Advertisement

ಅಹಿಂಸಾ ಮಾರ್ಗ ಇಂದಿನ ಪೀಳಿಗೆಗೆ ಅಗತ್ಯ

12:43 AM Apr 18, 2019 | Team Udayavani |

ಬೆಂಗಳೂರು: ಯುವಕರು ಜೈನ ಧರ್ಮದ ತತ್ವಗಳನ್ನು ಹೆಚ್ಚಾಗಿ ಬಳಸುವ ಅವಶ್ಯಕತೆ ಇದೆ ಎಂದು ಸಾಧ್ವಿ ಮಂಜುರೇಖಾ ಅಭಿಪ್ರಾಯಪಟ್ಟರು.

Advertisement

ಸ್ವಾತಂತ್ರ್ಯಉದ್ಯಾನದಲ್ಲಿ ಬುಧವಾರ ಜೈನ್‌ ಯುವ ಸಂಘಟನೆ ಆಯೋಜಿಸಿದ್ದ ಶ್ರಮಣ ಭಗವಾನ್‌ ಮಹಾವೀರರ 2618ನೇ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಅವರು, “ಇಂದು ಮನುಷ್ಯರು ತಮ್ಮ ಗುಂಪಿನಲ್ಲೇ ದ್ವೇಷದ ಭಾವನೆಯನ್ನು ಬೆಳಸಿಕೊಳ್ಳುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಅಹಿಂಸಾವಾದ ಹೆಚ್ಚು ಅವಶ್ಯಕ ಮತ್ತು ಅದನ್ನು ಅನುಸರಿಸುವುದು ಅರ್ಥಪೂರ್ಣ’ ಎಂದು ಹೇಳಿದರು.

ಸಾಧ್ವಿ ಮಧುಸ್ಮಿತ್‌, ಶ್ರಮಣ ಭಗವಾನ್‌ ಮಹಾವೀರರು ಪ್ರತಿಪಾದಿಸಿದ್ದ ಅಹಿಂಸಾ ಪರಿಪಾಲನೆ ಇಂದು ವಿಶ್ವದ ಹಲವು ಭಾಗಗಳಲ್ಲಿ ಹಬ್ಬಿದೆ. ನೂರಾರು ವರ್ಷಗಳಿಂದ ಈ ಧರ್ಮವನ್ನು ಪ್ರತಿಪಾದಿಸಿಕೊಂಡು ಬರಲಾಗುತ್ತಿದೆ. ಮನುಷ್ಯರ ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳಿಗೂ ಮಹಾವೀರರು ಪರಿಹಾರವನ್ನು ಸೂಚಿಸಿದ್ದಾರೆ ಎಂದು ಹೇಳಿದರು.

ಮನುಷ್ಯರು ಎಲ್ಲರೂ ಒಂದೇ, ಇಲ್ಲಿ ಮೇಲು-ಕೀಳು ಎನ್ನುವ ಯಾವುದೇ ಭಾವನೆಗಳು ಇರಬಾರದು. ಮನುಷ್ಯ ಇಂದು ಸಣ್ಣ ಆಸೆಗಳನ್ನು ಈಡೇರಿಸಿಕೊಳ್ಳಲು ತಪ್ಪುದಾರಿಯನ್ನು ತುಳಿಯುತ್ತಿದ್ದಾನೆ. ಇದು ನಿಲ್ಲಬೇಕು ಅಹಿಂಸಾ ಮಾರ್ಗದಲ್ಲಿ ಸಾಗುವ ಮೂಲಕ ಶಾಂತಿ ಕಾಪಾಡಬೇಕು ಎಂದು ಸಲಹೆ ನೀಡಿದರು.

ಜೈನ್‌ ಯುವ ಸಂಘಟನೆಯ ಅಧ್ಯಕ್ಷ ಪ್ರಕಾಶ್‌ ಚಂದಾಜಿ ಕೊಟಾರಿ, ಜೈನ್‌ ಯುವ ಸಂಘಟನೆ ಹಲವು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ಗೋಶಾಲೆ ಕೇಂದ್ರಗಳ ಮೂಲಕ ಗೋವುಗಳ ರಕ್ಷಣೆ ಮತ್ತು ಅಸಹಾಯಕರಿಗೆ ಉಚಿತ ಔಷಧಿಗಳನ್ನೂ ನೀಡಲಾಗುತ್ತಿದೆ ಎಂದು ಹೇಳಿದರು.

Advertisement

ತೇರಾಪಂಥ್‌ ಸಭಾ ಅಧ್ಯಕ್ಷ ಮೂಲಚಂದಜಿ ನಾಹರ, ಕರ್ನಾಟಕ ಜೈನ್‌ ಅಸೋಸಿಯೇಷನ್‌ನ ಅಧ್ಯಕ್ಷ ಜಿತೇಂದ್ರ ಕುಮಾರ್‌, ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಸಂಸದ ಪಿ.ಸಿ ಮೋಹನ್‌ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡುರಾವ್‌ ಮತ್ತಿತರರು ಉಪಸ್ಥಿತರಿದ್ದರು. ಶ್ರಮಣ ಭಗವಾನ್‌ ಮಹಾವೀರರ 2618ನೇ ಜನ್ಮ ಕಲ್ಯಾಣ ಮಹೋತ್ಸವವನ್ನು ನಗರದಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಜೈನ್‌ ಸಮುದಾಯದ ಸಾವಿರಾರು ಭಕ್ತರು ಟೌನ್‌ಹಾಲ್‌ನಿಂದ ಸ್ವಾತಂತ್ರ್ಯಉದ್ಯಾನದ ವರೆಗೆ ಮೆರವಣಿಗೆ ಮೂಲಕ ಸಾಗಿಬಂದರು. ಮೆರವಣಿಗೆಯಲ್ಲಿ 48 ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next