Advertisement

ಭಗ್ನ ಪ್ರೇಮಿಯಿಂದ ಬಾಲಕಿ ಬರ್ಬರ ಕೊಲೆ

12:48 PM Nov 29, 2018 | Team Udayavani |

ದೊಡ್ಡಬಳ್ಳಾಪುರ: ಮದುವೆಯಾಗಲು ನಿರಾಕರಿಸಿದ ಬಾಲಕಿಯನ್ನು, ಭಗ್ನ ಪ್ರೇಮಿಯೊಬ್ಬ ಆಕೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ರೋಜಿಪುರದ ಸರ್ಕಾರಿ ಶಾಲೆ ಬಳಿ ಬುಧವಾರ ಬೆಳಗ್ಗೆ ನಡೆದಿದೆ.

Advertisement

ಮೃತ ಬಾಲಕಿ ಎನ್‌.ಕೀರ್ತನಾ(15)ಬಸವೇಶ್ವರ ನಗರದ ನಿವಾಸಿಯಾಗಿದ್ದು, ನಗರದ ರೋಜಿಪುರದ ಬಿಎಸ್‌ಎ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಹತ್ತಿರದ ಸಂಬಂಧಿ ನವೀನ್‌ ಎಂಬಾತ ಈ ಕೃತ್ಯ ಎಸಗಿದ್ದು, ಘಟನೆ ನಡೆದ ನಂತರ ಆತ ವಿಷ ಸೇವಿಸಿರುವುದಾಗಿ ಹೇಳಿ ಆಸ್ಪತ್ರೆ ಸೇರಿದ್ದಾನೆ.

ಘಟನೆ ಹಿನ್ನೆಲೆ: ಬಸವೇಶ್ವರ ನಗರದ ನಿವಾಸಿಗಳಾದ ನಂದೀಶ್‌ ಹಾಗೂ ಲಲಿತಾ ದಂಪತಿಗೆ 3 ಜನ ಹೆಣ್ಣು ಮಕ್ಕಳಿದ್ದು, ಎರಡನೇ ಪುತ್ರಿಯೇ ಕೊಲೆಯಾದ ಕೀರ್ತನಾ. ರೋಜಿಪುರದ ಬಿಎಸ್‌ಎ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೀರ್ತನಾಳ ಭಾವನ ಅಣ್ಣ ನವೀನ್‌ ಆಕೆಯನ್ನು ಕೊಲೆಗೈದ ಆರೋಪಿ. ಈತ ಕೀರ್ತನಾಳನ್ನು ಪ್ರೀತಿಸುತ್ತಿದ್ದು, ವಿವಾಹವಾಗುವಂತೆ ಆಕೆಯ ಹಿಂದೆ ಬಿದ್ದಿದ್ದ. ನವೀನ್‌ ತನ್ನ ಹಿಂದೆ ಬಿದ್ದಿದ್ದು, ಶಾಲೆಗೆ ಹೋಗುವಾಗ ಕೀಟಲೆ ಮಾಡುತ್ತಿರುವ ಬಗ್ಗೆ ಕೀರ್ತನಾ ಪೋಷಕರಿಗೆ ತಿಳಿಸಿದ್ದಳು. ಈ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಹ ನೀಡಲಾಗಿತ್ತು. 20 ದಿನಗಳ ಹಿಂದೆಯಷ್ಟೇ ನವೀನ್‌ನನ್ನು ಠಾಣೆಗೆ ಕರೆಸಿ ಪೊಲೀಸರು ಸೂಕ್ತ ರೀತಿಯಲ್ಲಿ ಬುದ್ಧಿವಾದ ಹೇಳಿ, ಕೀರ್ತನಾಳ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿದ್ದರು.

ಓದಿನಲ್ಲಿ ಮುಂದು: ಈ ಬಗ್ಗೆ ಮಾಹಿತಿ ನೀಡಿದ ಮೃತಳ ತಂದೆ ನಂದೀಶ್‌, ಪೊಲೀಸರು ಠಾಣೆಗೆ ಕರೆಸಿ ನವೀನ್‌ಗೆ ಬುದ್ಧಿ ಹೇಳಿದ ನಂತರ ಕೀರ್ತನಾ ಮನೆಯಿಂದ ಶಾಲೆಗೆ ಹೋಗುವಾಗ ತನ್ನ ತಂಗಿಯೊಂದಿಗೆ ಹೋಗಿ ಬರುತ್ತಿದ್ದಳು. ಒಂದು ವಾರದಿಂದ ಕಾಯಿಲೆ ನಿಮಿತ್ತ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದೆ. ಹೀಗಾಗಿ, ಕೀರ್ತನಾ ಒಬ್ಬಳೇ ಶಾಲೆಗೆ ಹೋಗುವ ಅನಿವಾರ್ಯತೆ ಉಂಟಾಗಿತ್ತು. ಈ ವೇಳೆ ಆಕೆಯನ್ನು ಕೊಲೆ ಮಾಡಲಾಗಿದೆ.  ನವೀನ್‌ ವಿವಾಹವಾಗುವಂತೆ ಪೀಡಿಸುತ್ತಿದ್ದರಿಂದ ಭಯಗೊಂಡು ತಮ್ಮ ಮಗಳಿಗೆ ಶಾಲೆಗೆ ಹೋಗುವುದೇ ಬೇಡ ಎಂದು ಹೇಳಿದ್ದೆವು. ಆದರೆ, ಓದುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಕೀರ್ತನಾ ಶಾಲೆಗೆ ಹೋಗುತ್ತಿದ್ದಳು ಎಂದು ತಿಳಿಸಿದರು.

ಇನ್ನೂ ವಶಕ್ಕೆ ಪಡೆದಿಲ್ಲ: ಕೀರ್ತನಾ ಕೊಲೆ ಆರೋಪಿ ನವೀನ್‌ಗೆ ವೈದ್ಯರು ಇನ್ನೂ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ, ಅಧಿಕೃತವಾಗಿ ಪೊಲೀಸ್‌ ವಶಕ್ಕೆ ಪಡೆದಿಲ್ಲ. ಆದರೆ, ಆಸ್ಪತ್ರೆಯಲ್ಲಿ ಪೊಲೀಸ್‌ ಕಾವಲು ನಿಯೋಜಿಸಲಾಗಿದೆ. ವೈದ್ಯರ ಸೂಚನೆ ನಂತರ ಪೊಲೀಸ್‌ ವಶಕ್ಕೆ ಪಡೆಯ ಲಾಗುವುದು ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ. ಸಿದ್ಧರಾಜು ತಿಳಿಸಿದ್ದಾರೆ. 

Advertisement

ಭೀಕರ ದೃಶ್ಯ ಕಂಡು ಬೆಚ್ಚಿಬಿದ್ದ ಜನ: ಭಗ್ನ ರೋಜಿಪುರದಲ್ಲಿ ಬುಧವಾರ ಬೆಳಗ್ಗೆ ಪ್ರೇಮಿಯೊಬ್ಬ ನಡು ರಸ್ತೆಯಲ್ಲಿಯೇ ಶಾಲಾ ಬಾಲಕಿಯನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆಯಿಂದ ಜನರು ಬೆಚ್ಚಿ ಬಿದ್ದಿದ್ದಾರೆ.

 ನಗರದಲ್ಲಿ ಇದೇ ಪ್ರಥಮ ಬಾರಿಗೆ ನಡು ರಸ್ತೆಯಲ್ಲಿಯೇ ಯುವತಿಯನ್ನು ಕೊಚ್ಚಿ ಹಾಕಿರುವುದು ಇದೇ ಮೊದಲಾಗಿದೆ. ರೋಜಿಪುರದಲ್ಲಿ ಖಾಸಗಿ ಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಶಾಲೆಯ ಹಿಂಭಾಗದಲ್ಲಿಯೇ ಈ ಭೀಕರ ಕೊಲೆ
ನಡೆದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಭಯಭೀತರಾಗಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next