ಮುಂಬಯಿ, ಮೇ 16: ಕೋವಿಡ್ ಮಹಾಮಾರಿಯನ್ನು ತಡೆಗಟ್ಟುವಲ್ಲಿ ಪ್ರಗತಿ ಸಾಧಿಸದೆ ಮಹಾರಾಷ್ಟರ ಸರಕಾರವು ಹಗಲಿರುಳು ಹೋರಾಟ ನಡೆಸುತ್ತಿದೆ. ಈ ಕುರಿತಂತೆ ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಒಕ್ಕೂಟದ ನಾಯಕರು ಮುಂದಿನ ಕಾರ್ಯತಂತ್ರದ ಬಗ್ಗೆ ಸಭೆ ನಡೆಸಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯ ಅಧ್ಯಕ್ಷ ಶರದ್ ಪವಾರ್ ಅವರೊಂದಿಗೆ ಶುಕ್ರವಾರ ನಡೆಸಿದ ನಿರ್ಣಾಯಕ ಸಭೆಯಲ್ಲಿ ಆರ್ಥಿಕತೆಯನ್ನು ವೇಗಗೊಳಿಸುವ ಯೋಜನೆಗಳ ಬಗ್ಗೆ ಚರ್ಚೆಗಳು ನಡೆಯಿತು. ಸಭೆಯಲ್ಲಿ ಶರದ್ ಪವಾರ್ ಅವರಲ್ಲದೆ, ಜಯಂತ್ ಪಾಟೀಲ್, ಅನಿಲ್ ದೇಶು¾ಖ್, ರಾಜೇಶ್ ಟೊಪೆ ಮತ್ತು ಆದಿತ್ಯ ಠಾಕ್ರೆ ಕೂಡ ಉಪಸ್ಥಿತರಿದ್ದರು.
ಕಳೆದ 55 ದಿನಗಳಿಂದ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ಕುರಿತಂತೆ ಸಭೆಯಲ್ಲಿ ಪರಿಶೀಲಿಸಲಾಯಿತು. ರಾಜ್ಯದ ಕಾನೂನು ಸುವ್ಯವಸ್ಥೆ, ಕಾರ್ಮಿಕರನ್ನು ತಮ್ಮ ರಾಜ್ಯಕ್ಕೆ ಹೇಗೆ ಕರೆದೊಯ್ಯುವುದು, ಅವರನ್ನು ಇಲ್ಲಿಗೆ ಕರೆತರುವುದು ಹೇಗೆ ಮತ್ತು ರಾಜ್ಯದಲ್ಲಿ ಕೋವಿಡ್ ಹರಡುವಿಕೆಯನ್ನು ಆರೋಗ್ಯ ಇಲಾಖೆ ಹೇಗೆ ನಿಭಾಯಿಸುತ್ತಿದೆ ಎಂಬುದರ ಕುರಿತು ಚರ್ಚಿಸಲಾಯಿತು. ಸಭೆ ಮುಖ್ಯವಾಗಿ ಲಾಕ್ಡೌನ್ ಮತ್ತು ಆರ್ಥಿಕತೆಯನ್ನು ವೇಗಗೊಳಿಸುವ ಸವಾಲುಗಳಿಗೆ ಸಂಬಂಧಿಸಿತ್ತು ಎನ್ನಲಾಗಿದೆ.
ನಾಲ್ಕನೇ ಹಂತದ ಲಾಕ್ಡೌನ್ ಕುರಿತಾಗಿ ನಡೆಸಲಾದ ಈ ಕಾರ್ಯತಂತ್ರ ಸಭೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯದ ಕೆಲವು ಸ್ಥಳಗಳ ಪ್ರಸ್ತುತ ಸ್ಥಿತಿ, ಅದರ ಮುಂದಿನ ಹಂತದ ಯೋಜನೆ ಮತ್ತು ಹಣಕಾಸು ವಹಿವಾಟಿನ ಕುರಿತು ಚರ್ಚಿಸಿದರು. ರಾಜ್ಯದಲ್ಲಿ ಲಾಕ್ ಡೌನ್ನ ಮೂರನೇ ಹಂತವು ಮೇ 17ರಂದು ಕೊನೆಗೊಳ್ಳುತ್ತದೆ. ಲಾಕ್ಡೌನ್ ನ ನಾಲ್ಕನೇ ಹಂತವನ್ನು ಕೇಂದ್ರ ಸರಕಾರ ಹೇಗೆ ನಿರ್ಧರಿಸುತ್ತದೆ ಎಂಬುದನ್ನು ಗಮನಿಸಿ ಅನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.