Advertisement
“ಕಾಣದ ಕಡಲಿಗೆ ಹಂಬಲಿಸಿದೆ ಮನ’ ಅಂತ ದೊಡ್ಡ ಧ್ವನಿಯಲ್ಲಿ, ಸಿ. ಅಶ್ವಥ್ ಅವರನ್ನೇ ಇಮಿಟೇಟ್ ಮಾಡುತ್ತಾ ಹಾಡುತ್ತಿದ್ದ ಘಳಿಗೆಯಲ್ಲೇ ಕಂಡವಳು ನೀನು. “ಅದೆಷ್ಟು ತನ್ಮಯತೆಯಿಂದ ಹಾಡ್ತೀರಿ ನೀವು’ ಅಂತ ನೀನು ಬೆನ್ನು ತಟ್ಟಿದ ಮೇಲೆ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ಆಗಷ್ಟೇ ಅರಳಿದ ಕುಸುಮದ ಹಾಗೆ, ಮೊಗದ ಮೇಲೆ ತಾಜಾ ನಗು, ಬೆಳದಿಂಗಳಂಥ ಬಣ್ಣ, ನೋಡಿದಷ್ಟೂ ನಿಗೂಢವೆನಿಸುವ, ಏನನ್ನೂ ಬಿಟ್ಟು ಕೊಡದ ಬೊಗಸೆ ಕಣ್ಣುಗಳು, ಹಣೆ ಮೇಲೆ ಕಚಗುಳಿಯಿಡುತ್ತಿದ್ದ ಮುಂಗುರುಳು, ಕೆಂಪು ಚೂಡಿಯ ಮೇಲೆ ಬಿಳಿಯ ವೇಲ್ ಧರಿಸಿದ ನಿನ್ನನ್ನು ನೋಡಿದ ಮೇಲೆ, ಯಾವ ಹುಡುಗ ತಾನೆ ಪ್ರೀತಿಯಲ್ಲಿ ಬೀಳದೆ ಇರಬಲ್ಲ ಹೇಳು? ನನಗೂ ಅದೇ ಆಗಿದ್ದು!
Related Articles
Advertisement
ನನ್ನ ದುಃಖದ ಕ್ಷಣಗಳಲ್ಲಿ ಆಸರೆಯಾಗಿದ್ದು ಇದೇ ಭಾವಗೀತೆಗಳು. ಬದುಕಿನಿಂದ ಎದ್ದು ನಡೆದು ಬಿಡಬೇಕು ಅಂತ ತೀರಾ ಹತಾಶನಾದಾಗ ಕೈಡಿದು ಬದುಕಿಗೆ ಹುರುಪು ತುಂಬಿದ್ದೂ ಇವೇ ಗೀತೆಗಳು. ಈಗ ನೋಡು ನನಗೀಗ ಅವೇ ಅನ್ನ ಹಾಕುತ್ತಿವೆ’ ಅಂದಾಗ, “ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕಗೊಂಡಿತು ಧಾರಿಣಿ’ ಎನ್ನುವ ಹಾಗೆ ಗಟ್ಟಿಯಾಗಿ ತಬ್ಬಿಕೊಂಡ ನಿನ್ನ ತಲೆ ನೇವರಿಸುತ್ತಿದ್ದೆ.
ಭಾವಗೀತದ ದೋಣಿ ಹಾಯಾಗಿ ಹರಿಸುತ್ತಿದ್ದ ಘಳಿಗೆಯಲ್ಲೇ ಆಕಾಶ ಬಿಕ್ಕುವ ಸದ್ದು ಎದೆ ನಡುಗಿಸಿದ್ದು ಸುಳ್ಳಲ್ಲ. ಈ ಜಗತ್ತು ಯಾವಾಗ ಪ್ರೀತಿಸುವ ಜೀವಗಳನ್ನು ಒಂದು ಮಾಡಿದೆ ಹೇಳು? ನಿನ್ನ ಮನೆಯಲ್ಲಿ ನಿನ್ನನ್ನು ಕೂಡಿ ಹಾಕಿದರು. ನನ್ನ ಬೆನ್ನ ಮೇಲೆ ಬಾಸುಂಡೆಗಳು ಮೂಡಿದವು. ಆರ್ಕೆಸ್ಟ್ರಾದಿಂದ ಗೇಟ್ ಪಾಸ್ ನೀಡಲಾಯಿತು. ಏನೆಲ್ಲಾ ಆಗಿ ಹೋದವು ಆ ವಿಷಮ ಸನ್ನಿವೇಶದಲ್ಲಿ. ಆನಂತರ ಒಮ್ಮೆಯೂ ನಿನ್ನ ಮುಖ ನಾನು ಕಾಣಲೇ ಇಲ್ಲ. ಈಗ ಕೊರಳ ಸೆರೆಯುಬ್ಬಿ “ಹೇಳಿ ಹೋಗು ಕಾರಣ ಹೋಗುವ ಮೊದಲು’ ಅನ್ನುವ ಹಾಡನ್ನಷ್ಟೇ ಹಾಡುತ್ತಿದ್ದೇನೆ. ಸಾಂತ್ವನಗೈಯಲು ಯಾರೂ ಇಲ್ಲ. ನೀನುಳಿಸಿ ಹೋದ ಭಾವಗೀತೆಗಳ ವಿನಹ.
ನಾಗೇಶ್ ಜೆ. ನಾಯಕ, ಉಡಿಕೇರಿ