Advertisement

ಪ್ರತಿಭಾ ಕಾರಂಜಿ; ಮೇಳೈಸಿದ ಜಾನಪದ ನೃತ್ಯ

09:46 PM Feb 06, 2020 | Lakshmi GovindaRaj |

ಕೋಲಾರ: ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಎರಡನೇ ದಿನ ವಿವಿಧ ಜಿಲ್ಲೆಗಳ ಚಿಣ್ಣರು ಜಾನಪದ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನದ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದು, 17 ಸ್ಪರ್ಧೆಗಳಲ್ಲಿ ಆಯ್ಕೆ ಅಂತಿಮಗೊಂಡಿತು.

Advertisement

ಬುಧವಾರ ಕಾರ್ಯಕ್ರಮದ ಉದ್ಘಾಟನೆಯ ಒತ್ತಡದ ನಂತರ ಮಧ್ಯಾಹ್ನ ಹಾಗೂ ಗುರುವಾರ ಇಡೀ ದಿನ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದ ಚಿಣ್ಣರ ಸಾಮರ್ಥ್ಯ ಒಂದು ಜಿಲ್ಲೆಗಿಂತ ಮತ್ತೂಂದು ಜಿಲ್ಲೆ ಎಂಬಂತೆ ಸ್ಪರ್ಧೆ ಏರ್ಪಟ್ಟು, ಮಕ್ಕಳ ಸೂಪ್ತ ಪ್ರತಿಭೆ ಹೊರಹೊಮ್ಮಿಸುವ ಶಿಕ್ಷಣ ಇಲಾಖೆಯ ಪ್ರಯತ್ನ ನಿಜಕ್ಕೂ ಸಾರ್ಥಕವೆನಿಸಿತು.

ಡಿಡಿಪಿಐ ಕೆ.ರತ್ನಯ್ಯ, ಡಯಟ್‌ ಪ್ರಾಂಶುಪಾಲ ಜಯರಾಮರೆಡ್ಡಿ, ಶಿಕ್ಷಣಾಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌, ಸಿ.ಆರ್‌.ಅಶೋಕ್‌, ಡಿವೈಪಿಸಿ ಮೋಹನ್‌ ಬಾಬು, ಬಿಇಒಗಳಾದ ಕೆ.ಎಸ್‌.ನಾಗರಾಜಗೌಡ, ಮಾಧವರೆಡ್ಡಿ, ಕೆಂಪಯ್ಯ, ಉಮಾದೇವಿ, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯತ್ರಿ, ಕೃಷ್ಣಪ್ಪ ಮತ್ತಿತರ ಇಲಾಖೆಯ ಎಲ್ಲಾ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟರು.

ಜಾನಪದ ನೃತ್ಯ ಪ್ರಾಕಾರಗಳ ವೈಭವ: ಬೆಳಗಾವಿ ಜಿಲ್ಲೆಯ ಚಿಣ್ಣರು ನಡೆಸಿಕೊಟ್ಟ ಡೊಳ್ಳು ಕುಣಿತ, ಮಂಡ್ಯ ಜಿಲ್ಲೆಯ ಮಕ್ಕಳು ನಡೆಸಿಕೊಟ್ಟ ಅಪರೂಪದ ಜಾನಪದ ನೃತ್ಯದಲ್ಲಿ ಡೊಳ್ಳು, ಪೂಜಾ ನೃತ್ಯವೂ ಮಿಳಿತಗೊಂಡಿದ್ದರೆ, ಕೊಪ್ಪಳ ಜಿಲ್ಲೆಯ ಚಿಣ್ಣರು ಹಾಲಕ್ಕಿ ಸಮುದಾಯದ ಕಲೆಯನ್ನು ವೇದಿಕೆಯಲ್ಲಿ ಅನಾವರಣಗೊಳಿಸುವ ಮೂಲಕ ಮನಸೂರೆಗೊಂಡತು.

ಅವರಿಗಿಂತ ನಾವೇನು ಕಡಿಮೆ ಎಂಬಂತೆ ಸ್ವರ್ಧಾ ಪೈಪೋಟಿ ನೀಡಿದ ಚಿಣ್ಣರು ವೇದಿಕೆಯಲ್ಲಿ ಯಾವುದೇ ಮುಜುಗರಕ್ಕೆ ಒಳಗಾಗದೇ ನೃತ್ಯವೈಭವವನ್ನು ಕೋಲಾರದ ವೇದಿಕೆಯಲ್ಲಿ ಸೃಷ್ಟಿಸಿದ್ದು ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲಿ ಮೈಲಿಗಲ್ಲೆಂಬಂತೆ ದಾಖಲೆಯಾಯಿತು.

Advertisement

ಭಾಷಣ ಸ್ಪರ್ಧೆಗಳಲ್ಲೂ ಮಕ್ಕಳು ಮೇಲುಗೈ: ಹಿಂದಿ, ಕನ್ನಡ, ಇಂಗ್ಲೀಷ್‌ ಭಾಷಣ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವ ರಾಜ್ಯದ ವಿವಿಧ ಜಿಲ್ಲೆಗಳ ಮಕ್ಕಳು ನಾವು ಯಾರಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದರು. ತೀರ್ಪುಗಾರರಾಗಿದ್ದ ಎಸ್‌.ಅನಂತಪದ್ಮನಾಭ್‌ ಹೇಳುವಂತೆ ಆಯ್ಕೆ ಬಹಳ ಕಷ್ಟ ಒಬ್ಬರು ಒಬ್ಬರಿಗಿಂತ ಜೋರು ಎಂಬಂತೆ ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಿದ್ದು, ಅತಿ ಸೂಕ್ಷ್ಮವಾಗಿ ಅವಲೋಕಿಸಿ ಯಾವುದೇ ಪ್ರತಿಭೆಗೂ ಅನ್ಯಾಯವಾಗದಂತೆ ಎಚ್ಚರಿಕೆಯಿಂದ ತೀರ್ಪು ನೀಡುತ್ತಿರುವುದಾಗಿ ತಿಳಿಸಿದರು.

ಗೊಂದಲ ನಿವಾರಣೆ: ಇಡೀ ಸ್ಪರ್ಧೆಗಳ ಉಸ್ತುವಾರಿಯನ್ನು ವಹಿಸಿದ್ದ ಶಿಕ್ಷಣಾಧಿಕಾರಿ ಹಾಗೂ ನೋಡಲ್‌ ಅಧಿಕಾರಿ ಎ.ಎನ್‌.ನಾಗೇಂದ್ರಪ್ರಸಾದ್‌ ಇಡೀ ದಿನ ಮಕ್ಕಳಿಗೆ ಧ್ವನಿವರ್ಧಕದ ಮೂಲಕ ಮಾರ್ಗದರ್ಶನ ನೀಡುವ ಮೂಲಕ ಗೊಂದಲ ನಿವಾರಿಸಿದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ಕೆ.ರತ್ನಯ್ಯ, ಡಯಟ್‌ ಪ್ರಾಂಶುಪಾಲ ಕೆ.ಎಂ.ಜಯರಾಮರೆಡ್ಡಿ, ಶಿಕ್ಷಣಾಧಿಕಾರಿ ಸಿ.ಆರ್‌.ಅಶೋಕ್‌, ಬಿಇಒಗಳಾದ ಕೆ.ಎಸ್‌.ನಾಗರಾಜಗೌಡ, ಮಾಧವರೆಡ್ಡಿ, ಉಮಾದೇವಿ, ಸಿದ್ದರಾಜು, ಗಿರಿಜೇಶ್ವರಿ, ಕೆಂಪಯ್ಯ, ಡಿವೈಪಿಸಿ ಮೋಹನ್‌ ಬಾಬು, ಬಿಆರ್‌ಸಿ ರಾಮಕೃಷ್ಣಪ್ಪ, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯತ್ರಿ, ಕೃಷ್ಣಪ್ಪ, ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀನಿವಾಸರೆಡ್ಡಿ, ಎಸ್‌.ಚೌಡಪ್ಪ, ಕೆಂಪೇಗೌಡ, ಮಂಜುನಾಥ್‌, ವಿವಿಧ ಜಿಲ್ಲೆಗಳ ಸಂಪರ್ಕಾಧಿಕಾರಿಗಳಾದ ಸಿ.ಎನ್‌.ಪ್ರದೀಪ್‌ ಕುಮಾರ್‌, ನಾಗರಾಜ್‌, ನಾರಾಯಣಸ್ವಾಮಿ, ಇಸಿಒ, ಸಿಆರ್‌ಪಿಗಳು ಕಾರ್ಯನಿರ್ವಹಿಸಿದರು.

ಸಮಾಜಕ್ಕೆ ಮೌಲ್ಯ ತಿಳಿಸಿದ ನಾಟಕಗಳ ಪ್ರದರ್ಶನ: ಕೋಲಾರ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ನಡೆದ ನಾಟಕ ಸ್ಪರ್ಧೆಗಳಲ್ಲಿ ವಿವಿಧ ಜಿಲ್ಲೆಗಳ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ, ಜಾನಪದ ಸಾಹಿತ್ಯದ, ನೈತಿಕ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ವಿವಿಧ ಮಾದರಿಯ ನಾಟಕಗಳನ್ನು ಪ್ರದರ್ಶಿಸಿ ಜನಮನ ಸೆಳೆದರು. ವೀರಸಿಂಧೂರ ಲಕ್ಷ್ಮಣ ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ಸಂಧೂರ ಲಕ್ಷ್ಮಣನ ಜೀವನ ಚರಿತ್ರೆಯನ್ನು ಮಕ್ಕಳು ಅತ್ಯಂತ ಮನಮುಟ್ಟುವಂತೆ ನಾಟಕವಾಗಿ ಪ್ರದರ್ಶಿಸಿ ಗಮನ ಸೆಳೆದರು.

ದೃಶ್ಯಕಲೆಯಲ್ಲಿಯೂ ಜನಪದವೇ ಮೈಲುಗೈ: ದೃಶ್ಯಕಲೆ ಸ್ಪರ್ಧೆಗಳಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಯಕ್ಷಗಾನ, ಗ್ರಾಮೀಣ ಜಾನಪದ ಕಲೆಗಳನ್ನೇ ಸಿದ್ಧಗೊಳಿಸುತ್ತಿದ್ದುದು ಕಂಡು ಬಂತು. ಬಾಗಲಕೋಟೆ ಜಿಲ್ಲೆಯ ಚಿಣ್ಣರಾದ ಪ್ರಾಚಿ ಸೋನಾಮಾಲ್ಕರ್‌, ಪ್ರೀತಿಕುಂಬಾರ, ಭಾಗ್ಯಶ್ರೀ ಕಲ್ಲೂರ, ಪ್ರಿಯಾಂಕ ಬಡಿಗಾರ ಯಕ್ಷಗಾನ ಕಲೆಯನ್ನು ಜೇಡಿಮಣ್ಣಿನಿಂದ, ಡ್ರಾಯಿಂಗ್‌ನಿಂದ, ಕೈಕಸುಬಿನ ಕಲೆಯಿಂದ ಅನಾವರಣಗೊಳಿಸಿದ್ದು, ಮನಸೂರೆಗೊಂಡಿತು. ಉಳಿದಂತೆ ವಿವಿಧ ಜಿಲ್ಲೆಗಳ ಜನಪದ ಕಲೆಗಳೇ ಹೆಚ್ಚು ಮಕ್ಕಳು ದೃಶ್ಯಕಲೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶನದ ಮೂಲಕ ಸ್ಪರ್ಧೆಗಿಳಿದಿದ್ದು, ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next