Advertisement

ಮಾಜಿಯಾದರೂ ಕ್ಷೇತ್ರದ ಜನರ ಸೇವೆ ನಿರಂತರ 

04:02 PM Mar 15, 2018 | Team Udayavani |

ಕುಂದಾಪುರ: ನನ್ನ ವಿರುದ್ಧದ ಆರೋಪ, ವಿರೋಧಿ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ. ಅದಕ್ಕೆ ಜನರು ಉತ್ತರಿಸುತ್ತಾರೆ. ಯಾರೋ ಇಬ್ಬರು ಅಪಪ್ರಚಾರ ಮಾಡುತ್ತಾರೆಂದರೆ ಅದಕ್ಕೆ ನಾನು ಪ್ರತಿಕ್ರಿಯಿಸುವ ಅಗತ್ಯವೂ ಇಲ್ಲ. ನಾನು ಏನೂ ಕೆಲಸ ಮಾಡಿಲ್ಲ ಅಂತ ಜನ ಹೇಳಿದರೆ ಅದನ್ನು ಒಪ್ಪುತ್ತೇನೆ. ಜನರ ಬಗ್ಗೆ ಅಚಲವಾದ ನಂಬಿಕೆಯಿದೆ. ವಿರೋಧಿಗಳಿಗೆ ವಿರೋಧ ಮಾಡುವುದೇ ಕೆಲಸ…

Advertisement

ಕುಂದಾಪುರ ವಿದಾನಸಭಾ ಕ್ಷೇತ್ರದಿಂದ ಸತತ 4 ಬಾರಿ ಶಾಸಕರಾಗಿ, ಕಳೆದ ಬಾರಿ ಪಕ್ಷೇತರರಾಗಿ ನಿಂತು, ಗೆದ್ದು, ಈಗ ಮತ್ತೆ ಬಿಜೆಪಿ ಸೇರಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮಾತಿದು. ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ‘ಉದಯವಾಣಿ’ಯೊಂದಿಗೆ ತಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳು, ಮುಂಬರುವ ವಿಧಾನ ಸಭಾ ಚುನಾವಣೆ, ಟಿಕೆಟ್‌ ಕುರಿತು ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ನಾನು ಈ 4 ವರ್ಷ ಮಾತ್ರವಲ್ಲ, ಕಳೆದ 20 ವರ್ಷಗಳಿಂದಲೂ ಈ ಕುಂದಾಪುರ ಕ್ಷೇತ್ರದ ಜನರ ಕಷ್ಟ, ಸಮಸ್ಯೆಗೆ ಸ್ಪಂದಿಸಿದ್ದೇನೆ. ಅಷ್ಟು ತಂದಿದ್ದೇನೆ, ಇಷ್ಟು ತಂದಿದ್ದೇನೆ ಎಂದು ಹೇಳಿಕೊಂಡು ಬರುವುದು ನನ್ನ ಜಾಯಮಾನವಲ್ಲ. ನಾನು ಏನು ಕೆಲಸ ಮಾಡಿದ್ದೇನೆ ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ಅವರು ಬುದ್ಧಿವಂತರು. ಶಿಕ್ಷಣ, ಆರೋಗ್ಯ, ರಸ್ತೆ ಹೀಗೆ ಎಲ್ಲ ಕ್ಷೇತ್ರದಲ್ಲೂ ಕುಂದಾಪುರ ಅಭಿವೃದ್ಧಿಯಾಗಿದೆ. ರಾಜಕೀಯ ರಹಿತವಾಗಿ ಎಸ್‌ಡಿಎಂಸಿ ರಚನೆಗೆ ಒತ್ತು ನೀಡಿದ್ದೇನೆ ಎಂದವರು ಹೇಳಿದರು.

ಸದನದಲ್ಲಿ ಸಕ್ರಿಯ: ದಾಖಲೆಯೂ ಇದೆ
ಶಾಸಕನಾಗಿ ಏನು ಕೆಲಸ ಮಾಡಬೇಕೋ ಅದೆಲ್ಲ ಮಾಡಿದ್ದೇನೆ. ವಿಧಾನಸಭೆಯಲ್ಲಿ ಡೀಮ್ಡ್ ಫಾರೆಸ್ಟ್‌, ಅಂಗನವಾಡಿ ಕಾರ್ಯಕರ್ತೆಯರ ಕುರಿತು, ಸಿಆರ್‌ ಝಡ್‌, ಕಸ್ತೂರಿ ರಂಗನ್‌, ಡಿಸಿಸಿ ಬ್ಯಾಂಕ್‌, ಆಶ್ರಯ ವಸತಿ ಅನುದಾನ ಏರಿಕೆ, ಸಕ್ಕರೆ ಕಾರ್ಖಾನೆ, ಗ್ರಾಮ ಸಹಾಯಕರ ಸಮಸ್ಯೆ ಕುರಿತು ಮಾತನಾಡಿದ್ದೇನೆ. ಆ ಕುರಿತ ದಾಖಲೆಯು ನನ್ನಲ್ಲಿದೆ. ಕುಂದಾಪುರಕ್ಕೆ ಆರ್‌ಟಿಒ ಕಚೇರಿಯ ಅಗತ್ಯ ಇತ್ಯಾದಿ ಬೇಡಿಕೆಗಳ ಬಗೆಗೂ ಮಾತನಾಡಿದ್ದೇನೆ.

ಟಿಕೆಟ್‌: ಪಕ್ಷಕ್ಕೆ ಬಿಟ್ಟ ವಿಚಾರ
ಯಾವುದೇ ಸರಕಾರವಿದ್ದರೂ ನನ್ನ ಕ್ಷೇತ್ರಕ್ಕೆ ಅಸಹಕಾರ ಮಾಡಿಲ್ಲ. ವಿರೋಧಿಗಳು ಎಲ್ಲ ಕಡೆಗಳಲ್ಲಿಯೂ, ಎಲ್ಲರಿಗೂ ವಿರೋಧಗಳಿರುತ್ತವೆ. ಗಾಂಧೀಜಿಯಂತಹ ಮಹನೀಯರಿಗೂ ವಿರೋಧಿಗಳಿದ್ದರು. ಪಕ್ಷ ಟಿಕೆಟ್‌ ಕೊಡಲಿ, ಬಿಡಲಿ ನಾನು ಪಕ್ಷದಲ್ಲೇ ಇರುತ್ತೇನೆ. ಜಯಪ್ರಕಾಶ್‌ ಹೆಗ್ಡೆ ಅಥವಾ ಇನ್ನು ಯಾರಿಗೆ ಟಿಕೆಟು ಕೊಡುತ್ತಾರೆ ನನಗೆ ಗೊತ್ತಿಲ್ಲ. ರಾಜ್ಯಾಧ್ಯಕ್ಷರು, ಸಂಸದರು, ಜಿಲ್ಲಾಧ್ಯಕ್ಷರು ಒತ್ತಡ ಹಾಕಿದ್ದರಿಂದ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ.

Advertisement

ಆರೆಸ್ಸೆಸ್‌ ಬಗ್ಗೆ ಅತೀವ ಗೌರವ
ಆರೆಸ್ಸೆಸ್‌ ರಾಷ್ಟ್ರ ರಕ್ಷಣೆ ಕುರಿತ ಕಾರ್ಯದ ಬಗಹೆಮ್ಮೆ ಹಾಗೂ ತುಂಬಾ ಗೌರವವಿದೆ. ಕಲ್ಲಡ್ಕ ಪ್ರಭಾಕರ ಭಟ್‌ ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ನನ್ನ ಬಗ್ಗೆಯೂ ಅವರಿಗೆ ಗೌರವವಿದೆ. ಇದು ಸೀಟಿಗಾಗಿ ಹೇಳುತ್ತಿಲ್ಲ. ಮನದ ಮಾತು. ಬೇರೆ ಯಾರೋ ಅಪ ಪ್ರಚಾರ ಮಾಡುತ್ತಾರೆಂದು ನಾನದಕ್ಕೆ ಪ್ರತಿಕ್ರಿಯಿಸಿಲ್ಲ ಎಂದು ಶ್ರೀನಿವಾಸ ಶೆಟ್ಟಿ ಅವರು ಸ್ಪಷ್ಟಪಡಿಸಿದರು.  

ಅಗತ್ಯವಿರುವ ಎಲ್ಲ ಸಭೆಗೂ ಹೋಗಿದ್ದೇನೆ
ಸರಕಾರಿ ಕಚೇರಿಗಳೆಂದರೆ ನನಗೆ ಆಗಿ ಬರುವುದಿಲ್ಲ. ಹಾಗಂತ ಅಕ್ರಮ-ಸಕ್ರಮ, ಕಸ್ತೂರಿ ರಂಗನ್‌, ಮರಳು ಸಮಸ್ಯೆ, ತಾಲೂಕು ರಚನೆ ಕುರಿತ ಸಭೆಗಳಿಗೆಲ್ಲ ಹೋಗಿದ್ದೇನೆ. ಅವಧಿಗೆ ಮುನ್ನವೇ ರಾಜೀನಾಮೆ ನೀಡಿದರೂ ನಾನು ಈಗಲೂ ಕ್ಷೇತ್ರದ ಜನರ ಸಮಸ್ಯೆಗೆ ನಿರಂತರ ಸ್ಪಂದಿಸುತ್ತಿದ್ದೇನೆ. ವರ್ಷದಲ್ಲಿ 330 ದಿನ ನನ್ನ ಕಚೇರಿ, ಮನೆಯಲ್ಲಿ ಜನರಿಗೆ ಸಿಗುತ್ತೇನೆ. ಅವರ ಸಮಸ್ಯೆಗಳನ್ನು ಆಲಿಸುತ್ತೇನೆ. ಬೆಳಗ್ಗೆ 7.30ರಿಂದ 10.30ರ ವರೆಗಿನ ಸಮಯವನ್ನು ಸಾರ್ವಜನಿಕರಿಗಾಗಿಯೇ ಮೀಸಲಿಟ್ಟಿದ್ದೇನೆ ಎನ್ನುತ್ತಾರೆ ಹಾಲಾಡಿಯವರು.

ಪ್ರಗತಿಯಲ್ಲಿವೆ ನೂರಾರು ಕೋಟಿ ರೂಪಾಯಿ ಕಾಮಗಾರಿ
ನಾನು ಕಳೆದ 4 ವರ್ಷಗಳ ಅವಧಿಯಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ. ಆದರೆ ಉಡುಪಿ, ಕಾಪು, ಬೈಂದೂರಿನ ಶಾಸಕರಂತೆ ಅನ್ನಭಾಗ್ಯ, ಸೈಕಲ್‌ ಹಾಗೂ ಬಹಳ ಮುಖ್ಯವಾಗಿ ವಾರಾಹಿ ಕಾಮಗಾರಿಯ 500 ಕೋ.ರೂ. ಗಳನ್ನೆಲ್ಲ ನನ್ನದೇ ಅನುದಾನ ಎಂದು ಒಟ್ಟು ಸೇರಿಸಿ ಹೇಳಿದರೆ ಈ ಕ್ಷೇತ್ರಕ್ಕೆ ಒಟ್ಟು ಬಂದಂತಹ ಅನುದಾನ ಸಾವಿರಾರು ಕೋಟಿ ರೂ.ಗಿಂತಲೂ ಮಿಗಿಲಾಗುತ್ತದೆ. ಹಿಂದೆಯೂ ಸಾಕಷ್ಟು ರಸ್ತೆ ಅಭಿವೃದ್ಧಿ ಮಾಡಿದ್ದು, 2 ಜಟ್ಟಿ ವಿಸ್ತರಣೆ, ಕೋಡಿ-ಬೆಂಗ್ರೆ, ಕನ್ಯಾನದಲ್ಲಿ ಹೂಳೆತ್ತುವ ಕಾರ್ಯವೂ ಆಗಿದೆ. ಸದ್ಯ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಹೇಳುವುದಾದರೂ ದೊಡ್ಡ ಪಟ್ಟಿಯೇ ಇದೆ. 

ಹಾಲಾಡಿ-ಅಮಾಸೆಬೈಲು ರಸ್ತೆ ವಿಸ್ತರಣೆಗೆ 4.80 ಕೋ.. ರೂ., ಹಾಲಾಡಿಯಲ್ಲಿ ಅಪಘಾತ ನಿಯಂತ್ರಿಸಲು ಸರ್ಕಲ್‌ ನಿರ್ಮಾಣಕ್ಕೆ 3.30 ಕೋ.ರೂ., ಹಾಲಾಡಿ ಹೊಸ ಸೇತುವೆಗೆ 1.20 ಕೋ.ರೂ., ಜನ್ನಾಡಿ-ಮೊಳಹಳ್ಳಿ 9 ಕಿ.ಮೀ. ರಸ್ತೆಗೆ 6.80 ಕೋ.ರೂ., ಬಿದ್ಕಲ್‌ಕಟ್ಟೆಯ ಐಟಿಐ ಹಾಸ್ಟೆಲ್‌ನ 2ನೇ ಮಹಡಿಗೆ 3.30 ಕೋ.ರೂ., ಯಡಾಡಿ-ಮತ್ಯಾಡಿಯಲ್ಲಿ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ ಹಾಗೂ ಶಾಲೆಗೆ 17 ಕೋ.ರೂ., ಸುಣ್ಣಾರಿ-ಮೂಡುಕೊರ್ಗಿ-ಕೊರ್ಗಿ ರಸ್ತೆಗೆ 2.80 ಕೋ.ರೂ., ಸಲ್ವಾಡಿ-ಕಕ್ಕೇರಿ ರಸ್ತೆಗೆ 1 ಕೋ.ರೂ., ಸುಣ್ಣಾರಿ-ಕೆದೂರು-ಉಳೂ¤ರು- ತೆಕ್ಕಟ್ಟೆ ರಸ್ತೆಗೆ 9.80 ಕೋ. ರೂ., ತೆಕ್ಕಟ್ಟೆ-ಕೊಮೆ ಮೀನುಗಾರಿಕಾ ರಸ್ತೆಗೆ 1.80 ಕೋ. ರೂ., ಬೀಜಾಡಿ ಮೀನುಗಾರಿಕಾ ರಸ್ತೆಗೆ 1.90 ಕೋ.ರೂ., ತೆಕ್ಕಟ್ಟೆಯಲ್ಲಿ ನಿರಾಶ್ರಿತರ ಪುನರ್ವಸತಿಧಾಮಕ್ಕೆ 2.60 ಕೋ.ರೂ., ಗೋಪಾಡಿ-ವಕ್ವಾಡಿ-ಕೆದೂರು ರಸ್ತೆಗೆ 7 ಕೋ.ರೂ., ಹೇರಿಕುದ್ರು ರಿಂಗ್‌ ರೋಡ್‌ಗೆ 2.26 ಕೋ.ರೂ., ಗೋಳಿಯಂಗಡಿ-ದಬ್ಟಾಡಿ ರಸ್ತೆ ಕಾಂಕ್ರೀಟಿಕರಣಕ್ಕೆ 1.80 ಕೋ.ರೂ., ಹಾಲಾಡಿ-ವಂಡಾರು ರಸ್ತೆಗೆ 3 ಕೋ.ರೂ., ಗಾವಳಿ-ಕಕ್ಕುಂಜೆ ರಸ್ತೆ ಕಾಂಕ್ರೀಟಿಕರಣಕ್ಕೆ 1 ಕೋ.ರೂ., ಪಾಂಡೇಶ್ವರ-ಬೆಣ್ಣೆಕುದ್ರು ರಸ್ತೆಗೆ 3 ಕೋ.ರೂ. ಕಾಮಗಾರಿಗಳು ನಡೆಯುತ್ತಿವೆ. ಮುದ್ದುಮನೆ- ಶಿರೂರು ರಸ್ತೆಗೆ 5 ಕೋ.ರೂ., ಶಿರೂರು-ಹೊಸಂಗಡಿ ಸೇತುವೆಗೆ 10 ಕೋ.ರೂ., ಆವರ್ಸೆ ಸೇತುವೆಗೆ 1 ಕೋ.ರೂ. ಟೆಂಡರ್‌ ಕರೆಯಲಾಗಿದೆ .

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next