Advertisement

ಸಾಹಿತ್ಯ ಲೋಕಕ್ಕೆ ಕಾರ್ಪೋರೇಟ್‌ ಮಂದಿ

12:30 PM Jan 21, 2017 | |

ಧಾರವಾಡ: ಕಾರ್ಪೋರೇಟ್‌ ಜಗತ್ತಿನಲ್ಲಿ ಕೆಲಸ ಮಾಡುವ ಅನೇಕರು ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಈ ವಿಚಾರ ಇಂದು ಚರ್ಚೆಗೆ ಗ್ರಾಸವಾಗಿ ಪರ ವಿರೋಧ ಚರ್ಚೆ ನಡೆಯುತ್ತಿದೆ ಎಂದು ನಾಡೋಜ ಡಾ| ಕೆ.ಎಸ್‌.ನಿಸಾರ್‌ ಅಹಮದ್‌ ಅಭಿಪ್ರಾಯಪಟ್ಟರು. ಇಲ್ಲಿನ ಕವಿವಿಯ ಸುವರ್ಣ ಮಹೋತ್ಸವ ಭವನದಲ್ಲಿ ಶುಕ್ರವಾರ ಆರಂಭಗೊಂಡ “ಧಾರವಾಡ ಸಾಹಿತ್ಯ ಸಂಭ್ರಮ-2017’ನ್ನು ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಕಾರ್ಪೋರೇಟ್‌ ಜಗತ್ತಿನಲ್ಲಿ ಕೆಲಸ ಮಾಡುವ ಸಾಹಿತಿಗಳು ಹೊಟ್ಟೆ ತುಂಬಿದವರು. ಅವರಿಗೆ ಹಣ ಹೆಚ್ಚಾಗಿದ್ದು, ಕೀರ್ತಿ ಪಡೆಯುವುದಕ್ಕೆ ಸಾಹಿತ್ಯ ಲೋಕಕ್ಕೆ ಬರುತ್ತಿದ್ದಾರೆ. ಅವರಿಂದ ಕನ್ನಡದ ಪಾವಿತ್ರ ಹಾಳಾಗುತ್ತದೆ ಎಂಬ ಆರೋಪಗಳಿವೆ. ಆದರೆ ಅವು ಏಕಪಕ್ಷೀಯವಾಗಿವೆ ಎಂದರು. ಕಾರ್ಪೋರೇಟ್‌ ಜಗತ್ತಿನಲ್ಲಿರುವವರೇನು ಹುಟ್ಟಾ ಶ್ರೀಮಂತರಲ್ಲ. ಅವರು ಕೂಡ ರೈತರು, ಬಡವರ ಮತ್ತು ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು.

ಅವರಿಗೆ ಕಾರ್ಪೋರೇಟ್‌ಲೋಕದ ಜೊತೆಗೆ ತಮ್ಮ ಬಾಲ್ಯ, ಬದುಕಿನ ಆಸಕ್ತಿ ಹೆಚ್ಚಿ ಅದನ್ನು ಅಕ್ಷರ ರೂಪಕ್ಕೆ ತರುವ  ಯತ್ನದಲ್ಲಿದ್ದಾರೆ. ಹೀಗಾಗಿ ಕನ್ನಡ ಸಾಹಿತ್ಯವನ್ನು ಯಾರು ಬರೆಯಬೇಕು? ಅಥವಾ ಯಾರುಬರೆಯಬಾರದು ? ಎನ್ನುವುದನ್ನು ಯಾರೂ ನಿರ್ಧರಿಸದೇ, ಕನ್ನಡ ಸಾಹಿತ್ಯವನ್ನು ಸಿರಿವಂತ ಮಾಡುವ ಎಲ್ಲ ಬರವಣಿಗೆಗಳನ್ನು ನಾವು ಇಂದು ಸ್ವೀಕರಿಸಬೇಕಿದೆ ಎಂದರು. 

ಕನ್ನಡದ ಕೆಲವಷ್ಟು ಸಂಸ್ಥೆಗಳು ಕನ್ನಡ ಕಟ್ಟುವ ಕೆಲಸ ಮಾಡಿದರೆ ಇನ್ನೂ ಕೆಲವಷ್ಟು ಅನುದಾನಕ್ಕಾಗಿ ಕೆಲಸ ಮಾಡುತ್ತಿವೆ. ಕನ್ನಡ ಮತ್ತು ಸಾಹಿತ್ಯದ ಕಾರ್ಯಕ್ರಮಗಳು ಎಂದರೆ ಮನರಂಜನೆ ಕಾರ್ಯಕ್ರಮಗಳಾಗದೇ ಕನ್ನಡ ಕಟ್ಟುವ ಕಾರ್ಯಕ್ರಮಗಳಾಗಬೇಕು. ಅಂಥ ಸಂಸ್ಥೆಗಳು ಬೆಳೆಯಬೇಕಿದೆ ಎಂದು ಸಲಹೆ ನೀಡಿದರು. 

ಯಶಸ್ವಿ 5ನೇ ವರ್ಷ: ಪ್ರಾಸ್ತಾವಿಕ ಮಾತನಾಡಿದ ಸಾಹಿತ್ಯ ಸಂಭ್ರಮ ಸಂಘಟಕ ಡಾ|ಗಿರಡ್ಡಿ ಗೋವಿಂದರಾಜ್‌, ಸಾಹಿತ್ಯ ಸಂಭ್ರಮ ಯಶಸ್ವಿಯಾಗಿ ಇದೀಗ 5ನೇ ವರ್ಷಕ್ಕೆ ಕಾಲಿಟ್ಟಿದೆ. ಈ ವೇದಿಕೆ ಮೂಲಕ ಕೇವಲ ಸಾಹಿತ್ಯ ವಿಚಾರಗಳು ಮಾತ್ರವಲ್ಲ, ನಾಡು-ನುಡಿಯ ವಿಚಾರಗಳು ಚರ್ಚೆಯಾಗಲಿ ಎನ್ನುವುದು ನಮ್ಮ ಆಶಯ. ಅದಕ್ಕಾಗಿಯೇ ಈ ವರ್ಷ ರಾಷ್ಟ್ರೀಯ ಜಲ ನೀತಿ ಎನ್ನುವ ಗೋಷ್ಠಿ ಸೇರಿಸಲಾಗಿದೆ.

Advertisement

ಸಾಕಷ್ಟು ಜನರು ಸಂಭ್ರಮದ ಬೆಂಬಲಕ್ಕೆ ನಿಂತಿರುವುದೇ ಇದರ ಯಶಸ್ಸಿಗೆ ಕಾರಣ ಎಂದರು. ಆಶಯ ಭಾಷಣ ಮಾಡಿದ ಕವಿ ಡಾ|ಎಚ್‌.ಎಸ್‌. ವೆಂಕಟೇಶಮೂರ್ತಿ, ಸಾಹಿತ್ಯ ಸಂಭ್ರಮದ ವೇದಿಕೆ ಯಾವುದೇ ಜಾತಿ, ಧರ್ಮ, ಪ್ರಾದೇಶಿಕತೆ, ಸಿದ್ಧಾಂತ ಎಲ್ಲವನ್ನೂ ಮೀರಿ ಬೆಳೆದು ನಿಂತಿದೆ. ಸಿದ್ಧಾಂತಗಳ ಪ್ರತಿಪಾದಕರು ಮುಖಾಮುಖೀಯಾದಾಗ ಮಾತ್ರ ಸಾಹಿತ್ಯ ಮಂಥನ ಸಾಧ್ಯ ಎಂದರು.  

ಕವನ ವಾಚನ: ಸಾಹಿತ್ಯ ಸಂಭ್ರಮ ಉದ್ಘಾಟಿಸಿದ ನಾಡೋಜ ಕವಿ ಡಾ|ಕೆ.ಎಸ್‌.ನಿಸಾರ್‌ ಅಹಮದ್‌ ಸಾಹಿತ್ಯಾಸಕ್ತರ ಒತ್ತಾಸೆಗೆ ಮಣಿದು ತಾವು ಬರೆದ, ರಾಮನ್‌ ಸತ್ತ ಸುದ್ದಿ ಮತ್ತು ನಿಮ್ಮೊಡನಿದ್ದು ನಿಮ್ಮಂತಾಗದೇ ಎನ್ನುವ ಕವನ ವಾಚನ ಮಾಡಿ ಗಮನ ಸೆಳೆದರು.

ಅಷ್ಟೇಯಲ್ಲ, ಧಾರವಾಡದೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಮಾತನಾಡಿ, ವಿಶ್ವದ ಅನೇಕ ಕಡೆಗಳಲ್ಲಿ ಇಂದು ಸಾಹಿತ್ಯ ಕುರಿತು ಸಮ್ಮೇಳನಗಳು ನಡೆಯುತ್ತಿವೆ. ಅದೇ ಮಾದರಿಯಲ್ಲಿ ಧಾರವಾಡ ಸಾಹಿತ್ಯ ಸಂಭ್ರಮ ನಡೆಯುತ್ತಿರುವುದು ಅಭಿನಂದನಾರ್ಹ ಕೆಲಸವಾಗಿದೆ ಎಂದರು. 

ನಾಡೋಜ ಚೆನ್ನವೀರ ಕಣವಿ, ಲೇಖಕಿ ಡಾ| ವೀಣಾ ಶಾಂತೇಶ್ವರ, ಡಾ|ಲೋಹಿತ್‌ ನಾಯ್ಕರ್‌, ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ ಉಪಸ್ಥಿತರಿದ್ದರು. ಪಂ|ಮಲ್ಲಿಕಾರ್ಜುನ ಮನ್ಸೂರ್‌ ಸಂಗೀತಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಹಾ.ವೆಂ. ಕಾಖಂಡಿಕಿ ನಿರೂಪಿಸಿದರು. 

ಸಂತಾಪ: ಸಾಹಿತ್ಯ ಸಂಭ್ರಮ ಉದ್ಘಾಟನೆಗೂ ಮುನ್ನ, ಕಳೆದ ಒಂದು ವರ್ಷದಲ್ಲಿ ನಿಧನರಾದ ನಾಡಿನ ಹಿರಿಯ ಸಾಹಿತಿಗಳು, ನಾಟಕಕಾರರು ಮತ್ತು ಸಾಂಸ್ಕೃತಿಕ ಲೋಕಕ್ಕೆ ಶ್ರಮಿಸಿದ ಗಣ್ಯರಿಗೆ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಪುಸ್ತಕ ಮಳಿಗೆ ಉದ್ಘಾಟನೆ: ಸಾಹಿತ್ಯ ಸಂಭ್ರಮದ ಅಂಗವಾಗಿ ಸುವರ್ಣ ಮಹೋತ್ಸವ ಭವನದ ಎದುರು  ಸ್ಥಾಪಿಸಿರುವ ಪುಸ್ತಕ ಮಳಿಗೆಗಳನ್ನು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಉದ್ಘಾಟಿಸಿದರು. ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಪತ್ರಗಳ ಪ್ರದರ್ಶನ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next