Advertisement
ಭಾಗ-1ಕಲಿಸುವುದನ್ನು ಒಂದು ಉದ್ಯೋಗವಾಗಿ ಆಕಸ್ಮಿಕವಾಗಿ ಆರಿಸಿಕೊಂಡ ನನಗೆ ಅದಕ್ಕೆ ಬೇಕಾದ ತಿಳುವಳಿಕೆ ಎಲ್ಲಿಂದ ಎಂದಿನಿಂದ ದೊರೆಯಲು ಸುರುವಾಯಿತು ಎಂದು ಯೋಚಿಸುವಾಗಲೆಲ್ಲ ಅದೊಂದು ವಿಚಿತ್ರ ಮಹಾಯಾನ ಅನ್ನಿಸುತ್ತದೆ. ಮಗುವಿನ ಸ್ಥಿತಿಯಿಂದ ಬಾಲಕನ ಹಂತಕ್ಕೆ ಬರುವವರೆಗಿನ ಕಲಿಯುವಿಕೆಗೆ ಮನೆಯ ಪರಿಸರ ಅವಕಾಶದ ಬಾಗಿಲನ್ನು ತೆರೆಯುತ್ತದೆ . ಮುಂದೆ ಶಾಲೆ-ಕಾಲೇಜು- ವಿಶ್ವವಿದ್ಯಾನಿಲಯಗಳ ಹಳಿಯಲ್ಲಿ ಕಲಿಕೆಯ ಬಂಡಿ ಸಾಗುತ್ತದೆ. ಇದರ ಜೊತೆಗೆಯೇ ಕೆಲವೊಮ್ಮೆ ಸಮಾನಾಂತರವಾಗಿ , ಮತ್ತೆ ಕೆಲವೊಮ್ಮೆ ವಿರುದ್ಧವಾಗಿ ಮನೆ-ಕುಟುಂಬ-ಸಮಾಜ-ಪರಿಸರ-ಪುಸ್ತಕ-ಪ್ರವಾಸ… ಹೀಗೆ ಬಹುಸ್ತರಗಳಲ್ಲಿ ಕಲಿಯುವಿಕೆ ಸಂಭವಿಸುತ್ತದೆ. ಈ ಬಹುರೂಪಿ ಕಲಿಯುವಿಕೆಯ ಸಂಕೀರ್ಣ ಮೊತ್ತವೊಂದು ನೆನಪಿನ ಕೋಶಗಳಲ್ಲಿ ಹರಡಿಕೊಂಡಿರುತ್ತದೆ. ಈ ದೃಷ್ಟಿಯಿಂದಲೇ ಕಲಿಸುವಿಕೆ ಎನ್ನುವುದು ಕಲಿಯುವಿಕೆಯ ಪ್ರಾಯೋಗಿಕ ರೂಪ. ಆರೇಳು ದಶಕಗಳ ಹಿಂದಿನ ಕಾಲದಿಂದ ತೊಡಗಿ ನೆನಪುಗಳ ಪದರಗಳ ಆಳಕ್ಕೆ ಇಳಿದು ಸಿಕ್ಕಿದ್ದಷ್ಟನ್ನು ಹೊರತೆಗೆದು ನಾನು ಕಲಿತ ಸೋಜಿಗಗಳನ್ನು ಕಲಿಸಿದ ಸಾಹಸಗಳನ್ನು ಬಿತ್ತರಿಸಲು ಬಯಸಿದ್ದೇನೆ…
Related Articles
Advertisement
ಶಾಲೆಯ ಒಂದು ಚಿಕ್ಕ ಕೋಣೆಯಲ್ಲಿ ಮಕ್ಕಳಿಗೆ ಪ್ರಾಯೋಗಿಕ ತರಬೇತಿಗೆ ಬೇಕಾದ ಸಾಮಗ್ರಿಗಳು ಇದ್ದುವು. ಮಕ್ಕಳಿಗೆ ಲೆಕ್ಕ ಮಾಡಲು ಕಲಿಸಲು ಹೊಂಗೆಕಾಯಿ ಬೀಜ, ಮಂಜೊಟ್ಟಿ ಕಾಯಿ ಇವನ್ನು ಚೀಲಗಳಲ್ಲಿ ತುಂಬಿಸಿ ಇಡುತ್ತಿದ್ದರು. ಅಲ್ಲಿ ಹೊಯಿಗೆ, ಕಡ್ಡಿ – ಇವನ್ನು ರಾಶಿಹಾಕಿರುತ್ತಿದ್ದರು. ಒಂದನೆಯ ಮತ್ತು ಎರಡನೆಯ ತರಗತಿಗಳ ಕೋಣೆಗಳ ಗೋಡೆಗಳಲ್ಲಿ ಪ್ರಾಣಿ ಪಕ್ಷಿ , ಸರೀಸೃಪಗಳ ಚಿತ್ರಗಳನ್ನು ರಟ್ಟಿಗೆ ಅಂಟಿಸಿ ನೇತುಹಾಕುತ್ತಿದ್ದರು. ಮ್ಯಾಪ್ಗ್ಳು, ಗೋಳಗಳು, ಆಟಿಕೆಗಳು ಅಲ್ಲಿ ನಮಗೆ ಹೊಸ ಪಾಠವನ್ನು ಕೊಡಲು ನೆರವಾಗುತ್ತಿದ್ದವು.
ಈ ಶಾಲೆಯಲ್ಲಿ ವಿದ್ಯೆಯ ಜೊತೆಗೆ ಓದುವಿಕೆ-ಸಾಹಿತ್ಯ-ಕಲೆ- ಕ್ರೀಡೆ ಮುಂತಾದ ಅನೇಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಶಾಲೆಯಲ್ಲಿ ಒಂದು “ಬಾಲಕ ವಾಚನಾಲಯ’ ಇತ್ತು. ಇದರಲ್ಲಿ ಮಕ್ಕಳ ಸಾಹಿತ್ಯದ ಆಗಿನ ಹೆಚ್ಚಿನ ಪುಸ್ತಕಗಳು ದೊರೆಯುತ್ತಿದ್ದುವು. ನಮಗೆ ವಾಚನಾಲಯದಲ್ಲಿ ಓದುವುದನ್ನು ಕಡ್ಡಾಯ ಮಾಡಿದ್ದರು. ಮಂಗಳೂರಿನ ಬಾಲಸಾಹಿತ್ಯ ಮಂಡಳಿಯ ಎಲ್ಲ ಪುಸ್ತಕಗಳನ್ನು ಆ ಕಾಲದಲ್ಲೇ ಅಲ್ಲಿ ನಾನು ಓದಿ ಮುಗಿಸಿದ್ದೆ. ಪಂಜೆ ಮಂಗೇಶರಾಯರ ಕವನಗಳು, ಕತೆಗಳು ನಮಗೆ ಬಹಳ ಪ್ರಿಯವಾಗಿದ್ದುವು. ಕೋಟಿ ಚೆನ್ನಯ, ಅಗೋಳಿ ಮಂಜಣ್ಣ, ಗುಡು ಗುಡು ಗುಮ್ಮಟ ದೇವರು, ಹೇನು ಸತ್ತು ಕಾಗೆ ಬಡವಾಯಿತು, ಅರ್ಗಣೆ ಮುದ್ದೆ, ಕೋ ಕೋ ಕೋ ಕೋಳಿ- ಇವೆಲ್ಲ ಆಗ ಓದಿ ಮತ್ತೆ ಮತ್ತೆ ಮೆಲುಕು ಹಾಕಿದ ಕತೆ ಪುಸ್ತಕಗಳು. ಚಂದಮಾಮ ಕಥಾಸಂಚಿಕೆ ನಮ್ಮ ನಿಗದಿತ ಓದಿಗೆ ಸಿಗುತ್ತಿತ್ತು. ಅದರ ಒಂದು ವರ್ಷದ ಎಲ್ಲ ಸಂಚಿಕೆಗಳನ್ನು ಬೈಂಡ್ ಮಾಡಿ, ಒಂದೊಂದು ಸಂಪುಟಗಳನ್ನು ಒಟ್ಟುಮಾಡಿ ಇಡುತ್ತಿದ್ದರು. ಶಿವರಾಮ ಕಾರಂತರ ಪುಸ್ತಕಗಳನ್ನು ನಾನು ಮೊದಲು ಓದಿದ್ದು ಇಲ್ಲಿಯೇ.
ನಮ್ಮ ಶಾಲೆಗೆ ಸಾಹಿತಿಗಳನ್ನು, ಕಲಾವಿದರನ್ನು ಕರೆಸಿ ಭಾಷಣ ಮಾಡಿಸುತ್ತಿದ್ದರು. ಶಿವರಾಮ ಕಾರಂತರ ಭಾಷಣವನ್ನು ನಾನು ಮೊದಲು ಕೇಳಿದ್ದು ನಮ್ಮ ಈ ಶಾಲೆಯಲ್ಲಿಯೇ. ಆಗ ಕಾರಂತರು ಪುತ್ತೂರಿನ ಬಾಲವನದಲ್ಲಿ ವಾಸಿಸುತ್ತಿದ್ದರು. ನಮ್ಮ ಶಾಲೆಯಲ್ಲಿ ಯಕ್ಷಗಾನ ತಾಳಮದ್ದಲೆ ಮತ್ತು ಪ್ರದರ್ಶನಗಳು ಬಹಳ ನಡೆಯುತ್ತಿದ್ದವು. ನಮ್ಮ ಹೆಡ್ ಮಾಸ್ತರರು ಭಾಗವತರು.ಸ್ಥಳೀಯ ಕಲಾವಿದರಾಗಿ ಶಿವಶಂಕರ ಶಾಸ್ತ್ರಿ, ವೆಂಕಟರಮಣ ಶಾಸ್ತ್ರಿ, ಗುಂಡ್ಯಡ್ಕ ಮಹಾಬಲ ರೈ , ಬಣ್ಣದ ವೇಷಕ್ಕೆ ಉಗ್ರಾಣಿ ಮಾಧವ ಹೆಚ್ಚಾಗಿ ಇರುತ್ತಿದ್ದರು. ಕೆಲವೊಮ್ಮೆ ಹೊರಗಿನಿಂದಲೂ ಪ್ರಸಿದ್ಧ ಯಕ್ಷಗಾನ ಕಲಾವಿದರು ನಮ್ಮ ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ದೇರಾಜೆ ಸೀತಾರಾಮಯ್ಯ, ಪೆರ್ಲ ಕೃಷ್ಣ ಭಟ್ಟ, ಕುರಿಯ ವಿಠಲ ಶಾಸ್ತ್ರಿ, ಮುಳಿಯ ಮಹಾಬಲ ಭಟ್ಟ, ಮಾಂಬಾಡಿ ನಾರಾಯಣ ಭಾಗವತ, ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರು ಮುಂತಾದವರು- ಇವರನ್ನೆಲ್ಲ ನಾನು ಮೊದಲು ನೋಡಿದ್ದು, ಅವರ ಮಾತುಗಳನ್ನು , ಹಾಡುಗಾರಿಕೆಯನ್ನು ಕೇಳಿದ್ದು ನನ್ನ ಈ ಮೊದಲ ಪಾಠಶಾಲೆಯಲ್ಲಿ.
ಶಾಲೆಯಲ್ಲಿ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರಕಟಿಸಲು ಸಾಕಷ್ಟು ಅವಕಾಶಗಳು ಇದ್ದುವು. ನನ್ನ ಮಾತಿನ ಉದ್ಯೋಗಕ್ಕೆ ನಾಂದಿ ಆದದ್ದು ಇಲ್ಲಿಯೇ. ಮಕ್ಕಳ ಚರ್ಚಾ ಸ್ಪರ್ಧೆ ಅಂತಹ ಒಂದು ಕಾರ್ಯಕ್ರಮ. ಅದರ ವಿಷಯಗಳೂ ವೈವಿಧ್ಯಮಯ- ಹಳ್ಳಿ ಮೇಲೋ ಪೇಟೆ ಮೇಲೋ, ಚಿನ್ನ ಮೇಲೋ ಕಬ್ಬಿಣ ಮೇಲೋ ಇತ್ಯಾದಿ. ಶಾಲೆಯ ವಾರ್ಷಿಕೋತ್ಸವ ಎಂದರೆ ಅಲ್ಲಿ ಒಂದರಿಂದ ಎಂಟನೆಯ ತರಗತಿಯ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಪಾತ್ರ ಇರುತ್ತಿತ್ತು. ಅಧ್ಯಾಪಕರಾದ ಮರಿಯಪ್ಪ ಶಾಸ್ತ್ರಿ, ಶಿವಶಂಕರ ಶಾಸ್ತ್ರಿ, ವೆಂಕಟರಮಣ ಶಾಸ್ತ್ರಿಗಳ ಮುಂದಾಳುತನದಲ್ಲಿ ಮಕ್ಕಳಿಂದ ನಾಟಕ, ಏಕಪಾತ್ರಾಭಿನಯ, ಹಾಡು, ಕುಣಿತ, ಕತೆ ಹೇಳುವುದು- ಇಂತಹ ಬಗೆ ಬಗೆಯ ಕಾರ್ಯಕ್ರಮಗಳು ನಡೆಯುತ್ತಿದ್ದುವು. ಅಂತಹ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿದ ನನಗೆ ಅದರ ಪ್ರಯೋಜನ ಮುಂದೆ ಬದುಕಿನ ಅನೇಕ ಸಂದರ್ಭಗಳಲ್ಲಿ ದೊರೆತಿದೆ.
ನಾನು ಎಂಟನೆಯ ತರಗತಿಯಲ್ಲಿ ಭಾಗವಹಿಸಿದ ಒಂದು ನಾಟಕ ಮತ್ತು ಅದರ ಪಾತ್ರ ಈಗಲೂ ನೆನಪಿದೆ. ಅದು ಎಸ್. ಆರ್. ಚಂದ್ರ ಅವರು ಬರೆದ ಒಗ್ಗರಣೆ ಎಂಬ ವಿನೋದ ಪ್ರಬಂಧಗಳ ಸಂಕಲನದ ಒಂದು ಪ್ರಬಂಧದ ಆಧಾರದಲ್ಲಿ ರೂಪಿತವಾದ, ಸಾಹಿತ್ಯದ ಕುರಿತ ವಿದ್ವಾಂಸರ ಜಗಳದ ಒಂದು ನಾಟಕ ರೂಪ. ಆ ನಾಟಕ ರೂಪವನ್ನು ಸಿದ್ಧಪಡಿಸಿ, ನಮಗೆ ತರಬೇತು ಕೊಟ್ಟವರು ಶಿವಶಂಕರ ಶಾಸ್ತ್ರಿಯವರು. ನನ್ನದು ಅದರಲ್ಲಿ ಸಾಂಪ್ರದಾಯಿಕ ಕವಿಪಂಡಿತರ ಮಗ ನವ್ಯಕವಿಯ ಪಾತ್ರ. ಅದು ಅರೆಬರೆ ಇಂಗ್ಲಿಶ್ ಕಲಿತ ಒಬ್ಬ ತರುಣ ಕವಿಯ ವ್ಯಂಗ್ಯ ಪಾತ್ರ. ನಾನು ಸಾಹಿತ್ಯ ರಂಗಕ್ಕೆ ಬರುತ್ತೇನೆ ಎನ್ನುವ ಕಲ್ಪನೆಯೇ ಇಲ್ಲದ ಆ ಕಾಲದಲ್ಲಿ ನಾಟಕರಂಗದಲ್ಲಿ ನಾನು ನಿರ್ವಹಿಸಿದ ಸಾಹಿತಿಯ ಪಾತ್ರ!
ಶಾಲೆಯಲ್ಲಿ ನಾಟಕ, ಯಕ್ಷಗಾನಗಳಂತೆ ಹರಿಕತೆಗಳೂ ನಡೆಯುತ್ತಿದ್ದುವು. ಆ ಕಾಲಕ್ಕೆ ಹರಿದಾಸರಾಗಿ ಪ್ರಸಿದ್ಧಿಗೆ ಬರುತ್ತಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರ ಹರಿಕತೆಯನ್ನು ನಾನು ಮೊದಲು ಕೇಳಿದ್ದು ಇಲ್ಲಿ ವಿದ್ಯಾರ್ಥಿಯಾಗಿ. ಆಗ ಶೇಣಿಯವರು ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶ ಮಾಡಿರಲಿಲ್ಲ. ಮಲ್ಪೆ ಶಂಕರನಾರಾಯಣ ಸಾಮಗರ ಹರಿಕತೆಯನ್ನೂ ಅದೇ ಅವಧಿಯಲ್ಲಿ ಆಲಿಸಿದ್ದು.
ಮಣಿಲದ ಮನೆಗೆ ವಿದ್ಯಾರ್ಥಿಗಳಾದ ನಮ್ಮನ್ನು ಒಂದು ಬಾರಿ ಕರೆದುಕೊಂಡು ಹೋಗಿ, ಅವರ ಅಡಕೆ ತೋಟದ ಕೃಷಿ , ಅದರ ನೀರಾವರಿ ವ್ಯವಸ್ಥೆ ತೋರಿಸಿ, ನಮಗೆಲ್ಲ ಅವರ ಮನೆಯಲ್ಲಿ ಲೋಟದಲ್ಲಿ ಒಳ್ಳೆಯ ಕಾಫಿ ಕೊಟ್ಟಿದ್ದರು. ಅಲ್ಲಿ ಕುಡಿದ ಕಾಫಿಯ ಲೋಟಗಳನ್ನು ನಾವು ಮಕ್ಕಳು ಯಾರೂ ತೊಳೆಯಲಿಲ್ಲ. ನಾವು ಬೆಳಗ್ಗೆ ಮನೆಯಿಂದ ಶಾಲೆಗೆ ಬರುವಾಗ ಮಧ್ಯಾಹ್ನದ ಊಟಕ್ಕೆ ಬುತ್ತಿ ಕಟ್ಟಿಕೊಂಡು ಬರುತ್ತಿ¨ªೆವು. ಅದನ್ನು ಇಡುವುದಕ್ಕೆ ಒಂದು ಸಣ್ಣ ಕೋಣೆ ಇತ್ತು. ನಮ್ಮ ಬುತ್ತಿಯಲ್ಲಿ ಅನೇಕ ಬಾರಿ ಮೀನಿನ ಪದಾರ್ಥ (ಬಂಗುಡೆ, ಬೂತಾಯಿ) ಇರುತ್ತಿತ್ತು. ಅದನ್ನು ತರುವುದಕ್ಕಾಗಲೀ ಇತರರ ಎದುರು ಉಣ್ಣುವುದಕ್ಕಾಗಲೀ ಯಾವುದೇ ಕಟ್ಟುಪಾಡು ಇರಲಿಲ್ಲ.
ಪ್ರತಿಯೊಬ್ಬರಿಗೂ ಒಂದು ವ್ಯಕ್ತಿಗತ ಬದುಕು ಇರುತ್ತದೆ, ಒಂದು ಕೌಟುಂಬಿಕ ಜಗತ್ತು ಇರುತ್ತದೆ, ಒಂದು ಸಮುದಾಯದ ನಿಯಮಾವಳಿ ಇರುತ್ತದೆ, ಒಂದು ಸಂಸ್ಕೃತಿಯ ನೆಲೆ ಇರುತ್ತದೆ. ಆದರೆ, ಅದು ಇನ್ನೊಬ್ಬರ ನಂಬಿಕೆ, ಸಂಸ್ಕೃತಿ ಮತ್ತು ಲೋಕದೃಷ್ಟಿಯನ್ನು ಗೌರವಿಸುವ ಸಹನೆಯ ಪಾಠವನ್ನು ಕಲಿಸಿದಾಗ, ಅದು ಮುಂದಿನ ಬದುಕಿನುದ್ದಕ್ಕೂ ನಮ್ಮನ್ನು ಕಾಪಾಡಿಕೊಂಡು ಬರುತ್ತದೆ. ಅದು ನಿರಂತರ ಹರಿಯುವ ನದಿಯಂತೆ; ಅದರ ನೀರು ಎಂದೂ ಜಡವಾಗುವುದಿಲ್ಲ , ಕೊಳೆಯುವುದಿಲ್ಲ. ಅದು ಶುದ್ಧ ಮತ್ತು ಮುಕ್ತ.
ಪರಿಯಾಲ್ತಡ್ಕ ಹೈಯರ್ ಎಲಿಮೆಂಟರಿ ಶಾಲೆ ನನ್ನ ಪಾಲಿಗೆ ಅಂತಹ ಶುದ್ಧ ನೀರು ಹರಿಸಿದ ನನ್ನ ಬದುಕಿನ ಮೊದಲ “ಅಡ್ಕ’.
ಬಿ. ಎ. ವಿವೇಕ ರೈ