Advertisement

ಆಮದು ವೆಚ್ಚ ರೂ.1.4 ಲಕ್ಷ ಕೋಟಿ: ರೈತರ ಕೈತಪ್ಪಿತೇ?

05:24 PM Aug 28, 2017 | Harsha Rao |

ಕಳೆದ ವರ್ಷದಲ್ಲಿ ನಮ್ಮ ದೇಶ ಆಮದು ಮಾಡಿಕೊಂಡ ಕೃಷಿ ಉತ್ಪನ್ನಗಳ ಮೌಲ್ಯ ರೂ.1.4 ಲಕ್ಷ ಕೋಟಿ. ಇದರಿಂದಾಗಿ ಹುಟ್ಟುವ ಸಂದೇಹ: ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿರಬೇಕೆಂಬ ಧೋರಣೆಯನ್ನು ನಮ್ಮ ದೇಶ ಕ್ಷಿಪ್ರವಾಗಿ ಬದಲಾಯಿಸುತ್ತಿದೆಯೇ? 

Advertisement

ಈ ಸಂದೇಹಕ್ಕೆ ಕಾರಣ, ಇತ್ತೀಚೆಗಿನ ವರ್ಷಗಳ ಬೆಳವಣಿಗೆ: ಇತ್ತ ಬಂಪರ್‌ ಬೆಳೆ ಬೆಳೆದಿದ್ದೇವೆ ಎಂದು ಘೋಷಿಸುವ ಸರಕಾರ, ಅತ್ತ ಕೃಷಿ ಉತ್ಪನ್ನಗಳ ಆಮದಿಗೆ ಉತ್ತೇಜನ ನೀಡುತ್ತಿರುವುದು. ಮುಖ್ಯವಾಗಿ, ಗೋಧಿ, ಜೋಳ ಮತ್ತು ಅಕ್ಕಿ (ಬಾಸ್ಮತಿ ಹೊರತಾಗಿ) ಇಂತಹ ಏಕದಳ ಧಾನ್ಯಗಳ ಆಮದಿಗೆ ಅವಕಾಶ ನೀಡಿರುವುದು.

ಈ ಆಹಾರಧಾನ್ಯಗಳ ಆಮದು ಪರಿಮಾಣ 2014ರಿಂದ 2017ರ ಅವಧಿಯಲ್ಲಿ 110 ಪಟ್ಟು ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಈ ಆಹಾರಧಾನ್ಯಗಳನ್ನು ಬೆಳೆಸುವವರು, ಈಗ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈತರೇ ಆಗಿ¨ªಾರೆ. ಈ ಆಮದಿನಿಂದಾದ ಬೆಲೆ ಕುಸಿತದ ತೀವ್ರ ಹೊಡೆತ ಬಿದ್ದಿರುವುದು ಇದೇ ರೈತರಿಗೆ. ಆದ್ದರಿಂದಲೇ ಅವರ ಆಕ್ರೋಶ ಮುಗಿಲು ಮುಟ್ಟಿದೆ.

ಕೃಷಿ ಉತ್ಪನ್ನಗಳ ಆಮದಿನ ಮೇಲಣ ಸುಂಕವನ್ನು ಇಳಿಸಿದ ಹಾಗೂ ರದ್ದು ಮಾಡಿದ ಸರಕಾರದ ಧೋರಣೆಯಿಂದಾಗಿ ಈಗ ಪರಿಸ್ಥಿತಿ ಏನಾಗಿದೆ? ಸ್ಥಳೀಯ ಮಾರುಕಟ್ಟೆಯಿಂದ ಧಾನ್ಯಗಳನ್ನು ಖರೀದಿಸುವುದಕ್ಕಿಂತ, ಅದನ್ನು ಆಸ್ಟ್ರೇಲಿಯಾದಿಂದ ಆಮದು ಮಾಡುವುದೇ ವರ್ತಕರಿಗೆ ಹಾಗೂ ಮಿಲ್ಲುಗಳ ಮಾಲೀಕರಿಗೆ ಅಗ್ಗವೆನಿಸಿದೆ.

ಈ ಧೋರಣೆಯ ಪರಿಣಾಮ  ಭಾರತದ ಆಹಾರ ಆಮದು ವೆಚ್ಚದಲ್ಲಿ ಭಾರೀ ಏರಿಕೆ. ಏಕದಳ ಧಾನ್ಯಗಳ (ಗೋಧಿ, ಜೋಳ ಮತ್ತು ಅಕ್ಕಿ ಸಹಿತ) ಆಮದು ವೆಚ್ಚ 2014-15ರಲ್ಲಿ ರೂ.134 ಕೋಟಿಯಿಂದ 2016-17ರಲ್ಲಿ ರೂ.9,009 ಕೋಟಿಗೆ ಹೆಚ್ಚಳ (ಶೇ.6,723 ಹೆಚ್ಚಳ).

Advertisement

ಕೇಂದ್ರ ಸರಕಾರದ ಕೃಷಿ ಮಂತ್ರಾಲಯ 2015-16ರಲ್ಲಿ 94 ದಶಲಕ್ಷ ಟನ್‌ ಗೋಧಿ ಉತ್ಪಾದನೆ ಆಗಲಿದೆ ಎಂದು ಅಂದಾಜು ಪ್ರಕಟಿಸಿತ್ತು (ಮುಂಚಿನ ವರುಷಕ್ಕಿಂತ ಶೇ.8.6 ಹೆಚ್ಚು). ಇದು ಆಧಾರರಹಿತ ಎಂದು ಕೆಲವೇ ತಿಂಗಳುಗಳಲ್ಲಿ ಬಹಿರಂಗವಾಯಿತು. 

ಏಕೆಂದರೆ, 2015-16ರಲ್ಲಿ 28 ದಶಲಕ್ಷ ಟನ್‌ ಗೋಧಿ ಖರೀದಿಸಿದ್ದ ಕೇಂದ್ರ ಸರಕಾರ, 2016-17ರಲ್ಲಿ 23 ದಶಲಕ್ಷ ಟನ್‌ ಖರೀದಿಸಿ (ಉತ್ಪಾದನೆಯ ಕುಸಿತ ನಿರೀಕ್ಷಿಸಿ), ಗೋಧಿಯ ಆಮದಿಗೆ ಉತ್ತೇಜನ ನೀಡಿತು! ಗೋಧಿ ಆಮದಿನ ಮೇಲಿನ ಸುಂಕವನ್ನು ಸಪ್ಟಂಬರ್‌ 2016ರಲ್ಲಿ ಶೇ.25ರಿಂದ ಶೇ.10ಕ್ಕೆ ಇಳಿಸಿತು; ಅನಂತರ ಡಿಸೆಂಬರ್‌ 2016ರಲ್ಲಿ ಆ ಸುಂಕವನ್ನು ಸಂಪೂರ್ಣ ರದ್ದುಗೊಳಿಸಿತು!

ಕೇಂದ್ರ ಸರಕಾರ 2015-16ರಲ್ಲಿ ಗೋಧಿಯ ಬಂಪರ್‌ ಬೆಳೆಯ ಅಂದಾಜು ಮಾಡಿದ್ದರೂ, ವರ್ತಕರಿಗೆ ಆ ವರ್ಷ ಗೋಧಿ ಉತ್ಪಾದನೆ ಕಡಿಮೆಯಾಗಲಿದೆ ಎಂಬ ಸೂಚನೆ ಸಿಕ್ಕಿತ್ತು. ಇದುವೇ ಏಪ್ರಿಲಿನಿಂದ ಡಿಸೆಂಬರ್‌ 2016 ಅವಧಿಯಲ್ಲಿ ವರ್ತಕರು ಗೋಧಿಹುಡಿಯ ಬೆಲೆ ಶೇ.25 ಹೆಚ್ಚಿಸಲು ಕಾರಣವಾಯಿತು. ಈ ಬೆಲೆ ಹೆಚ್ಚಳ ತಡೆಯಲಿಕ್ಕಾಗಿ ಕೇಂದ್ರ ಸರಕಾರ ಗೋಧಿಯ ಆಮದಿಗೆ ಉತ್ತೇಜನ ನೀಡಿತು.

ಜೊತೆಗೆ, ಭಾರತದ ಆಹಾರ ನಿಗಮದ ಮಾಹಿತಿಯ ಪ್ರಕಾರ, ಕಳೆದ ದಶಕದÇÉೇ ಗೋಧಿ ಸಂಗ್ರಹದ ಮಟ್ಟ 2016-17ರಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿಯಿತು. ಈ ಮಟ್ಟ 1 ಜನವರಿ 2017ರಲ್ಲಿ 1.38 ದಶಲಕ್ಷ ಟನ್‌ ಆಗಿದ್ದರೆ, 2015-16ರಲ್ಲಿ 2.4 ದಶಲಕ್ಷ ಟನ್‌ ಆಗಿತ್ತು. ಗಮನಿಸಿ, ಇದು ಗೋಧಿಯ ಕಾಪಿಟ್ಟ ಸಂಗ್ರಹದ ಕನಿಷ್ಠ ಮಟ್ಟ (ಅಂದರೆ ಇಷ್ಟು ಸಂಗ್ರಹ ಇರಲೇ ಬೇಕು). ಹಾಗಾಗಿ, 2016-17 ಹಂಗಾಮಿನಲ್ಲಿ ಈಗಾಗಲೇ 5.75 ದಶಲಕ್ಷ ಟನ್‌ ಗೋಧಿ ಆಮದು ಮಾಡಲಾಗಿದೆ.

ಕೃಷಿ ಉತ್ಪನ್ನಗಳ ಆಮದನ್ನು, ಆಹಾರವಸ್ತುಗಳ ಬೆಲೆಯೇರಿಕೆ ತಡೆಯುವ ಕಾರ್ಯತಂತ್ರವಾಗಿ ಸರಕಾರ ಬಳಸುತ್ತಿದೆ. ಆದರೆ, ಆಮದು-ಸುಂಕವಿಲ್ಲದ ಗೋಧಿಯ ಆಮದು ಹೀಗೆಯೇ ಮುಂದುವರಿದರೆ, ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆಯಾದೀತು. ಕೇಂದ್ರ ಸರಕಾರ ಗೋಧಿ ಮತ್ತು ದ್ವಿದಳಧಾನ್ಯಗಳ ಕನಿಷ್ಠ ಬೆಂಬಲ ಬೆಲೆ ಏರಿಸಿದೆ: ಅಕ್ಟೋಬರ್‌ 2016ರಲ್ಲಿ ಗೋಧಿಯದ್ದನ್ನು ಟನ್ನಿಗೆ ರೂ.1,525ರಿಂದ ರೂ.1,625ಕ್ಕೆ ಮತ್ತು 20 ಜೂನ… 2017ರಂದು ದ್ವಿದಳಧಾನ್ಯಗಳದ್ದನ್ನು ಟನ್ನಿಗೆ ರೂ.50,500ರಿಂದ ರೂ.54,500ಕ್ಕೆ ಏರಿಸಿದೆ. ಆದರೆ ಇದರಿಂದ ರೈತರಿಗೇನೂ ಪ್ರಯೋಜನ ಆಗಲಿಲ್ಲ; ಯಾಕೆಂದರೆ, ಮಾರ್ಚ್‌ 2017ರವರೆಗೂ ಸುಂಕವಿಲ್ಲದೆ ಗೋಧಿ ಆಮದಿಗೆ ಅವಕಾಶ ನೀಡಲಾಗಿತ್ತು.

ಆಮದಿಗೆ ಉತ್ತೇಜನ ನೀಡುವ ಸರಕಾರದ ಧೊರಣೆಯಿಂದಾಗಿ ದೇಶದ ಆರ್ಥಿಕತೆಗೆ ಧಕ್ಕೆಯಾಗುತ್ತಿದೆ. ಉದಾಹರಣೆಗೆ, 1993-94ರಲ್ಲಿ ದೇಶದ ಖಾದ್ಯತೈಲ ಬಳಕೆಯ ಶೇ.3ರಷ್ಟನ್ನು ಮಾತ್ರ ಆಮದು ಮಾಡಲಾಗುತ್ತಿತ್ತು. ಈಗ, ಈ ಆಮದಿನ ಪ್ರಮಾಣ ಶೇ.70ಕ್ಕೇರಿದೆ  ಪ್ರತಿ ವರುಷವೂ ರೂ.70,000 ಕೋಟಿ ವೆಚ್ಚದಲ್ಲಿ! ಇದರಿಂದಾಗಿ, ನಮ್ಮ ಆಂತರಿಕ ಮಾರುಕಟ್ಟೆಯಲ್ಲಿ ಆಮದಾದ ಅಗ್ಗದ ಬೆಲೆಯ ಪಾಮ… ಎಣ್ಣೆ ಮತ್ತು ಸೋಯಾಬೀನ… ಎಣ್ಣೆ ಧಾರಾಳ ಲಭ್ಯ. 2015-16ರಲ್ಲಿ, ನಮ್ಮ ದೇಶದಲ್ಲಿ ಎಣ್ಣೆಕಾಳುಗಳ ಬಂಪರ್‌ ಫ‌ಸಲು. ಆದರೆ, ಕೊಯ್ಲಿನ ಮುಂಚೆ ಸರಕಾರ ಕಚ್ಚಾ ಮತ್ತು ಸಂಸ್ಕರಿತ ಪಾಮ್‌ ಎಣ್ಣೆಯ ಆಮದು-ಸುಂಕವನ್ನು ಶೇ.5 ಕಡಿಮೆ ಮಾಡಿತು. ಇದರಿಂದಾಗಿ, ರೈತರು ನೆಲಗಡಲೆ ಮತ್ತು ಸೋಯಾಬೀನನ್ನು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಬೇಕಾಯಿತು.

ದ್ವಿದಳ ಧಾನ್ಯಗಳದ್ದೂ ಇದೇ ಕಥೆ-ವ್ಯಥೆ. ಕಳೆದ ದಶಕದಲ್ಲಿ ದ್ವಿದಳಧಾನ್ಯಗಳ ಆಮದು ಮೂರು ಪಟ್ಟು ಜಾಸ್ತಿಯಾಗಿದೆ. ನಮ್ಮ ದೇಶದ ಬಳಕೆಯ ಶೇ.25 ದ್ವಿದಳಧಾನ್ಯಗಳನ್ನು ಪ್ರತಿ ವರ್ಷ ರೂ.20,000 ಕೋಟಿ ವೆಚ್ಚದಲ್ಲಿ ಸರಕಾರ ಆಮದು ಮಾಡಿಕೊಳ್ಳುತ್ತಿದೆ. 2016-17ರ ಖಾರಿಫ‌… (ಮುಂಗಾರು) ಹಂಗಾಮಿನಲ್ಲಿ , ನಮ್ಮ ರೈತರು ಬೆಳೆಸಿದ್ದು ದ್ವಿದಳಧಾನ್ಯಗಳ ಬಂಪರ… ಬೆಳೆ. ಆದರೆ, ಆ ವರುಷ ಸರಕಾರ ಆಮದು ಮಾಡಿಕೊಂಡದ್ದು 5.9 ದಶಲಕ್ಷ ಟನ್‌ ದ್ವಿದಳಧಾನ್ಯಗಳನ್ನು  ರೂ.25,600 ಕೋಟಿ ವೆಚ್ಚದಲ್ಲಿ! ಇದರಿಂದಾಗಿ, ರೈತರು ಬೆಳೆದ ದ್ವಿದಳಧಾನ್ಯಗಳು ಮಾರುಕಟ್ಟೆಗೆ ಬಂದಾಗ ಬೆಲೆ ಕುಸಿದು, ಅವರು ಅದನ್ನು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಬೇಕಾಯಿತು.
2008-09ರಲ್ಲಿ ಭಾರತದ ಒಟ್ಟು ಆಮದಿನಲ್ಲಿ ಕೃಷಿ ಉತ್ಪನ್ನಗಳ ಪಾಲು ಕೇವಲ ಶೇ.2 (ಮೌಲ್ಯ ರೂ.29,000 ಕೋಟಿ). ಅದು 2014-15ರಲ್ಲಿ ಶೇ.4.43ಕ್ಕೆ (ಮೌಲ್ಯ ರೂ.1.21 ಲಕ್ಷ ಕೋಟಿ) ಮತ್ತು 2015-16ರಲ್ಲಿ ಶೇ.5.53ಕ್ಕೆ (ಮೌಲ್ಯ ರೂ.1.4 ಲಕ್ಷ ಕೋಟಿ) ಏರಿದೆ.

ಹೀಗೆ ವೆಚ್ಚ ಮಾಡಿದ ರೂ.1.4 ಲಕ್ಷ ಕೋಟಿ, ಸಾಲದ ಹೊರೆಯಿಂದ ತತ್ತರಿಸಿರುವ ನಮ್ಮ ರೈತರ ಕೈಸೇರಬೇಕಾಗಿತ್ತು. ಬೆಳೆನಷ್ಟ ಹಾಗೂ ಬೆಲೆಕುಸಿತದಿಂದ ಹತಾಶರಾಗಿ, ಕಳೆದ 20 ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಮೂರು ಲಕ್ಷಕ್ಕಿಂತ ಅಧಿಕ. ಸರಕಾರದ ಆಮದು ಧೋರಣೆ ಕೃಷಿರಂಗದ ಹಿತಾಸಕ್ತಿ ರಕ್ಷಿಸಿದ್ದರೆ, ಈ ಜೀವಹಾನಿಯ ಬಹುಪಾಲು ತಪ್ಪಿಸಬಹುದಾಗಿತ್ತು, ಅಲ್ಲವೇ?

– ಅಡ್ಕೂರು ಕೃಷ್ಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next