Advertisement

ಉಗ್ರವಾದದಿಂದ ಸ್ವಾತಂತ್ರ್ಯ ಬಯಸಿದ ಜಮ್ಮು-ಕಾಶ್ಮೀರದ ಜನತೆ

10:31 PM Aug 05, 2019 | Lakshmi GovindaRaj |

1954ರಲ್ಲಿ ನಮ್ಮ ಸಂವಿಧಾನದಲ್ಲಿ ರಾಷ್ಟ್ರಪತಿ ಅಧಿಸೂಚನೆಯ ಮೂಲಕ ಆರ್ಟಿಕಲ್ 35ಎ ಅನ್ನು ಸೇರಿಸಲಾಯಿತು. ಇದು ಅತ್ತ ಸಂವಿಧಾನ ಸಭೆಯು ರೂಪಿಸಿದ ಮೂಲ ಸಂವಿಧಾನದ ಭಾಗವೂ ಆಗಿರಲಿಲ್ಲ, ಇತ್ತ ಆರ್ಟಿಕಲ್ 368ರ ಅಡಿಯ ಸಾಂವಿಧಾನಿಕ ತಿದ್ದುಪಡಿಯೂ ಆಗಿರಲಿಲ್ಲ(ಅಂದರೆ, ಸಂಸತ್ತಿನ ಎರಡೂ ಮನೆಗಳಿಂದ ಮೂರನೇ ಎರಡರಷ್ಟು ಅನುಮೋದನೆಯನ್ನು ಪಡೆಯಲಿಲ್ಲ). ಆರ್ಟಿಕಲ್ 35ಎ, ಜನರ ನಡುವೆಯೇ ತಾರತಮ್ಯ ಸೃಷ್ಟಿಯಾಗುವಂತೆ ರೂಪಿತವಾಯಿತು. ಒಂದೇ ರಾಜ್ಯದಲ್ಲೇ ವಾಸಿಸುವ ಶಾಶ್ವತ ನಿವಾಸಿಗಳು ಮತ್ತು ಇತರರ ನಡುವಿನ ತಾರತಮ್ಯವಷ್ಟೇ ಅಲ್ಲ, ಕಾಶ್ಮೀರಿಗಳು ಮತ್ತು ಇತರೆ ರಾಜ್ಯಗಳ ನಾಗರಿಕರ ನಡುವೆಯೂ ಸಹ. ಜಮ್ಮು ಕಾಶ್ಮೀರದಲ್ಲಿನ ಲಕ್ಷಾಂತರ ಭಾರತೀಯ ನಾಗರಿಕರಿಗೆ ಕೇವಲ ಲೋಕಸಭಾ ಚುನಾವಣೆಯಲ್ಲಿ ಮತ ನೀಡುವ ಅಧಿಕಾರವಿದೆಯೇ ಹೊರತು, ವಿಧಾನಸಭೆ, ನಗರಸಭೆ ಅಥವಾ ಪಂಚಾಯಿತಿ ಚುನಾವಣೆಗಳಲ್ಲಿ ಅಲ್ಲ. ಭಾರತೀಯ ನಾಗರಿಕರಿಗೆ ಸರ್ಕಾರಿ ನೌಕರಿ ಸಿಗುವಂತಿಲ್ಲ, ಸ್ಥಿರಾಸ್ತಿ ಹೊಂದುವಂತಿಲ್ಲ ಮತ್ತು ಅವರ ಮಕ್ಕಳು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಓದುವಂತಿಲ್ಲ ಎಂಬ ನಿಬಂಧನೆಗಳು 35ಎ ಒಡಲಲ್ಲಿವೆ.

Advertisement

ಆರ್ಟಿಕಲ್ 35ಎ ಜಮ್ಮು-ಕಾಶ್ಮೀರ ಜನರಿಗೆ ಹಾನಿ ಮಾಡಿದ್ದು ಹೇಗೆ?: ಮೊದಲನೆಯದಾಗಿ ಈ ಪ್ರದೇಶಗಳಲ್ಲಿ ಸಾಕಷ್ಟು ಆರ್ಥಿಕ ಸಂಪನ್ಮೂಲಗಳು ಇಲ್ಲ. ಯಾವ ಉದ್ಯಮಿಗಳೂ, ಹೊಟೆಲ್‌ಗಳೂ, ಖಾಸಗಿ ಶಿಕ್ಷಣ ಸಂಸ್ಥೆಗಳೂ ಅಥವಾ ಖಾಸಗಿ ಆಸ್ಪತ್ರೆಗಳಿಗೂ ಕೂಡ ಜಾಗ ಅಥವಾ ಸ್ಥಿರಾಸ್ತಿ ಖರೀದಿಸಲು ಸಾಧ್ಯವಿರದಿದ್ದರಿಂದ ಎಲ್ಲರೂ ಜಮ್ಮು-ಕಾಶ್ಮೀರದಿಂದ ದೂರವೇ ಉಳಿದುಬಿಟ್ಟರು. ಪ್ರವಾಸಿ ಕ್ಷೇತ್ರವಾಗಿರುವ ಈ ಪ್ರದೇಶದಲ್ಲಿ ಇಂದು ಒಂದೇ ಒಂದು ಬೃಹತ್‌ಮಟ್ಟದ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಯೂ ತನ್ನ ಹೋಟೆಲ್ ಅನ್ನು ಸ್ಥಾಪಿಸಿಲ್ಲ. ಇದರಿಂದಾಗಿ ಉದ್ಯೋಗ ಮತ್ತು ಸಂಪನ್ಮೂಲ ಸೃಷ್ಟಿಗೆ ಪೆಟ್ಟು ಬಿದ್ದಿದೆ. ವಿದ್ಯಾರ್ಥಿಗಳು ಇಂಜಿನಿಯರಿಂಗ್ ಅಡ್ಮಿಷನ್ ಪಡೆಯಲು ಭಾರತದ ಉಳಿದ ರಾಜ್ಯಗಳಷ್ಟೇ ಅಲ್ಲದೇ, ನೇಪಾಳ ಮತ್ತು ಬಾಂಗ್ಲಾದೇಶಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಪರಿಚ್ಛೇದದಿಂದಾಗಿಯೇ.

ಇನ್ನು ಹೊರ ರಾಜ್ಯಗಳ ವೈದ್ಯರು- ಪ್ರೊಫೆಸರ್‌ಗಳು ಈ ಪ್ರದೇಶಗಳಲ್ಲಿ ಕೆಲಸ ಮಾಡಲು ಹಿಂಜರಿಯುವ ಕಾರಣಕ್ಕಾಾಗಿ ಆಸ್ಪತ್ರೆಗಳು, ಅದರಲ್ಲೂ ಕೇಂದ್ರ ಸರ್ಕಾರದಿಂದ ಜಮ್ಮುವಿನಲ್ಲಿ ಸ್ಥಾಪಿಸಲ್ಪಟ್ಟ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸದ್ಬಳಕೆ ಆಗಿಯೇ ಇಲ್ಲ. ಅನೇಕರು ಆರ್ಟಿಕಲ್ 35ಎ ಅನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಾ ಬಂದರೆ, ಪೆಟ್ಟು ತಿಂದವರು ಮಾತ್ರ ಸಾಮಾನ್ಯ ನಾಗರಿಕರು. ಇದು ಸದೃಢ ಆರ್ಥಿಕತೆಯಿಂದ, ಆರ್ಥಿಕ ಚಟುವಟಿಕೆಗಳಿಂದ ಮತ್ತು ಉದ್ಯೋಗಗಳಿಂದ ಅವರನ್ನು ವಂಚಿತರನ್ನಾಾಗಿಸಲು ಕಾರಣವಾಯಿತು.

ಮುಖ್ಯವಾಹಿನಿ ಪಕ್ಷಗಳ ಮೇಲಿನ ನಿರಾಸೆ: ನಮ್ಮ ನಮ್ಮ ನಡುವೆ ಎಷ್ಟೇ ರಾಜಕೀಯ ಭಿನ್ನತೆ ಇದ್ದರೂ, ‘ಕಾಶ್ಮೀರ ಕಣಿವೆಯಲ್ಲಿ ಮುಖ್ಯವಾಹಿನಿ ಪಕ್ಷಗಳಿಗೆ ಹೆಚ್ಚು ಜಾಗ ಸಿಗಬೇಕು, ಆಗಮಾತ್ರ ಪ್ರತ್ಯೇಕತಾವಾದಿಗಳಿಗೆ ಜಾಗ ಕಡಿಮೆಯಾಗುತ್ತದೆ’ ಎಂದು ಕೇಂದ್ರ ಸರ್ಕಾರ ಬಯಸುತ್ತಾಾ ಬಂದಿದೆ. ಜಮ್ಮು-ಕಾಶ್ಮೀರದಲ್ಲಿ ಸ್ವಾಾತಂತ್ರ್ಯಾನಂತರದಿಂದಲೂ ಮೂರು ಪಕ್ಷಗಳು ಹೆಚ್ಚು ಅಧಿಪತ್ಯ ಸಾಧಿಸುತ್ತಾ ಬಂದಿವೆ. ಅವುಗಳಲ್ಲಿ ಎರಡು ಶ್ರೀನಗರದ ಮೂಲದವಾದರೆ, ಇನ್ನೊಂದು ದೆಹಲಿಯಲ್ಲಿ ಇದೆ. ದುರದೃಷ್ಟವಶಾತ್ ಈ ಪಕ್ಷಗಳು ಜಮ್ಮು-ಕಾಶ್ಮೀರದ ಜನತೆಯ ಕೈಬಿಟ್ಟಿವೆ. ಇವು ಉಗ್ರವಾದವನ್ನು ಖಂಡಿಸುವುದಕ್ಕೂ ಕೂಡ ಕೆಲ ‘ಷರತ್ತು’ಗಳನ್ನು ಅನ್ವಯಿಸುತ್ತಾ ಬಂದಿವೆ! ಇವುಗಳು ಪ್ರತ್ಯೇಕತಾವಾದದಿಂದ ಸಂಪೂರ್ಣ ಅಂತರ ಕಾಯ್ದುಕೊಂಡಾಗ ಮಾತ್ರ ಪರ್ಯಾಯ ರಾಜಕೀಯ ಜಾಗ ಹುಟ್ಟಿಕೊಳ್ಳುತ್ತದೆ. ಪ್ರತ್ಯೇಕತಾವಾದಿಗಳನ್ನು ಟೀಕಿಸುವಾಗ ಮೃದು ಧೋರಣೆ ತೋರುವುದು ಸರಿಯಲ್ಲ. ಇಡೀ ರಾಷ್ಟ್ರಕ್ಕೆ ಅನ್ವಯವಾಗುವ ಕಾನೂನುಗಳು ಒಂದು ಪ್ರದೇಶಕ್ಕೇಕೆ ಅನ್ವಯವಾಗಬಾರದು? ಹಿಂಸಾಚಾರ, ಪ್ರತ್ಯೇಕತಾವಾದ, ಕಲ್ಲುತೂರಾಟ, ವಿಷಕಾರಿ ಸೈದ್ಧಾಂತಿಕ ಬೋಧನೆಗಳು ಮುಂದುವರಿಯಲು ಬಿಡಬೇಕೇನು?

ಪ್ರಸಕ್ತ ಸ್ಥಿತಿ ಹೇಗಿದೆ?: ಜಮಾತ್-ಎ-ಇಸ್ಲಾಮಿ ಸಂಘಟನೆಯು ಸೈದ್ಧಾಂತಿಕ ಬೋಧನೆಯಲ್ಲಿ ತೊಡಗಿ, ಪ್ರತ್ಯೇಕತಾವಾದಕ್ಕೆ ಮಾನವಶಕ್ತಿ ಸಂಪನ್ಮೂಲವನ್ನು ಪೂರೈಸುತ್ತಿತ್ತು. ಇದು ಕಣಿವೆ ಪ್ರದೇಶವನ್ನು ‘ಪ್ರಗತಿಪರ ಸೂಫಿಸಂ’ನ ನೆಲದಿಂದ, ‘ಕಟ್ಟರ್‌ಪಂಥೀಯ ವಹಾಬಿ’ ನೆಲೆಯಾಗಿ ಪರಿವರ್ತಿಸಿತು. ಈಗ ಈ ಸಂಘಟನೆಯನ್ನು ನಿಷೇಧಿಸಲಾಗಿದೆ. ಇದರ ನೂರಾರು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದರ ಕಚೇರಿಗಳಿಗೆ ಬೀಗ ಜಡಿಯಲಾಗಿದೆ, ಇದರ ಚಟುವಟಿಕೆಯನ್ನು ಗಮನಾರ್ಹವಾಗಿ ಹತ್ತಿಕ್ಕಲಾಗಿದೆ. ಇನ್ನು ಭೂಗತವಾಗಿ ಕಾರ್ಯನಿರ್ವಹಿಸುತ್ತಿದ್ದ ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ ಅನ್ನೂ ನಿಷೇಧಿಸಲಾಗಿದೆ. ಅದರ ಅನೇಕ ಜನರನ್ನು ಬಂಧಿಸಲಾಗಿದೆ. ಪ್ರತ್ಯೇಕತಾವಾದಿಗಳು ಮತ್ತು ಹುರಿಯತ್ ನಾಯಕರು, ಮತ್ತು ಇನ್ನೂ ನೂರಾರು ಅನರ್ಹ ವ್ಯಕ್ತಿಗಳಿಗೆ ಒದಗಿಸಲಾಗುತ್ತಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ. ಭಾರತದಿಂದ ದೂರವಾಗುವ ಮಾತನಾಡುತ್ತಾ, ಭಾರತದಿಂದಲೇ ಭದ್ರತೆಯನ್ನು ಬಯಸುವವರು ಇವರು.

Advertisement

ರಾಷ್ಟ್ರೀಯ ಗುಪ್ತಚರ ಇಲಾಖೆಯು ಉಗ್ರವಾದದ ಹಣದ ಹರಿವಿಗೆ ಪೆಟ್ಟು ಕೊಟ್ಟಿದೆ. 17 ವರ್ಷಗಳ ನಂತರ ಅಲ್ಲಿ ತೆರಿಗೆ ಇಲಾಖೆಯು ಸಕ್ರಿಯವಾಗಿ, ಈಗಾಗಲೇ ರಾಷ್ಟ್ರ ವಿರೋಧಿ ಫಂಡಿಂಗ್ ಮಾಡುತ್ತಿದ್ದ ಅನೇಕ ಮೂಲಗಳನ್ನು ಪತ್ತೆಹಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ನೀಡಲಾದ 80 ಸಾವಿರ ಗನ್ ಪರವಾನಗಿಗಳನ್ನು ಸಿಬಿಐ ಪರಿಶೀಲಿಸುತ್ತಿದೆ. ಆದರೆ ಇದ್ಯಾವುದಕ್ಕೂ ತೀವ್ರ ಪ್ರತಿಭಟನೆ ವ್ಯಕ್ತವಾಗಿಲ್ಲ, ಕಲ್ಲು ತೂರಾಟಗಳು ನಡೆದಿಲ್ಲ. ಕಳೆದ ಕೆಲವು ತಿಂಗಳಲ್ಲಂತೂ ಬೃಹತ್ ಸಂಖ್ಯೆಯಲ್ಲಿ ಉಗ್ರರ ಸದ್ದಡಗಿಸಲಾಗಿದೆ. ಇಂದು ಸರ್ಕಾರಿ ಕಚೇರಿಗಳು ನಿಯಮಿತವಾಗಿ ಕಾರ್ಯನಿರ್ವಹಿಸುತ್ತಿವೆ. ಹಾಜರಾತಿ ಪ್ರಮಾಣ ಅಧಿಕವಾಗಿದೆ. ಅನೇಕ ಭ್ರಷ್ಟ ಅಧಿಕಾರಿಗಳು ಸಿಕ್ಕಿಬಿದ್ದು, ಜೈಲು ಸೇರಿದ್ದಾಾರೆ. ನೇಮಕಾತಿಗಳಲ್ಲಿ ನಡೆಯುತ್ತಿದ್ದ ಸ್ವಜನಪಕ್ಷಪಾತವನ್ನು ನಿರ್ಮೂಲನೆ ಮಾಡಲಾಗಿದೆ. ಎಸ್‌ಸಿ-ಎಸ್‌ಟಿ ಮತ್ತು ದುರ್ಬಲ ವರ್ಗಗಳ ಹಿತಚಿಂತನೆಯಿಂದ ಜಾರಿಗೆ ತರಲಾಗಿರುವ ಹಲವಾರು ಶಾಸಕಾಂಗ ಕ್ರಮಗಳನ್ನು ಜಮ್ಮು-ಕಾಶ್ಮೀರಕ್ಕೂ ವಿಸ್ತರಿಸಲಾಗಿದೆ. ಕಳೆದ ಆರು ತಿಂಗಳಲ್ಲಿ 42 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ.

ಕಳೆದ ಕೆಲವು ತಿಂಗಳಲ್ಲಿ, ಜಮ್ಮು ಮತ್ತು ಕಾಶ್ಮೀರ(ಎರಡೂ ಪ್ರದೇಶಗಳಿಗೆ) ಮಾಸ್ ರ್ಯಾಪಿಡ್ ಟ್ರಾನ್ಸಿಟ್ ಕಾರ್ಪೋರೇಷನ್ ಯೋಜನೆಯನ್ನು, ರಿಂಗ್ ರೋಡ್‌ಗಳನ್ನು, ಏಮ್ಸ್ ಸಂಸ್ಥೆಗಳನ್ನು, ಶ್ರೀನಗರದಲ್ಲಿ ಐಐಟಿ ಮತ್ತು ಜಮ್ಮುವಿನಲ್ಲಿ ಐಐಎಂ ಸ್ಥಾಪಿಸುವ ನಿಟ್ಟಿನಲ್ಲಿ ನಿರ್ಣಯಕ್ಕೆ ಬರಲಾಗಿದೆ. ಇಂದು ಜಮ್ಮು-ಕಾಶ್ಮೀರವು ಬಯಲು ಶೌಚಾಲಯ ಮುಕ್ತವಾಗಿ 100ರಷ್ಟು ನೈರ್ಮಲ್ಯ ಹೊಂದಿದೆ. ಅಲ್ಲಿನ ಪ್ರತಿಯೊಂದು ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳಲ್ಲಿ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. 50 ಹೊಸ ಕಾಲೇಜುಗಳನ್ನು ಸ್ಥಾಪಿಸಲಾಗಿದ್ದು, 232 ಶಾಲೆಗಳನ್ನು ನವೀಕರಿಸಲಾಗಿದೆ. ಪ್ರತ್ಯೇಕತಾವಾದಿಗಳು ಮತ್ತು ಉಗ್ರವಾದಿಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಜಮ್ಮು-ಕಾಶ್ಮೀರದ ಜನರು ಈ ಕ್ರಮಗಳನ್ನು ಸ್ವಾಗತಿಸುತ್ತಿದ್ದಾರೆ. ಅವರಿಗೆ ಹಿಂಸಾಚಾರ ಮತ್ತು ಉಗ್ರವಾದದಿಂದ ಸ್ವಾತಂತ್ರ್ಯ ಬೇಕಿತ್ತು. ಕಣಿವೆ ಪ್ರದೇಶದಲ್ಲಿ ಕಾನೂನನ್ನು ಸರಿಯಾಗಿ ಅನುಷ್ಠಾಾನಕ್ಕೆ ತರಲಾಗುತ್ತಿದ್ದು, ಇದು ಜನರಿಗೆ ಭದ್ರ-ಶಾಂತಿಯುತ ಜೀವನವನ್ನು ಖಾತ್ರಿಗೊಳಿಸುತ್ತಿದೆ.

(ಮಾರ್ಚ್ 28 ರಂದು ಪ್ರಕಟವಾದ ಲೇಖನದ ಆಯ್ದ ಭಾಗ)

* ಅರುಣ್ ಜೇಟ್ಲಿ, ಬಿಜೆಪಿ ಹಿರಿಯ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next