Advertisement

ನೀರಾವರಿ ನಿರ್ವಹಣಾ ನಿಖರತೆ ಉಪಗ್ರಹಗಳಿಂದ ಮಾತ್ರ ಸಾಧ್ಯ

12:30 AM Oct 28, 2018 | |

ಕೃಷ್ಣಾ ಜಲಾನಯನ ಪ್ರದೇಶದ ಎಲ್ಲಾ ಮುಖ್ಯ ಜಲಾಶಯಗಳಾದ ಭೀಮ, ಕೃಷ್ಣಾ, ಘಟಪ್ರಭ, ನಾರಾಯಣಪುರ, ತುಂಗಭದ್ರಾ, 
ಶ್ರೀಶೈಲಂ, ಗುಂಡಲಕಮ್ಮ, ನಾಗಾರ್ಜುನ ಸಾಗರ ಜಲಾಶಯಗಳಲ್ಲಿ ಉಪಗ್ರಹದಿಂದ ತೆಗೆದ ಚಿತ್ರಗಳಿಂದ ಜಲಾಶಯದ ಬಳಕೆಗೆ ಲಭ್ಯ ನೀರಿನ ಪ್ರಮಾಣದ ಅರಿವು, ಅಂತರ ರಾಜ್ಯದ ಸಮನ್ವಯ ನೀರಿನ ಹಂಚಿಕೆಗೆ ದಾರಿದೀಪವಾಗಬಲ್ಲವು.

Advertisement

ನದೀ ತೀರದ ನಾಗರೀಕತೆಗಳ ಬಗ್ಗೆ ನೀವರಿತಿದ್ದೀರಿ. ಕಾಲಾನುಸಾರ ಜನ ಸಂಖ್ಯೆ ಹೆಚ್ಚಾದಂತೆಲ್ಲಾ ನೀರಾವರಿ ನಾಲೆಗಳ ಸುತ್ತ ನಾಗರೀಕತೆ ಅರಳಿತೆಂದು ನಾವಂದುಕೊಂಡೆವು. ಊಟದ ಸಮಸ್ಯೆ ಬಗೆ ಹರಿಯಿತೆಂದುಕೊಳ್ಳುವಷ್ಟರಲ್ಲೇ ಜನಸಂಖ್ಯೆ ಏರುತ್ತಲೇ ಹೋಯಿತು. ನೀರಾವರಿ ನೀರು ತರಹೆವಾರಿ ಬಳಕೆಗಳಿಗೆ (ಅಂದರೆ ಗುರುತಿಸಲ್ಪಡದ ಜಮೀನುಗಳಿಗೆ ಮತ್ತು ನಮೂದಿಸಲ್ಪಡದ ಬೆಳೆಗಳಿಗೆ, ನಾಲೆ/ನದಿ ಹರಿಯುವ ಕಡೆಯಿಂದೆಲ್ಲಾ ಸರಕಾರಿ ಅನುಮತಿಯಿಲ್ಲದ ನೀರು ಬಳಕೆ ಪಂಪ್ಸೆಟ್‌ಗಳು, ಅಂತರ್ಜಲವೆಲ್ಲಾ ಬತ್ತಿಹೋಗುವಷ್ಟು ಎಲ್ಲೆಂದರಲ್ಲೆ ಕೃಷಿ, ಕೈಗಾರಿಕೆ, ಮೀನುಗಾರಿಕೆ ನೀರೆಳೆತ ಹಾಗೂ ಮಾರಾಟ, ಇವೆಲ್ಲಾ ಸೇರಿ ಭೂಮೇಲ್ಮೆ ç ತೆರೆದ ಕಾಲುವೆಗಳ (ಜಲಾಶಯಗಳ ಹಾಗೂ ಏತ ನೀರಾವರಿ ಬಳಕೆ) ನೀರಾವರಿಯಿಂದ ಸಾಮರ್ಥ್ಯ ಎಷ್ಟು ಕುಸಿದಿದೆಯೆಂದರೆ ಒಂದು ನೂರು ಯೂನಿಟ್‌ ನೀರಿನಲ್ಲಿ ಇಪ್ಪತೈದು ಯೂನಿಟ್‌ಗಳು ಮಾತ್ರ ಸದುಪಯೋಗವಾಗುತ್ತಿವೆ.

ಈಗ ಭಾರತದ ಸವಾಲೆಂದರೆ ಕೃಷಿ ಉತ್ಪಾದನೆಯನ್ನು ದ್ವಿಗುಣಗೊಳಿ ಸುವುದು ಹಾಗೂ ಅಧಿಕ ಬೆಳೆ ಬೆಳೆದು ರಫ್ತು ಮಾಡುವುದು. ನೀರಾವರಿ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವೇ ಎಂದು ಯೋಚಿಸಿದಾಗ ಉಪಗ್ರಹಗಳ ಸದುಪಯೋಗಿ ಬಳಕೆಯಿಂದ ಇದು ಸಾಧ್ಯ ಎಂದು ಕಂಡುಕೊಳ್ಳಬಹುದು. 

ದೂರ ಸಂವೇದಿ ಉಪಗ್ರಹಗಳ ಮಾಹಿತಿ ತಂತ್ರಜ್ಞಾನ ಬಳಕೆಯಿಂದ ಅಚ್ಚುಕಟ್ಟು ಪ್ರದೇಶಗಳ ನೀರಾವರಿ ನಿರ್ವಹಣಾ ಸೂಚ್ಯಂಕಗಳ ನಕಾಶೆ ಚಿತ್ರಗಳನ್ನು ಆಯಾಯ ನೀರಾವರಿ ಕಾಲಘಟ್ಟದ ಆಸುಪಾಸಿನಲ್ಲಿಯೇ ತಯಾರಿಸಲು ಸಾಧ್ಯವಿದೆ. ಜಲಸಂಪನ್ಮೂಲದ ಏಕೀಕೃತ ನಿರ್ವಹಣಾ ವ್ಯವಸ್ಥೆಗೆ ಇದು ಸಹಾಯಕವಾಗಬಲ್ಲುದು. ದೂರಸಂವೇದಿ ಉಪಗ್ರಹಗಳಿಂದ ಇದು ಸಾಧ್ಯ ಎಂದು ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ದೂರಸಂವೇದಿ ಚಿತ್ರಗಳಿಂದ ತಿಳಿದುಬರುತ್ತದೆ. ನಾಲ್ಕುವರ್ಷಗಳು ಈ ತರಹ ಚಿತ್ರಗಳನ್ನು ತುಂಗಭದ್ರಾಅಚ್ಚುಕಟ್ಟು ಪ್ರದೇಶದಲ್ಲಿ ಪಡೆದು, ವಿವಿಧ ತೆರನಾದ ಬೆಳೆ ನೀರುಂಡ ಪ್ರದೇಶಗಳ ವಕ್ರ ಬಹುಭುಜಾಕೃತಿಗಳನ್ನು ಜಲವಿಜ್ಞಾನಕ್ಕೆ ಉಪಯೋಗಿಸಿ;  ಅಚ್ಚುಕಟ್ಟು ಪ್ರದೇಶದಲ್ಲಿನ ನೀರಾವರಿ ನಿರ್ವಹಣಾ ಸೂಚ್ಯಂಕಗಳು-ವಿವಿಧ ಮಾನದಂಡಗಳಾದ- ಏಕಪ್ರಕಾರತೆ, ಯಥೋಚಿತತೆ, ನೀತಿ ಹಾಗೂ ವಿಶ್ವಾಸಾರ್ಹತೆ- ಇಂದ ನೀರಾವರಿ ನಾಗರೀಕತೆಯ ಮಾನಚಿತ್ರಗಳ ತಯಾರಿಕೆ ಸಾಧ್ಯ.

ಜಲಾಶಯಗಳ ಹಿಂದೆ ಶೇಖರಿಸಿದ ನೀರಿನ ಪ್ರಮಾಣ, ಹೂಳು ಶೇಖರಣೆಯಿಂದ (ಬರೀ ತಳ ಭಾಗದ ಶೇಖರಣೆಯಲ್ಲ, ಕಾರ್ಯನಿರ್ವಹಣಾ ಶೇಖರಣೆಯ ಭಾಗದಲ್ಲಿಯೂ ಸಹ) ಕಡಿಮೆಯಾಗುತ್ತಾ ಹೋಗುವ ಪರಿಯನ್ನು ಉಪಗ್ರಹ ಚಿತ್ರಗಳು ನಿಭಾಯಿಸಬಲ್ಲವು. (ವಿಶ್ವ ಜರ್ನಲ್‌ನಲ್ಲಿ ಈ ಕುರಿತು ನನ್ನದೊಂದು ಲೇಖನ ಕೂಡಾ ಪ್ರಕಟವಾಗಿದೆ). 

Advertisement

ಎರಡು ಉಪಗ್ರಹ ಚಿತ್ರಗಳ ನಡುವಿನ (ಸಾಮಾನ್ಯವಾಗಿ 1000 ಕಿಲೋಮೀಟರ್‌ ಎತ್ತರದ ದೂರ ಸಂವೇದಿ ಉಪಗ್ರಹಗಳಿಗೆ ಒಂದೇ ಪ್ರದೇಶದ ಮೇಲೆ ಬಂದು ಅಂಕೀಯ ದತ್ತಾಂಶ ಚಿತ್ರಬಿಡಿಸಲು ಇಪ್ಪತ್ತೆರಡು ದಿನಗಳು ಬೇಕು) ಜಲಾಶಯದ ಬಳಕೆಗೆ ಲಭ್ಯ ನೀರಿನ ಪ್ರಮಾಣದ ಅರಿವು ಕೊಡುವಲ್ಲಿ ಸಮರ್ಪಕವಾಗಿವೆ. ಇದೇ ಪ್ರಕಾರ, ಉದಾಹರಣೆಗೆ, ಕೃಷ್ಣಾ ಜಲಾನಯನ ಪ್ರದೇಶದ ಎಲ್ಲಾ ಮುಖ್ಯ ಜಲಾಶಯಗಳಾದ ಭೀಮ, ಕೃಷ್ಣಾ, ಘಟಪ್ರಭ, ನಾರಾಯಣಪುರ, ತುಂಗಭದ್ರಾ, ಶ್ರೀಶೈಲಂ, ಗುಂಡಲಕಮ್ಮ, ನಾಗಾರ್ಜುನ ಸಾಗರ ಜಲಾಶಯಗಳಲ್ಲಿ ಉಪಗ್ರಹದಿಂದ ತೆಗೆದ ಚಿತ್ರಗಳಿಂದ ಜಲಾಶಯದ ಬಳಕೆಗೆ ಲಭ್ಯ ನೀರಿನ ಪ್ರಮಾಣದ ಅರಿವು, ಅಂತರ ರಾಜ್ಯದ ಸಮನ್ವಯ ನೀರಿನ ಹಂಚಿಕೆಗೆ ದಾರಿದೀಪವಾಗಬಲ್ಲವು. ಏಕೆಂದರೆ, ಪ್ರತಿ ಜಲಾಶಯದ ಬಳಿ ನೀರಿನ ಪ್ರಮಾಣ ಅಳತೆ ವ್ಯತ್ಯಾಸ ಹತ್ತರಿಂದ ಹದಿನೈದು ಟೀಯೆಂಸಿ (ಬೆಂಗಳೂರಿನ ಹತ್ತು ತಿಂಗಳ ಕುಡಿಯುವ ನೀರಿನ ಬಳಕೆ ಅಥವಾ ಹತ್ತುಸಾವಿರ ಹೆಕ್ಟೇರಿನಷ್ಟು ಭತ್ತ ಬೆಳೆಯಬಲ್ಲ ನೀರಿನ ಬಳಕೆ ಸಾಧ್ಯ) ಇರುತ್ತದೆ.  ಹಲವಾರು ವರ್ಷಗಳ ಈ ತೆರನಾದ ಅಧ್ಯಯನ, ಜಲಾಶಯದ ನೀರು ನಿರ್ವಹಣಾ ಸಾಮರ್ಥ್ಯ ಸೂಚ್ಯಂಕಗಳನ್ನು ಕೊಡುವಲ್ಲಿ ಯಶಸ್ವಿಯಾಗಿ ಅಂತರ ರಾಜ್ಯ ಕಲಹಗಳಿಂದ ಮುಕ್ತರನ್ನಾಗಿಸಿ ಏಕೀಕೃತ ನೀರು 
ನಿರ್ವಹಣಾ ವ್ಯವಸ್ಥೆ (Integrated Water Resources Management (IWRM)) ಬರಲು ಸಹಾಯಕವಾಗಿರುತ್ತವೆ. ಏಕೆಂದರೆ ಉಪಗ್ರಹಾಧಾರಿತ ತೀರ್ಮಾ ನಗಳು, ವ್ಯವಸ್ಥಿತವಾಗಿಯೂ, ಹಿಂದಿನ ತೀರ್ಮಾನಗಳಿಗೆ ಬದ್ಧವಾಗಿಯೂ, ಮುನ್ನೋಟವುಳ್ಳ¨ªಾಗಿಯೂ ಹಾಗೂ ಏಕೀಕೃತಗೊಂಡ ತೀರ್ಮಾನಗಳಾ ಗಿಯೂ ಇರಬಲ್ಲ ಲಕ್ಷಣಗಳನ್ನು ಹೊಂದಿರುವುದರಿಂದ, ನಾವದನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಬಹಳವಿದೆ.

ಮುಂಬರುವ ದಿನಗಳಲ್ಲಿ ಬರೀ ದೂರ ಸಂವೇದನೆ ಉಪಗ್ರಹಗಳೇ ಏಕೆ, ಸಾಗಾಟ ಅಂಕಿ ನೋಟಗಳನ್ನು (ಚಲನ ಅಂಕಿತ, ಸ್ಥಳ ಅಂಕಿತ ಹಾಗೂ ಸಮಯ ಅಂಕಿತ (Position& Navigation&Timing PNT Satellites like IRNSS  )  ಹಾಗೂ ದೂರ ಸಂಪರ್ಕ/ ಸಂವಹನದ (Communication like INSAT) ದತ್ತಾಂಶಗಳನ್ನು ಕೊಡುವ ಉಪಗ್ರಹಗಳೂ ಸುಸ್ಥಿರ ನೀರಿನ ನಿರ್ವಹಣೆ/ ವ್ಯವಸ್ಥಾಪನಾ ಕಾರ್ಯದ ಕೇಂದ್ರಬಿಂದುಗಳಾಗುವ ದಿನಗಳೂ ದೂರವಿಲ್ಲ. ಸಾಗಾಟ ಅಂಕಿ ನೋಟಗಳನ್ನು ಕೊಡುವ ಉಪಗ್ರಹಗಳ ದತ್ತಾಂಶವನ್ನು ವಿಶೇಷವಾಗಿ ಸಂಸ್ಕರಿಸಿ ನೂರಾರು ಜಲಾಶಯಗಳ/ ಕೆರೆಗಳ ನೀರಿನ ಮಟ್ಟವನ್ನು ಬಿಂಬಿಸುವಂತೆಯೂ ಹಾಗೂ ದೂರ ಸಂಪರ್ಕ/ ಸಂವಹನದ ದತ್ತಾಂಶಗಳನ್ನು (IOT) ಸಂವೇದಕಗಳ ಹಾಗೂ ಮೋಡ ಜಾಲಗಣಿತದ ನಂಟಿನಂತೆ ನಿರ್ಮಿಸಿ ಎಲ್ಲಾ ನೀರು ಸ್ಥಾವರಗಳನ್ನೂ ಜೊತೆಗೂಡಿಸಿ ಕೆಲಸ ಮಾಡಿಸಬಲ್ಲ ತಾಕತ್ತನ್ನು ಕೊಡಬಲ್ಲವು.

ಕೃಷಿ-ಹವಾಮಾನ ವಿಭಜಿತ ಸಣ್ಣ ಜಲಾನಯನಗಳಲ್ಲಿನ ನೀರಾವರಿ ಬೆಳೆಗಳ ವಿಂಗಡನಾ ಸಾಮರ್ಥ್ಯದ ದೂರಸಂವೇದಿ ತಂತ್ರಜ್ಞಾನ, ಜಲವಿಜ್ಞಾನ, ಜಲಸಂಪನ್ಮೂಲ ವಿಜ್ಞಾನ, ಕೃಷಿ ವಿಜ್ಞಾನ ಬಳಸಿ, ನೀರಿನ ಹೆಜ್ಜೆ ಗುರುತು, ಪರಿಸರ ವೃತ್ತಾಂತ ಹೆಜ್ಜೆಗುರುತು, ಬೆಳೆ ಉತ್ಪಾದನಾ ಸಾಮರ್ಥ್ಯ ಇವನ್ನೆಲ್ಲ ಉಪಯೋಗಿಸಿ ಹಸಿರು ಮತ್ತು ನೀಲಿ ಜಲಸಂಪನ್ಮೂಲಗಳ ಜಲಾನಯನದ ಮಟ್ಟದ ಉಪಯೋಗದ ಸೂಚ್ಯಂಕಗಳನ್ನು ಪಡೆಯುವ ಯತ್ನ ನಡೆಯಬೇಕಿದೆ. ಕೃಷ್ಣಾ ಜಲಾನಯನ ಕ್ಷೇತ್ರದಲ್ಲಿ ಉಪಗ್ರಹಗಳ ಕಾಲ-ಶ್ರೇಣಿ ಪ್ರತಿಮಾ ಚಿತ್ರಗಳ ಉಪಯೋಗದಿಂದ ಸಸ್ಯ ಋತುಮಾನ ಶಾಸ್ತ್ರ ಆಧರಿಸಿ ಮೇಲ್ಮೆ„ ನೀರಿನಿಂದ ಹಾಗೂ ಅಂತರ್ಜಲ ನೀರಿನಿಂದ ಬೆಳೆದ ವಿವಿಧ ಬೆಳೆಗಳ ವಿಂಗಡಣೆ ಮಾಡುವ ಸಾಮರ್ಥ್ಯವಿದೆ. ಹವಾಮಾನ ವೈಪರೀತ್ಯ ನಿರ್ವಹಣೆ, ಆಹಾರ ಸಂರಕ್ಷಣೆ, ಉತ್ಪಾದನಾ ಸಂವರ್ಧನೆ, ಇವೆಲ್ಲಕ್ಕೂ ಕಾಲಕಾಲಕ್ಕೆ ನಿಯಮಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಸಿಗುವ ಉಪಗ್ರಹ ಆಧಾರಿತ ಪ್ರತಿಮಾ ಚಿತ್ರಗಳು ಅತ್ಯಂತ ಸಹಾಯಕವಾಗುತ್ತವೆ.

(ಬೆಂಗಳೂರಿನ ಬಸವನಗುಡಿಯಲ್ಲಿರುವ ಮುನ್ನೋಟ ಪುಸ್ತಕ ಮಳಿಗೆ ತಿಂಗಳಿಗೊಮ್ಮೆ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾತುಕತೆ ಏರ್ಪಡಿಸುತ್ತಿದೆ. ಈ ಬಾರಿ ನಡೆದ ಮಾತುಕತೆಯ ಆಯ್ದ ಬರಹ ರೂಪವಿದು)

ಜಗದೀಶ್‌ ಚಿನಗುಡಿ, ಇಸ್ರೋ ಮಾಜಿ ವಿಜ್ಞಾನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next