Advertisement

ಆಸ್ತಿ ಗಳಿಕೆ ವಿಚಾರವಾಗಿ ಐಟಿ ಬದಲು ಇಡಿ ತನಿಖೆ ಆಶ್ಚರ್ಯ ಮೂಡಿಸಿದೆ: ಡಿಕೆಶಿ

06:28 PM Aug 06, 2021 | Team Udayavani |

ಬೆಂಗಳೂರು: ಜಮೀರ್‌ ಅಹಮದ್‌ ಪ್ರಕರಣದಲ್ಲಿ ಆಸ್ತಿ ಗಳಿಕೆ ವಿಚಾರವಾಗಿ ಆದಾಯ ತೆರಿಗೆ ಇಲಾಖೆ ಬದಲು ಜಾರಿ ನಿರ್ದೇಶನಾಲಯ ದಾಳಿ ನಡೆಸಿರುವುದು ಆಶ್ಚರ್ಯ ಮೂಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಐಎಂಎ ವಿಚಾರಕ್ಕೆ ದಾಳಿ ಮಾಡಿಲ್ಲ, ಆಸ್ತಿ ವಿಚಾರವಾಗಿ ದಾಳಿ ಮಾಡಿದ್ದಾರೆ ಜಮೀರ್‌ ಅಹಮದ್‌ ಹೇಳಿದ್ದಾರೆ. ಆಸ್ತಿ ಗಳಿಕೆ ವಿಚಾರವಾಗಿ ಐಟಿ ಬದಲು ಇಡಿ ದಾಳಿ ಮಾಡಿರುವುದು ಅಚ್ಚರಿ ಸಂಗತಿ ಎಂದು ಹೇಳಿದರು.

ಜಮೀರ್‌ ಅಹಮದ್‌ ಅವರು ಹಿಂದೆ ವಿಧಾನಸೌಧದಲ್ಲಿ ಮಾತನಾಡಿ ಐಎಂಎ ಪ್ರಕರಣದಲ್ಲಿ ನಷ್ಟ ಅನುಭವಿಸಿರುವ 40 ಸಾವಿರ ಜನರಿಗೂ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದ್ದರು. ಇದು ನಮ್ಮ ಪಕ್ಷದ ನಿಲುವೂ ಆಗಿದೆ ಎಂದು ತಿಳಿಸಿದರು.

ಆದಾಯ ತೆರಿಗೆ ಇಲಾಖೆಗೆ ಈ ವಿಚಾರದಲ್ಲಿ ದಾಳಿ ಮಾಡುವ ಅಧಿಕಾರ ಇದೆ. ಇಡಿಗೆ ಹಣದ ಅವ್ಯವಹಾರದ ಬಗ್ಗೆ ತನಿಖೆ ಮಾಡುವ ಅಧಿಕಾರ ಇದೆ. ನನಗಿರುವ ಜ್ಞಾನದ ಪ್ರಕಾರ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಅವರಿಗೆ ಹಣದ ಅವ್ಯವಹಾರ ನಡೆದಿದೆ ಎಂಬ ಮಾಹಿತಿ ಸಿಕ್ಕರೆ ನಂತರ ಜಾರಿ ನಿರ್ದೇಶನಾಲಯ ದಾಳಿ ಮಾಡಿ ವಿಚಾರಣೆ ನಡೆಸಬಹುದು. ಆದರೆ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಏಕಾಏಕಿ ದಾಳಿ ಮಾಡಿರುವುದು ಗೊಂದಲ ಮೂಡಿಸಿದೆ ಎಂದು ಹೇಳಿದರು.

ನನ್ನ ಮನೆ ಮೇಲೂ ಸಿಬಿಐ ದಾಳಿ ಮಾಡಿ ನಂತರ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಸರ್ಕಾರದಿಂದ ಅನುಮತಿ ಪಡೆದು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿತು. ಇದೆಲ್ಲದಕ್ಕೂ ಒಂದು ಪ್ರಕ್ರಿಯೆ ಇದೆ. ಜಮೀರ್‌ ಅವರು ಬಿಡುವಾದಾಗ, ನಾನು ಅವರ ಜತೆ ಮಾತಾಡಿ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.

Advertisement

ಸಂತೋಷವಾಯ್ತು ದಾಳಿ ಹಿಂದೆ ನಿಮ್ಮದೇ ಕೈವಾಡ ಇದೆ ಎಂದು ಸಚಿವ ಸೋಮಶೇಖರ್‌ ಆರೋಪಿಸಿದ್ದಾರಲ್ಲಾ ಎಂದಾಗ, ನಮ್ಮ ಸೋಮಶೇಖರ್‌ ಅವರು, ನನ್ನ ನಿಯಂತ್ರಣದಲ್ಲಿ ಇಡಿ ಇದೆ ಎಂದು ಹೇಳಿರುವುದನ್ನು ಕೇಳಿ ಸಂತೋಷವಾಗುತ್ತಿದೆ. ಅವರಿಗೆ ಹೆಚ್ಚುವರಿ ಜವಾಬ್ದಾರಿ ಸಿಗುತ್ತಿದೆ. ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next