Advertisement

ಕೆಎಫ್‌ಡಿ ಪತ್ತೆ ಪ್ರಯೋಗಾಲಯ ಮತ್ತೆ ಇಂದಿನಿಂದ ಕಾರ್ಯಾರಂಭ

09:20 AM Jan 07, 2019 | Team Udayavani |

ಶಿವಮೊಗ್ಗ: ಮಲೆನಾಡಿನಲ್ಲಿ ಮಹಾಮಾರಿ ಮಂಗನಕಾಯಿಲೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾಯಿಲೆ ಪತ್ತೆಗಾಗಿ ಶಿವಮೊಗ್ಗದಲ್ಲೇ ಇರುವ ಪ್ರಯೋಗಾಲಯ ಮತ್ತೆ ಕಾರ್ಯಾರಂಭ ಮಾಡಲಿದೆ.

Advertisement

 ಮಂಗನ ಕಾಯಿಲೆ ವೈರಸ್‌ ಪತ್ತೆಗೆ 2014ರಲ್ಲಿ ಆರಂಭಗೊಂಡಿದ್ದ ರ್ಯಾಪಿಡ್‌ ಟೆಸ್ಟ್‌ ಪಾಲಿಮರೈಸ್ಡ್ ಚೈನ್‌ ರಿಯಾಕ್ಷನ್‌ (ಆರ್‌ಟಿಪಿಸಿಆರ್‌) ಪ್ರಯೋಗಾಲಯ ನಾಲ್ಕು ವರ್ಷ ಬಳಿಕ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಸೋಮವಾರದಿಂದ ಶಿವಮೊಗ್ಗದಲ್ಲೇ ಶಂಕಿತರ ರಕ್ತ ಪರೀಕ್ಷೆ ನಡೆಯಲಿದೆ.

ಅಂದಾಜು 1 ಕೋಟಿ ರೂ. ಖರ್ಚು ಮಾಡಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಹಿಂಭಾಗದಲ್ಲಿರುವ ಪರಮಾಣು ಕ್ರಿಮಿ ಪರಿಶೋಧನಾ ಪ್ರಯೋಗ ಶಾಲೆ ಆವರಣದಲ್ಲಿ ಆರ್‌ಟಿಪಿಸಿಆರ್‌ ಪ್ರಯೋಗಾಲಯವನ್ನು 2014ರಲ್ಲಿ ಆರಂಭಿಸಲಾಗಿತ್ತು. ಆದರೆ, ಸ್ಥಾಪನೆಗೊಂಡು ನಾಲ್ಕು ವರ್ಷವಾದರೂ 2017ರಲ್ಲಿ ಮಾತ್ರ ಈ ಪ್ರಯೋಗಾಲಯ ಕಾರ್ಯ ನಿರ್ವಹಿಸಿದೆ. ಅದಾದ ಬಳಿಕ ಕೆಮಿಕಲ್‌, ಕಿಟ್‌ಗಳ ಕೊರತೆ ಎದುರಾಗಿ ಪ್ರಯೋಗಾಲಯ ಸ್ಥಗಿತಗೊಂಡಿತ್ತು. ಈ ಬಾರಿ ಕಾಯಿಲೆ ಉಲ್ಬಣಗೊಂಡಿದ್ದರಿಂದ ಪ್ರಯೋಗಾಲಯಕ್ಕೆ ಅಗತ್ಯ ಸಾಮಗ್ರಿಗಳ ಖರೀದಿಗೆ 10 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.

ಪುಣೆಯ ಪ್ರಯೋಗಾಲಯವೇಗತಿ: ಮಲೆನಾಡಿನ ಅರಣ್ಯ ಪ್ರದೇಶದಲ್ಲಷ್ಟೇ ಕಂಡುಬರುವ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಹಲವರ ಪ್ರಾಣ ನುಂಗಿದೆ. ಹಲವು ಜನ ಬಾಧಿತರಾಗಿದ್ದಾರೆ. ಆದರೆ ಇಲ್ಲಿ ಪ್ರಯೋಗಾಲಯವಿಲ್ಲದೆ ಶಂಕಿತರ ರಕ್ತದ ಮಾದರಿಯನ್ನು ಪರೀಕ್ಷೆಗೋಸ್ಕರ ಬೇರೆಡೆ ಕಳುಹಿಸಲಾಗಿದೆ. ಈ ಭಾಗದವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿಯೇ ಅತ್ಯಾಧುನಿಕ ಪ್ರಯೋಗಾಲಯವನ್ನು ಇಲ್ಲಿ ಆರಂಭಿಸಲಾಗಿತ್ತು. ಆದರೆ ಅದು ಸ್ಥಗಿತಗೊಂಡಿದ್ದರಿಂದ ರೋಗ ಪತ್ತೆಗಾಗಿ ಹರಸಾಹಸ ಮಾಡಬೇಕಿತ್ತು.

ಬೆಂಗಳೂರು ಮತ್ತು ಮಣಿಪಾಲದ ಕೆಲ ಆಸ್ಪತ್ರೆಗಳಲ್ಲಿ ಆರ್‌ಟಿಪಿಸಿಆರ್‌ ಪ್ರಯೋಗಾಲಯವಿದೆ. ಆದರೆ, ಏಕಕಾಲಕ್ಕೆ ನೂರಾರು ರಕ್ತದ ಮಾದರಿಗಳ ಪರೀಕ್ಷೆ ನಡೆಸುವ ಸಾಮರ್ಥಯ ಇಲ್ಲ. ಹೀಗಾಗಿ, ರಾಜ್ಯದಲ್ಲಿ ವೈರಾಣು ಪರೀಕ್ಷೆ ಫಲಿತಾಂಶಕ್ಕೆ ಪುಣೆಯ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ (ಎನ್‌ಐವಿ) ಪ್ರಯೋಗಾಲಯವನ್ನೇ ಅವಲಂಬಿಸಬೇಕಾಗಿತ್ತು. 

Advertisement

 ರಾಜ್ಯದಲ್ಲಿ ಉಲ್ಬಣವಾಗುತ್ತಿರುವ ಎಚ್‌1 ಎನ್‌1, ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ), ಡೆಂಘೀ, ಚಿಕುನ್‌ಗುನ್ಯಾ, ಇಲಿ ಜ್ವರ ಸೇರಿದಂತೆ ಶಂಕಿತ ವೈರಾಣು ಕಾಯಿಲೆಗಳಿಂದ ಬಳಲುತ್ತಿರುವವರ ರಕ್ತ, ಕಫವನ್ನು ಪುಣೆಯ ಆರ್‌ಟಿಪಿಸಿಆರ್‌ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬರುವವರೆಗೆ ಕಾಯಬೇಕು. ಅಲ್ಲಿಯವರೆಗೆ ರೋಗಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಮನಗಂಡು ಪ್ರಯೋಗಾಲಯಕ್ಕೆ ರಾಜ್ಯ ಸರಕಾರ ಹಸಿರು ನಿಶಾನೆ ನೀಡಿತ್ತು. ಆದರೆ, ಸೌಕರ್ಯಗಳ ಕೊರತೆಯಿಂದಾಗಿ ಪ್ರಯೋಗಾಲಯ ಇದ್ದೂ ಇಲ್ಲದಂತಾಗಿತ್ತು.

ಬಡವರಿಗೆ ಅನುಕೂಲವಾಗಲಿ ಎಂಬ ಸದಾಶಯದೊಂದಿಗೆ ಒಂದೇ ದಿನ ಸಾವಿರಾರು ರೋಗಿಗಳ ರಕ್ತ, ಕಫದ ಪರೀಕ್ಷೆ ಫಲಿತಾಂಶ ನೀಡಬಹುದಾದ ಅತ್ಯಾಧುನಿಕ ಸರಕಾರಿ ಸ್ವಾಮ್ಯದ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಸ್ಥಾಪಿಸಲಾಗಿದೆ. ರೋಗಿಯ ರಕ್ತದ ಮಾದರಿಯನ್ನು ಆರ್‌ಟಿಪಿಸಿಆರ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದರೆ, ಆರಂಭಿಕ ಹಂತದಲ್ಲಿಯೇ ವೈರಾಣುಗಳನ್ನು ಪತ್ತೆ ಹಚ್ಚಿ ಆಗಬಹುದಾದ ಅನಾಹುತದ ಪ್ರಮಾಣ ಕುಗ್ಗಿಸುವ ಸಾಧ್ಯತೆಯೂ ಇದೆ. ಈ ಪ್ರಯೋಗಾಲಯ ಸರಿಯಾಗಿ ಕಾರ್ಯ ನಿರ್ವಹಿಸಿದರೆ,
ಪುಣೆ ಅಥವಾ ಬೆಂಗಳೂರಿನ ಮೇಲೆ ಅವಲಂಬಿಸುವುದು ತಪ್ಪಲಿದೆ.

ಹೀಗಾಗಿ ಮತ್ತೆ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದ್ದು ಕಾಯಲೆ ಪತ್ತೆ ಹಾಗೂ ನಿಯಂತ್ರಣಕ್ಕೆ ಅನುಕೂಲವಾಗಲಿದೆ.
ಎಲ್ಲ ಸಿದ್ಧತೆ: ಕಳೆದ 15 ದಿನಗಳಲ್ಲಿ ಸಾಗರ ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯ ಆರು ಮಂದಿ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಕೋಟ್ಯಂತರ ರೂ. ಖರ್ಚು ಮಾಡಿ ಪ್ರಯೋಗಲಾಯ ಸ್ಥಾಪಿಸಿದರೂ ಲ್ಯಾಬ್‌ ಸಕಾಲಕ್ಕೆ ಲಭ್ಯವಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಹಿಂದೆದಿಗಿಂತಲೂ ಹೆಚ್ಚು ಮಂದಿ ಮಾರಕ ಕಾಯಿಲೆಗೆ ಬಲಿಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. 70ಕ್ಕೂ ಹೆಚ್ಚು ಮಂದಿ ರಕ್ತದ ಮಾದರಿಯನ್ನು ಈಗಾಗಲೇ ಪುಣೆಗೆ ಕಳುಹಿಸಲಾಗಿದೆ.

ಅಲ್ಲಿಂದ ವರದಿ ಬರುವುದು ತಡವಾಗುತ್ತಿದ್ದರಿಂದ ಚಿಕಿತ್ಸೆಗೆ ತೊಡಕಾಗಿತ್ತು. ಸೋಮವಾರದಿಂದ ಇಲ್ಲೇ ರಕ್ತ ತಪಾಸಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.   ಸೋಮವಾರದಿಂದ ಶಿವಮೊಗ್ಗದಲ್ಲೇ ರಕ್ತದ ಮಾದರಿ ಪರೀಕ್ಷೆ ನಡೆಸಲಾಗುವುದು. ಇದಕ್ಕಾಗಿ ವಾರ, ಹದಿನೈದು ದಿನ ಕಾಯುವುದು ತಪ್ಪಲಿದೆ. ಮಂಗಗಳು ಸತ್ತಿದ್ದು ಕಂಡುಬಂದಲ್ಲಿ ತಕ್ಷಣ ನಾಶಪಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್‌ ನಡೆಸುತ್ತಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಗ್ರಾಮದಲ್ಲಿಯೇ ಆ್ಯಂಬುಲೆನ್ಸ್‌ಗಳನ್ನು ಇಡಲಾಗಿದೆ.
 ಕೆ.ಎ. ದಯಾನಂದ್‌, ಜಿಲ್ಲಾಧಿಕಾರಿ

„ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next