Advertisement

ಗ್ರಾಮೀಣ ಭಾಗದಲ್ಲಿ ಮೇಳೈಸಿದ ಮಹಿಳೆಯರ ಯಕ್ಷ ವೈಭವ 

12:30 AM Mar 22, 2019 | |

ಶಿರೂರಿನ ಪದವಿ ಪೂರ್ವ ಕಾಲೇಜು ವೇದಿಕೆಯಲ್ಲಿ ನಡೆದ ಜೆಸಿಐ ಮಹಿಳೆಯರ ಯಕ್ಷಗಾನ ಕಲಾಸಕ್ತರ ಮನಸೂರೆಗೊಂಡಿದ್ದು ಮಾತ್ರವಲ್ಲದೆ ಯಕ್ಷಗಾನದ ಗಂಧಗಾಳಿಯು ತಿಳಿಯದ ಮೊದಲ ಬಾರಿಗೆ ಹೆಜ್ಜೆಕಟ್ಟಿ ಕುಣಿದ ನಾರಿಯರ ಉತ್ಸಾಹಕ್ಕೆ ಸಭಿಕರು ಬೇಷ್‌ ಎಂದರು. 

Advertisement

ಹತ್ತಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಇಲ್ಲಿನ ಜೆಸಿಐ ಸಂಸ್ಥೆ ಈ ಬಾರಿ ಜೆಸಿರೇಟ್‌ಗಳು ಯಕ್ಷಗಾನ ಪ್ರದರ್ಶಿಸುವ ದೈರ್ಯ ಮಾಡಿತ್ತು.ಬಹುತೇಕವಾಗಿ ಕಲೆಯಲ್ಲಿ ಅಷ್ಟೇನೂ ತೊಡಗಿಸಿಕೊಳ್ಳದೆ ಬೇರೆ ಬೇರೆ ಉದ್ಯೋಗದಲ್ಲಿರುವ ಇಲ್ಲಿನ ಸ್ತ್ರೀಯರು ಇತ್ತೀಚಿನ ಯಕ್ಷಗಾನದ ಹೊಸತನಗಳ ಆಸಕ್ತಿಯಿಂದ ಈ ಪ್ರದರ್ಶನದ ಮನಸ್ಸು ಮಾಡಿದ್ದರು.ಗುರುಗಳಾದ ಶ್ರೀಧರ ದೇವಾಡಿಗ ಬಿಜೂರು ತರಬೇತಿ ನೀಡಿದ್ದರು.ಮಾಯಾಪುರಿ ಪ್ರಸಂಗ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತ್ತು. ಬಾಲ ಕಲಾವಿದರಾದ ನಿರ್ಮಿತ್‌, ಸಮೃದ್ದ, ಲೋಹಿತ್‌, ನಿಶ್ಚಿತ್‌ರ ಸಮಯ ಪ್ರಜ್ಞೆಯ ಅಭಿನಯ ಆಸಕ್ತಿ ಭವಿಷ್ಯದಲ್ಲಿ ಉತ್ತಮವಾಗಿ ಮೂಡಿಬರುವಂತಿತ್ತು.ರಂಗದ ಚೌಕಟ್ಟಿಗೆ ಕಿಂಚಿತ್ತು ಲೋಪ ಬರದಂತೆ ಪ್ರದರ್ಶನ ನೀಡಿದ್ದರು. 

ಮದನಾಕ್ಷಿಯಾಗಿ ಜಾನ್ವಿ ಪ್ರಭು, ತಾರಾವಳಿಯಾಗಿ ರೂಪಾ ರೇವಣರ್‌ ಅಚ್ಚುಕಟ್ಟಾದ ಸೊಗಸಾದ ಅಭಿನಯ ನೀಡಿದ್ದರು.ಇವರ ಪ್ರದರ್ಶನಕ್ಕೆ ಬಡಗುತಿಟ್ಟಿನ ರಸರಾಗ ಚಕ್ರವರ್ತಿ ಸುಬ್ರಹ್ಮಣ್ಯ ಧಾರೇಶ್ವರರು ಕೂಡ ಸಾಕ್ಷಿಯಾಗಿದ್ದರು.ಇವೆರಡು ಪಾತ್ರಧಾರಿಗಳಲ್ಲಿ ಕಲೆ ರಕ್ತಗತವಾಗಿ ಬಂದಂತೆ ಭಾಸವಾಗಿತ್ತು. ವೀರಮ್ಮ ಪುಷ್ಕಳಗೆ ಆರಂಭದಲ್ಲಿ ಅಳುಕು ಕಂಡು ಬಂದರೂ ಅನಂತರ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರು.ಮದನಾಕ್ಷಿ, ತಾರಾವಳಿಯರ ಮಾತೆಯಾಗಿ ವಿಶಿಷ್ಟ ಪಾತ್ರ ಪೋಷಣೆ ಮಾಡಿದವರು ಗೃಹಿಣಿ ನಾಗರತ್ನ .ಒಂದು ಸಣ್ಣ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ಸೈ ಎನಿಸಿಕೊಂಡರು.ಸಂಧ್ಯಾ ವಿಶ್ವನಾಥ ಹಾಸ್ಯ ಪಾತ್ರ ಸೊಗಸಾದರೂ ಸಹ ಇನ್ನಷ್ಟು ತರಬೇತಿ ಬೇಕು ಎನ್ನುವಂತಿತ್ತು.ಶುಭಾಂಗ,ರುಕಾ¾ಂಗ ಪಾತ್ರದಲ್ಲಿ ನಿರೀಕ್ಷಾ, ನಿಶ್ಚಿತ ಪಾತ್ರಕೊಪ್ಪುವ ಅಭಿನಯದಿಂದ ನೃತ್ಯ,ಮಾತುಗಾರಿಕೆಯಿಂದ ನೋಡುಗರ ಮನಸ್ಸಿನಲ್ಲಿ ಉಳಿದು ಬಿಟ್ಟಿದ್ದರು.ಇನ್ನು ಒಂದಿಷ್ಟು ಕುಣಿಯ ಬಾರದೇ ಎಂದೆನಿಸುತ್ತಿತ್ತು. ನಾರದ ಪಾತ್ರದಲ್ಲಿ ಸಮೃದ್ಧಾ ಮಾತುಗಾರಿಕೆಯಿಂದ ಗುರುತಿಸಿಕೊಂಡು ಯಶಸ್ವಿ ಅಭಿನಯ ನೀಡಿದ್ದರು. ಧಮನ ಪಾತ್ರಧಾರಿ ಲಕ್ಷ್ಮೀ ನಾಗೇಶ್‌ ಕೆ. ಹಿತವರಿತ ಮಾತು,ಕುಣಿತ ರಂಗಸ್ಥಳದಲ್ಲಿ ಕೆಂಪು ಮುಂಡಾಸು ವೇಷದ ಗತ್ತುಗಾರಿಕೆ ತೋರಿಸುವಲ್ಲಿ ಸಫಲರಾಗಿದ್ದಾರೆ.ಸುಮಾರು 6 ತಿಂಗಳ ತರಬೇತಿಯಲ್ಲಿ ಎರಡೂವರೆ ತಾಸು ನೀಡಿದ ಪ್ರದರ್ಶನ ಶಿರೂರಿನ ಯಕ್ಷಗಾನದ ಕ್ಷೇತ್ರದಲ್ಲಿ ಹೊಸತನ ಮೂಡಿಸಿತ್ತು. 

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next