Advertisement

ಮಿತಿ ನಕ್ಷತ್ರಗಳಿಗಲ್ಲ, ನಮ್ಮ ನೋಟಕ್ಕೆ !

12:18 AM Jul 09, 2023 | Team Udayavani |

ನಗರಗಳು ಏಕೆ ಹೊಳೆಯುತ್ತವೆ? ಏಕೆ ನಮ್ಮನ್ನು ಸೆಳೆಯುತ್ತವೆ? ಏಕೆ ಹಾಗೆ ಕರೆಯುತ್ತವೆ? ನಮಗೇ ಅರಿವಿಲ್ಲದಂತೆ ನಮ್ಮ ಪಾದಗಳೇಕೆ ಹಾದಿಯನ್ನು ಸವೆಸಲು ಸಿದ್ಧವಾಗುತ್ತವೆ? ಗಮ್ಯದ ಮೇಲಿನ ಮೋಹ ಯಾವ ತುದಿಯವರೆಗೆ ಹೊತ್ತೂಯ್ಯುತ್ತದೆ?

Advertisement

ಒಂದಕ್ಕೂ ನಮ್ಮಲ್ಲಿ ಉತ್ತರವಿಲ್ಲ, ಕಾರಣವಿಲ್ಲ. ಹಾಗಾಗಿ ಇವು ಉತ್ತರವೂ ಇಲ್ಲದ ಕಾರಣವೂ ಗೊತ್ತಿರದ ಪ್ರಶ್ನೆಗಳು. ಇವು ಎಂದಿಗೂ ಪ್ರಶ್ನೆಗಳೇ. ಯಾವ ಕಾಲಮಾನದಲ್ಲೂ, ಶತಮಾನದಲ್ಲೂ ಉತ್ತರ ಸಿಕ್ಕಿಲ್ಲ. ಸಿಕ್ಕೀತೆಂಬ ಲೆಕ್ಕಾಚಾರದಲ್ಲಿ ನಾವು ನಡೆಯು ತ್ತಿದ್ದೇವೆ ಅಷ್ಟೇ.

ಖಂಡಿತಾ ಇದು ನಗರಗಳ ಬಗೆಗಿನ ನೇತ್ಯಾತ್ಮಕ ದೃಷ್ಟಿಕೋನವಲ್ಲ. ಹಾಗೆಂದುಕೊಳ್ಳಲೂಬೇಡಿ. ಇದು ಒಂದು ವಾಸ್ತವದ ಸುತ್ತಲಿನ ನಡಿಗೆಯಷ್ಟೇ. ರಾಮಾಯಣದಲ್ಲಿನ ಮಾಯಾ ಜಿಂಕೆಯ ಮಾರೀ ಚನಂತೆಯೇ ನಮ್ಮೆಲ್ಲರನ್ನೂ ನಗರಗಳು ಕರೆ ಯುತ್ತವೆ. ಇದಿಷ್ಟೇ ಗೊತ್ತು. ಉಳಿದಂತೆ ಈ ಕುರಿತು “ನಮ್ಮನ್ನೇನೂ ಕೇಳಬೇಡಿ’ ಎಂದು ಹೇಳುವವರೇ ಎಲ್ಲರೂ. ಇದಕ್ಕೆ ನಾನೂ ಹೊರತಾಗಿಲ್ಲ.

ಇತ್ತೀಚೆಗಷ್ಟೇ ಮತ್ತೂಮ್ಮೆ ತೆಲುಗು ಚಲನಚಿತ್ರ “ಶ್ರೀಮಂತುಡು’ವನ್ನು ನೋಡಿದೆ. ತೆಲುಗಿನ ಚಿತ್ರ. 2015 ರಲ್ಲಿ ಬಿಡುಗಡೆಯಾದ ಚಿತ್ರ. ಕಲಾವಿದರಾದ ಮಹೇಶ್‌ ಬಾಬು, ಶ್ರುತಿ ಹಾಸನ್‌, ಜಗಪತಿ ಬಾಬು, ರಾಜೇಂದ್ರ ಪ್ರಸಾದ್‌ ಎಲ್ಲರೂ ನಟಿಸಿ ರುವಂಥ ಚಿತ್ರವಿದು. ಆ್ಯಕ್ಷನ್‌ ಚಿತ್ರವಾಗಿದ್ದರೂ ಹೆಚ್ಚು ಸಂವಾದ ನಡೆಯುವುದು ಸಿನೆಮಾದ ಕಥಾ ವಸ್ತುವಿನಲ್ಲಿ ನಿರೂಪಣೆಯಲ್ಲಿ. ಕಥೆ, ಚಿತ್ರಕಥೆ, ನಿರ್ದೇಶನ ಕೊರಟಾಲ ಶಿವ ಅವರದ್ದು. ಇದು ಸೂ ಪರ್‌ ಹಿಟ್‌ ವಾಣಿಜ್ಯಾತ್ಮಕ ಚಿತ್ರ. ವಾಣಿಜ್ಯಾತ್ಮಕ ಚಿತ್ರದ ಎಲ್ಲ ಸೂತ್ರಗಳೂ ಇದರಲ್ಲಿವೆ. ಆದರೂ ಸ್ವಲ್ಪ ಹೊತ್ತು ಚಿತ್ರಪಟ ಸೂತ್ರವನ್ನು ಮೀರುವ ಪ್ರಯತ್ನ ಮಾಡುತ್ತದೆ.
*****
ಆ ಹಳ್ಳಿಯಲ್ಲಿ ಬದುಕೇ ಇಲ್ಲ ಎಂದುಕೊಂಡು ಜನರೆಲ್ಲ ಒಬ್ಬೊಬ್ಬರಾಗಿಯೇ ನಗರದ ತೆಕ್ಕೆಗೆ ಬೀಳು ತ್ತಿರುತ್ತಾರೆ. ಆ ಹಳ್ಳಿಯ ನಾರಾಯಣ ರಾವ್‌ (ರಾಜೇಂದ್ರ ಪ್ರಸಾದ್‌) ಎಲ್ಲರ ಮನವೊಲಿಸಿ, ಹಳ್ಳಿ ಯಲ್ಲೇ ಉಳಿಯುವಂತೆ ಮನವಿ ಮಾಡುತ್ತಾನೆ. ಆದರೂ ನಗರಕ್ಕೆ ವಲಸೆ ಹೋಗುವವರ ಸಂಖ್ಯೆ ದಿನೇದಿನೆ ಏರುತ್ತಲೇ ಇರುತ್ತದೆ.

ಒಂದು ದಿನ ನಾರಾಯಣನ ತಮ್ಮನ ಮಗ ನಗರಕ್ಕೆ ಓದಿ ಉದ್ಯೋಗ ಪಡೆದವ ತನ್ನ ಅಪ್ಪ ಅಮ್ಮ ನನ್ನೂ ಕರೆದೊಯ್ಯಲು ಹಳ್ಳಿಗೆ ಬರುತ್ತಾನೆ. 40 ವರ್ಷಗಳಿಂದ ಅಣ್ಣ-ತಮ್ಮ ಅವರ ಪತ್ನಿಯರು, ಮಕ್ಕಳು ಹೀಗೆ ಅವಿಭಕ್ತ ಕುಟುಂಬವೆಂಬಂತೆ ಬದು ಕುತ್ತಿದ್ದ ವ್ಯವಸಾಯಿಗಳು. ಎಲ್ಲರನ್ನೂ ತಡೆಯುತ್ತಿದ್ದ ನಾರಾಯಣನಿಗೇ ತನ್ನ ತಮ್ಮನನ್ನು ಬೀಳ್ಕೊಡುವ ಸಂದರ್ಭ. ಆಗ ತೇಲಿಬರುವ ಕೆಲವು ಸಂಭಾ ಷಣೆಗಳು ಮೇಲಿನ ಪ್ರಶ್ನೆಗಳನ್ನು ಮತ್ತಷ್ಟು ಸ್ಪಷ್ಟ ಗೊಳಿಸಿದವು. ಇದರಿಂದ ಉತ್ತರ ಸಿಕ್ಕಿತೆಂಬ ಅಭಿಪ್ರಾ ಯವಲ್ಲ; ಆದರೆ ಪ್ರಶ್ನೆಗಳಿರುವುದು ಸುಳ್ಳಲ್ಲ ಎಂಬುದು ಸಾಬೀತು ಪಡಿಸಿತು.

Advertisement

ತಮ್ಮ ತನ್ನ ಅಣ್ಣನಲ್ಲಿ, “ನಿನ್ನೆ ರಾತ್ರಿ ನಗರದಿಂದ ಬಂದ ಮಗ ನಮಗೂ ಬನ್ನಿ ಎನ್ನುತ್ತಿದ್ದಾನೆ. ನನ್ನ ಪತ್ನಿಯೂ ಹೊರಡೋಣ ಎಂದು ಒಂದೇ ಸಮನೆ ಹಠ ಹಿಡಿದು ಕುಳಿತಿದ್ದಾಳೆ. ನನಗಂತೂ ಕೊಂಚವೂ ಇಷ್ಟವಿಲ್ಲ. ಈ ನನ್ನೂರು, ನಮ್ಮವರು ಬಿಟ್ಟು ಅಲ್ಲಿ ಹೋಗುವುದಕ್ಕೆ. ಹಾಗಾಗಿ ನನ್ನ ಪತ್ನಿಗೆ ಒಂದು ಮಾತು ಹೇಳು. ನಿನ್ನ ಮಾತು ಕೇಳುತ್ತಾಳೆ’ ಎನ್ನುತ್ತಾನೆ ತಮ್ಮ. ಅದಕ್ಕೆ ಅಣ್ಣ, “ನೋಡೋ, ನೀನು ನನ್ನ ಪ್ರೀತಿ ಯ ತಮ್ಮ. ಒಂದೆರಡು ಹೆಚ್ಚು ಮಾತು ನಿನಗೆ ಹೇಳ ಬಹುದು. ಆದರೆ ನಿನ್ನ ಪತ್ನಿಗಲ್ಲ. ಅವರು ಹೇಳು ವುದೂ ಸರಿ. ಹೋಗು, ಹೋದರೂ ಎಷ್ಟು ದೂರ ಹೋಗುತ್ತೀಯಾ? ಇಲ್ಲೇ ನಗರ(ಹೈದರಾಬಾದ್‌)ಕ್ಕಲ್ಲವೇ? ಬೇಕೆನಿಸಿದಾಗ ಸೀದಾ ಬಂದು ಬಿಡುತ್ತೇನೆ’ ಎಂದು ಭಾವುಕನಾಗಿ ಉಕ್ಕಿ ಬರುವ ಅಳು ತಡೆದು ಕೊಳ್ಳಲಾಗದೇ ಅಲ್ಲಿಂದ ಕದಲುತ್ತಾನೆ.

ಹೌದಲ್ಲವೇ? ನಾವೂ ನಮ್ಮ ಹಳ್ಳಿಯನ್ನು ಬಿಟ್ಟು ಹೊರಡುವಾಗ ಹೀಗೇ ಎಂದುಕೊಳ್ಳುವುದಲ್ಲವೇ? ದೂರವೆಂದರೂ ಎಷ್ಟು ದೂರ? ರಾತ್ರಿ ಮೋಟಾ ರುಬಂಡಿಯನ್ನೋ, ಉಗಿಬಂಡಿಯನ್ನೋ ಹತ್ತಿ ಕುಳಿತರೆ ಬೆಳಗ್ಗೆ ಆಗುವಷ್ಟರಲ್ಲಿ ಹಳ್ಳಿಯ ಬಾಗಿ ಲಲ್ಲಿ ಇರುತ್ತೇವೆ ಎನ್ನುವ ನಂಬಿಕೆ ಯಿಂದಲೇ ಹೊರಟು ಬಿಡುತ್ತೇವೆ. ಆದರೆ ವಾಪಸು ಬರುವಾಗ…
ಮೇಲಿನ ಸನ್ನಿವೇಶದ ಮುಂದು ವರಿದ ಭಾಗ ಇನ್ನೂ ಭಾವ ನಾತ್ಮಕವಾಗಿದೆ. ಮೇಲಿನ ಸನ್ನಿವೇಶ ಮತ್ತೆ ತೆರೆದುಕೊಳ್ಳುವುದು ಆ ಮನೆಯಲ್ಲಿ. ನಗರಕ್ಕೆ ಹೊರಡಲು ಆ ತಮ್ಮನ ಪತ್ನಿ ಜ್ಯೋತಿ ಸಿದ್ಧವಾ ಗುತ್ತಿದ್ದಾಳೆ. ಅವೆಲ್ಲವೇನೂ ಬೇಡ (ಕೆಲವು ಹಳೆ ಬಟ್ಟೆ ಇತ್ಯಾದಿ ಕಂಡು) ಬರೀ ಬಟ್ಟೆ ತೆಗೆದುಕೊಂಡು ಹೋದರೆ ಸಾಕು ಎಂದಿದ್ದಾನೆ ಮಗ ಎಂದು ಮನೆಯ ಉಳಿದವರಲ್ಲಿ ಹೇಳುತ್ತಾ ಉತ್ಸಾಹದಿಂದ ಸೂಟ್‌ಕೇಸ್‌ ಸಿದ್ಧಪಡಿಸಿಕೊಳ್ಳುತ್ತಾಳೆ. ಮಗನೂ, “ಅವೆಲ್ಲ ಯಾಕೆ? ಎಲ್ಲವೂ ಅಲ್ಲಿದೆಯಲ್ಲ’ ಎನ್ನು ತ್ತಾನೆ.

ಆಯಿತೆನ್ನುವಂತೆ ತಲೆ ಆಡಿಸುತ್ತಾ ಬೇಸರದಿಂದ ಕುಳಿತ ಪತಿಯನ್ನು ಕಂಡು, “ಏನು ಸುಮ್ಮನೆ ಕುಳಿತಿದ್ದೀರ, ಅಲ್ಲಿ ಹೋಗಿ ಸರಕು ಕಟ್ಟಲು ಸಹಾಯ ಮಾಡಿ’ ಎನ್ನುತ್ತಾಳೆ. ಆಗ ಆತ “ಜ್ಯೋತಿ ಇನ್ನೊಮ್ಮೆ ಯೋಚಿಸು. ಅಲ್ಲಿ ಹೋಗಿ ಮಾಡುವುದಾದರೂ ಏನು?’ ಎಂದು ಕೇಳಿದಾಗ “ಇಲ್ಲಿ ಇದ್ದೂ ಮಾಡಿದ್ದಾದರೂ ಏನು?’ ಎಂಬ ಪ್ರಶ್ನೆ ರಪ್ಪನೆ ತೇಲಿ ಬರುತ್ತದೆ. ಆಗ ಕಥಾನಾಯಕ (ಮಹೇಶ್‌ ಬಾಬು) ಮೇಲಿನ ಪ್ರಶ್ನೆಗಳನ್ನು ಹುಡು ಕಲು ಆರಂಭಿಸುತ್ತಾನೆ. ಹತ್ತಾರು ಚುಕ್ಕೆಗಳನ್ನು ಜೋ ಡಿಸಿ ಚಿತ್ರ ರೂಪಿಸಲು ಪ್ರಯತ್ನಿಸುತ್ತಾನೆ.

“ಇಲ್ಲಿ ಕನಿಷ್ಠ ಎಲ್ಲರೂ ಒಟ್ಟಿಗೇ ಇರಬಹುದಲ್ಲ. ಇಡೀ ಕುಟುಂಬ. ಹೊಸ ಊರಿಗೆ ಹೋಗುತ್ತಿದ್ದೇನೆ, ನಗರಕ್ಕೆ ಹೋಗುತ್ತಿದ್ದೇನೆ ಎಂಬ ಸಂಭ್ರಮ ಹೊರ ತಾಗಿ ಯಾಕೆ ಹೋಗುತ್ತಿದ್ದೀರಿ ಎಂಬುದಕ್ಕೆ ನಿಮ್ಮಲ್ಲೂ ಸ್ಪಷ್ಟ ಕಾರಣಗಳಿಲ್ಲ. ಅಷ್ಟಕ್ಕೂ ಈ ವಯಸ್ಸಿನಲ್ಲಿ (ಮಧ್ಯ ವಯಸ್ಕ ಮೀರಿದ ಪ್ರಾಯ) ಅಲ್ಲಿಗೆ ಹೋಗಿ ಹೊಸದೇನನ್ನೂ ನೋಡಲು, ಕಲಿಯಲು ಆಗದು. ಇಲ್ಲಿಯೋ (ಹಳ್ಳಿಯಲ್ಲಿ) ಎಲ್ಲರೊಡನೆ ತಮಾಷೆ ಮಾಡಿಕೊಂಡು, ಕೆಲವರ ಕಾಲೆಳೆದುಕೊಂಡು, ವಿಡಂಬನೆ ಮಾಡುತ್ತಾ ಇದ್ದೀರಿ. ಉಳಿದವರೂ ಅದನ್ನು ಕೇಳಿ ಖುಷಿಪಡುತ್ತಾ ಬದುಕುತ್ತಿದ್ದಾರೆ. ನೀವು ನಗರಕ್ಕೆ ಹೋದ ಮೇಲೆ ಇದಾವುದೂ ನಿಮ ಗೂ ಇರದು, ನಮಗೂ ಇರದು. ನಗರದಲ್ಲಿ ಇಲ್ಲಿ ಗಿಂತ ನಾಲ್ಕು ಹೆಚ್ಚು ದೊಡ್ಡ ದೊಡ್ಡ ಕಟ್ಟಡಗಳು ಕಾಣ ಬಹುದು, ಆದರೆ ಪ್ರೀತಿಯಿಂದ ಮಾತನಾ ಡಿಸುವವರು ಸಿಗುವುದು ಕಷ್ಟ’ ಎನ್ನುವಾಗ ಎಲ್ಲರೂ ಹೌದೆನ್ನುವಂತೆ ನೋಡುತ್ತಾರೆ.

“ನಾವು ಹಳ್ಳಿ ಬಿಟ್ಟು ನಗರಕ್ಕೆ ಹೊರಡುವುದೆಂದರೆ ಒಂದು ಸೂಟ್‌ ಕೇಸ್‌ಗೆ ಒಂದಿಷ್ಟು ಬಟ್ಟೆ ಹಾಕಿ ಕೊಂಡು ಈ ಮನೆಯ ಹೊಸ್ತಿಲು ದಾಟಿ ಬಿಟ್ಟರಾ ಯಿತು. ನಾಲ್ಕೈದು ಗಂಟೆ ಪ್ರಯಾಣ. ಅದೇ ವಾಪ ಸು ಹಳ್ಳಿಗೆ ಬರುವುದೆಂದರೆ ಆ ಪುಟ್ಟ ಹೊಸ್ತಿಲೇ ದೊಡ್ಡ ಗೋಡೆಗಳಾಗಿ ಬಿಡುತ್ತವೆ. ನಾಲ್ಕೈದು ಗಂಟೆ ಯ ಪ್ರಯಾಣವೇ ಪ್ರಯಾಸವೆನಿಸಿಬಿಡುತ್ತದೆ’ ಎನ್ನುವ ಕಥಾ ನಾಯಕ, “ಇವರೆಲ್ಲ ಇಲ್ಲೇ ಇದ್ದರೆ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ರಾತ್ರಿ ಮೋಟಾರು ಬಂಡಿಯನ್ನೇರಿ ಬೆಳಗ್ಗೆ ಆಗುವಷ್ಟರಲ್ಲಿ ಬರಬಹುದು. ಆದರೆ ಇವರೆಲ್ಲ ಅಲ್ಲಿಗೆ ಹೋದರೆ ನೀನೂ ಒಮ್ಮೆಯೂ ಬರಲಾರೆ’ ಎನ್ನುತ್ತಾನೆ. ಕಥೆ ಸುಖಾಂತ್ಯಕ್ಕೆ ತಲುಪುವುದು ಬೇರೆ ಮಾತು.
*****
ಎಷ್ಟು ವಾಸ್ತವದ ಮಾತಲ್ಲವೇ ಅದು. ಒಂದು ಪುಟ್ಟ ಹೊಸ್ತಿಲು ದಾಟಿದರೆ ರಸ್ತೆ, ರಸ್ತೆಯಲ್ಲಿ ಸಾಗಿ ದರೆ ಮತ್ತೂಂದು ಊರು. ಹಾಗೆಯೇ ಮರಳಿ ಪ್ರಯಾಣಕ್ಕೆ ಅಣಿಯಾಗುವಾಗ ಆ ನಗರದ ಮನೆ ಯ ಹೊಸ್ತಿಲೇ ಗೋಡೆಗಳಾಗಿ ಎದ್ದು ನಿಲ್ಲುವುದಿಲ್ಲ ವೇನು? ಹಳ್ಳಿಗೆ ಹೋಗಲಾಗದ್ದಕ್ಕೆ ನೂರು ನೆವ ಗಳು ಸಿಗುವುದಿಲ್ಲವೇನು? ಮೊದ ಮೊದಲಿಗೆ ಪ್ರತೀ ಹಬ್ಬ, ಊರ ಜಾತ್ರೆಗೆ ಬರುವವ ಕ್ರಮೇಣ ಕೆಲಸ, ಬ್ಯುಸಿ, ಒತ್ತಡದ ಲೆಕ್ಕ ಹೇಳಿ ವರ್ಷಕ್ಕೊಮ್ಮೆ, ಎರಡು ವರ್ಷಕ್ಕೊಮ್ಮೆ ಎಂದಾಗಿಸಿ… ಹೆತ್ತವರನ್ನೂ ಕರೆಸಿಕೊಂಡು ಹತ್ತೋ, ಇಪ್ಪತ್ತೋ ವರ್ಷಗಳಿಗೊಮ್ಮೆ ಅಪರಿಚಿತನಂತೆ ಹಳ್ಳಿಯ ಬಸ್‌ ನಿಲ್ದಾಣದಲ್ಲಿ ಬಂದು ನಿಲ್ಲುವುದಿಲ್ಲವೇನು?
*****
ಹಳ್ಳಿಗಳು ಮೆಲ್ಲಗೆ ಮಗ್ಗುಲು ಬದಲಿಸುತ್ತಿರುವ ಈ ಹೊತ್ತಿನಲ್ಲಿ ಇಂಥ ಎಷ್ಟೊಂದು ಪ್ರಶ್ನೆಗಳು ಹಾಗೆಯೇ ಉಳಿದಿವೆಯಲ್ಲ?
ಇರಲಿ, ಹಾಗೆಯೇ ಇರಲಿ. ಮುಂದೊಂದು ದಿನ ನಗರದ ಬೆಳಕು ಅತೀ ಎನಿಸಿ ಕತ್ತಲೆಯನ್ನು ಹುಡುಕಿಕೊಂಡು ಹಳ್ಳಿಯ ಹಾದಿ ಹಿಡಿದಾಗ ಅಲ್ಲಿ ಯಾದರೂ ಕತ್ತಲೆ ಸಿಗುವಂತಿರಲಿ.
ಬೆಳಕಿನಲ್ಲಿ ಉತ್ಸಾಹವಿದೆ, ಕತ್ತಲೆಯಲ್ಲಿ ಒಂದು ಬಗೆಯ ಸುಖವಿದೆ!

ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next