Advertisement

ಬಾಲ್ಯದ ಕೌತುಕ…ನಡೆದ ಹಾದಿ ತರುವ ನೆನಪುಗಳ ಮೆರವಣಿಗೆ

02:55 PM Apr 06, 2022 | Team Udayavani |

ನೋಡಿದಷ್ಟೂ ದೂರ ಕಾಡುವ ನೆನಪುಗಳು, ಮತ್ತೆ ಮರಳದ ಆ ದಿನಗಳು, ಕಳೆದ ಆ ಕ್ಷಣಗಳು ಎಲ್ಲವೂ ಅದ್ಭುತ. ದಿನಕ್ಕೆ ನಾಲ್ಕೈದು ಬಾರಿಯಾದರೂ ಅದೇ ದಾರಿಯಲ್ಲಿ ನಡೆಯುತ್ತಿದ್ದೆ. ಡಾಂಕಿ ಮಂಕಿ, ಗುಬ್ಬಿಗುಬ್ಬಿ ನವಿಲೆ, ಮುಟ್ಟಾಟ, ಕುಂಟಾಬಿಲ್ಲೆ ಹೀಗೆ ಹಲವು ಆಟಗಳು ಅದೇ ದಾರಿಯ ನಡುವಿನಲ್ಲಿ ಆಡುತ್ತಿದ್ದೆವು. ಸಿಕ್ಕಸಿಕ್ಕ ಕಾಡಿನ ಹೂಗಳನ್ನೆಲ್ಲಾ ಕೊಯ್ದು ಎಲೆಗಳನ್ನೆಲ್ಲಾ ಬಳಸಿ ಮಾಡುತ್ತಿದ್ದ ರಂಗೋಲಿ, ರಸ್ತೆ ಬದಿಯಲ್ಲೂ ಆಡುತ್ತಿದ್ದ ದೇವರ ಆಟ ಇವೆಲ್ಲ ನಾವು ಮುಗ್ಧವಾಗಿ ಜೀವಿಸಿದ ಗತಕಾಲದ ವೈಭವೇ ಸರಿ.

Advertisement

ಐದೇ ನಿಮಿಷದ ದಾರಿ ಅದು. ಮನೆ ಮನೆಯನ್ನು ಅಂಗಡಿ ಮುಂಗಟ್ಟಿಗೆ ಸೇರಿಸುತ್ತ ಹರಿವ ಮಣ್ಣಿನ ಹಾದಿ. ಅದು ನಮ್ಮಂತ ಅದೆಷ್ಟೋ ದಾರಿಹೋಕರ ಜೀವನದ ಗುಟ್ಟನ್ನು ಬಲ್ಲದು. ಜೀವನದ ಆಗು ಹೋಗುಗಳಿಗೆಲ್ಲಾ ಸಾಕ್ಷಿ ಎಂಬಂತೆ. ತನ್ನ ಒಡಲಲ್ಲಿ ಅದೆಷ್ಟೋ ಕತೆಗಳನ್ನು ಬಚ್ಚಿಟ್ಟುಕೊಂಡೇ ಕಾಡುವ ಹಾದಿಯದು. ಬದಲಾವಣೆಗೆ ಆ ಹಾದಿಯೂ ಹೊರತಾಗಿ ಉಳಿಯಲಿಲ್ಲ. ಮಣ್ಣಿನ ರಸ್ತೆಯಿಂದ ಡಾಂಬರು ರಸ್ತೆಯಾಗಿ ಹಳೆಕತೆಗಳನ್ನು ಹುದುಗಿಸಿ, ತಾನೇ ಒಂದಿಷ್ಟು ಕಥೆಯಾಗುವ ಹಾದಿ. ಹೋಯಿತು. ಈ ದಾರಿಯೇ ಬದಲಾಗಿದೆ ಎಂದಾದರೆ ಮಾನವ ಸುಮ್ಮನಿದ್ದಾನೇ? ಕಾಲ್ನಡಿಗೆಯಲ್ಲಿ ಬರುವವರಿಗಿಂತ ವಾಹನ ಸವಾರರೇ ಹೆಚ್ಚಾದದ್ದು ಬದಲಾವಣೆ ಜಗದ ನಿಯಮವೆಂಬುದನ್ನು ಸಾರುವಂತಿತ್ತು. ಅಮ್ಮ ಅಂಗಡಿಗೋ, ಸಂತೆಗೋ ಹೋಗಿದ್ದಾಗ ಅವಳ ದಾರಿ ಕಾಯುತ್ತಿದ್ದುದು ಕೇವಲ ನೆನಪೀಗ. ಅಟ್ಟದಲ್ಲಿ ಕುಳಿತು ರಸ್ತೆಯಲ್ಲಿ ಹೋಗುವವರ ಮೇಲೆ ಎಸೆಯುತ್ತಿದ್ದ ಒಣ ಹುಲ್ಲುಗಳು ನಾವು ಮಾಡುತ್ತಿದ್ದ ಚೇಷ್ಟೆಯ ಗುರುತಾಗಿತ್ತು.

ಕೆಲವೊಮ್ಮೆ ನಮ್ಮ ಮನೆಯೂ ಶಾಲೆಯಿಂದ ದೂರವೇ ಇರಬೇಕಿತ್ತು ಆಗ ನಾನೂ ಶಾಲೆಗೆ ಬುತ್ತಿ ತರಬಹುದಿತ್ತು, ಬಸ್ಸಿನಲ್ಲಿ ಬರಬಹುದಿತ್ತು ಎಂದೆನಿಸಿದ್ದುಂಟು. ಶಾಲೆಯಲ್ಲಿ ಬಿಸಿಯೂಟ ಇಲ್ಲದ ಕಾಲ. ಹತ್ತಿರದವರು ಊಟಕ್ಕೆ ಮನೆಗೆ ಹೋಗಿ ಬರಲು ಅನುಮತಿ. ದೂರದವರಿಗೆ ಹೊತ್ತು ತಂದ ಬುತ್ತಿಯೇ ಗತಿ. ಹತ್ತನೇ ತರಗತಿಯ ವರೆಗೂ ಮನೆಗೆ ಊಟಕ್ಕೆ ಬಂದೇ ಹೋಗುತ್ತಿದ್ದೆ. ಬೇಗ ಊಟ ಮುಗಿಸಿ ಓಡುವ ಗಡಿಬಿಡಿ. ದೂರದಿಂದ ಬರುತ್ತಿದ್ದ ನನ್ನ ಗೆಳೆತಿಯರು ಬಲು ಬೇಗ ಬುತ್ತಿ ಬರಿದಾಗಿಸಿ ಮರದ ನೆರಳಿನಲ್ಲಿ ಮಾತಿನ ಬುತ್ತಿ ಬಿಡಿಸಿ ಬಿಡಿಸಿಯಾಗಿರುತ್ತಿತ್ತು. ನನಗೋ ಅವರನ್ನು ಸೇರುವ ತವಕ. ಕೆಲವು ವಿಶೇಷ ದಿನಗಳಲ್ಲಿ, ವಾರ್ಷಿಕೋತ್ಸವ ನೃತ್ಯದ ರಿಹರ್ಸಲ್ ಗೋ ಅಪರೂಪಕ್ಕೆ ಬುತ್ತಿ ಒಯ್ಯುವುದು ಒಂದು ಸಂಭ್ರಮವೇ ಸರಿ. ಆಗೆಲ್ಲ ಅದೆಷ್ಟೋ ಬಾರಿ ಆ ದಾರಿಗೆ ಬೈದುಕೊಂಡಿದ್ದೇನೆ.

ಕಾಲ ಉರುಳಿದಂತೆ ನಮ್ಮಲ್ಲಿ ಬಾಲ್ಯದ ಉತ್ಸಾಹವೂ ಕೌತಕವೂ ಕಮ್ಮಿಯಾಗುತ್ತದೆ. ದಾರಿಯೊಂದು ಎಷ್ಟು ನಡೆದರೂ ರಸ್ತೆ ಮುಗಿಯುತ್ತಿಲ್ಲವಲ್ಲ ಇನ್ನೆಷ್ಟು ದೂರ ನೆಡೆಯಬೇಕೋ ಎಂದೆನಿಸುತ್ತದೆ. ಆಯಾಸದ ದಿನಗಳೂ ಇದ್ದವು. ನಡೆದು ಬರುವಾಗ ದೂರದಿಂದ ಕಾಣುವ ಮನೆಯೆದುರು ಸೇರಿದ ಜನ ಎಂದಿಗಿಂತ ತುಸು ಹೆಚ್ಚೇ ಮೌನದಿಂದ ನೆಡೆಯುತ್ತಿದ್ದ ಅಪ್ಪ, ಆ ಮೌನ, ರಸ್ತೆ ಮುಗಿದು ಮನೆಗೆ ತಲುಪಿದಾಗ ಅರಿವಾದ ಒಂದು ಸಾವಿನ ಘಟನೆ ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ. ಅದೆಷ್ಟೋ ಸಿಹಿಕಹಿ ಘಟನೆಗಳನ್ನು ನೆನಪಿಸುವ ದಾರಿಯದು. ಸಂಜೆ ಬರುವಾಗ ಕತ್ತಲಾಗಿರುತ್ತಿದ್ದ ಕಾರಣ ಅಪ್ಪ ನನಗಾಗಿ ಕಾದು ಕರೆದುಕೊಂಡು ಹೋಗುವ ದಾರಿಯದು. ಅಷ್ಟೇನು ಮಾತಾಡದೇ ದಾರಿ ಸವೆಸುತ್ತಿದ್ದರೂ ಭದ್ರತೆಯ ಭಾವ.

Advertisement

ಅಪ್ಪ ಬೆಳೆದು ಓಡಾಡಿದ ದಾರಿಯದು, ಅಮ್ಮ ನನ್ನ ಕೈ ಹಿಡಿದು ನಡೆಸಿದ ಹಾದಿಯದು. ಈಗ ಅಪ್ಪನಿಲ್ಲದ ತವರಿಗೆ ನಮ್ಮನ್ನು ಕರೆಯುತ್ತಿರುವ ದಾರಿಯಾಗಿದೆ. ತೀರಾ ಸಲುಗೆಯಲ್ಲಿ ನಮ್ಮದೇ ಮನೆಯ ಜಗುಲಿಯಂತಿದ್ದ ದಾರಿಯೇಕೋ ದಿನೇ ದಿನೇ ಅಪರಿಚಿತವಾಗ ತೊಡಗಿದೆ. ಈಗ ಅದೇ ರಸ್ತೆ ನಾವು ಜೀವಿಸಿದ ಬದುಕನ್ನೋ, ನಾವು ಕಳೆದುಕೊಂಡ ಮುಗ್ಧತೆಯನ್ನೋ ಅಥವಾ ನಾವು ಮರಳಿ ಗಳಿಸಲಾಗದ ಬಾಲ್ಯವನ್ನೋ, ಕಳೆದುಕೊಂಡ ವ್ಯಕ್ತಿಯನ್ನೋ ನೆನಪಿಸಿ, ಅಳಿಸಿ, ಹಂಗಿಸಿ ನಗುತ್ತಿರುವಂತೆ ಭಾಸವಾಗುತ್ತಿದೆ. ಒಂದು ಕಾಲದಲ್ಲಿ ಕಣ್ಣು ಮತ್ತು ಮನಕ್ಕೆ ಇಷ್ಟು ಹತ್ತಿರವಿದೆಯಲ್ಲಾ ಎಂದೆನಿಸುತ್ತಿದ್ದ ರಸ್ತೆ ನೋಡಿದಷ್ಟೂ ದೂರವೆನಿಸುವ, ಮರೀಚಿಕೆಯಾಗಿ ದೆಯಲ್ಲಾ! ಕಾರ್ಟೂನುಗಳಲ್ಲಿ ತೋರಿಸುವಂತೆ ಟೈಂ ಮಷೀನುಗಳಿದ್ದರೆ ಮತ್ತದೇ ದಿನಗಳನ್ನು ಕ್ಷಣಗಳನ್ನು ಅನುಭವಿಸಲು ಸಾಧ್ಯವಾಗುತ್ತಿತ್ತೇನೋ? ಇದಕ್ಕೆಲ್ಲ ಉತ್ತರ ಯಾರಲ್ಲಿದೆ? ನಿರ್ಜೀವ ವಸ್ತು ರಸ್ತೆಗೇನು ಗೊತ್ತು ಭಾವದ ಪ್ರಶ್ನೆಗಳಿಗೆ ಉತ್ತರ? ಪ್ರಶ್ನೆ ನನ್ನದೆಂದಾದ ಮೇಲೆ ಉತ್ತರವೂ ನನ್ನಲ್ಲಿಯೇ ಹುಡುಕಬೇಕಿದೆ. ನೆನಪುಗಳ ಮೆರವಣಿಗೆಯ ಆಗಾಗ ಹೊತ್ತು ತರುವ ಈ ಹಾದಿ ಯಾಕೋ ಮತ್ತೆಮತ್ತೆ ಕರೆಯದೆ ಸುಮ್ಮನೆ ಮಲಗಿದೆ.

*ಪ್ರಭಾ ಭಟ್

Advertisement

Udayavani is now on Telegram. Click here to join our channel and stay updated with the latest news.

Next