳಿಂದ ಅಭಿವೃದ್ಧಿ ಭಾಗ್ಯ ಕಂಡಿಲ್ಲ. ಯೋಧರಿಗಾಗಿ ಯಾವುದೇ ಸ್ಮಾರಕವೂ ನಿರ್ಮಾಣವಾಗಿಲ್ಲ. ಯೋಧರ ಸಮಾಧಿಯನ್ನು ಗ್ರಾನೈಟ್‌ ಶಿಲೆಗಳಿಂದ ಅಲಂಕರಿಸಿರುವುದನ್ನು ಬಿಟ್ಟರೆ ಉಳಿದಿದ್ದೆಲ್ಲವೂ ಗೌಣವಾಗಿದೆ.

ಯೋಧರ ಸ್ಮರಿಸದ ಜಿಲ್ಲಾಡಳಿತ: ಇಲ್ಲಿ ಇಬ್ಬರು ಹುತಾತ್ಮ ಯೋಧರ ಸಮಾಧಿ ಇವೆ. ಸಿಯಾಚಿನ್‌ ಗಡಿಯಲ್ಲಿ ವೀರ ಮರಣಹೊಂದಿದ ಬಿ.ಕೆ.ಸುಧೀರ್‌ ಹಾಗೂ ಬಾರಮುಲ್ಲಾದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಜಿ.ಶರತ್‌ ಸಮಾಧಿಗಳು ಅಕ್ಕ-ಪಕ್ಕದಲ್ಲಿಯೇ ಇವೆ. ಬಿ.ಕೆ.ಸುಧೀರ್‌ 17 ಸೆಪ್ಟೆಂಬರ್‌ 1999ರಂದು ಹಾಗೂ ಜಿ.ಶರತ್‌ 6 ಸೆಪ್ಟೆಂಬರ್‌ 2004ರಂದು ಹುತಾತ್ಮರಾಗಿದ್ದರು.

1999ರಲ್ಲಿ ಬಿ.ಕೆ.ಸುಧೀರ್‌ ಹುತಾತ್ಮರಾದ ಹಿನ್ನೆಲೆಯಲ್ಲಿ ಅವರ ಪಾರ್ಥೀವ ಶರೀರವನ್ನು ಸ್ವರ್ಣಸಂದ್ರ ಬಡಾವಣೆಯ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಸಮಾಧಿ ಮಾಡಿ ಆ ಉದ್ಯಾನಕ್ಕೆ ವೀರಯೋಧ ಬಿ.ಕೆ.ಸುಧೀರ್‌ ಉದ್ಯಾನವೆಂದು ನಾಮಕರಣ ಮಾಡಲಾಯಿತು. 2004ರಲ್ಲಿ ಜಿ.ಶರತ್‌ ದೇಶರಕ್ಷಣೆಯಲ್ಲಿದ್ದಾಗ ಪ್ರಾಣತ್ಯಾಗ ಮಾಡಿದ್ದರಿಂದ ಅವರ ಅಂತ್ಯಕ್ರಿಯೆಯನ್ನು ಪಕ್ಕದಲ್ಲೇ ಮಾಡಿ ಸಮಾಧಿ ಕಟ್ಟಲಾಯಿತು.

ದೇಶ ರಕ್ಷಣೆಗಾಗಿ ಯೋಧರು ಮಾಡಿದ ತ್ಯಾಗ, ಬಲಿದಾನ ಯುವಕರಿಗೆ ಪ್ರೇರಣೆಯಾಗುವಂತೆ ಸಮಾಧಿ ಸ್ಥಳವನ್ನು ಸ್ಮಾರಕವಾಗಿ ಪರಿವರ್ತಿಸುವ ಆಲೋಚನೆ ಸ್ಥಳೀಯ ಜನಪ್ರತಿನಿಧಿಗಳಿಂದ ಆರಂಭವಾಗಿ ಯಾವೊಬ್ಬ ಅಧಿಕಾರಿಗೂ ಇಲ್ಲ. ಹುತಾತ್ಮರ ದಿನದಂದೂ ಹುತಾತ್ಮ ಯೋಧರನ್ನು ಸ್ಮರಿಸುವ ಸಂಪ್ರದಾಯವನ್ನೂ ಯಾರೊಬ್ಬರೂ ರೂಢಿಸಿಕೊಂಡು ಬಾರದಿರುವುದು ವಿಪರ್ಯಾಸದ ಸಂಗತಿ.

Advertisement

ನಾಮಫ‌ಲಕವೂ ಅಳವಡಿಸಿಲ್ಲ: ಈ ಉದ್ಯಾನವನಕ್ಕೆ ಬಿ.ಕೆ.ಸುಧೀರ್‌ ಉದ್ಯಾನವೆಂದು ಹೆಸರಿಡಲಾಗಿದ್ದರೂ ಅದನ್ನು ಗುರುತಿಸುವುದಕ್ಕೆ ಉದ್ಯಾನದ ಯಾವುದೇ ಭಾಗದಲ್ಲೂ ಒಂದೇ ಒಂದು ನಾಮಫ‌ಲಕವನ್ನೂ ಅಳವಡಿಸಿಲ್ಲ. ಸಮಾಧಿ ಸ್ಥಳಕ್ಕೆ ನೆರಳಿನ ವ್ಯವಸ್ಥೆಯನ್ನು ಮಾಡುವ ಆಸಕ್ತಿಯೂ ಅಧಿಕಾರಿ ವರ್ಗಕ್ಕಿಲ್ಲ. ಬಿಸಿಲು-ಮಳೆ-ಗಾಳಿಗೆ ಎನ್ನದೆ ವೀರಯೋಧರ ಸಮಾಧಿಗಳು ಮೈಯೊಡ್ಡಿ ನಿಂತಿವೆ. ಸಮಾಧಿಗಳ ಮೇಲೆ ಕಸ-ಕಡ್ಡಿ ಬಿದ್ದು ಧೂಳು ಮೆತ್ತಿಕೊಂಡು ಕಳಾಹೀನವಾಗಿ ನಾಮಕಾವಸ್ಥೆಯಾಗಷ್ಟೇ ಉಳಿದುಕೊಂಡಿವೆ.

ಅಭಿವೃದ್ಧಿ ನಿರ್ಲಕ್ಷ್ಯ: ಉದ್ಯಾನವನದಲ್ಲಿ ಸಮೃದ್ಧವಾಗಿ ಹಸಿರು ಗಿಡಗಳನ್ನು ಬೆಳೆಸುವುದಕ್ಕೆ ಅವಕಾಶಗಳಿವೆ. ಹುತಾತ್ಮ ಸ್ಮಾರಕದ ಮಾದರಿಯಲ್ಲೇ ಇಲ್ಲಿಯೂ ಸ್ಮಾರಕ ನಿರ್ಮಾಣ ಮಾಡಿ ಅವರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಯಾರಿಂದಲೂ ನಡೆಯುತ್ತಿಲ್ಲ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೇ ಉದ್ಯಾನವನವಿದ್ದು ಈ ಮಾರ್ಗವಾಗಿ ಹಾದು ಹೋಗುವಾಗ ಹೊರ ಜಿಲ್ಲೆಯವರಿಗೆ ಜಿಲ್ಲೆಯ ವೀರಯೋಧರನ್ನು ನೆನಪಿಸುವ, ಸ್ಮರಿಸುವಂತೆ ಮಾಡುವ ಅವಕಾಶವಿದ್ದರೂ ಯಾರಿಗೂ ಆ ಬಗ್ಗೆ ಆಸಕ್ತಿಯೇ ಇಲ್ಲ.

ಉದ್ಯಾನವನದಲ್ಲಿ ನೆಟ್ಟಿದ್ದ ಗಿಡಗಳು ನೀರಿಲ್ಲದೆ ನಿಧಾನವಾಗಿ ಮೇಲೇಳುತ್ತಿವೆ. ನೆಲಕ್ಕೆ ಹಸಿರು ಹುಲ್ಲಿನ ಹೊದಿಕೆ ಇಲ್ಲ. ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸಿ ಉದ್ಯಾನವನ್ನು ಸುಂದರಗೊಳಿಸಿಲ್ಲ. ರಾತ್ರಿ ವೇಳೆ ವಿದ್ಯುತ್‌ ದೀಪಗಳಿಲ್ಲದೆ ಕಾರ್ಗತ್ತಲು ಆವರಿಸಿರುತ್ತದೆ. ಅನೈತಿಕ ಚಟುವಟಿಕೆಯ ತಾಣವಾಗಿ ಪರಿವರ್ತನೆಯಾಗಿದೆ.

ಕಾಂಪೌಂಡ್‌ ನಿರ್ಮಿಸಿಲ್ಲ: ಈ ಉದ್ಯಾನದ ಸುತ್ತ ಕಾಂಪೌಂಡ್‌ ಹಾಗೂ ಗೇಟ್‌ ಅಳವಡಿಸಿ ಒಳಗೆ ಕೂರುವುದಕ್ಕೆ ಕಲ್ಲಿನ ಬೆಂಚುಗಳನ್ನು ಹಾಕಲಾಗಿದೆ. ಮಕ್ಕಳ ಆಟಿಕೆ ಸಾಮಾನುಗಳನ್ನು ಅಲ್ಲಿ ಜೋಡಿಸಲಾಗಿದೆ. ಆದರೆ, ವೀರಯೋಧರ ಸಮಾಧಿಗಳನ್ನು ಆಕರ್ಷಣೀಯಗೊಳಿಸುವ ಅವುಗಳನ್ನು ಹುತಾತ್ಮ ಸ್ಮಾರಕವಾಗಿಸುವ ಬಗ್ಗೆ ಯಾರಿಗೂ ಚಿಂತೆಯೇ ಇಲ್ಲ. 

ಈಗ ಹುತಾತ್ಮ ಗುಡಿಗೆರೆ ಕಾಲೋನಿಯ ಹೆಚ್‌.ಗುರು ಸರದಿ. ಮದ್ದೂರು-ಮಳವಳ್ಳಿ ರಸ್ತೆಯ ಮೆಳ್ಳಹಳ್ಳಿ ಪಕ್ಕದ ಸರ್ಕಾರಿ ಜಾಗದಲ್ಲಿ ಹೆಚ್‌.ಗುರು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಸಮಾಧಿ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲು ಉದ್ದೇಶಿಸಲಾಗಿದೆ. ಸ್ಮಾರಕದ ರೂಪು-ರೇಷೆ ಯಾವ ರೀತಿ ಇರಲಿದೆ, ಯಾವ ರೀತಿ ನಿರ್ಮಾಣವಾಗಲಿದೆ ಎಂಬುದರ ಚಿತ್ರಣವಂತೂ ಇಲ್ಲ. ಆದರೆ, ವೀರಯೋಧ ಬಿ.ಕೆ.ಸುಧೀರ್‌ ಉದ್ಯಾನದ ಮಾದರಿಯಲ್ಲಿ ನೆಪಮಾತ್ರಕ್ಕೆ ಸಮಾಧಿ ಸ್ಥಳ ಉಳಿಯುವಂತಾಗದಿರಲಿ ಎನ್ನುವುದು ಎಲ್ಲರ ಆಶಯವಾಗಿದೆ.

* ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next