Advertisement

ಮೀನುಗಾರರನ್ನು ಪದೇ ಪದೇ ಕಾಡುತ್ತಿರುವ ಹವಾಮಾನದ ವೈಪರೀತ್ಯ!

09:42 PM Sep 23, 2020 | mahesh |

ಮಲ್ಪೆ: ಇತ್ತೀಚಿನ ವರ್ಷಗಳಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ಹವಾಮಾನ ವೈಪರೀತ್ಯ ಕರಾವಳಿಯ ಮೀನುಗಾರರನ್ನು ಕಂಗೆಡಿಸುವಂತೆ ಮಾಡಿದೆ. ಈ ಮೊದಲು ಮತ್ಸ್ಯ ಕ್ಷಾಮದಿಂದ ಬಳಲುತ್ತಿದ್ದ ಮೀನುಗಾರರು ಕಳೆದ ಒಂದೂವರೆ ವರ್ಷದಿಂದ ಹವಾಮಾನದ ವೈಪರೀತ್ಯವನ್ನು ಎದುರಿಸುತ್ತಿದ್ದಾರೆ. ಇದು ಉಳಿದ ವ್ಯಾಪಾರ ವ್ಯವಹಾರದ ಮೇಲೂ ಪರೋಕ್ಷವಾಗಿ ಪರಿಣಾಮವನ್ನು ಬೀರಿದೆ.

Advertisement

ಕಳೆದ ವರ್ಷ ಓಖೀ, ಕ್ಯಾರ್‌, ಮಹಾ, ಅಂಫಾನ್‌ ಸೇರಿದಂತೆ ಆರು ಚಂಡ ಮಾರುತಗಳು ಮೀನುಗಾರರ ಬದುಕನ್ನು ಕಸಿದಿತ್ತು. ಪರಿಣಾಮ ಬೋಟ್‌ ಒಂದಷ್ಟು ಕಾಲ ದಡದಲ್ಲಿ ಉಳಿಯಬೇಕಾಯಿತು. ಅಕ್ಟೋಬರ್‌ ನಂತರ ಸ್ವಲ್ಪಮಟ್ಟಿಗೆ ಮೀನುಗಾರಿಕೆ ಚುರುಕು ಕಂಡು, ಡಿಸೆಂಬರ್‌ವರೆಗೆ ಮುಂದುವರಿದರೂ ಜನವರಿಯಿಂದ ಮೀನಿನ ಲಭ್ಯತೆ ಕಡಿಮೆ
ಯಾಯಿತು. ಉಳಿದ ಅವಧಿಯಲ್ಲಿ ಒಂದಷ್ಟು ದುಡಿದು ಕಳೆದುಕೊಂಡಿರುವ ಅರ್ಧದಷ್ಟಾದರೂ ಪಡೆಯೋಣ ಎಂಬ ನಿರೀಕ್ಷೆಯಲ್ಲಿ ಮೀನುಗಾರಿಕೆಗೆ ತೊಡಗಿದರೆ ಮುಂದೆ ಕಾಡಿದ್ದು ಮಹಾಮಾರಿ ಕೊರೊನಾ. ಪರಿಣಾಮ ಕನಿಷ್ಠ ಮೂರು ತಿಂಗಳ ಕಾಲ ಮೀನುಗಾರಿಕೆ ನಡೆಸಲು ಸಾಧ್ಯ
ವಾಗಲಿಲ್ಲ.

ಬೋಟ್‌ಗಳ ಢಿಕ್ಕಿ, ಕೋಟ್ಯಂತರ ರೂ. ನಷ್ಟ
ಹವಾಮಾನದ ವೈಪರೀತ್ಯಗಳಾದಾಗ ಬೋಟುಗಳು ಬಂದರಿನಲ್ಲಿ ಲಂಗರು ಹಾಕುತ್ತವೆ. ಈ ವೇಳೆಯೂ ಸಾಕಷ್ಟು ಹಾನಿಯಾಗಿವೆ. ಹೊಳೆಬದಿ ಲಂಗರು ಹಾಕಿ ನಿಲ್ಲಿಸಲಾಗಿದ್ದ ಮೀನುಗಾರಿಕೆ ಬೋಟುಗಳು ನದಿ ನೀರಿನ ಹರಿವಿನ ರಭಸಕ್ಕೆ ಕಟ್ಟಿದ ಹಗ್ಗ ತುಂಡಾಗಿ ತೇಲಿ ಹೋದರೆ,ಇನ್ನು ಕೆಲವು ಒಂದಕ್ಕೊಂದು ಢಿಕ್ಕಿಯಾಗಿ ಹಾನಿಗೊಂಡಿದೆ. ನಿರಂತರ ಮಳೆಯಿಂದಾಗಿ ನದಿಯಲ್ಲಿ ನೀರು ಪ್ರವಾಹ ವೇಗದಲ್ಲಿ ಹರಿಯುತ್ತಿದ್ದು ನೀರಿನ ಹೊಯ್ದಾಟಕ್ಕೆ ಕಟ್ಟಿದ ಬೋಟುಗಳು ಒಂದಕ್ಕೊಂದು ಢಿಕ್ಕಿ ಹೊಡೆದುಕೊಂಡು ಸಾಕಷ್ಟು ನಷ್ಟ ಉಂಟಾಗಿತ್ತು. ಮೀನುಗಾರಿಕೆ ಆರಂಭಗೊಂಡಂದಿನಿಂದ ಆದಾಯಗಳಿಸುವುದಕ್ಕಿಂತ ಬೋಟಿನ ದುರಸ್ತಿ ಕೆಲಸದ ಖರ್ಚು ಹೆಚ್ಚಾಗಿದೆ.

ಹವಾಮಾನ ಏರಿಳಿತ
ಕಳೆದ ಸಾಲಿನಲ್ಲಿ 6 ಚಂಡಮಾರುತ ಬಂದಿತ್ತು. ಈ ಸಲ ಮೀನುಗಾರಿಕೆ ಆರಂಭಗೊಂಡು ಒಂದು ತಿಂಗಳಲ್ಲಿ ಎರಡು ಹವಾಮಾನ ಏರಿಳಿತ ಕಂಡಿದೆ. ಹೀಗೆ ವೈಪರೀತ್ಯಗಳಿದ್ದರೆ ಮೀನುಗಾರರು ದುಡಿಮೆ ಮಾಡುವುದು ಹೇಗೆ ?  ದಿನದಿಂದ ದಿನಕ್ಕೆ ಮೀನುಗಾರರ  ಸ್ಥಿತಿ ಶೋಚನೀಯವಾಗುತ್ತಿದೆ.
-ಕೃಷ್ಣ ಎಸ್‌. ಸುವರ್ಣ, ಅಧ್ಯಕ್ಷರು, ಮೀನುಗಾರರ ಸಂಘ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next