Advertisement

ರಾಜ್ಯದಲ್ಲಿ ಬರ, ಮಹಾರಾಷ್ಟ್ರಕ್ಕೆ “ಭರ’ಪೂರ ನೀರು

11:03 AM Mar 03, 2017 | |

ವಿಜಯಪುರ: ಯಾದಗಿರಿ ಜಿಲ್ಲೆಯ ನಾರಾಯಣಪುರ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಬಸವಸಾಗರ ಜಲಾಶಯದಿಂದ ಮಹಾರಾಷ್ಟ್ರದ ಬ್ಯಾರೇಜ್‌ ತುಂಬಿಸಲು ಭೀಮಾ ನದಿಗೆ ಸದ್ದಿಲ್ಲದೇ ನೀರು ಹರಿಸಲಾಗುತ್ತಿದೆ. ರಾಜ್ಯದ ಹಿತ ಬಲಿ ಕೊಟ್ಟು ನೆರೆಯ ರಾಜ್ಯಕ್ಕೆ ನೀರು ಹರಿಸಲು ಕೆಬಿಜೆಎನ್‌ ಎಲ್‌ ವ್ಯವಸ್ಥಾಪಕರು ಜಲಾಶಯಗಳ ಸಿಇಗೆ ಆದೇಶಿಸಿದ್ದಾರೆಂಬುದು ಇದೀಗ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ಹಾಗೂ ಗಂಭೀರ ಚರ್ಚೆಗೆ ಕಾರಣವಾಗಿದೆ.

Advertisement

ಮಹಾರಾಷ್ಟ್ರದ ಸೋಲಾಪುರ ಕಾಡಾ ಸದಸ್ಯ ಕಾರ್ಯದರ್ಶಿ ಹಾಗೂ ಎಸ್‌ಇ ಅವರು ತಮ್ಮ ರಾಜ್ಯದ ಔಜ್‌, ಚಿತಪುರ, ಖಾನಾಪುರ ಹಾಗೂ ಹಿಳ್ಳಿ ಬ್ಯಾರೇಜುಗಳಿಗೆ ನೀರು ತುಂಬಿಸುವಂತೆ ಫೆ. 6ರಂದು ಕೆಬಿಜೆಎಲ್‌ಎಲ್‌ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ. ಈ ಕೋರಿಕೆ ಮೇರೆಗೆ ನಾರಾಯಣಪುರ
ಹಾಗೂ ರಾಂಪುರ ಕಾಲುವೆ ವಿಭಾಗದ ಮುಖ್ಯ ಅಭಿಯಂತರರಿಗೆ ಫೆ.16ರಂದು ಪತ್ರ ಬರೆಯಲಾಗಿದೆ. ಕೆಬಿಜೆಎನ್‌ಎಲ್‌ ವ್ಯವಸ್ಥಾಪಕರು ರಾಜ್ಯದ ನಾರಾಯಣಪುರ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಬಸವಸಾಗರ ಜಲಾಶಯದಿಂದ ಇಂಡಿ ಶಾಖಾ ಕಾಲುವೆ ಮಾರ್ಗವಾಗಿ ಅಗತ್ಯ ಬಿದ್ದಲ್ಲಿ ಪೊಲೀಸ್‌ ಭದ್ರತೆಯಲ್ಲಿ ನೀರು ಹರಿಸುವಂತೆ ಸೂಚಿಸಿದ್ದಾರೆ. ಭೀಮಾ ನದಿಗೆ ಗಡಿ ಭಾಗದಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕ ತಲಾ 4 ಬ್ಯಾರೇಜು
ನಿರ್ಮಿಸಿವೆ. ಭೀಮಾ ನದಿಗೆ ಹರಿಯುವ ನೀರನ್ನು ಕರ್ನಾಟಕದ 4 ಬ್ಯಾರೇಜುಗಳಲ್ಲಿ ಸಂಗ್ರಹಿಸದೆ, ತೂಬುಗಳನ್ನು ತೆರೆದು ಮಹಾರಾಷ್ಟ್ರದ ಬ್ಯಾರೇಜಿಗೆ ಹರಿಸಲು ಸೂಚಿಸಲಾಗಿದೆ.

ರಾಜ್ಯಕ್ಕೆ ಮಾರಕ: ಭೀಮಾ ನದಿಯ ನೈಸರ್ಗಿಕ ಹರಿವು ಕಾಯ್ದುಕೊಳ್ಳಲು ಉಜನಿ ಜಲಾಶಯದಿಂದ ನೀರು ಹರಿಸುವಂತೆ ಸುಪ್ರೀಂಕೋರ್ಟ್‌ ಆದೇಶವಿದೆ. ಉಜನಿ ಜಲಾಶಯದಲ್ಲಿ ಸದ್ಯ ಬಳಕೆಗೆ ಯೋಗ್ಯವಾದ 90 ಟಿಎಂಸಿ ಹಾಗೂ ಡೆಡ್‌ಸ್ಟೋರೇಜ್‌ 60 ಟಿಎಂಸಿ ಅಡಿ ನೀರು ಸಂಗ್ರಹವಿದೆ.

ಉಜನಿ ಜಲಾಶಯದ ಮೇಲ್ಭಾಗದಲ್ಲಿ ಮಹಾರಾಷ್ಟ್ರದ 25 ಬ್ಯಾರೇಜುಗಳಲ್ಲೂ 90 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಅಲ್ಲಿಂದಲೇ ನೀರು ಹರಿಸಿಕೊಳ್ಳಲು ಅವಕಾಶವಿದೆ. ಕರ್ನಾಟಕದಲ್ಲಿ ಕುಡಿವ ನೀರಿಗೆ ಹಾಹಾಕಾರವಿದೆ. ಬಸವಸಾಗರದಲ್ಲಿ 14.4 ಟಿಎಂಸಿ ಅಡಿ ನೀರಿದೆ. ಇಂಥ ದುಸ್ಥಿತಿಯಲ್ಲಿ ರಾಜ್ಯದ 1.5 ಟಿಎಂಸಿ ಅಡಿ ನೀರನ್ನು ಮಹಾರಾಷ್ಟ್ರಕ್ಕೆ ಹರಿಸಲು ಸೂಚಿಸಿರುವ ನಿರ್ಧಾರ ರಾಜ್ಯಕ್ಕೆ ಮಾರಕವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಹಿನ್ನಡೆಗೂ ಕಾರಣ: ಭೀಕರ ಬರದ ನಡುವೆಯೂ ಮಹಾರಾಷ್ಟ್ರಕ್ಕೆ ನೀರು ಹರಿಸಲು ಲಿಖೀತ ಆದೇಶ ನೀಡಿರುವುದು ರಾಜ್ಯಕ್ಕೆ ಕೃಷ್ಣಾ ಕೊಳ್ಳದ ನೀರು ಹಂಚಿಕೆ ಕಾನೂನು ಹೋರಾಟದಲ್ಲಿ ಹಿನ್ನಡೆಗೆ ಕಾರಣವಾಗಲಿದೆ. ಮಹಾರಾಷ್ಟ್ರಕ್ಕೆ ನೀರು ಹರಿಸಿರುವ ಕಾರಣ ಕರ್ನಾಟಕದಲ್ಲಿ ನೀರಿನ ಬರವಿಲ್ಲ. ಹೀಗಾಗಿ ಉಜನಿ ಜಲಾಶಯದಿಂದ ಭೀಮಾ ನದಿ ನೈಸರ್ಗಿಕ ಹರಿವು ಸಂರಕ್ಷಣೆಗೆ ಕರ್ನಾಟಕ ತನ್ನದೇ ಜಲಾಶಯಗಳ ನೀರನ್ನು ಬಳಸಿಕೊಳ್ಳಲಿ ಎಂಬ ವಾದ ಮುಂದಿಡಲು ಈ ಲಿಖೀತ ಆದೇಶ ದಾಖಲೆ ಆಗಲಿದೆಯೆಂಬ ಆತಂಕ ವ್ಯಕ್ತವಾಗಿದೆ ಎನ್ನುತ್ತಾರೆ ಭೀಮಾ ನದಿ ಹಿತ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಪಂಚಪ್ಪ ಕಲಬುರ್ಗಿ.

Advertisement

ಬ್ಯಾರೇಜುಗಳ ವಿವರ: ಉಭಯ ರಾಜ್ಯಗಳ ಗಡಿಯಲ್ಲಿ ನಿರ್ಮಾಣಗೊಂಡಿರುವ ಸಮಾನಾಂತರ 8 ಬ್ಯಾರೇಜುಗಳಲ್ಲಿ ಕ್ರಮ ಸಂಖ್ಯೆಯಲ್ಲಿ 1ನೇ ಗೋವಿಂದಪುರ, 2ನೇ ಉಮರಾಣಿ, 5ನೇ ಚಣೇಗಾಂವ ಹಾಗೂ 6ನೇ ಕ್ರಮ ಸಂಖ್ಯೆಯ ಹಿಂಗಣಿ ಬ್ಯಾರೇಜು ಕರ್ನಾಟಕಕ್ಕೆ ಸೇರಿವೆ. 3ನೇ ಔಜ್‌, 4ನೇ ಚಿತಪುರ, 7ನೇ ಖಾನಾಪುರ ಹಾಗೂ 8ನೇ ಕ್ರಮ ಸಂಖ್ಯೆಯ ಹಿಳ್ಳಿ ಬ್ಯಾರೇಜು ಮಹಾರಾಷ್ಟ್ರಕ್ಕೆ ಸೇರಿವೆ.

ಸಾಲದ ನೀರು
ಕಳೆದ ವರ್ಷ ಕುಡಿವ ನೀರಿಗಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳು ತಮ್ಮ ಜಲಾಶಯಗಳಿಂದ ನೆರೆಯ ರಾಜ್ಯಗಳಿಗೆ ನದಿಗಳ ಮೂಲಕ ನೀರು ಹರಿಸುವ ಕುರಿತು ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿತ್ತು. ರಾಜ್ಯದಿಂದ ಕಳೆದ ಬಾರಿ ಪೂರ್ಣ ನೀರು ಹರಿಸಲಾಗದ ಕಾರಣ ಈಗ ಸಾಲದ ನೀರು ಹರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಾ| ಎಂ. ಬಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ರಾಜ್ಯದಿಂದ 1.2 ಟಿಎಂಸಿ ಅಡಿ ನೀರನ್ನು ಮಹಾರಾಷ್ಟ್ರಕ್ಕೆ ಹರಿಸುವುದು ಬಾಕಿಯಿತ್ತು. ಪ್ರಸಕ್ತ ವರ್ಷ ಹರಿಸುವಂತೆ ಮಹಾರಾಷ್ಟ್ರ ಸರ್ಕಾರ ಕೋರಿದೆ. ಈ ಹಿನ್ನೆಲೆಯಲ್ಲಿ ಈಗ ಭೀಮಾ ನದಿ ಮೂಲಕ ಆ ರಾಜ್ಯದ ಬ್ಯಾರೇಜುಗಳಿಗೆ ನೀರು ಹರಿಸುವುದು ತಪ್ಪಲ್ಲ. ರಾಜ್ಯಕ್ಕೂ ಮಾರಕವಲ್ಲ.
– ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ,
ನೀರಾವರಿ ತಜ್ಞರು

– ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next