Advertisement

ಕ್ರಷರ್‌ನಲ್ಲಿ ಚಾಲಕನ ಕೊಲೆ

11:42 AM Jul 28, 2018 | Team Udayavani |

ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿ ಬೀರಹಳ್ಳಿ ಗ್ರಾಮದ ಕ್ರಷರ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಚಾಲಕನನ್ನು ಸಹಚರರೇ ಗುರುವಾರ ರಾತ್ರಿ ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ. 

Advertisement

ಆಂಧ್ರಪ್ರದೇಶದ ಪುಂಗನೂರು ಬಳಿಯ ಮುತ್ತಕೂರು ಗ್ರಾಮದ ಶಂಕರ್‌ (36) ಕೊಲೆಯಾದ ಚಾಲಕ. ಸುಮಾರು ಒಂದು ವರ್ಷದಿಂದ ಚಾಲಕ ಕೆಲಸ ಮಾಡುತ್ತಿದ್ದ. ಕ್ರಷರ್‌ನ ಟಿಪ್ಪರ್‌ಗಳಲ್ಲಿ ಮತ್ತೋರ್ವ ಕಾರ್ಮಿಕ ಶ್ರೀನಿವಾಸರೆಡ್ಡಿ ಎಂಬುವವ ಡೀಸೆಲ್‌ ಕಳವು ಮಾಡುತ್ತಿದ್ದ ಕುರಿತು ಮಾಲಿಕರಿಗೆ ದೂರು ಹೇಳಿದ್ದನು. 

ಇದರಿಂದಾಗಿ ಚಿಂತಾಮಣಿ ತಾಲೂಕು ಬಟ್ಲಹಳ್ಳಿ ಗ್ರಾಮದ ವಾಸಿ ಶ್ರೀನಿವಾಸರೆಡ್ಡಿಯನ್ನು ಮಾಲಿಕರು ಕೆಲಸದಿಂದ ವಜಾಗೊಳಿಸಿದ್ದರು. ಮೃತನ ಭಾವಮೈದ ಪವನ್‌ ಕುಮಾರ್‌ ಕೂಡ ಇದೇ ಕ್ರಷರ್‌ನಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದು ಖಾಲಿಯಿದ್ದ ಚಾಲಕನ ಸ್ಥಾನಕ್ಕೆ ಶಂಕರ್‌ನನ್ನು ನೇಮಿಸಿಕೊಳ್ಳಲಾಗಿತ್ತು.

ಕ್ರಷರ್‌ನಲ್ಲಿ ಕಾರ್ಮಿಕರಿಗಾಗಿ ನಿರ್ಮಿಸಿರುವ ಮನೆಯಲ್ಲಿಯೇ ಶಂಕರ್‌ ಕೂಡ ವಾಸಿಸುತ್ತಿದ್ದನು. ಗುರುವಾರ ರಾತ್ರಿ ಸುಮಾರು 8.30 ಗಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಯೋರ್ವ ದೊಣ್ಣೆ ಹಿಡಿದು ಮನೆ ಬಾಗಿಲುಗಳನ್ನು ಬಡಿದು ಶಂಕರ್‌ ಬಗ್ಗೆ ವಿಚಾರಿಸುತ್ತಿದ್ದ ಎನ್ನಲಾಗಿದೆ.

ನಂತರ ಸುಮಾರು 9ರ ವೇಳೆ ಕ್ರಷರ್‌ನ ಗೇಟ್‌ ಮುಂಭಾಗ ತಲೆಗೆ ತೀವ್ರ ಗಾಯವಾಗಿ ಶಂಕರ್‌ ಮೃತಪಟ್ಟಿರುವುದು ಕಂಡುಬಂದಿದೆ. ಶ್ರೀನಿವಾಸರೆಡ್ಡಿ ಸೇರಿದಂತೆ ಇತರೆ 3 ಜನ ದುಷ್ಕರ್ಮಿಗಳು ದ್ವೇಷ ಸಾಧಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು

Advertisement

ಮೃತನ ಸಂಬಂಧಿ ಪವನ್‌ ಕುಮಾರ್‌ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಮೃತನಿಗೆ ಪತ್ನಿ, 10 ವರ್ಷದ ಮಗ, 8 ವರ್ಷದ ಹೆಣ್ಣು ಮಗುವಿದೆ. ಈ ಸಂಬಂಧ ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next