Advertisement

ರೈತರ ಮೂಗಿಗೆ ತುಪ್ಪ ಸವರುವುದನ್ನು ಸರ್ಕಾರ ಬಿಡಬೇಕು

11:49 AM Nov 21, 2018 | Team Udayavani |

ಬೆಂಗಳೂರು: ಸಾಲ ಮನ್ನಾದ ಹೆಸರಿನಲ್ಲಿ ರೈತರ ಮೂಗಿಗೆ ತುಪ್ಪ ಸವರುವುದು ಬಿಟ್ಟು, ಬೆಳೆಗಳಿಗೆ ನಿಗದಿತ ಬೆಲೆ ನೀಡಲು ಸರ್ಕಾರ ಮುಂದಾಗಬೇಕು ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಒತ್ತಾಯಿಸಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರುಗಳಿಗೆ ಪ್ರೊ.ಸಿ.ಎಚ್‌. ಮರಿದೇವರು ಪ್ರತಿಷ್ಠಾನದ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಸರ್ಕಾರ ಮಾಡುವ ಸಾಲ ಮನ್ನಾದಿಂದ ಯಾವುದೇ ರೈತರ ಬದುಕು ಸುಧಾರಿಸುವುದಿಲ್ಲ ಎಂದು ಹೇಳಿದರು.

ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ದರ ಸಿಗದ ಹಿನ್ನೆಲೆಯಲ್ಲಿ ರಸ್ತೆಯಲ್ಲಿಯೇ ತರಕಾರಿ, ಹಣ್ಣುಗಳನ್ನು ಸುರಿದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಕೂಗು ಹೆಚ್ಚಾದಾಗ  ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗುತ್ತದೆ ಎಂದು ದೂರಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ್‌ ಮಾತನಾಡಿ, ಕಸಾಪ ರೈತರ ಬಗ್ಗೆ ಕಾಳಜಿ ತೋರುತ್ತಿದೆ. ಈ ಹಿಂದೆ ರಾಯಚೂರು ಹಾಗೂ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ರೈತರನ್ನು ಕಾಡುತ್ತಿರುವ ಸಮಸ್ಯೆ ಮೇಲೆ ಪ್ರತ್ಯೇಕ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ಧಾರವಾಡ ಸಮ್ಮೇಳನದಲ್ಲಿ ರೈತರ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಯಲಿವೆ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ,ಯಾವ ಕೋರ್ಸ್‌ ಆಯ್ದು ಕೊಂಡರೆ ಭವಿಷ್ಯದಲ್ಲಿ ಅಧಿಕ ಹಣಗಳಿಸಬಹುದು ಎಂಬ ಪಾಲಕರ ಲೆಕ್ಕಾಚಾರವೇ ಮಕ್ಕಳಲ್ಲಿನ ಸೃಜನಶೀಲತೆಯನ್ನು ಕೊಲ್ಲುತ್ತದೆ ಎಂದರು.

Advertisement

ಇದೇ ವೇಳೆ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ.ಚಂದ್ರಶೇಖರ ತಾಳ್ಯ ಸೇರಿದಂತೆ ಐವರು ಸಾಧಕರನ್ನು ಸನ್ಮಾನಿಸಲಾಯಿತು. ಕಸಾಪ ಗೌರವ ಕಾರ್ಯದರ್ಶಿ ಡಾ.ರಾಜಶೇಖರ ಹತಗುಂದಿ, ವ.ಚ.ಚನ್ನೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next