ತೀರ್ಥಹಳ್ಳಿ : ನಮ್ಮ ತಂದೆ ಮಂಡ್ಯದಿಂದ ಶಿಕಾರಿಪುರಕ್ಕೆ ಆರ್ ಎಸ್ ಎಸ್ ಪ್ರಚಾರಕರಾಗಿ ಬಂದರು. ಆ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ ಪುರಸಭೆ ಚುನಾವಣೆಗೆ ಸ್ಪರ್ಧೆ ಮಾಡಿದರು.
ನಂತರದಲ್ಲಿ ಶಾಸಕರಾಗಿ ಹಾಗೂ ಅದೇ ಕ್ಷೇತ್ರದಿಂದಲೇ ಗೆದ್ದು ಮುಖ್ಯಮಂತ್ರಿ ಸ್ಥಾನ ಕೂಡ ಪಡೆದುಕೊಂಡರು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಮಂಗಳವಾರ ಪಟ್ಟಣ ರಾಮಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ತಾವು ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಿದ ಅವರು ಜನರಿಂದ ಆಯ್ಕೆಯಾದ ನಂತರದಲ್ಲಿ ಜನರ ಸಮಸ್ಯೆ ಆಲಿಸುತ್ತ ವಿಧಾನಸಭೆಯಲ್ಲಿ ಜನರ ಕಷ್ಟವನ್ನು ಬಗೆಹರಿಸುವ ಕೆಲಸ ಜನಪ್ರತಿನಿಧಿಗಳಿಂದ ಆಗಬೇಕು. ಚುನಾವಣೆಯಲ್ಲಿ ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು ಎಂದರು.
ನಿಮ್ಮೆಲ್ಲರ ಆಶೀರ್ವಾದದಿಂದ ಕಳೆದ ಹತ್ತು ವರ್ಷಗಳಲ್ಲಿ ಶಿವಮೊಗ್ಗ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಏನೆಲ್ಲಾ ಮಾಡಬೇಕೋ ಅದನ್ನು ಮಾಡಿದ್ದೇವೆ. ಭಾರತ ಇಂದು ಸೂಪರ್ ಪವರ್ ಆಗಿದೆ. ಆರ್ಥಿಕವಾಗಿ, ರಾಜ ತಾಂತ್ರಿಕವಾಗಿ, ವೈಜ್ಞಾನಿಕವಾಗಿ ನರೇಂದ್ರ ಮೋದಿಯವರ ವಿಶೇಷ ಕಾಳಜಿಯಿಂದ ಶಕ್ತಿ ತುಂಬುವ ಕೆಲಸ ಆಗಿದೆ ಎಂದರು.
95 ಕೋಟಿ ಮತದಾರರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಒಂದುವರೆ ಲಕ್ಷ ಪತ್ರಿಕಾ ಮಾಧ್ಯಮದವರು ದಾಖಲಾತಿ ಮಾಡಿಸಿಕೊಂಡಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಜಿ ಪ್ರಧಾನಿ ಇಂದಿರಾಗಾಂಧಿ ಪ್ರಧಾನಿ ಆಗಿದ್ದಾಗ ನೋಡಿದ್ದೇವೆ ಈಗ ಪತ್ರಿಕಾ ಮಾಧ್ಯಮಕ್ಕೆ ಶಕ್ತಿ ತುಂಬುವ ಕೆಲಸ ನರೇಂದ್ರ ಮೋದಿಯವರ ಆಡಳಿತದಲ್ಲಿ ನೋಡುತ್ತಿದ್ದೇವೆ ಎಂದರು.