Advertisement

ಮೆಟ್ರೋ ಜತೆ ಮಾರ್ಗವೂ ಹಸಿರು!

12:41 PM Jul 04, 2018 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ರೈಲಿನ ಬಣ್ಣ ಮಾತ್ರ ಹಸಿರಲ್ಲ; ಇಡೀ ಮಾರ್ಗವೇ ಹಸಿರಿನಿಂದ ಕಂಗೊಳಿಸಲಿದೆ. ಹೌದು, ಮೆಟ್ರೋ ಹಸಿರು ಮಾರ್ಗದುದ್ದಕ್ಕೂ ಬರುವ ಕಂಬಗಳ ಮೇಲೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ವು “ವರ್ಟಿಕಲ್‌ ಗಾರ್ಡನ್‌’ ನಿರ್ಮಿಸಲು ಮುಂದಾಗಿದ್ದು, ಪ್ರತಿ ನಾಲ್ಕು ಕಂಬಗಳಿಗೊಂದು ಈ ಮಾದರಿಯ ಉದ್ಯಾನ ತಲೆಯೆತ್ತಲಿದೆ.

Advertisement

ಉದ್ಯಾನ ನಿರ್ಮಿಸದಿದ್ದರೆ ಜಾಹೀರಾತಿಗೆ ತಡೆ: ಈಗಿರುವ ಪೂರ್ವ-ಪಶ್ಚಿಮ ಕಾರಿಡಾರ್‌ನ ಮೆಟ್ರೋ ಕಂಬಗಳ ಮೇಲೆ ಬರೀ ಜಾಹೀರಾತುಗಳು ರಾರಾಜಿಸುತ್ತಿವೆ. ಆದರೆ, ಉತ್ತರ-ದಕ್ಷಿಣ ಕಾರಿಡಾರ್‌ನ ಕಂಬಗಳ ಮೇಲೆ ಜಾಹೀರಾತುಗಳ ಜತೆಗೆ ವರ್ಟಿಕಲ್‌ ಉದ್ಯಾನ ಬೆಳೆಸಲಾಗುವುದು. ಉದ್ದೇಶಿತ ಮಾರ್ಗಕ್ಕೆ ಸಂಬಂಧಿಸಿದ ಜಾಹೀರಾತುಗಳ ಟೆಂಡರ್‌ ದಾಖಲೆಗಳಲ್ಲೂ ಇದನ್ನು ಉಲ್ಲೇಖೀಸಿದ್ದು, ಗುತ್ತಿಗೆ ಪಡೆದವರಿಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಹಾಗೊಂದು ವೇಳೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ, ಜಾಹೀರಾತು ಅಳವಡಿಕೆ ಅನುಮತಿ ತಡೆಹಿಡಿಯಲಿಕ್ಕೂ ಅವಕಾಶ ಕಲ್ಪಿಸಲಾಗಿದೆ. 

ರೀಚ್‌-3 ಮತ್ತು 3ಎ (ಸಂಪಿಗೆರಸ್ತೆ-ಪೀಣ್ಯ ಕೈಗಾರಿಕಾ ಪ್ರದೇಶ) ಹಾಗೂ ರೀಚ್‌-4 (ನ್ಯಾಷನಲ್‌ ಕಾಲೇಜು-ರಾಷ್ಟ್ರೀಯ ವಿದ್ಯಾಪೀಠ)ರಲ್ಲಿ ಬರುವ ಪ್ರತಿ ನಾಲ್ಕು ಕಂಬಗಳ ಪೈಕಿ ಒಂದು ಕಂಬದಲ್ಲಿ ವರ್ಟಿಕಲ್‌ ಉದ್ಯಾನ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಕಂಬಗಳ ಮೇಲೆ ಜಾಹೀರಾತು ಅಳವಡಿಕೆಗೆ ಗುತ್ತಿಗೆ ಪಡೆಯುವವರು ಇದನ್ನು ನಿರ್ಮಿಸಲಿದ್ದಾರೆ. 

96 ಕಂಬಗಳ ಮೇಲೆ ಗಾರ್ಡನ್‌: ಅದರಂತೆ ರೀಚ್‌-3 ಮತ್ತು 3ಎನಲ್ಲಿ ಒಟ್ಟು 357 ಕಂಬಗಳು ಬರಲಿದ್ದು, ಅದರಲ್ಲಿ 62 ಕಂಬಗಳು ಮತ್ತು ರೀಚ್‌-4ರಲ್ಲಿ 192 ಕಂಬಗಳಿದ್ದು, ಆ ಪೈಕಿ 34 ಕಂಬಗಳ ಮೇಲೆ ವರ್ಟಿಕಲ್‌ ಗಾರ್ಡನ್‌ ಗಮನಸೆಳೆಯಲಿದೆ. ಇದರಿಂದ ಕಾಂಕ್ರೀಟ್‌ ಪಿಯರ್‌ (ಕಂಬ)ಗಳು ಮರೆಮಾಚುವುದರ ಜತೆಗೆ ಆಕರ್ಷಕವೂ ಆಗಲಿವೆ. ಉದ್ಯಾನ ಕಲೆಯನ್ನು ಅಭಿವೃದ್ಧಿಪಡಿಸುವುದು ಕೂಡ ಇದರ ಉದ್ದೇಶವಾಗಿದೆ. ಗುತ್ತಿಗೆ ಪಡೆದ ಪರವಾನಗಿದಾರರು ನುರಿತ ವೃತ್ತಿಗಾರರಿಂದ ಇದನ್ನು ಅಭಿವೃದ್ಧಿಪಡಿಸತಕ್ಕದ್ದು ಎಂದು ಬಿಎಂಆರ್‌ಸಿ ಸ್ಪಷ್ಟಪಡಿಸಿದೆ. 

ವರ್ಟಿಕಲ್‌ ಉದ್ಯಾನ ಬೆಳೆಸುವ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿ ಲಭ್ಯವಿದ್ದು, ಈ ಬಗ್ಗೆ ಪರವಾನಗಿದಾರರ ಗಮನಕ್ಕೆ ತರಲಾಗಿದೆ. ಈ ಕ್ರಮದಿಂದ ನಾಗರಿಕರಲ್ಲಿ ಹಸಿರೀಕರಣದ ಬಗ್ಗೆ ಒಲವು ಮೂಡಲಿದೆ. ವರ್ಟಿಕಲ್‌ ವಿನ್ಯಾಸ ಅಭಿವೃದ್ಧಿ ಮತ್ತು ನಿರ್ವಹಣೆಯಿಂದ ಪರವಾನಗಿದಾರರಿಗೆ ತಗಲುವ ವೆಚ್ಚವನ್ನು ಸಿಎಸ್‌ಆರ್‌ (ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿ) ನಿಧಿಯಿಂದ ಒದಗಿಸಲಾಗುವುದು.

Advertisement

ಗುತ್ತಿಗೆದಾರರು ವರ್ಟಿಕಲ್‌ ಉದ್ಯಾನಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ತಮ್ಮ ಪ್ರಸ್ತಾವಿತ ವಿನ್ಯಾಸ ಹಾಗೂ ವೃತ್ತಿಪರರ ನೆರವಿನ ವಿವರಗಳನ್ನು ಸಲ್ಲಿಸಬೇಕು. ಅವರ ಉದ್ದೇಶಿತ ವಿನ್ಯಾಸವು ತಾಂತ್ರಿಕ ಮೌಲ್ಯಮಾಪನದ ಭಾಗವಾಗಿಲ್ಲದಿದ್ದರೂ, ಉದ್ಯಾನದ ಅಂತಿಮ ನಿರ್ಮಾಣದ ಮಾದರಿಯನ್ನು ಪರಿಗಣಿಸಲಾಗುವುದು ಎಂದೂ ಬಿಎಂಆರ್‌ಸಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.  

ನೂತನ ಎಂಡಿ ಅಧಿಕಾರ ಸ್ವೀಕಾರ: ಬಿಎಂಆರ್‌ಸಿ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಜಯ್‌ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಶಾಂತಿನಗರದಲ್ಲಿರುವ ನಿಗಮದ ಕಚೇರಿಗೆ ಆಗಮಿಸಿದ ನೂತನ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರಿಗಳು ಅಭಿನಂದಿಸಿದರು. ನಿರ್ದೇಶಕರಾದ ಢೋಕೆ, ವಿಜಯಕುಮಾರ್‌ ಧೀರ್‌, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತರಾವ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕ್ಯಾಮರಾ ಬಳಸಲು ಆಧಾರ್‌ ಅಗತ್ಯ: ಕ್ಯಾಮರಾದೊಂದಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆ ದಾಖಲಿಸುವುದು ಕಡ್ಡಾಯ. ಪೂರ್ವಾನುಮತಿ ಇಲ್ಲದೆ, ಕ್ಯಾಮರಾ ತೆಗೆದುಕೊಂಡು ಹೋಗುವಂತಿಲ್ಲ. ಹಾಗೊಂದು ವೇಳೆ ಕ್ಯಾಮರಾದೊಂದಿಗೆ ಪ್ರಯಾಣಿಸಬೇಕಾದರೆ, ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರದಲ್ಲಿರುವ ಭದ್ರತಾ ಸಿಬ್ಬಂದಿ ಬಳಿ ಇರುವ ಪುಸ್ತಕದಲ್ಲಿ ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆ ನಮೂದಿಸುವುದು ಅತ್ಯಗತ್ಯ. 

ವಿಜಯನಗರ, ವಿಧಾನಸೌಧ, ಬೈಯಪ್ಪನಹಳ್ಳಿ, ಮಲ್ಲೇಶ್ವರ, ಯಶವಂತಪುರ ನಿಲ್ದಾಣಗಳಲ್ಲಿ ಇದನ್ನು ಆದೇಶದಂತೆ ಪಾಲಿಸಲಾಗುತ್ತಿದೆ. ಬ್ಯಾಗ್‌ ತಪಾಸಣಾ ಯಂತ್ರದಲ್ಲಿ ಕ್ಯಾಮರಾ ಕಂಡುಬಂದರೆ, ಪ್ರಯಾಣಿಕರಿಂದ ಅಗತ್ಯ ಮಾಹಿತಿಯನ್ನು ನಮೂದಿಸಿಕೊಂಡು, ಯಾವುದೇ ಕಾರಣಕ್ಕೂ ಫೋಟೋ ಕ್ಲಿಕ್ಕಿಸುವಂತಿಲ್ಲ ಎಂದು ತಾಕೀತು ಮಾಡಿ ಕಳುಹಿಸಲಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next