Advertisement

ಉಡುಪಿ ಪರ್ಯಾಯದಲ್ಲಿ ಕನಕದಾಸರಿಗೆ ಮೊದಲ ಮಣೆ

03:49 AM Jan 16, 2018 | |

ವಿಶೇಷವೆಂದರೆ ಉಡುಪಿ ಅಷ್ಟಮಠದಲ್ಲಿ ಇದುವರೆಗೆ ಸುಮಾರು 240ಕ್ಕೂ ಮಿಕ್ಕಿ ಯತಿಗಳು ಆಗಿಹೋಗಿದ್ದಾರೆ. ಶ್ರೀ ವ್ಯಾಸರು,
ಶ್ರೀ ರಾಘವೇಂದ್ರರು, ಪುರಂದರರಂತಹ ಅಪರೋಕ್ಷ ಜ್ಞಾನಿಗಳು ಪ್ರಸಿದ್ಧ ಸಂತರು ಈ ಕ್ಷೇತ್ರದಲ್ಲಿ ಬಹುಕಾಲ ಅಪಾರ ಸೇವೆ ಸಲ್ಲಿಸಿದ್ದಾರೆ. ಆದರೆ ಕನಕದಾಸರ ಹೊರತು ಇನ್ನಾರ ಸ್ಮಾರಕವೂ ಉಡುಪಿ ಕೃಷ್ಣ ಮಠದಲ್ಲಿ ಇಲ್ಲ. 

Advertisement

ಕನಕದಾಸರಿಗೂ ಉಡುಪಿ ಕೃಷ್ಣನಿಗೂ ಹಾಲು ಮೊಸರಿನ ಸಂಬಂಧ. ಒಂದು ಇನ್ನೊಂದನ್ನು ಬಿಟ್ಟಿರಲಾರದು. ಕನಕರ ಜನ್ಮಭೂಮಿ ಕಾಗಿನೆಲೆಯ ಬಾಡ ಆದರೂ ಅವರು ಉಡುಪಿಯ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸೆಲೆಯಲ್ಲಿ ಬೆಳೆದವರು. ಕನಕರ ಪ್ರತಿಭೆಗೆ ಮಾರುಹೋಗದವರಿಲ್ಲ. ಹೀಗಾಗಿ ಶ್ರೀ ವಾದಿರಾಜರು, ಶ್ರೀ ವ್ಯಾಸರು, ವಿಜಯೀಂದ್ರರು ಹಾಗೂ ಶ್ರೀ ಪುರಂದರರಂತಹ ಮಹಾಮಹಿಮರ ಜೊತೆ ಕನಕದಾಸರಿಗೆ ವಿಶೇಷ ಒಡನಾಟ ಬಾಂಧವ್ಯ ದೊರಕಿತು. ಕನಕದಾಸರು ಕೇವಲ ಸತ್ಸಂಗಕ್ಕಾಗಿ ಮಾತ್ರ ಇವರ ಜೊತೆ ಸೇರಿದವರಲ್ಲ. ಬದುಕಿನ ನಿತ್ಯ ಸತ್ಯ ಯಾವುದು, ಮಿಥ್ಯೆಯೇನು ಎಂಬುದನ್ನು ಅರಸುತ್ತಾ ಸಾಗಿ ಅಂತಿಮವಾಗಿ ಚಿದಂಬರ ರಹಸ್ಯವನ್ನು ಒಳಕಣ್ಣಿನಿಂದ ಕಂಡರು. ಸಾಕ್ಷಾತ್ಕಾರದಿಂದ ಪ್ರೇರಿತರಾಗಿ ಸಾವಿರಾರು ಅಪೂರ್ವ ಹಾಡು ಕೃತಿಗಳನ್ನು ರಚಿಸಿ ಸರ್ವರಿಂದಲೂ ವಿಶೇಷವಾಗಿ ಪುರಸ್ಕೃತರಾದರು. ಕನಕರು ಜೀವನದ ಬಹು ಕಾಲವನ್ನು ಉಡುಪಿಯಲ್ಲೇ ಕಳೆದರು. ಅವರ ಕೃತಿಗಳಲ್ಲಿ ಹೆಚ್ಚಿನವು ಉಡುಪಿಯಲ್ಲೇ ರಚಿತವಾಗಿದ್ದವು.

ಕೃಷ್ಣ ಮಠದ ಪಶ್ಚಿಮ ಬದಿಯಲ್ಲಿ ಕುಟೀರವೊಂದರಲ್ಲಿ ವಾಸಿಸಿ ಕೊಂಡು ನಿತ್ಯಾನುಷ್ಠಾನದಲ್ಲಿ ನಿರತರಾಗಿದ್ದ ಕನಕದಾಸರ ತಪಸ್ಸು, ಭಕ್ತಿ, ಭಜನೆ ಹಾಗೂ ಜೀವಯೋಗ್ಯತೆಯನ್ನು ಅರಿತಿದ್ದ ವಾದಿರಾ ಜರು ಕನಕದಾಸರನ್ನು ತನ್ನ ಅಂತರಂಗದ ಆತ್ಮೀಯ ಗೆಳೆಯ ಎಂದು ತಿಳಿಸುತ್ತಾ ತಮ್ಮ ಕೃತಿಯಲ್ಲಿ ಅವರ ಶ್ರದ್ಧೆ ಸಾಧನೆಯನ್ನು ಬಹು ವಿಧದಿಂದ ಕೊಂಡಾಡುತ್ತಾರೆ. ಹೀಗಾಗಿಯೇ ಪರ್ಯಾಯ ಪೂರ್ವದಲ್ಲಿ ಪುರಪ್ರವೇಶ ಹಾಗೂ ಪರ್ಯಾಯ ಮಹೋತ್ಸವ ದಂದು ಮಧ್ವಪೀಠ ಅಲಂಕರಿಸುವ ಯತಿಗಳು ಕೃಷ್ಣ ಮಠ ಪ್ರವೇ ಶಕ್ಕೆ ಮುಂಚಿತವಾಗಿ ಕನಕ ಗೋಪುರದ ತಳದಲ್ಲಿರುವ ಕನಕನ ಕಿಂಡಿಯ ಮುಂಭಾಗಕ್ಕೆ ತೆರಳುತ್ತಾರೆ. ಅಲ್ಲಿ ಶ್ರೀ ಮಠದ ವಿದ್ವಾಂಸರು, ಪ್ರಧಾನ ಪುರೋಹಿತರ ಜೊತೆಗೂಡಿ ನವಗ್ರಹ ದಾನ ಹಾಗೂ ಇನ್ನಿತರ ವಿಧಿವಿಧಾನಗಳನ್ನು ಪೂರೈಸಿದ ನಂತರ ಯತಿಗಳು ಆ ಕಿಂಡಿಯಲ್ಲಿ ಕೃಷ್ಣ ದರುಶನವನ್ನು ಪಡೆದು ಕೃಷ್ಣನಿಗೆ ಮೊದಲ ಆರತಿ ಬೆಳಗಿ ಮುಂದೆ ಸಾಗುವರು. ಕೃಷ್ಣನಿಗೆ ಪರ್ಯಾಯ ಯತಿಗಳ ಮೊದಲ ಆರತಿ ಈ ಕಿಂಡಿಯಿಂದಲೇ ಆರಂಭವಾಗುತ್ತದೆ. ಕನಕದಾಸರ ಶ್ರದ್ಧೆ, ಭಕ್ತಿಯನ್ನು ಸ್ಮರಿಸಿ ಕೃಷ್ಣ ಪೂಜಾಧಿಕಾರ ಸ್ವೀಕರಿಸಿ ಎಂಬ ಸಂದೇಶ ಸಾರುವ ಈ ಸಂಪ್ರದಾಯದ ಪ್ರವರ್ತಕರು ಮತ್ತಾರು ಅಲ್ಲ ಕನಕರ ಆತ್ಮೀಯರಾಗಿದ್ದ ವಾದಿರಾಜರು.

ಪ್ರತಿನಿತ್ಯ ಭಕ್ತಿ ಭಾವ ತನ್ಮಯತೆಯಿಂದ ಕೃಷ್ಣನನ್ನು ಬಗೆಬಗೆಯ ಹಾಡುಗಳಿಂದ ಸ್ತುತಿಸುತ್ತಿದ್ದ ಕನಕದಾಸರು ತಮ್ಮ ಕುಟೀರದಲ್ಲಿ ಶ್ರೀ ದೇವರಿಗೆ ನಿತ್ಯ ನೈವೇದ್ಯಕ್ಕಾಗಿ ಅಂಬಲಿ ಹಾಗೂ ರೊಟ್ಟಿಯನ್ನು ಅರ್ಪಿಸುತ್ತಿದ್ದರು. ಅದರ ಸಿದ್ಧತೆಗಾಗಿ ಅವರು ಕೃಷ್ಣ ಮಠದಲ್ಲಿ ಸಿದ್ಧ ಪಡಿಸುವ ನೈವೇದ್ಯದ ಅಕ್ಕಿ ತೊಳೆದ ನೀರನ್ನು ಉಪಯೋಗಿಸು ತ್ತಿದ್ದರು. ಈ ನೀರು ಮಠದ ಪಶ್ಚಿಮ ಭಾಗದಲ್ಲಿದ್ದ ಗಂಜಿಕಿಂಡಿ ಯಿಂದ ಹೊರ ಬರುತ್ತಿತ್ತು. ಈ ನೀರನ್ನು ಬಳಸಿ ತನ್ನ ದೇವರಿಗೆ ಅಂಬಲಿ ರೊಟ್ಟಿ ತಯಾರಿಸಿ ಸಮರ್ಪಣೆಗೆ ಇರಿಸುತ್ತಿದ್ದರು. ಇದನ್ನು ಗಮನಿಸಿದ್ದ ವಾದಿರಾಜರು ಉಡುಪಿ ಕೃಷ್ಣನಿಗೆ ಪ್ರತಿನಿತ್ಯ ಸಲ್ಲುವ ಮೊದಲ ಪೂಜೆಗೆ ಅಂಬಲಿ ರೊಟ್ಟಿಯನ್ನೇ ನೈವೇದ್ಯವನ್ನಾಗಿರಿಸುವ ನೂತನ ಸಂಪ್ರದಾಯಕ್ಕೆ ಚಾಲನೆ ನೀಡಿದರು. ಅನಂತರ ಕೆಲ ಪ್ರಮುಖ ಹಬ್ಬಗಳನ್ನು ಕನಕನ ಕಿಂಡಿಯ ಮುಂಭಾಗದಲ್ಲೇ ಆಚರಿಸುವ ಸಂಪ್ರದಾಯ ಆರಂಭವಾಯಿತು. ಕೃಷ್ಣ ಮಠದ ಪ್ರಮುಖ ಹಬ್ಬವಾದ ಕೃಷ್ಣಾಷ್ಟಮಿಯ ವಿಠuಲ ಪಿಂಡಿಯಂದು ರಥೋತ್ಸವ ಸಮಯದಲ್ಲಿ ಕನಕನ ಕಿಂಡಿಯ ಮುಂಭಾಗದಲ್ಲೇ ಗುರ್ಜಿ ಹಾಗೂ ಬಟ್ಟೆಯಿಂದ ನಿರ್ಮಿಸಿದ ಗೋಪುರದ ತಳಭಾಗದಲ್ಲಿ ಗೋಪಾಲಕ ವೇಷಧಾರಿಗಳು ಕುಣಿಯುತ್ತಾ ಕೇಕೆ ಹಾಕುತ್ತಾ ಮೊಸರು ಕುಡಿಕೆಯನ್ನು ನಡೆಸುವುದು, ಉಂಡೆ ಚಕ್ಕುಲಿಯನ್ನು ಸಂಭ್ರಮದಿಂದ ವಿತರಿಸುವ ಪದ್ಧತಿಯು ಪ್ರಾರಂಭವಾಯಿತು. ದೀಪಾವಳಿಯ ಸಂದರ್ಭದಲ್ಲಿ ಸಂಭ್ರಮದ ಗೋಪೂಜೆ ಹಾಗೆಯೇ ಬಲೀಂದ್ರ ಪೂಜೆಯನ್ನೂ ಕೂಡಾ ಇಲ್ಲೇ ನಡೆಸುವ ಪದ್ಧತಿ ಬಂದಿತು. 7 ದಶಕಗಳ ಪೂರ್ವದಲ್ಲಿ ದಿವಂಗತ ಮಾನ್ಯ ಮಲ್ಪೆ ಮಧ್ವರಾಜರಿಂದ ಕನಕದಾಸರ ಕುಟೀರವಿದ್ದ ಸ್ಥಳದಲ್ಲಿ ಸುಂದರವಾದ ಕನಕದಾಸರ ಅಪೂರ್ವ ಪ್ರತಿಮೆ ಹಾಗೂ ಗುಡಿಯ ನಿರ್ಮಾಣವಾಯಿತು.  ಕನಕದಾಸರ ನಿತ್ಯ ಪೂಜೆಗಾಗಿ ಪ್ರಸಿದ್ಧ ಬ್ರಾಹ್ಮಣ ಸಮೂಹದ ಕೊಡಂಚ ಕುಟುಂಬದವರನ್ನು ನೇಮಿಸಲಾಯಿತು. ಕೃಷ್ಣನಿಗೆ ಅರ್ಪಣೆಯಾದ ತೀರ್ಥ ಹೂಗಳೊಂದಿಗೆ ಶಾಸ್ತ್ರೋಕ್ತವಾಗಿ ಕೊಡಂಚರು ಪ್ರತಿನಿತ್ಯ ಪೂಜೆಯನ್ನು ಇಂದಿಗೂ ನೆರವೇರಿಸುತ್ತಿ ದ್ದಾರೆ. ಈಗ್ಗೆ 15 ವರುಷಗಳ ಹಿಂದೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಆಶ್ರಯದಲ್ಲಿ ಕೃಷ್ಣ ಮಠದ ಉತ್ತರ ಬದಿಯಲ್ಲಿ ಕನಕ ಮಂಟಪವು ಕನಕದಾಸರ ಪ್ರತಿಮೆ ಸಹಿತವಾಗಿ ಲೋಕಾ ರ್ಪಣೆಗೊಂಡಿತು. ಪ್ರತಿವರ್ಷ ಕನಕ ಜಯಂತಿಯಂದು ಶ್ರೀ ಕೃಷ್ಣ ಮಠದಲ್ಲಿ ಕನಕದಾಸರ ಕುರಿತಾಗಿ ವೈವಿಧ್ಯಮಯ ಗೋಷ್ಠಿ, ಉಪನ್ಯಾಸ, ದಾಸಚಿಂತನೆ, ಹಾಡು,ಹಬ್ಬಗಳು ಜರಗುತ್ತಿವೆ.

ಉಡುಪಿ ಅಷ್ಟಮಠದಲ್ಲಿ ಇದುವರೆಗೆ ಸುಮಾರು 240ಕ್ಕೂ ಮಿಕ್ಕಿ ಯತಿಗಳು ಆಗಿಹೋಗಿದ್ದಾರೆ. ಶ್ರೀ ವ್ಯಾಸರು, ಶ್ರೀ ರಾಘವೇಂದ್ರರು, ಪುರಂದರರಂತಹ ಅಪರೋಕ್ಷ ಜ್ಞಾನಿಗಳು ಈ ಕ್ಷೇತ್ರದಲ್ಲಿ ಬಹುಕಾಲ ಅಪಾರ ಸೇವೆ ಸಲ್ಲಿಸಿದ್ದಾರೆ. ಆದರೆ ಕನಕದಾಸರ ಹೊರತು ಇನ್ನಾರ ಸ್ಮಾರಕವು ಉಡುಪಿ ಕೃಷ್ಣ ಮಠದಲ್ಲಿ ಇಲ್ಲ. ಕನಕದಾಸರಿಗೆ ಲಭಿಸಿದ ಅಗ್ರ ಪ್ರಾಶ್ಯಸ್ತ ಯಾರಿಗೂ ದೊರಕಿಲ್ಲ. ಪ್ರತಿವರ್ಷ ವೈಭವದ ಆರಾಧನೆ ಕನಕ ದಾಸರ ಹೊರತು ಇನ್ನಾರಿಗೂ ಸಲ್ಲುತ್ತಿಲ್ಲ. ಇಷ್ಟೊಂದು ಮಾನ್ಯತೆ, ಗೌರವ ಸ್ಮಾರಕಗಳು ಇದ್ದರೂ ಕೂಡ ಮಠ ಮತ್ತು ಕನಕ ಪೀಠದ ಬಾಂಧವ್ಯಕ್ಕೆ ಹುಳಿ ಹಿಂಡುವ ತಂತ್ರಗಳು ನಿರಂತರವಾಗಿ ಜರಗುತ್ತಿರುವುದು ನಮ್ಮ ದುರಂತ.

Advertisement

ಪಿ. ಲಾತವ್ಯ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next