Advertisement

ಗಾಜಿನಮನೆಯಲ್ಲಿ ಅರಳಿದ ಅರಮನೆ

03:55 PM Aug 10, 2019 | Team Udayavani |

ಬೆಂಗಳೂರು: ಹೂವು-ಹಣ್ಣುಗಳಿಂದ ಸಿಂಗಾರಗೊಂಡಿರುವ ಸಸ್ಯಕಾಶಿ, ಅದರೊಳಗೊಂದು ಅರಮನೆ. ಅರಮನೆ ತುಂಬೆಲ್ಲಾ ಜಯಚಾಮರಾಜ ಒಡೆಯರ್‌ ಅವರದ್ದೇ ದರ್ಬಾರ್‌. ಉದ್ಯಾನದಲ್ಲಿ ಎತ್ತ ಕಣ್ಣಾಡಿಸಿದರೂ ರಾಶಿ ಹೂವುಗಳಿಂದ ನಿರ್ಮಾಣಗೊಂಡ ಹತ್ತಾರು ಕಲಾಕೃತಿಗಳಿದ್ದು, ಎಲ್ಲವೂ ಒಡೆಯರ್‌ ಸಾಧನೆ-ಕೊಡುಗೆಗಳ ಕಥೆ ಹೇಳುತ್ತಿವೆ. ಸಸ್ಯಕಾಶಿ ಸೊಬಗಿನ ಜತೆಗೆ ಒಡೆಯರ್‌ ದರ್ಬಾರ್‌ ಅನ್ನು ಕಣ್ತುಂಬಿಕೊಳ್ಳಲು ಉದ್ಯಾನಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ.

Advertisement

ಲಾಲ್ಬಾಗ್‌ನಲ್ಲಿ ಆ.9ರಿಂದ 18ರವೆಗೆ ಸ್ವಾತಂತ್ರ್ಯೋತ್ಸವ ಫ‌ಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವ ಹಿನ್ನೆಲೆ ಈ ಬಾರಿಯ ಅವರ ಸಾಧನೆ ಹಾಗೂ ಕೊಡುಗೆಗಳಿಗೆ ಅಕ್ಷರಶಃ ಪುಷ್ಪ ನಮನ ಸಲ್ಲಿಸಲಾಗುತ್ತಿದೆ.

ಗಾಜಿನ ಮನೆಯಲ್ಲಿ ಸಂಪೂರ್ಣವಾಗಿ ಮೈಸೂರು ಅರಮನೆ ವಾತಾವರಣ ಸೃಷ್ಟಿಯಾಗಿದೆ. ಗಾಜಿನ ಮನೆಯಲ್ಲಿ ಕೇಂದ್ರ ಬಿಂದುವಿನಂತೆ ಮೈಸೂರಿನ ಜಯಚಾಮರಾಜ ವೃತ್ತ ಮಾದರಿ ಯನ್ನು ಎರಡೂವರೆ ಲಕ್ಷ ಹೂವುಗಳನ್ನು ಬಳಸಿ ನಿರ್ಮಿಸಲಾಗಿದೆ. ಇದರ ಮಧ್ಯದಲ್ಲಿ ಒಡೆಯರ್‌ ಪ್ರತಿಮೆಯನ್ನು ಇಡಲಾಗಿದೆ. ವಿಶೇಷವೆಂದರೆ ಈ ವೃತ್ತವು ನೈಜ ವೃತ್ತದ ಅಳತೆಯಲ್ಲೇ ಇದ್ದು, ಕೆಂಪು, ಬಿಳಿ, ಕಿತ್ತಳೆ ಬಣ್ಣದಲ್ಲಿ ಸೊಗಸಾಗಿ ಕಾಣುತ್ತಿದೆ. ಸುತ್ತಲೂ ಒಡೆಯರ್‌ ಅವರ ಸಾಧನೆಗಳನ್ನು ಚಿತ್ರಪಟಗಳ ಮೂಲಕ ಬಿತ್ತರಿಸಲಾಗಿದೆ. ಇನ್ನು ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ಇಂಡೋ- ಅಮೆರಿಕನ್‌ ಹೈಬ್ರಿಡ್‌ ಸೀಡ್ಸ್‌ ಕಂಪನಿಯ ಆಕರ್ಷಕ ಪುಷ್ಪ ಜೋಡಣೆ ಆಕರ್ಷಿಸುತ್ತದೆ.

ಗಾಜಿನ ಮನೆಯ ಬಲಭಾಗದಲ್ಲಿ ಹೂವಿನನಿಂದ ನಿರ್ಮಿಸಿದ ದೊಡ್ಡ ಗಾತ್ರದ ವೀಣೆ, ಪಿಯಾನೋ, ತಬಲ ಸೇರಿದಂತೆ ವಿವಿಧ ವಾದನಗಳು ಒಡೆಯರ್‌ ಅವರ ಸಂಗೀತ ಪ್ರೀತಿಯನ್ನು ಸಾಕ್ಷೀಕರಿಸುವಂತಿವೆ. ವೃತ್ತ ಮಾದರಿಯ ಪ್ರತಿಕೃತಿಯಲ್ಲಿರುವ ಒಡೆಯರ್‌ ಪ್ರತಿಮೆ ಜತೆಗೆ ಇನ್ನು 5 ಪ್ರತಿಮೆಗಳು ಗಾಜಿನ ಮನೆಯಲಿದ್ದು, ಇವುಗಳು ಜಯಚಾಮರಾಜ ಒಡೆಯರ್‌ ಆಳ್ವಿಕೆ, ಪದವಿ ಸ್ವೀಕಾರ, ರಾಜಪಾಲ ರಾಗಿದ್ದ ಸಂದರ್ಭಗಳನ್ನು ನೆನಪಿಸುತ್ತವೆ. ಹಿಂಬದಿ ಒಡೆಯರ ಸಿಂಹಾಸನ, ಅಂಬಾರಿ ಹೊತ್ತ ಎರಡು ಆನೆಗಳು, ಸೈನಿಕರು ಪ್ರತಿಕೃತಿ ಇದ್ದು, ದರ್ಬಾರ್‌ ಪರಿಕಲ್ಪನೆ ಕಟ್ಟಿಕೊಡುತ್ತವೆ. ಜತೆಗೆ ಮೃಗಾಲಯದ ಮಾದರಿಯು ಉತ್ತಮವಾಗಿ ರೂಪುಗೊಂಡಿದೆ.

ವಿವಿಧ ವೇಷಗಳ ಒಡೆಯರ್‌ ಪ್ರತಿಮೆ ಕೆಳಭಾಗ ದಲ್ಲಿ ಜಯಚಾಮರಾಜ ಒಡೆಯರ್‌ ಕೊಡುಗೆ ಬಿಂಬಿಸುವ ಕಣ್ವ ಜಲಾಶಯ ಮಾದರಿ, ಆಕಾಶವಾಣಿ ಕಟ್ಟಡ ಹಾಗೂ ಟವರ್‌, ಪಂಚವಾರ್ಷಿಕ ಯೋಜನೆ ಮಾದರಿ, ಬೆಂಗಳೂರು ನಗರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕುರಿತ ಪ್ರತಿಕೃತಿಗಳನ್ನು ಪ್ರದರ್ಶಿಸಲಾಗಿದೆ.

Advertisement

ಗಾಜಿನ ಮನೆಯಲ್ಲಿ ಧೂಳು ಬಾರದಂತೆ ಹಾಗೂ ಹೂವು ಬಾಡದಂತೆ ಕೃತಕ ಮಂಜಿನ ವಾತಾವರಣ ಸೃಷ್ಠಿಸಲಾಗಿದೆ. ಇನ್ನು ಗಾಜಿನ ಮನೆ ಹೊರಭಾಗದಲ್ಲಿ ರೋಟರಿ ಕ್ಲಬ್‌ ಪ್ರಯೋಜಿತ ಎಂಸ್ಯಾಂಡ್‌ನ‌ಲ್ಲಿ ಕಲಾವಿದರೊಬ್ಬರು ಒಡೆಯರ್‌ ಭಾವಚಿತ್ರವನ್ನು ಚಿತ್ರಿಸಿದ್ದಾರೆ. ಇವುಗಳ ಜತೆಗೆ ವಿವಿಧ ವಿನ್ಯಾಸದ ಪರಿಸರ ಸ್ನೇಹಿ, ವರ್ಟಿಕಲ್ ಮಾದರಿ ಪ್ರದರ್ಶನ ಇದೆ. ಗಾಜಿನ ಮನೆ ಹೊರಾಂಗಣದಲ್ಲಿ ಹೂವಿನ ಜಲಪಾತ, ನವಿಲು, ಹೃದಯಾಕಾರದ ಕಮಾನುಗಳು, ವಿಶೇಷ ಹೂವು ಕುಂಡಗಳು, ಮನೆಯಂಗಳದಲ್ಲಿ ಉದ್ಯಾನ ಪರಿಕಲ್ಪನೆಗಳ ಪ್ರದರ್ಶನ ಎಲ್ಲರನ್ನು ಸೆಳೆಯುವಂತಿವೆ. ಲಾಲ್ಬಾಗ್‌ ತರಬೇತಿ ಕೇಂದ್ರದಿಂದ ತರಕಾರಿ ಮತ್ತು ಮನೆಯಂಗಳದಲ್ಲಿ ಭೂದೃಶ್ಯ ಪ್ರಾತ್ಯಕ್ಷಿಕೆಗಳು, ವಾರ್ತಾ ಇಲಾಖೆಯಿಂದ ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನಗಳಿವೆ.

ಆಕರ್ಷಿಸುತ್ತಿರುವ ಕೀಟ ಭಕ್ಷಕ ಗಿಡಗಳು: ದೇಶದಲ್ಲಿಯೇ ಅತ್ಯಂತ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಕೀಟ ಭಕ್ಷಕ ಗಿಡಗಳ ಪ್ರದರ್ಶನಕ್ಕೆ ಗಾಜಿನಮನೆಯಲ್ಲಿ ವೇದಿಕೆ ಕಲ್ಪಿಸಲಾಗಿದ್ದು, ಈ ಸಸಿಗಳು ಪ್ರೇಕ್ಷಕರ ಪ್ರಮುಖ ಆಕರ್ಷಣೆಯಾಗಿವೆ. ವಿವಿಧ ದೇಶಗಳಿಂದ ಸಂಗ್ರಹಿಸಿರುವ ಕೀಟ ಭಕ್ಷಕ ಸಸಿಗಳು ತನ್ನ ಬಳಿ ಬರುವ ಕೀಟಗಳನ್ನು ಹಿಡಿದಿಡಲಿವೆ. ಬಳಿಕ ಅವುಗಳನ್ನು ತಿಂದು ಜೀರ್ಣಿಸಿಕೊಳ್ಳಲಿವೆ ಎಂದು ಸಸಿಗಳ ಪ್ರದರ್ಶನ ಆಯೋಜಿಸಿರು ಚಂದನ್‌ ಗೌಡ ತಿಳಿಸಿದರು.

ಹಿಂದಿರುಗಿದ್ದಕ್ಕೆ ಮೇಯರ್‌ ಸ್ಪಷ್ಟನೆ:

ರಾಜವಂಶಸ್ಥೆ ಲಾಲ್ಬಾಗ್‌ ಒಳಗೆ ಆಗಮಿಸುತ್ತಿದ್ದಾರೆ ಎಂಬ ಕಾರಣಕ್ಕೆ ಫ‌ಲಪುಷ್ಪ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದ ಮೇಯರ್‌ ಗಂಗಾಂಬಿಕೆ ಅವರನ್ನು ಲಾಲ್ಬಾಗ್‌ ಪ್ರವೇಶದ್ವಾರದ ಬಳಿ ಭದ್ರತಾ ಸಿಬ್ಬಂದಿ ತಡೆಹಿಡಿದಿದ್ದು, ಇದರಿಂದ ಮೇಯರ್‌ ಬೇಸರಗೊಂಡು ಕಾರ್ಯಕ್ರಮದಲ್ಲಿ ಭಾಗವಹಿಸದೇ ಹಿಂದಿರುಗಿದರು ಎಂದು ಕೆಲ ಮಾಧ್ಯಮದಲ್ಲಿ ಸುದ್ದಿ ಭಿತ್ತರ ವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ಮೇಯರ್‌, ‘ಯಾವ ಭದ್ರತಾ ಸಿಬ್ಬಂದಿಯೂ ನನ್ನನ್ನು ತಡೆದಿಲ್ಲ. 12ಕ್ಕೆ ಬೇರೊಂದು ಕಾರ್ಯಕ್ರಮಕ್ಕೆ ತೆರಳಬೇಕಿತ್ತು. ಹೀಗಾಗಿ, ಫ‌ಲಪುಷ್ಪ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮ ತಡವಾದ ಹಿನ್ನೆಯಲ್ಲಿ ಅಧಿಕಾರಿಗಳಿಗೆ ತಿಳಿಸಿ ಅಲ್ಲಿಂದ ಹೊರಟೆ’ ಎಂದು ತಿಳಿಸಿದ್ದಾರೆ.
ಮರಿಗೌಡ ಸ್ಮಾರಕ ಭವನದಲ್ಲಿ ಇಂದು ವಿವಿಧ ಸ್ಪರ್ಧೆ

ಶನಿವಾರ ಹಾಗೂ ಭಾನುವಾರ ಲಾಲ್ಬಾಗ್‌ನ ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್‌ ಕಲೆ, ಜಾನೂರು ಒಣಹೂವಿನ ಜೋಡಣೆ ಕಲೆಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಗಸ್ಟ್‌ 14ರಂದು ಬಹುಮಾನ ವಿತರಣೆ ನಡೆಯಲಿದೆ.
ಪ್ರದರ್ಶನಕ್ಕೆ ಚಾಲನೆ ನೀಡಿದ ಪ್ರಮೋದಾದೇವಿ ಒಡೆಯರ್‌:

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಗಾಜಿನ ಮನೆಯಲ್ಲಿರುವ ಒಡೆಯರ್‌ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ 210ನೇ ಫ‌ಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ಸಂಸದರಾದ ತೇಜಸ್ವಿ ಸೂರ್ಯ, ಶಾಸಕ ಉದಯ್‌ ಗರುಡಾಚಾರ್‌ ಅತಿಥಿಗಳಾಗಿ ಭಾಗವಹಿಸಿದ್ದರು. ಮೈಸೂರು ಸಂಸ್ಥಾನದ ಜಯಚಾಮರಾಜ ಒಡೆಯರ್‌ ಅವರ ಜೀವನಚಿತ್ರಣ, ಸಾಧನೆಗಳು ಅನಾವರಣಗೊಳಿಸಿರುವ ಫ‌ಲಪುಪ್ಪ ಪ್ರದರ್ಶನ ಕಂಡು ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಭಾವುಕರಾದರು. ಈ ವೇಳೆ ಮಾತನಾಡಿದ ಮೈಸೂರು ಸಂಸ್ಥಾನದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌, ಜಯಚಾಮರಾಜ ಒಡೆಯರ್‌ ಅವರ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ಫ‌ಲಪುಷ್ಪ ಪ್ರದರ್ಶನ ಅವರಿಗೆ ಸಮರ್ಪಣೆ ಮಾಡಿರುವುದು ಸಂತಸ ತಂದಿದೆ. ನಮ್ಮ ದೇಶದಲ್ಲಿ ಹೂ ಸಂಸ್ಕೃತಿಗೆ ಪ್ರಧಾನ ಸ್ಥಾನವಿದೆ. ಇಂತಹ ವಿವಿಧ ಬಗೆಯ ಲಕ್ಷಾಂತರ ಹೂಗಳನ್ನು ಒಗ್ಗೂಡಿಸಿ ಬೃಹತ್‌ ಪ್ರದರ್ಶನ ಏರ್ಪಡಿಸಿರುವುದು ಸಾಮಾನ್ಯ ಮಾತಲ್ಲ. ಈ ಸುಂದರ ವಿನ್ಯಾಸದ ಮೂಲಕ ಒಡೆಯರ್‌ಗೆ ನಮನ ಸಲ್ಲಿಸಿದಕ್ಕೆ ಕೃತಜ್ಞಳಾಗಿರುತ್ತೇನೆ ಎಂದು ನುಡಿದರು. ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಲಾಲ್ಬಾಗ್‌ ಕೇವಲ ಬೆಂಗಳೂರಿನ ಆಸ್ತಿಯಲ್ಲ ಕರ್ನಾಟಕ ಆಸ್ತಿಯಾಗಿದೆ. ಈ ಸುಂದರ ಪುಪ್ಪ ಪ್ರದರ್ಶನಕ್ಕೆ ಪ್ರತಿಯೊಬ್ಬರು ಭೇಟಿ ನೀಡಿ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟರೆ ಆಗ ಕಲಾವಿದರ ಶ್ರಮ ಸಾರ್ಥಕವಾಗುತ್ತದೆ ಎಂದರು. ತೋಟಗಾರಿಕೆ ಇಲಾಖೆ ನಿರ್ದೇಶಕ ಎಂ.ವಿ.ವೆಂಕಟೇಶ್‌ ಮಾತನಾಡಿ, ಪ್ರದರ್ಶನಕ್ಕಾಗಿ ಈ ಬಾರಿ ವಿವಿಧ ಬಣ್ಣಗಳ 5.50 ಲಕ್ಷ ಗುಲಾಬಿ ಹಾಗೂ ಇತರೆ 92 ಬಗೆಯ 2.5ಲಕ್ಷ ಹೂಗಳನ್ನು ಬಳಸಲಾಗುತ್ತದೆ. ಇದರಲ್ಲಿ ಕೀಟ ಭಕ್ಷಕ ಗಿಡಗಳು ಈ ಬಾರಿಯ ವಿಶೇಷ. ಹೂಗಳನ್ನು ನಂದಿ ಗಿರಿಧಾಮ, ಕೆಮ್ಮಣ್ಣುಗುಂಡಿ, ಚಿಕ್ಕಮಗಳೂರು, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪುಣೆ, ಹಾಗೂ ಥಾಯ್ಲೆಂಡ್‌ಗಳಿಂದ ತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next