Advertisement

ಆಲಮಟ್ಟಿಗೆ ಹರಿದು ಬಂತು ಪ್ರವಾಸಿಗರ ದಂಡು

01:30 PM Jan 16, 2018 | |

ಆಲಮಟ್ಟಿ: ವಿಜಯಪುರದ ಸಿದ್ದೇಶ್ವರ ಜಾತ್ರೆ ಹಾಗೂ ಕೂಡಲಸಂಗಮದಲ್ಲಿ ನಡೆದ ಶರಣ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಕಿ.ಮೀ.ಗಳ ದೂರದಿಂದ ಆಗಮಿಸಿದ್ದ ಭಕ್ತರು ಸೋಮವಾರ ತಂಡೋಪತಂಡವಾಗಿ
ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ವಿವಿಧ ಉದ್ಯಾನಗಳಿಗೆ ಭೇಟಿ ಸಂಭ್ರಮಿಸಿದರು.

Advertisement

ದಕ್ಷಿಣಾಯನ ಮುಗಿದು ಉತ್ತರಾಯಣ ಪ್ರಾರಂಭದ ಸೂಚಿಯಾದ ಮಕರ ಸಂಕ್ರಮಣದಂದು ವಿಜಯಪುರದ
ಸಿದ್ದೇಶ್ವರಜಾತ್ರೆ, ಕೂಡಲಸಂಗಮದ ಶರಣಮೇಳ, ಬನಶಂಕರಿದೇವಿ ಜಾತ್ರೆ ಹಾಗೂ ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ತೆರಳಿದ್ದ ಸಾವಿರಾರು ಭಕ್ತರು ಆಲಮಟ್ಟಿಗೆ ಆಗಮಿಸಿದ್ದರು. ಮೊಘಲ್‌ ಉದ್ಯಾನದಲ್ಲಿ ಸಾಯಂಕಾಲ ಪ್ರಾರಂಭವಾಗುವ ವಿವಿಧ ಬಗೆ ಕಾರಂಜಿಗಳು ಮತ್ತು ಸಂಜೆ ನಡೆಯುವ ಸಂಗೀತ ನೃತ್ಯ ಕಾರಂಜಿಯನ್ನು ವೀಕ್ಷಿಸಿ ಆನಂದಪರವಶರಾಗಿ ಅವುಗಳ ಬಗ್ಗೆಯೇ ಚರ್ಚೆ ಮಾಡುತ್ತಾ ಸಾಗಿದರು. 

ರವಿವಾರ ಹಾಗೂ ಸೋಮವಾರ ಮಕರ ಸಂಕ್ರಮಣದ ಪುಣ್ಯಸ್ನಾನಕ್ಕಾಗಿ ಆಲಮಟ್ಟಿಗೆ ಆಗಮಿಸಿದ್ದ ಭಕ್ತರ ದಂಡು ಇಲ್ಲಿರುವ ಎಲ್ಲ ಉದ್ಯಾನಗಳಿಗೆ ಭೇಟಿ ನೀಡಿದರು. ಉದ್ಯಾನಗಳಲ್ಲಿ ಕರಕುಶಲ ಕಲಾವಿದರಿಂದ ನಿರ್ಮಾಣಗೊಂಡಿರುವ ವಾಸ್ತವ ಎನ್ನುವಷ್ಟರ ಮಟ್ಟಿಗೆ ಪಿಒಪಿಯಿಂದ ನಿರ್ಮಾಣವಾದ ಶಿಲಾಕೃತಿ ವೀಕ್ಷಿಸಿದರು.

ವಿಶೇಷವಾಗಿ ತಯಾರಿಸಲಾಗಿರುವ ಸಾಕುಪ್ರಾಣಿ, ಪಕ್ಷಿ, ಗ್ರಾಮೀಣ ಜಾತ್ರೆಗಳ ಸೊಗಡು, ಕಾಡು ಪ್ರಾಣಿಗಳು, ಜಲಚರಗಳು, ಸರಿಸೃಪಗಳು, ಗೋಪಾಲಕೃಷ್ಣನ ಜೀವನಚರಿತ್ರೆ ಸಾರುವ ವಿವಿಧ ದೃಶ್ಯಗಳು, ಅಶ್ವಮೇಧಯಾಗದ ಕುದುರೆ ಕಟ್ಟಿದ ಲವ-ಕುಶರು ನಂತರ ಹನುಮಂತ ಹಾಗೂ ಲವಕುಶರ ನಡುವೆ ನಡೆಯುವ ಯುದ್ಧದ ಸನ್ನಿವೇಶ, ಶತೃಘ್ನ ಹಾಗೂ ಲವ-ಕುಶರ ನಡುವೆ ನಡೆದ ಯುದ್ಧ ಸನ್ನಿವೇಶ, ಅಲುಗಾಡುವ ಹಸಿರುಗೋಡೆ ಹೀಗೆ ಹಲವಾರು ಸನ್ನಿವೇಶಗಳನ್ನು ಕಣ್ತುಂಬಿಕೊಂಡರು.
 
ಮಕರ ಸಂಕ್ರಮಣದ ದಿನವಾದ ಜ. 14ರಂದು ರಾಕ್‌ ಉದ್ಯಾನಕ್ಕೆ ಭೇಟಿ ನೀಡಿದ್ದ ಪ್ರವಾಸಿಗರಿಂದ 1,05,750ರೂ., ಗೋಪಾಲಕೃಷ್ಣ ಉದ್ಯಾನದಿಂದ 21,025 ರೂ., ಲವಕುಶ ಉದ್ಯಾನಗಳಿಗೆ 13,600 ರೂ. ಸೇರಿ 1,40,375 ರೂ. ಪ್ರವೇಶ ಶುಲ್ಕ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಜಮಾ ಆಗಿದೆ. ಒಟ್ಟಾರೆ  ಎಲ್ಲ ಉದ್ಯಾನಗಳಿಗೆ 13,471 ದೊಡ್ಡವರು
ಹಾಗೂ 944 ಮಕ್ಕಳು ಭೇಟಿ ನೀಡಿದ್ದಾರೆ. ಸಂಜೆ ನಡೆದ ಸಂಗೀತ ನೃತ್ಯ ಕಾರಂಜಿಗೆ ಭೇಟಿ ನೀಡಿದ ಪ್ರವಾಸಿಗರಿಂದ 87 ಸಾವಿರ ರೂ. ಕೆಬಿಜೆಎನ್‌ ಎಲ್‌ಗೆ ಜಮಾ ಆಗಿದೆ.
 
ಕಳೆದ ವರ್ಷ ಜ. 14ರಂದು ವಿವಿಧ ಉದ್ಯಾನಗಳಿಗೆ ಸುಮಾರು 17,781 ಜನ ಭೇಟಿ ನೀಡಿದ್ದು 1,78,565 ರೂ. ಹಾಗೂ ಸಂಜೆ ನಡೆದ ಸಂಗೀತ ನೃತ್ಯ ಕಾರಂಜಿಯಿಂದ 45 ಸಾರ ಒಂದೇ ಪ್ರದರ್ಶನದಿಂದ ಜಮಾ ಆಗಿತ್ತು. ಎರಡನೇ ಪ್ರದರ್ಶನ ಆರಂಭದಲ್ಲಿ ಜನಸಾಗರವೇ ಹರಿದು ಬಂದಿದ್ದರಿಂದ ಪೊಲೀಸರ ನಿಯಂತ್ರಣ ತಪ್ಪಿದ್ದರಿಂದ ಎರಡನೇ ಪ್ರದರ್ಶನವು ಪ್ರವೇಶ ಮುಕ್ತವಾಗಿ ಪ್ರದರ್ಶನ ನಡೆದಿತ್ತು. ಆದರೆ ಈ ಬಾರಿ ಟಿಕೆಟ್‌ ನೀಡುವ ಸ್ಥಳ ಬದಲಾವಣೆ ಮಾಡಿದ್ದರಿಂದ ಯಾವುದೇ ಗೊಂದಲವಾಗಲಿಲ್ಲ.

ರವಿವಾರವೂ ಜನದಟ್ಟಣೆ ಹೆಚ್ಚಾಗಿದ್ದು ರಾಕ್‌ ಉದ್ಯಾನ, ಗೋಪಾಲಕೃಷ್ಣ ಹಾಗೂ ಲವಕುಶ ಉದ್ಯಾನಗಳಿಂದ 54,610 ರೂ. ಜಮಾ ಆಗಿದ್ದು ಇನ್ನುಳಿದಂತೆ ವಾಹನ ನಿಲುಗಡೆಯನ್ನು ಗುತ್ತಿಗೆ ನೀಡಲಾಗಿರುವುದರಿಂದ ಇದರಿಂದಲೂ ಲಕ್ಷಾಂತರ ರೂ. ಜಮಾ ಆಗಿದೆ. 

Advertisement

ಮೊಘಲ್‌, ಇಟಾಲಿಯನ್‌, ಫ್ರೆಂಚ್‌ ಸೇರಿದಂತೆ ಕೆಲ ಉದ್ಯಾನಗಳಿಗೆ ಪ್ರವೇಶ ದರ ನಿಗದಿಪಡಿಸಿಲ್ಲ. ಅವುಗಳಿಗೆ ರವಿವಾರ ಹಾಗೂ ಸೋಮವಾರ ಭದ್ರತೆ ಹಿನ್ನೆಲೆಯಲ್ಲಿ ಸಾಯಂಕಾಲದವರೆಗೆ ಸಾರ್ವಜನಿಕ ಪ್ರವೇಶ ನಿರಾಕರಿಸಲಾಗಿತ್ತು. ಸಂಜೆಯಾಗುತ್ತಲೇ ಪ್ರವೇಶಕ್ಕೆ ಅನುಮತಿ ನೀಡಲಾಯಿತು. ಇದರಿಂದ ಸಂಗೀತ ನೃತ್ಯ
ಕಾರಂಜಿಗೆ ತೆರಳಲು ಅನುಕೂಲ ಕಲ್ಪಿಸಲಾಗಿತ್ತು. ಒಟ್ಟಾರೆ ಕಳೆದ ವರ್ಷಕ್ಕಿಂತ ಆಲಮಟ್ಟಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಕೈಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next