Advertisement

ಮೇ ಮೇಳದಲ್ಲಿ ತೆರೆಗೆ ಬಂದ ಜಾತ್ಯತೀತತೆ

03:48 PM May 06, 2019 | Suhan S |

ಗದಗ: ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ ಕವಲಕ್ಕಿ ಹಾಗೂ ಚಿತ್ತಾರ ಕಲಾ ಬಳಗ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಅಂಬೇಡ್ಕರ್‌ ಭವನದ ಲಿಂ| ಡಾ| ಸಿದ್ಧಲಿಂಗ ಸ್ವಾಮಿಗಳ ವೇದಿಕೆಯಲ್ಲಿ ನಡೆದ ಎರಡು ದಿನಗಳ 6ನೇ ಮೇ ಸಾಹಿತ್ಯ ಮೇಳ ರವಿವಾರ ಸಂಜೆ ಅದ್ಧೂರಿ ತೆರೆ ಕಂಡಿತು.

Advertisement

ಆಡಳಿತ ವರ್ಗ ಎಚ್ಚರಿಸುವುದರೊಂದಿಗೆ ಜನಸಾಮಾನ್ಯರು ಪ್ರಸ್ತುತ ಸನ್ನಿವೇಶದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ವಿವರಿಸಿತು. ಈ ಮೂಲಕ ಜನ ಸಮುದಾಯದಲ್ಲಿ ಸ್ವಾಭಿಮಾನದ ಧ್ವನಿಯನ್ನು ಬಡಿದೆಬ್ಬಿಸುವ ಪ್ರಯತ್ನ ನಡೆಸಿತು.

ಅಭಿವೃದ್ಧಿ ಹೆಸರಲ್ಲಿ ಆದಿವಾಸಿಗಳು, ಬಡವರನ್ನು ಬೀದಿಗೆ ತಳ್ಳುವ ಅಧಿಕಾರಿ ವರ್ಗ, ಕಾರ್ಮಿಕರಿಗೆ ಕನಿಷ್ಠ ಸವಲತ್ತು ನೀಡದೇ ಶೋಷಿಸುವ ಬಂಡವಾಳಶಾಹಿಗಳ ವಿರುದ್ಧ ಹೋರಾಟದ ಎಚ್ಚರಿಕೆ ಸಂದೇಶ ರವಾನಿಸಿತು. ಸಮಾಜವಾದ, ಜಾತ್ಯತೀತ ನೆಲೆಗಟ್ಟಿನಲ್ಲಿ ರೂಪಿತವಾದ ಭಾರತವನ್ನು ಧರ್ಮ, ಜಾತಿಗಳ ಹೆಸರಲ್ಲಿ ಒಡೆದಾಳುವ ರಾಜಕಾರಣಿಗಳ ವಿರುದ್ಧ ವಿಚಾರವಾದಿಗಳು ಕೆಂಡ ಕಾರಿದರು.

ಆಳುವ ಪಕ್ಷಗಳು, ಕಾರ್ಪೊರೆಟ್ ಕಂಪನಿಗಳ ಸ್ವಾರ್ಥಗಳನ್ನೊಳಗೊಂಡ ಬಣ್ಣದ ಮಾತುಗಳಿಗೆ ಮಾರು ಹೋಗಿ, ಬದುಕಿನ ನೈಜ ಸ್ಥಿತಿಯನ್ನು ಮರೆಯುವ ಮುಗ್ಧ ಜನರ ಬಗ್ಗೆ ಮಮ್ಮಲ ಮರುಗಿದರು.

ಮೇಳದಲ್ಲಿ ಪುಸ್ತಕ ಮಾರಾಟವೂ ಜೋರಾಗಿತ್ತು. ಸುಮಾರು 11ಕ್ಕೂ ಹೆಚ್ಚು ಮಳಿಗೆಗಳಲ್ಲಿ ಎರಡು ದಿನಗಳಲ್ಲಿ ಸಾವಿರಾರು ಪುಸ್ತಕಗಳು ಓದುಗರ ಕೈಸೇರಿದವು.

Advertisement

ಕುಂಚದಲ್ಲಿ ಮೂಡಿ ಮನವ ಅರಳಿಸಿದ ಕಲಾಕೃತಿಗಳು..:

ಚಿತ್ರಕಲಾ ಪ್ರದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರ ಕುಂಚದಲ್ಲಿ ಅರಳಿದ ಕಲಾಕೃತಿಗಳು ‘ಭಾರತದ ಅಭಿವೃದ್ಧಿ’ ಹಿಂದಿನ ಕಥೆಗಳಿಗೆ ಬಣ್ಣದ ಮೂಲಕ ಜೀವ ತುಂಬಿದವು. ಬಂಧಿಯಾಗಿರುವ ಭಾರತಾಂಬೆ, ಹಳ್ಳಿಯ ಹೆಣ್ಣು ಮಗಳು ಅಕ್ಷರಕ್ಕಾಗಿ ಭವಿಷ್ಯದತ್ತ ದೃಷ್ಟಿ ನೆಟ್ಟಿರುವುದು, ಭಾರತದ ನಕಾಶೆಯಲ್ಲಿ ಜಾತಿ ಕಲ್ಮಶಗಳು ಹರಡಿರುವ ಚಿತ್ರಗಳು ಮನಸ್ಸನ್ನು ಸೆಳೆದವು. ಗದುಗಿನ ಶಿವರಾಜ ಕಮ್ಮಾರ ಬಿಡಿಸಿದ ಚಿತ್ರದಲ್ಲಿ ನ್ಯಾಯದೇವತೆಯೊಂದಿಗೆ ಭಾರತಮಾತೆಯೂ ಬಂಧನದ ಸಂಕೋಲೆಯಲ್ಲಿರುವಂತೆ ಬಿಂಬಿಸಿರುವುದು ನೋಡುಗರ ಗಮನ ಸೆಳೆಯುತ್ತಿತ್ತು.

ಕೊಪ್ಪಳದ ಸಂತೋಷ್‌ ಚಿತ್ರಿಸಿದ ಚಿತ್ರ ಕುರ್ಚಿಗಾಗಿ ನಡೆಯುವ ಪೈಪೋಟಿಯೇ ಅಭಿವೃದ್ಧಿಯಾ? ಎಂದು ಪ್ರಶ್ನಿಸುವಂತಿತ್ತು. ಮೂಲಸೌಕರ್ಯಗಳಿಲ್ಲ ದೆ ನಿಟ್ಟುಸಿರು ಬಿಡುತ್ತಿರುವ ಗ್ರಾಮೀಣ ಮಹಿಳೆ ಒಳ್ಳೆಯ ನಾಳೆಗಳಿಗಾಗಿ ಕಾದಿರುವ ಸನ್ನಿವೇಶವನ್ನು ಗದಗಿನ ಡಾ| ಲಕ್ಷ್ಮೀದೇವಿ ಗವಾಯಿ ಅವರು ಚಿತ್ರಿಸಿದ್ದರು. ಭೂಮಿಯನ್ನೇ ಖರೀದಿಸಲು ಹೊರಟ ಬಂಡವಾಳಶಾಹಿಗಳ ಹುನ್ನಾರವನ್ನು ಬಾದಾಮಿಯ ವೀರಣ್ಣ ಕರಡಿ ತೆರೆದಿಟ್ಟರೆ, ಜಾತಿ ವ್ಯವಸ್ಥೆ ಕುರಿತು ಕಲಬುರ್ಗಿಯ ಸೂರ್ಯಕಾಂತ ನಂದೂರು ಅವರ ಚಿತ್ರ ಗಮನ ಸೆಳೆಯಿತು.

ಕ್ಯಾಮರಾದಲ್ಲಿ ಸೆರೆಯಾದ ಬದುಕಿನ ಬವಣೆಯ ನೋಟ:

ಸಾಹಿತ್ಯ ಮೇಳದ ಅಂಗವಾಗಿ ನಡೆದ ಛಾಯಾಚಿತ್ರ ಪ್ರದರ್ಶನವೂ ಗಮನ ಸೆಳೆಯಿತು. ಗ್ರಾಮೀಣ ಕಲೆ, ಸಂಸ್ಕೃತಿ, ಸೊಬಗು ಬಿಂಬಿಸುವ ನೂರಾರು ಚಿತ್ರಗಳು ಪ್ರದರ್ಶನಗೊಂಡವು. ಛಾಯಾಗ್ರಾಹಕ ರಾಮು ವಗ್ಗಿ, ಮುತ್ತು ಹಾಳಕೇರಿ, ವೀರಪ್ಪ ತಾಳದವರ ಅವರು ವಿವಿಧೆಡೆ ಕ್ಯಾಮರಾದಲ್ಲಿ ಸೆರೆ ಹಿಡಿದ ಸುಮಾರು 150ಕ್ಕೂ ಹೆಚ್ಚು ಛಾಯಾ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ತುತ್ತಿನ ಚೀಲ ತುಂಬಿಸಿಕೊಳ್ಳಲು ಚಿಂದಿ ಆಯುವ ಬಾಲಕಿ, ಬರಗಾಲದಲ್ಲಿ ಜನ, ಜಾನುವಾರುಗಳ ಪಡಿಪಾಟಿಲು, ತಿಪ್ಪೆಯಲ್ಲಿ ಸತ್ತು ಬಿದ್ದಿರುವ ದನದ ಮಾಂಸವನ್ನು ಸಂಗ್ರಹಿಸುತ್ತಿರುವ ಮಕ್ಕಳ ಛಾಯಾಚಿತ್ರಗಳು ಗ್ರಾಮೀಣ ಮತ್ತು ದಲಿತರ ಜೀವನದ ದಯನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತಿದ್ದವು.

ಕಪ್ಪತಗುಡ್ಡದ ಸೊಬಗು, ಪೋಸ್ಕೊ ಹೋರಾಟದಲ್ಲಿ ಭಾಗವಹಿಸಿದ್ದ ಮೇಧಾ ಪಾಟ್ಕರ್‌, ಕೃಷಿ ಜಮೀನಿನ ಫಲವತ್ತಾದ ಮಣ್ಣಿನ ಮಹತ್ವ ತಿಳಿಸುವ ಅಜ್ಜಿ, ಅಲೆಮಾರಿಗಳ ಬದುಕು, ರೈತರ ಕೃಷಿ ಚಟುವಟಿಕೆ, ಗ್ರಾಮೀಣ ಜನಪದ ಕಲೆಗಳ ದೃಶ್ಯ ವೈಭವ, ದೀಪಾಲಂಕಾರದಲ್ಲಿ ಕಂಗೊಳಿಸುತ್ತಿರುವ ಭೀಷ್ಮಕೆರೆ ಮತ್ತು ಬಸವಣ್ಣನ ಮೂರ್ತಿ, ಜಿಲ್ಲಾಡಳಿತ ಭವನದ ವೈಭವವನ್ನು ಚಿತ್ರಗಳು ಸಾರಿದವು.

Advertisement

Udayavani is now on Telegram. Click here to join our channel and stay updated with the latest news.

Next