Advertisement

ಡಾ. ರಾಜ್ ಕುಮಾರ್ ಅಭಿನಯದ ಜನಪ್ರಿಯ ಹಾಡನ್ನು ಬಜೆಟ್ ನಲ್ಲಿ ಉಲ್ಲೇಖಿಸಿದ ಸಿಎಂ

02:16 PM Feb 16, 2024 | Team Udayavani |

ವಿಧಾನಸಭೆ: ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಸುದೀರ್ಘ ಬಜೆಟ್ ಮಂಡನೆ ಮಾಡಿದ್ದು, ಡಾ. ರಾಜ್ ಕುಮಾರ್ ಅಭಿನಯದ ”ಬಂಗಾರದ ಮನುಷ್ಯ” ಚಿತ್ರದ ಆರ್. ಎನ್. ಜಯಗೋಪಾಲ್ ಅವರು ರಚಿಸಿದ ‘ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ, ಮನಸೊಂದಿದ್ದರೆ ಮಾರ್ಗವು ಉಂಟು, ಕೆಚ್ಚೆದೆ ಇರಬೇಕೆಂದು ” ಎಂಬ ಹಾಡನ್ನು ಬಜೆಟ್ ನಲ್ಲಿ ಉಲ್ಲೇಖಿಸಿ ಮಂಡನೆ ಆರಂಭಿಸಿದರು.

Advertisement

ದೇಶದ ಯಾವುದೇ ಸರಕಾರ ಜಾರಿಗೊಳಿಸದ ಅತ್ಯಂತ ಬೃಹತ್ ಪ್ರಮಾಣದ ನೇರ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿದ ಶ್ರೇಯ ನಮ್ಮ ದಾಗಿದೆ. ನಮ್ಮ ಮಹತ್ವಾಕಾಂಕ್ಷೆಯ ಗ್ಯಾರಂಟಿಗಳು ಜನರ ಆಶೋತ್ತರಗಳನ್ನು ಆಧರಿಸಿವೆ ಎಂದರು.

ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ವಾಸದ ಭಾದ್ರತೆಗಾಗಿ ವಿವಿಧ ಜನಕೇಂದ್ರಿತ ಯೋಜನೆಗಳು ಹಾಗೂ ಕಾನೂನುಗಳನ್ನು ರೂಪಿಸಿ ಬಡಜನರಿಗೆ ನ್ಯಾಯ ಒದಗಿಸುವ ಕಾರ್ಯ ಕೈಗೊಂಡಿತ್ತು, ಆದರೆ ಹಿಂದಿನ 10 ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರ ಜನವಿರೋಧಿ ನೀತಿಯಿಂದಾಗಿ ಅಸಮಾನತೆ ಹೆಚ್ಚಳ ಕೆಲವೇ ಜನರ ಬಳಿ ಸಂಪತ್ತಿನ ಶೇಖರಣೆ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಹೆಚ್ಚುತ್ತಿರುವ ಪ್ರಭಾವ ಮುಂತಾದ ಅನಪೇಕ್ಷಿತ ಬೆಳವಣಿಗಳಿಗೆ ಎಡೆ ಮಾಡಿದೆ ಎಂದು ಕೇಂದ್ರ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡ ಕೇಂದ್ರ ಸರಕಾರ ಮಾಡದ ಕೆಲಸವನ್ನು ನಾವು ಕೈಗೆತ್ತಿಕೊಂಡಿದ್ದು ನಮ್ಮ ಗ್ಯಾರಂಟಿಗಳು ಚುನಾವಣ ಗಿಮಿಕ್ ಅಲ್ಲ. ವಿರೋಧಿಗಳು ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯವೆಂದು ಬಣ್ಣಿಸಿ ರಾಜ್ಯ ದಿವಾಳಿಯಾಗಿದೆ, ಬೊಕ್ಕಸದಲ್ಲಿ ಹಣವಿಲ್ಲ ಎಂದು ಸುಳ್ಳು ಸುದ್ದಿ ಹರಡಿ ನಮ್ಮ ಸ್ಥೈರ್ಯ ಕುಸಿಯುವ ಕೆಲಸ ಮಾಡುತ್ತಿವೆ ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸಲಾಗದೆ,ತಮ್ಮ ಹುಳುಕು ಮುಚ್ಚಿ ಹಾಕಲು ಇಂತಹ ಟೀಕೆ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ಕದ್ದು ಅವರ ಗ್ಯಾರಂಟಿಗಳೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಅವರ ‘ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ, ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ, ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು, ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ” ಎನ್ನುವ ವಚನದ ಸಾಲುಗಳನ್ನು ಬಜೆಟ್ ನಲ್ಲಿ ಓದಿ ಬಿಜೆಪಿಗೆ ಟಾಂಗ್ ನೀಡಿದರು.

Advertisement

”ಸರ್ವೋದಯ ದೃಷ್ಟಿ ಮತ್ತು ಸಮನ್ವಯ ದೃಷ್ಟಿ ಎಲ್ಲೆಲ್ಲೂ ತಾಂಡವವಾಡಬೇಕು” ಎಂಬ ಕುವೆಂಪು ಅವರ ನುಡಿ ತೋರಣದಿಂದ ಆಯ್ದ ಸಾಲನ್ನು ಓದಿದರು.

Advertisement

Udayavani is now on Telegram. Click here to join our channel and stay updated with the latest news.

Next