Advertisement

Mudhol: ನದಿ ಪಾತ್ರದಲ್ಲಿ ಮತ್ತೆ ಶುರುವಾದ ಬೋಟ್ ಸದ್ದು; ಅಕ್ರಮ ಮರಳುದಂಧೆಗೆ ಕೊನೆ ಎಂದು?

05:12 PM Aug 15, 2024 | Team Udayavani |

ಮುಧೋಳ: ಒಂದುಕಡೆ ಘಟಪ್ರಭಾ ನದಿ‌ ಪ್ರವಾಹದಿಂದ ಕಂಗಾಲಾಗಿರುವ ಜನರು ಪರಿಹಾರಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ ಮತ್ತೊಂದು ಕಡೆ‌ ನದಿ‌ ನೀರು‌‌‌ ಇಳಿಮುಖವಾಗಿರುವುದನ್ನೆ ಬಂಡವಾಳ‌ ಮಾಡಿಕೊಂಡಿರುವ ಕೆಲವು ಖದೀಮರು ಅಕ್ರಮ‌ ಮರಳುಗಾರಿಕೆಯಲ್ಲಿ‌ ತೊಡಗಿದ್ದು ನದಿಪಾತ್ರದ‌ ಮರಳು ಸಂಪತ್ತು‌ ದೋಚಲು ಮುಂದಾಗುತ್ತಿದ್ದಾರೆ.

Advertisement

ಘಟಪ್ರಭಾ ಪ್ರವಾಹದಿಂದ‌ ಅಕ್ರಮ‌ ಮರಳುಗಾರಿಕೆ ಸಂಪೂರ್ಣ ತಗ್ಗಿತ್ತು. ಇದೀಗ ನದಿಯ ಹರಿವಿನ‌ ಅಬ್ಬರ ಕಡಿಮೆಯಾಗುತ್ತಲೆ‌ ನದಿಗೆ ಬೋಟ್ ಬಿಟ್ಟು ಮರಳು ಎತ್ತುವ ಅಕ್ರಮ‌ ಚಟುವಟಿಕೆ‌ ನಿಧಾನವಾಗಿ ತಲೆಯೆತ್ತುತ್ತಿದೆ. ಮುಧೋಳ ನಗರದಿಂದ ಕೆಲವೇ ಕೆಲವು ಕಿ.ಮೀ ಅಂತರದಲ್ಲಿ ಹಾಡಹಗಲೇ ನಡೆಯುತ್ತಿರುವ ಅಕ್ರಮ‌ ಮರಳುಗಾರಿಕೆ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ‌ ತೋರಿಸುತ್ತಿದೆ.

ನದಿತೀರದ ಜಮಿನಿನಲ್ಲಿನ ಬೆಳೆಹಾನಿ ಸಮೀಕ್ಷೆಗಾಗಿ ಪ್ರತಿನಿತ್ಯ ಹಲವಾರು ಅಧಿಕಾರಿಗಳು ನದಿತೀರಕ್ಕೆ‌ ಓಡಾಟ‌ ನಡೆಸಿದ್ದರೂ ಅಕ್ರಮ ಮರಳು ಸಾಗಣೆದಾರರು ನಮ್ಮನ್ನು ಯಾರೂ ಪ್ರಶ್ನೆ‌ ಮಾಡುವರು ಎಂಬ ಧರ್ಪದಿಂದ‌ ತಮ್ಮ ಕಾರ್ಯದಲ್ಲಿ‌‌ ನಿರತರಾಗಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಯವ ಅಧಿಕಾರಿಗಳು‌ ಮಾತ್ರ ಜಾಣಮೌನವಹಿಸಿ ಪರಿಸರ ಹಾನಿಗೆ ಪರೋಕ್ಷವಾಗಿ ಕಾರಣೀಕರ್ತರಾಗುತ್ತಿದ್ದಾರೆ.

ಒಂಟಗೋಡಿ-ಮಿರ್ಜಿ ಮಧ್ಯೆ : ನದಿತೀರದ ಗ್ರಾಮಗಳಾಗಿರುವ ಒಂಟಗೋಡಿ‌ ಹಾಗೂ ಮಿರ್ಜಿ ಗ್ರಾಮದ ಮಧ್ಯೆದಲ್ಲಿ ನದಿಗೆ ಬೋಟ್ ಬಿಟ್ಟು ಅಕ್ರಮವಾಗಿ‌ ಮರಳು ಎತ್ತುವ ಕಾರ್ಯ ನಿಧಾನವಾಗಿ ತಲೆಯೆತ್ತುತ್ತಿದೆ. ನದಿಯಲ್ಲಿ‌ ಬೋಟ್ ಬಿಟ್ಟು‌ ದೊಡ್ಡ ದೊಡ್ಡ ಪೈಪ್‌ ಮೂಲಕ ಮರಳನ್ನು ನದಿ‌ದಡಕ್ಕೆ ತರುವ ಖದೀಮರು ಬಳಿಕ‌ ದಡದಲ್ಲಿ‌ ನಿಲ್ಲಿಸಿರುವ ಟ್ರ್ಯಾಕ್ಟರ್ ಗಳ‌ ಮೂಲಕ ಮರಳನ್ನು ಬೇರೆಡೆ ಸಾಗಿಸಿ‌ ಕಬ್ಬಿನ‌ ಗದ್ದೆ‌ ಹಾಗೂ ಗುಪ್ತ ಜಾಗದಲ್ಲಿ ಸಂಗ್ರಹಿಸುತ್ತಿದ್ದಾರೆ. ಹೀಗೆ ಸಂಗ್ರಹಿಸಿರುವ ಮರಳನ್ನು ಹೆಚ್ಚಿನ ಬೆಲೆಗೆ ರಾತ್ರೋರಾತ್ರಿ ಸಾಗಾಟ ಮಾಡಿ ಹೆಚ್ಚಿನ‌ ಲಾಭ ಗಳಿಸುತ್ತಿದ್ದಾರೆ.

ದೂರದ ರಸ್ತೆಗೆ ಕೇಳುವ ಸದ್ದು ಆಡಳಿತ ಯಂತ್ರಕ್ಕೆ ಕೇಳಲ್ಲ: ಹಾಡಹಗಲೆ ನದಿಯಲ್ಲಿ ಬೋಟ್ ಮೂಲಕ ಅಕ್ರಮ‌‌ ಮರಳುಗಾರಿಕೆ‌ ಮಾಡುವ ಸದ್ದು ಅರ್ಧ ಕಿ.ಮೀ. ದೂರದಲ್ಲಿರುವ ಡಾಂಬರು ರಸ್ತೆಗೆ ಕೇಳಿಸುತ್ತದೆ. ಆದರೆ ಇದೇ‌‌ ರಸ್ತೆಯಲ್ಲಿ‌ ಪ್ರವಾಹ ಹಾನಿ ಪರಿಶೀಲಿಸುವ ಅಧಿಕಾರಿಗಳ ಕಿವಿಗೆ ಬೀಳದಿರುವುದು‌ ಮಾತ್ರ ಸೋಜಿಗದ‌ ಸಂಗತಿಯಾಗಿದೆ. ಮರಳುಗಾರಿಕೆ ನದಿ‌ ಪ್ರದೇಶದಿಂದ ಕನಿಷ್ಠ ಅರ್ಧ ಕಿ.ಮೀ‌ ದೂರದ ಡಾಂಬರ್ ರಸ್ತೆಗೆ ಬೋಟ್ ನ‌ ಮೋಟಾರ್ ಸದ್ದು ಕೇಳಿಸುತ್ತದೆ. ಆ ಸದ್ದಿನ ದಿಕ್ಕಿಗೆ ಕಾಲ್ನಡಿಗೆಯಲ್ಲಿ‌‌ ಚಲಿಸಿದರೆ ಸಾಕು‌ ಯಾರ ಅಳಕಿಲ್ಲದೆ‌ ಅಕ್ರಮ ಮರಳುಗಾರಿಕೆ ದಿಗ್ದರ್ಶನವಾಗುತ್ತದೆ. ಆದರೆ‌ ಇಚ್ಛಾಶಕ್ತಿಯ ಕೊರತೆಯಿರುವ ಆಡಳಿತಾಧಿಕಾರಿಗಳಿಗೆ‌‌‌ ಮಾತ್ರ ಇದು ಬೇಡದ ವಿಷಯವಾಗಿರುವುದು ವಿಪರ್ಯಾಸದ ಸಂಗತಿ.

Advertisement

ಅಪಾರ‌‌ ಪ್ರಮಾಣದಲ್ಲಿ ಸಂಗ್ರಹ: ನೀರು ಇಳಿಮುಖವಾಗಿರುವುದರಿಂದ ನದಿಪಾತ್ರದಲ್ಲಿ ಉತ್ತಮ ಗುಣಮಟ್ಟದ ಮರಳು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಗೊಂಡಿದೆ. ಗುಣಮಟ್ಟದ ಮರಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ‌ ಇರುವುದರಿಂದ ಅಕ್ರಮ ಮರಳು ಸಾಗಣೆದಾರರು ಪ್ರವಾಹ ತಗ್ಗುತ್ತಿದಂತೆ ತಮ್ಮ ದಂಧೆಗೆ ಮುಂದಾಗಿದ್ದಾರೆ. ನದಿ ನೀರು ಸಂಪೂರ್ಣ ಇಳಿಮುಖವಾದರೆ ನದಿಪಾತ್ರದ ಜನರು ಹೆಚ್ಚಿನ‌ ಪ್ರಮಾಣದಲ್ಲಿ ಮರಳುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ ದರಸಮರ ಉಂಟಾಗುತ್ತದೆ‌. ಆದ್ದರಿಂದ ಈಗಲೇ ಹೆಚ್ಚಿನ ಮರಳು ತೆಗೆದು ಮಾರಾಟ‌‌ ಮಾಡುವ ಇರಾದೆಯಲ್ಲಿದ್ದಾರೆ ಅಕ್ರಮ ಮರಳು ದಂಧೆಕೋರರು.

ಬೋಟ್ ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ: ಸದ್ಯ ನದಿ ನೀರು ಇಳಿಮುಖವಾಗಿದ್ದರೂ ಮರಳುಗಾರಿಕೆ ನಡೆಯುವ ಸ್ಥಳಕ್ಕೆ ಟ್ರ್ಯಾಕ್ಟರ್ ಗಳ ಓಡಾಟಕ್ಕೆ ರಸ್ತೆ ನೀರಿನಿಂದ ಕೂಡಿದ್ದು ಅನುಕೂಲಕರವಾಗಿಲ್ಲ. ಅಧಿಕಾರಿಗಳು ಎಚ್ಚೆತ್ತು ಕಠಿಣ ಕ್ರಮ ಕೈಗೊಳ್ಳದಿದ್ದರೆ ಇನ್ನೊಂದು ವಾರದಲ್ಲಿ ಹೆಚ್ಚಿನ‌ ಪ್ರಮಾಣದ ಬೋಟ್ ಗಳು ತಲೆಯೆತ್ತಿ ನದಿ ಸಂಪತ್ತು ಲೂಟಿಗೆ ಮುಂದಾಗುವುದಂತು ಖಚಿತ.

ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಜನಪ್ರತಿನಿಧಿಗಳು: ತಾಲೂಕಿನ‌ ನದಿಪಾತ್ರದಲ್ಲಿ ಅಕ್ರಮ‌‌ ಮರಳುಗಾರಿಕೆ ಎಗ್ಗಿಲ್ಲದೆ‌ ಸಾಗಿದ್ದರೂ ಕಡಿವಾಣಕ್ಕೆ ಮುಂದಾಗಬೇಕಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ‌ ಮುಂದಾಗದಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಅಕ್ರಮ‌ ಮರಳುಗಾರಿಕೆಗೆ ಕಡಿವಾಣ ಹಾಕಿ‌ ನದಿ ಸಂಪತ್ತು ರಕ್ಷಣೆಗೆ ಮುಂದಾಗಬೇಕು‌ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಘಟಪ್ರಭಾ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಒಂದುವೇಳೆ ಆ ರೀತಿಯೇನಾದರೂ ಇದ್ದರೆ ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳುತ್ತೇನೆ.
-ವಿನೋದ ಹತ್ತಳ್ಳಿ ತಹಸೀಲ್ದಾರ್ ಮುಧೋಳ

– ಗೋವಿಂದಪ್ಪ ತಳವಾರ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next