Advertisement

“ಕನ್ನಡದ ಕ್ರಾಂತಿ ಮಾಡಿದ ಸಂಸ್ಥೆ ಚಿಣ್ಣರ ಬಿಂಬ”

11:25 AM Apr 25, 2021 | Team Udayavani |

ಮುಂಬಯಿ: ಚಿಣ್ಣರಬಿಂಬ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಇರುವ ಒಂದು ಅಪೂರ್ವವಾದ ಸಂಸ್ಥೆ. ಮುಂಬಯಿಯಲ್ಲಿ ಕನ್ನಡದ ಕ್ರಾಂತಿಯನ್ನು ಮಾಡಿದ ಸಂಸ್ಥೆ ಇದು. ನಮ್ಮ ಭಾಷೆ, ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸ ಇವೆಲ್ಲವನ್ನೂ ಮುಂದಿನ ತಲೆಮಾರಿಗೆ ದಾಟಿಸುವ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತು ಒಂದು ಆಶಾಕಿರಣವಾಗಿ ನಮ್ಮ ನಡುವೆ ಬೆಳಗುತ್ತಿರುವ ಸಂಸ್ಥೆ ಎನ್ನಲು ಅಭಿಮಾನವೆನಿಸುತ್ತದೆ. ಪ್ರಕಾಶ್‌ ಭಂಡಾರಿ ಅವರ ಭಗೀರಥ ಪ್ರಯತ್ನದ ಫಲ ಇದು. ಇಲ್ಲಿ ಶಿಕ್ಷಕರು ಅತ್ಯಂತ ಪ್ರೀತಿಯಿಂದ ಕನ್ನಡದ ದೀಕ್ಷೆಯನ್ನು ಮಕ್ಕಳಿಗೆ ನೀಡುತ್ತಿದ್ದಾರೆ. ಇಂದು ಒಂದು ವಿಧದಲ್ಲಿ ನಾಲ್ಕನೇ ವರ್ಷದ ಮಕ್ಕಳ ಘಟಿಕೋತ್ಸವ ಎನ್ನಬಹುದು. ಮಕ್ಕಳ ನಿರೂಪಣೆ, ಅವರು ನಡೆಸಿಕೊಟ್ಟ ವೈವಿಧ್ಯಮಯ ಕಾರ್ಯಕ್ರಮಗಳು ಮನಮುಟ್ಟುವಂತಿತ್ತು. ಈ ಸಂಸ್ಥೆ ಇನ್ನಷ್ಟು ಬೆಳೆಯಲು, ಅಲ್ಲಲ್ಲಿ ಶಿಬಿರಗಳನ್ನು ನಡೆಸಲು ಎಲ್ಲರ ಪ್ರೋತ್ಸಾಹ, ಬೆಂಬಲದ ಅಗತ್ಯವಿದೆ ಎಂದು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರು ಅಭಿಪ್ರಾಯಪಟ್ಟರು.

Advertisement

ಅವರು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಹಾಗೂ ಚಿಣ್ಣರಬಿಂಬ ಜಂಟಿಯಾಗಿ ಆಯೋಜಿಸಿದ್ದ ಚಿಣ್ಣರಬಿಂಬದ ಮಕ್ಕಳ ಹಾಗೂ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವಿದ್ವಾಂಸರಾಗಿ ಪಾಲ್ಗೊಂಡು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೆಸರಾಂತ ನಾಟಕಕಾರರಾದ ಡಾ| ಮಂಜುನಾಥ ಅವರು ಮಾತನಾಡಿ, ಎಲ್ಲರನ್ನೂ ನಮ್ಮದಾಗಿಸಿಕೊಳ್ಳುವ ನಡತೆಯೇ ನಿಜವಾದ ಅರ್ಥದಲ್ಲಿ ಕನ್ನಡ. ಪಾಠದ ಜತೆಯಲ್ಲಿ ಮಕ್ಕಳಿಗೆ ಹಾಡು, ನಟನೆ ಕಲಿಸಿದಾಗ ಹೆಚ್ಚು ಅರ್ಥವಾಗುತ್ತದೆ ಎಂದು ಭಾವಾಭಿನಯದೊಂದಿಗೆ ಮಕ್ಕಳಿಗೆ, ಶಿಕ್ಷಕರಿಗೆ ಕಲಿಯುವ ಹಾಗೂ ಕಲಿಸುವ ರೀತಿಯನ್ನು ತಿಳಿಸಿದರು.

ಮೈಸೂರು ಅಸೋಸಿಯೇಶನ್‌ನ ಟ್ರಸ್ಟಿಗಳಾದ ಕೆ. ಮಂಜುನಾಥಯ್ಯ ಅವರು ಮಾತನಾಡಿ, ಚಿಣ್ಣರ ಬಿಂಬ ಸಂಸ್ಥೆಯ ಮಕ್ಕಳ ಸೊಗಸಾದ ಕನ್ನಡ ಕೇಳಿ ಆನಂದವಾಗಿದೆ. ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಪ್ರಕಾಶ್‌ ಭಂಡಾರಿ ಅವರು ಮುಂಬಯಿಯನ್ನು ಕನ್ನಡದ ಹೆಮ್ಮೆ ಎನ್ನುವ ಮಟ್ಟಿಗೆ ಬೆಳೆಸುತ್ತಿದ್ದಾರೆ. ಚಿಣ್ಣರ ಬಿಂಬದ ಈ ಮಕ್ಕಳ ಮೂಲಕ ನಾಡು, ನುಡಿಯ ಸೊಗಡನ್ನು ಪಸರಿಸುತ್ತಿದ್ದಾರೆ. ಇದರ ಹಿಂದೆ ಶ್ರಮಿಸುವ ಚಿಣ್ಣರಬಿಂಬದ ಸರ್ವರಿಗೂ ಅಭಿನಂದನೆಗಳು ಎಂದರು.

ಚಿಣ್ಣರಬಿಂಬದ ರೂವಾರಿಗಳಾಗಿರುವ ಪ್ರಕಾಶ್‌ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಸಂಯೋಜಕಿ, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಮಾತನಾಡಿ, ಬೇರೆ ಬೇರೆ ಶಿಬಿರಗಳಲ್ಲಿ ಆನ್‌ಲೈನ್‌ ತರಗತಿಗಳು ಯಶಸ್ವಿಯಾಗಿ ನದೆದುಕೊಂಡು ಬರುತ್ತಿದೆ. ಎಲ್ಲ ಶಿಕ್ಷಕರು ಪರಿಶ್ರಮದಿಂದ ಈ ತರಗತಿಗಳನ್ನು ತಪ್ಪದೇ ನಡೆಸಿಕೊಂಡು ಬರುತ್ತಿದ್ದಾರೆ. ಈ ವರ್ಷ ನಾಲ್ಕನೇ ವರ್ಷದ ಮಕ್ಕಳಿಗೆ ಕಲಿಸುವ ಅವಕಾಶ ದೊರೆತಿರುವುದು ತುಂಬಾ ಖುಷಿ ನೀಡಿದೆ ಎಂದರು.

Advertisement

ಚಿಣ್ಣರ ಬಿಂಬದ ಶಿಕ್ಷಕರಾದ ಅನಿತಾ ಶೆಟ್ಟಿ, ಕುಮುದಾ ಅಳ್ವ, ಸುರೇಖಾ ಮೊಲಿ, ಮಲ್ಲಿಕಾ ಶೆಟ್ಟಿ, ಸುಮಿತ್ರಾ ದೇವಾಡಿಗ, ಪವಿತ್ರಾ ದೇವಾಡಿಗ, ಶಶಿಕಲಾ ಕೋಟ್ಯಾನ್‌, ಸುಲೋಚನಾ ಶೆಟ್ಟಿ, ಚಿಣ್ಣರ ಬಿಂಬದ ಕೇಂದ್ರ ಸಮಿತಿಯ ಗೀತಾ ಹೇರಳ, ಸಂಗೀತಾ ಶೆಟ್ಟಿಗಾರ್‌, ರವಿ ಹೆಗ್ಡೆ, ಶೋಭಾ ಶೆಟ್ಟಿ, ಹಾಗೂ ಪಾಲಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಚಿಣ್ಣರಬಿಂಬದ ಚಿಣ್ಣರಾದ ನಿಹಾಲ್‌ ಪೂಜಾರಿ, ರಚನಾ ಶೆಟ್ಟಿ, ಆಶ್ನಾ ಶೆಟ್ಟಿ, ಸುಶ್ಯಾಮ್ಯ ರಾವ್‌, ಗಗನ್‌ ಮೂಲ್ಯ, ವಂಶಿ ಶೆಟ್ಟಿ, ಪ್ರೇರಣಾ ನಾಯಕ್‌, ಸರ್ವೇಶ್‌ ಕೊಠಾರಿ, ಪ್ರಥಮ್‌ ಬಲ್ಲಾಳ್‌, ರಕ್ಷಿತ್‌ ಶೆಟ್ಟಿ, ಆರಾಧ್ಯ ಆಚಾರ್‌, ಸೃಷ್ಟಿ ಶೆಟ್ಟಿ, ಶ್ಲೋಕ ಸಾಲ್ಯಾನ್‌, ಚೈತನ್ಯ ಶೆಟ್ಟಿ, ಅನೀಶ್‌ ಶೆಟ್ಟಿ, ರಾಹುಲ್‌ ಪೂಜಾರಿ, ಗೆಹನಾ ಶೆಟ್ಟಿ, ಶ್ರೀನಿಧಿ ಶೆಟ್ಟಿ, ದರ್ಶಿನಿ ಕಾಂಚನ್‌, ವಿನೀಶಾ ಶೆಟ್ಟಿ, ನಿನಾದ್‌ ಶೆಟ್ಟಿ, ವಿವೇಕ್‌ ಶೆಟ್ಟಿ, ಖುಷಿ ಮೊಗವೀರ, ಆದಿತ್ಯ ಪೂಜಾರಿ, ರಕ್ಷಿತ್‌ ಶೆಟ್ಟಿ, ಶ್ರೀನಿಧಿ ಶೆಟ್ಟಿ, ತನ್ವಿ ಶೆಟ್ಟಿ, ಶ್ಲೋಕ ಸಾಲ್ಯಾನ್‌, ಸಾಗರ್‌ ಪೂಜಾರಿ, ಜೀವಿಕಾ ಶೆಟ್ಟಿ, ವಿನೀತ ಶೆಟ್ಟಿ ಮೊದಲಾದವರು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ನೀಡಿದರು. ವಂಶಿ ಶೆಟ್ಟಿ, ಗ್ರೀಷ್ಮಾ ಪ್ರಭು ಮತ್ತು ಆಶ್ನಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಜೀವಿಕಾ ಶೆಟ್ಟಿ ಹಾಗೂ ವಿನೀತ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಚಿಣ್ಣರಬಿಂಬ ಸಂಸ್ಥೆ ಹಂತ ಹಂತವಾಗಿ ಬೆಳೆದು ಬಂದಿದೆ. ಇದು ಬೃಹತ್‌ ಮರವಾಗಿ ಬೆಳೆಯಲು ಇದರ ಹಿಂದೆ ಅದೆಷ್ಟೋ ಜನರ ಪರಿಶ್ರಮವಿದೆ. ಇನ್ನೂ ಹೊಸ ಶಿಬಿರ ಆರಂಭಿಸಬೇಕೆಂದು ತುಳು ಕನ್ನಡಿಗರ ಬೇಡಿಕೆ ಇದೆ. ಆದರೆ ಎಲ್ಲ ಕಡೆಗಳಲ್ಲಿ ಶಿಬಿರ ನಡೆಸುವುದು ಅಷ್ಟು ಸುಲಭವಲ್ಲ. ಕೋವಿಡ್‌ ಸಮಸ್ಯೆಯಿಂದಾಗಿ ಯಾವುದೇ ಸ್ಪರ್ಧೆಯಾಗಲಿ, ವಾರ್ಷಿಕೋತ್ಸವವಾಗಲಿ ಮಾಡಲಾಗದಿದ್ದರೂ ನಮ್ಮ ಕನ್ನಡ ಕಲಿಕಾ ತರಗತಿ, ಭಜನ ತರಗತಿಗಳು ನಿರಂತರವಾಗಿ ನಡೆಯುತ್ತಿದೆ. ನಮ್ಮ ಮಕ್ಕಳು ಪ್ರತಿಭಾವಂತರು. ಅಭಿನಯ ಚತುರರು. ಅವರಿಗೆ ಮತ್ತಷ್ಟು ತರಬೇತಿ ಕೊಡುವ ಆಲೋಚನೆಯಿದೆ. ನಮಗೆ ತರಗತಿ ನೀಡಲು ತುಂಬಾ ಜನ ಸ್ಥಳಾವಕಾಶವನ್ನು ನೀಡಿ ಸಹಕರಿಸಿದ್ದಾರೆ. ಅವರೆಲ್ಲರನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ.
-ಪ್ರಕಾಶ್‌ ಭಂಡಾರಿ, ಪ್ರಮುಖ ರೂವಾರಿ, ಚಿಣ್ಣರ ಬಿಂಬ ಮುಂಬಯಿ

 

Advertisement

Udayavani is now on Telegram. Click here to join our channel and stay updated with the latest news.

Next