Advertisement

ಜೇಡ ಪ್ರಪಂಚದ ವಿಸ್ಮಯ ಪ್ರದರ್ಶನ

05:50 PM Dec 04, 2017 | Team Udayavani |

ಚಾಮರಾಜನಗರ: ಜೇಡಗಳ ವಿಸ್ಮಯ ಲೋಕವನ್ನು ತೆರೆದಿಡುವ ಅಪರೂಪದ ಜೇಡಗಳ ಛಾಯಾಚಿತ್ರ ಪ್ರದರ್ಶನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ನಗರದ ರೋಟರಿ ಭವನದಲ್ಲಿ ಭಾನುವಾರ ಏರ್ಪಡಿಸಲಾಗಿತ್ತು. ಮೈಸೂರಿನ ಹೋಮಿಯೋಪತಿ ವೈದ್ಯ ಡಾ.ಅಭಿಜಿತ್‌, ಎಂಜಿನಿಯರ್‌ಗಳಾದ ಸುಮುಖ, ಪವನ್‌, ವಿಪಿನ್‌ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದ 125 ಪ್ರಭೇದಗಳ, 175 ಛಾಯಾಚಿತ್ರಗಳನ್ನು ಇಡೀ ದಿನ ಪ್ರದರ್ಶಿಸಲಾಯಿತು.

Advertisement

ನಗರದ ರೋಟರಿ, ಹೋಮಿಯೋಪತಿ ಸಂಶೋಧನಾ ಕೇಂದ್ರ, ಶಾಂತಲಾ ಕಲಾವಿದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಛಾಯಾಗ್ರಾಹಕರಾದ ಗಣೇಶ್‌ ದೀಕ್ಷಿತ್‌ ಹಾಗೂ ರೋಟರಿ ಅಧ್ಯಕ್ಷ ಸುಭಾಷ್‌ ಉದ್ಘಾಟಿಸಿದರು.

ಹೋಮಿಯೋಪತಿ ಸಂಶೋಧನಾ ಕೇಂದ್ರದ ಡಾ. ಗುರುಕಿರಣ್‌, ರಂಗಕರ್ಮಿ ಕೆ.ವೆಂಕಟರಾಜು ಉಪಸ್ಥಿತರಿದ್ದರು. ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸೇರಿ ಸುಮಾರು 600 ಕ್ಕೂ ಹೆಚ್ಚು ಸಾರ್ವಜನಿಕರು ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು.

ಪ್ರದರ್ಶನ ಕಡಿಮೆ: ಜೇಡಗಳ ಕುರಿತು ಆಸಕ್ತಿಕರ ಮಾಹಿತಿಗಳನ್ನು ಡಾ. ಅಭಿಜಿತ್‌ ಹಾಗೂ ಸುಮುಖ ನೀಡಿದರು. “ಪಕ್ಷಿಗಳು, ಚಿಟ್ಟೆಗಳ ಬಗ್ಗೆ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದೇವೆ. ಪ್ರದರ್ಶನ ಮಾಡಿದ್ದೇವೆ. ನಮ್ಮ ತೋಟದಲ್ಲಿದ್ದ ವೈವಿಧ್ಯಮಯ ಜೇಡಗಳನ್ನು ನೋಡಿದಾಗ ಜೇಡಗಳ ಛಾಯಾಚಿತ್ರ ತೆಗೆಯುವ ಆಸಕ್ತಿ ಮೂಡಿತು. ಅಲ್ಲಿಂದ ಅವುಗಳ ಜೀವನ ಕ್ರಮಗಳನ್ನು ಅಭ್ಯಸಿಸುವ ಪ್ರಯತ್ನ ಮಾಡಿದೆವು.

ಪ್ರಾಣಿ, ಪಕ್ಷಿಗಳ ಛಾಯಾಚಿತ್ರ ಪ್ರದರ್ಶನಗಳಿಗೆ ಹೋಲಿಸಿದರೆ ಜೇಡಗಳ ಬಗ್ಗೆ ಛಾಯಾಚಿತ್ರ ಪ್ರದರ್ಶನ ನಡೆದೇ ಇರಲಿಲ್ಲ. ಹಾಗಾಗಿ ನಾಲ್ವರು ವಿವಿಧ ಸಂದರ್ಭಗಳಲ್ಲಿ ತೆಗೆದ ಜೇಡಗಳ ಛಾಯಾಚಿತ್ರಗಳನ್ನು ಪ್ರದರ್ಶನ ಮಾಡಲು ಯೋಚಿಸಿದೆವು’ ಎಂದು ಅಭಿಜಿತ್‌ ತಿಳಿಸಿದರು.

Advertisement

ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಬಿಟ್ಟರೆ, ಇಡೀ ದೇಶದಲ್ಲೇ ಜೇಡಗಳ ಛಾಯಾಚಿತ್ರ ಪ್ರದರ್ಶನ, ಕಾರ್ಯಾಗಾರ ನಡೆದಿದ್ದು ಮೈಸೂರಿನಲ್ಲೇ ಮೊದಲು. ಅದಾದ ಬಳಿಕ ಚಾಮರಾಜನಗರದಲ್ಲಿ ಎರಡನೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಕಾಡಿನಂಥ ಪ್ರದೇಶದಲ್ಲಿ ಒಂದು ಎಕರೆ ಪ್ರದೇಶದಲ್ಲಿ 1 ಲಕ್ಷ ಜೇಡಗಳಿರುತ್ತವೆ. ಒಂದು ಜೇಡ ಒಂದು ಕೀಟ ತಿಂದರೂ, ಆ ಪರಿಸರದಲ್ಲಿ 1 ಲಕ್ಷ ಕೀಟಗಳ ನಿಯಂತ್ರಣ ಆದಂತಾಯಿತು. ಒಂದು ಜೇಡ ತನ್ನ ಬಲೆಯಲ್ಲಿ ಕನಿಷ್ಠ 5 ಕೀಟಗಳನ್ನು ಹಿಡಿದರೂ ಲಕ್ಷಾಂತರ ಕೀಟಗಳ ಸಂಹಾರವಾಗುತ್ತದೆ. ಹೀಗಾಗಿ ಜೇಡಗಳು ರೈತ ಸ್ನೇಹಿ ಎಂದು ವಿವರಿಸಿದರು.

ದೇಶದಲ್ಲಿ ವಿಷಕಾರಿ ಇಲ್ಲ: ಸಾಲ್ಟಿಸೈಡೆ, ಲಿನಿಫಿಡೆ, ಅರಾನಿಡೆ ಎಂಬ ಮೂರು ವಿಧದ ಜೇಡಗಳಿವೆ. ಜೇಡಗಳ ಬಗ್ಗೆ ತಪ್ಪು ಕಲ್ಪನೆ ಬೇಡ. ಇಡೀ ಭಾರತದಲ್ಲಿ ಮಾನವನ ಪ್ರಾಣಕ್ಕೆ ಅಪಾಯ ತರಬಲ್ಲ ವಿಷಕಾರಿ ಜೇಡ ಇಲ್ಲ. ಜೇಡಗಳು ಮಾನವ ಸ್ನೇಹಿಗಳೇ ಹೊರತು, ಅವುಗಳಿಂದ ತೊಂದರೆ ಇಲ್ಲ ಎಂದು ಹೇಳಿದರು.

ಸುಮುಖ ತಂಡದವರು ಶಿವಮೊಗ್ಗದ ಹೊಸನಗರದಲ್ಲಿ 6 ಹೊಸ ಬಗೆಯ ಜೇಡಗಳನ್ನು ಕಂಡುಹಿಡಿದಿದ್ದಾರೆ. ಇದರಲ್ಲಿ ಸಾರ್ಟಿಂಗ್‌ ಹ್ಯಾಟ್‌ ಸ್ಪೈಡರ್‌ ಎಂಬ ಜೇಡ, ವಿಶ್ವದ ಪ್ರಮುಖ ಆವಿಷ್ಕಾರಗಳಲ್ಲೊಂದು ಎಂಬ ಗೌರವಕ್ಕೆ ಪಾತ್ರವಾಗಿದೆ ಎಂದು ಅಭಿಜಿತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next