Advertisement

ರಾಜ್ಯಕ್ಕೆ ಎನ್‌ಜಿಟಿ ಆದೇಶದ ಆತಂಕ

06:00 AM Sep 02, 2018 | |

ಬೆಂಗಳೂರು: ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿರುವ ಆದೇಶ ಕರ್ನಾಟಕಕ್ಕೆ ತೀವ್ರ ಆತಂಕ ತಂದೊಡ್ಡಿದ್ದು, ನ್ಯಾಯಾಧಿಕರಣದ ಆದೇಶ ಜಾರಿಗೆ ಬಂದರೆ 1573 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಬಂದು ಶಾಶ್ವತವಾಗಿ ಅಭಿವೃದ್ಧಿಯಿಂದ ದೂರವಾಗಲಿದೆ.

Advertisement

ಇದಲ್ಲದೆ, ಭಾರೀ ಮಳೆ ಮತ್ತು ಪ್ರವಾಹದಿಂದ ಕೊಚ್ಚಿಹೋಗಿರುವ ಕೊಡಗಿನ ಪುನರ್‌ನಿರ್ಮಾಣವೂ ಕಷ್ಟಸಾಧ್ಯ ಎನ್ನುವಂತಾಗಿದೆ. ಜತೆಗೆ ಮಳೆಯಿಂದ ಹಾನಿಯಾಗಿರುವ ಕರಾವಳಿ ಮತ್ತು ಮಲೆನಾಡಿನ ಬೆಟ್ಟ ಪ್ರದೇಶಗಳಲ್ಲಿಯೂ ಪುನರ್ವಸತಿ ಸೌಲಭ್ಯ ಕಲ್ಪಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಿರುವ ಕಸ್ತೂರಿರಂಗನ್‌ ವರದಿ ಜಾರಿ ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಕರಡು ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಹಸಿರು ನ್ಯಾಯಾಧಿಕರಣ ಆದೇಶಿಸಿದ್ದು, ಇದರಿಂದಾಗಿ ಕಸ್ತೂರಿರಂಗನ್‌ ವರದಿ ಜಾರಿ ಬೇಡ ಎಂಬ ಕರ್ನಾಟಕದ ನಿಲುವಿಗೆ ಹಿನ್ನಡೆಯಾಗಿದೆ. ಮಾತ್ರವಲ್ಲ, ಪಶ್ಚಿಮ ಘಟ್ಟ ವ್ಯಾಪ್ತಿಗೆ ಬರುವ 1573 ಗ್ರಾಮಗಳ ಭವಿಷ್ಯ ತೂಗುಯ್ನಾಲೆಯಾಗಿದೆ.

ಪಶ್ಚಿಮ ಘಟ್ಟಗಳ ಒಟ್ಟು ವ್ಯಾಪ್ತಿ 164280 ಚದರ ಕಿ.ಮೀ. ಇದ್ದು, ಈ ಪೈಕಿ 56825 ಚದರ ಕಿ.ಮೀ. ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರುತ್ತದೆ ಎಂದು ಕಸ್ತೂರಿರಂಗನ್‌ ವರದಿ ಹೇಳಿದೆ. ಈ ಪ್ರದೇಶದಲ್ಲಿ  ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆಗಳಿಗೆ ಪೂರ್ಣ ನಿಷೇಧ ಹೇರಲಾಗುತ್ತದೆ. 20 ಸಾವಿರ ಚದರ ಮೀಟರ್‌ಗಿಂತ ಅಧಿಕ ವಿಸ್ತಾರದ ಬಡಾವಣೆ, ಟೌನ್‌ಶಿಪ್‌ ಮತ್ತು ಕಟ್ಟಡಗಳಿಗೆ ನಿಷೇಧವಿರುತ್ತದೆ. ಜತೆಗೆ ಪರಿಸರಕ್ಕೆ ಹಾನಿಯಾಗುವ ಯಾವುದೇ ಯೋಜನೆ, ನಿರ್ಮಾಣಗಳನ್ನು ಕೈಗೊಳ್ಳುವಂತಿಲ್ಲ.

56825 ಚದರ ಕಿ.ಮೀ. ಪರಿಸರ ಸೂಕ್ಷ್ಮ ವಲಯ ಪೈಕಿ  20668 ಚದರ ಕಿ.ಮೀ. ಕರ್ನಾಟಕದ 10 ಜಿಲ್ಲೆಗಳಲ್ಲೇ ಬರುತ್ತದೆ. ಇಲ್ಲಿ 1573 ಗ್ರಾಮಗಳಿವೆ. ಅಲ್ಲದೆ, ಪರಿಸರ ಸೂಕ್ಷ್ಮ ವಲಯದ 10 ಕಿ.ಮೀ. ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ನಿರ್ಮಾಣ ಯೋಜನೆಗಳನ್ನು ಕೈಗೊಳ್ಳುವಂತಿಲ್ಲ. ಈ ಕಾರಣಕ್ಕಾಗಿಯೇ ಕಸ್ತೂರಿರಂಗನ್‌ ವರದಿ ಜಾರಿಗೊಳಿಸುವುದು ಬೇಡ. ಒಂದು ವೇಳೆ ಜಾರಿಗೊಳಿಸುವುದಿದ್ದರೂ ಜನವಸತಿ ಇರುವ 1571 ಚದರ ಕಿ.ಮೀ. ಪ್ರದೇಶವನ್ನು ಅಧಿಸೂಚನೆಯಿಂದ ಕೈಬಿಡಬೇಕೆಂದು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ.

Advertisement

ಕೊಡಗು ಮರು ನಿರ್ಮಾಣಕ್ಕೆ ಅಡ್ಡಿ:
ಕಸ್ತೂರಿರಂಗನ್‌ ವರದಿಯಲ್ಲಿ ನಿಗದಿಪಡಿಸಿರುವ ಪರಿಸರ ಸೂಕ್ಷ್ಮ ವಲಯವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು ಎಂದು ಹಸಿರು ನ್ಯಾಯಾಧಿಕರಣ ಸ್ಪಷ್ಟ ನಿರ್ದೇಶನ ನೀಡಿದೆ. ಕೊಡಗಿನಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಅನೇಕ ಪ್ರದೇಶಗಳು ಪಶ್ಚಿಮಘಟ್ಟ ವ್ಯಾಪ್ತಿಗೆ ಬರುತ್ತಿರುವುದರಿಂದ ಕೊಚ್ಚಿಹೋಗಿರುವ ಮನೆಗಳ ನಿರ್ಮಾಣ, ಕಾಫಿ ತೋಟ ಸೇರಿದಂತೆ ಬೆಟ್ಟ ಪ್ರದೇಶಗಳಲ್ಲಿ ನಾಶವಾಗಿರುವ ಕೃಷಿ ಭೂಮಿಯನ್ನೂ ಅಭಿವೃದ್ಧಿಪಡಿಸಲು ಅವಕಾಶವಿಲ್ಲ. ಇದು ರಾಜ್ಯದ ಪಾಲಿಗೆ ಆತಂಕವನ್ನು ತಂದೊಡ್ಡಿದೆ.

ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲೂ ಇದೆ
ಕಸ್ತೂರಿರಂಗನ್‌ ವರದಿ ಜಾರಿ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆ ಹಂತದಲ್ಲಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ವಿಚಾರವೂ ಇಲ್ಲಿ ವಿಚಾರಣೆ ನಡೆಯುತ್ತಿದ್ದು, ರಾಜ್ಯಗಳ ಅಭಿಪ್ರಾಯ ಪಡೆದು ಅಂತಿಮ ಅಧಿಸೂಚನೆ ಹೊರಡಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಹಸಿರು ನ್ಯಾಯಾಧಿಕಣದ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್‌ ಗಮನಕ್ಕೆ ತರಲು ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ. ಹೀಗಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಂತೆ ಕೇಂದ್ರ ಸರ್ಕಾರ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನು ಗಮನಿಸಿ ರಾಜ್ಯ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರುವ ಜಿಲ್ಲೆಗಳು ಮತ್ತು ಗ್ರಾಮಗಳು
ಉತ್ತರ ಕನ್ನಡ    607
ಶಿವಮೊಗ್ಗ    470
ಚಿಕ್ಕಮಗಳೂರು    143
ಬೆಳಗಾವಿ    72
ಮೈಸೂರು    56
ಕೊಡಗು    55
ದಕ್ಷಿಣ ಕನ್ನಡ    48
ಉಡುಪಿ    40
ಹಾಸನ    38
ಚಾಮರಾಜನಗರ    24

Advertisement

Udayavani is now on Telegram. Click here to join our channel and stay updated with the latest news.

Next