Advertisement

ವಾಯವ್ಯ ಸಾರಿಗೆ ಸಿಬ್ಬಂದಿಗೆ ಡ್ರೆಸ್‌ಕೋಡ್‌ ಕಡ್ಡಾಯ​​​​​​​

06:00 AM Sep 21, 2018 | |

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇನ್ನು ಮುಂದೆ ಕಚೇರಿ ಕರ್ತವ್ಯದ ವೇಳೆಯಲ್ಲಿ ಸಭ್ಯ ವಸ್ತ್ರಗಳನ್ನು ಧರಿಸುವ ಮೂಲಕ ವಸ್ತ್ರ ಸಂಹಿತೆ ಪಾಲಿಸುವುದು ಕಡ್ಡಾಯವಾಗಿದ್ದು, ಅಸಭ್ಯ ಎನ್ನಿಸುವ ವಸ್ತ್ರಗಳನ್ನು ಧರಿಸಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ.

Advertisement

ಕಚೇರಿಯ ಕರ್ತವ್ಯದ ವೇಳೆಯಲ್ಲಿ ಶಿಸ್ತು ಹಾಗೂ ವಸ್ತ್ರಸಂಹಿತೆ ಕಡ್ಡಾಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಆದೇಶ ಹೊರಡಿಸಿದ್ದು, ವಸ್ತ್ರಸಂಹಿತೆ ಪಾಲಿಸದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ. ಕೇಂದ್ರ ಕಚೇರಿ, ವಿಭಾಗೀಯ ಕಚೇರಿ, ಪ್ರಾದೇಶಿಕ ಹಾಗೂ ವಿಭಾಗೀಯ ಕಾರ್ಯಾಗಾರಗಳು, ಪ್ರಾದೇಶಿಕ ತರಬೇತಿ ಕೇಂದ್ರ ಸೇರಿ ಸಂಸ್ಥೆಯ ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲಿಸಬೇಕು.

ಆದೇಶ ಏನಿದೆ?: ಕೇಂದ್ರ ಕಚೇರಿ ಒಳಗೊಂಡಂತೆ ಸಂಸ್ಥೆ ವ್ಯಾಪ್ತಿಯ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಕೆಲ ಅ ಧಿಕಾರಿಗಳು ಹಾಗೂ ಸಿಬ್ಬಂದಿ ವಸ್ತ್ರ ಸಂಹಿತೆ ಪಾಲನೆ ಮಾಡದಿರುವುದು ಕಂಡು ಬಂದಿದೆ. ಹೀಗಾಗಿ ಕಚೇರಿ ಸಮಯದಲ್ಲಿ ಕರ್ತವ್ಯಕ್ಕೆ ಸೂಕ್ತವಾದ ಸಭ್ಯ ಉಡುಪುಗಳನ್ನು ಧರಿಸಬೇಕೆಂದು ಸೂಚಿಸಲಾಗಿದೆ. ಆದರೆ ಇಂತಹ ಉಡುಪುಗಳು ನಿಷಿದ್ಧ, ಇಂತಹ ಉಡುಪುಗಳನ್ನೇ ಧರಿಸಬೇಕು ಎನ್ನುವ ವಿವರಣೆಗಳಿಲ್ಲ. ಆದರೆ, ಸಂಸ್ಥೆಯ ಹಿರಿಯ ಅ ಧಿಕಾರಿಯೊಬ್ಬರು ಹೇಳುವಂತೆ, ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌, ಮಹಿಳೆಯರು ಧರಿಸುವ ಲೆಗಿನ್ಸ್‌, ಸಭ್ಯವಲ್ಲದ ಸ್ಲಿವ್‌ಲೆಸ್‌ ಟಾಪ್‌ ನಿಷೇಧಿಸಲಾಗಿದೆ. ಪುರುಷ ಸಿಬ್ಬಂದಿ ಫಾರ್ಮಲ್‌ ಡ್ರೆಸ್‌ ಹಾಗೂ ಮಹಿಳಾ ಸಿಬ್ಬಂದಿ ಸೀರೆ ಹಾಗೂ ಸಭ್ಯ ಎನ್ನಿಸುವ ಚೂಡಿದಾರ ಧರಿಸಬಹುದಾಗಿದೆ.

ಕೇಂದ್ರ ಕಚೇರಿ ಹಾಗೂ ವಿಭಾಗೀಯ ಕಚೇರಿ ಸೇರಿ ಇತರೆಡೆ ಕಾರ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಅ ಧಿಕಾರಿಗಳು ಸಮವಸ್ತ್ರ ಧರಿಸದೇ ಇರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಗುರುತಿಸಿದ್ದಾರೆ. ಹೀಗಾಗಿ ಕರ್ತವ್ಯದ ವೇಳೆ ಅಧಿ ಕಾರಿಗಳು ಹಾಗೂ ಸಿಬ್ಬಂದಿ ಸಮವಸ್ತ್ರ ಧರಿಸಿ ಕಚೇರಿಯ ಶಿಷ್ಟಾಚಾರ ಪಾಲಿಸುವಂತೆ ಆದೇಶದ ಮೂಲಕ ಎಚ್ಚರಿಸಿದ್ದಾರೆ.

ಶಿಸ್ತು ಕ್ರಮವೇನು?
ವಸ್ತ್ರ ಸಂಹಿತೆ ಪಾಲಿಸದವರಿಗೆ ದಂಡ, ಶಿಸ್ತು ಪ್ರಾಧಿಕಾರದ ಮುಖ್ಯಸ್ಥರು ವಾಗ್ಧಂಡನೆ ಕೂಡ ಮಾಡಬಹುದು. ಪುನರಾವರ್ತನೆಯಾದರೆ ತೀವ್ರ ಸ್ವರೂಪದ ಕ್ರಮ ಎದುರಿಸಬೇಕಾಗುತ್ತದೆ. ಸಮವಸ್ತ್ರ ಹೊಂದಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿಯಮ ಉಲ್ಲಂಘನೆಗೆ ನಿಯಮಾವಳಿ ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ. ಕರ್ತವ್ಯದ ವೇಳೆಯಲ್ಲಿ ವಸ್ತ್ರಸಂಹಿತೆ ಕಾಪಾಡಬೇಕು ಎನ್ನುವ ಬಗ್ಗೆ ಸರ್ಕಾರದ ಸುತ್ತೋಲೆಯಿದೆ. 2013ರಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ  ಕಚೇರಿಗೆ ಬರುವಾಗ ಗೌರವ ತರುವಂತಹ ವಸ್ತ್ರಗಳನ್ನು ಧರಿಸಬೇಕೆಂದು ಎಲ್ಲ ಇಲಾಖೆಗಳ ಸಿಬ್ಬಂದಿಗೆ ಆದೇಶದ ಮೂಲಕ ಸೂಚಿಸಿತ್ತು. ಆರಂಭದಲ್ಲಿ ಇದು ಪಾಲನೆಯಾದರೂ ನಂತರ ಹೊಸದಾಗಿ ನೇಮಕಾತಿ ಹೊಂದಿದವರು ಪಾಲನೆ ಮಾಡಲಿಲ್ಲ. ಆದರೆ ಇದೀಗ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಈ ಸುತ್ತೋಲೆಯನ್ನು ಕಡ್ಡಾಯವಾಗಿ ಪಾಲನೆ ಮಾಡುವ ನಿಟ್ಟಿನಲ್ಲಿ ವ್ಯವಸ್ಥಾಪಕ ನಿರ್ದೇಶಕರು ಕೈಗೊಂಡಿರುವ ಕ್ರಮಕ್ಕೆ ಸಿಬ್ಬಂದಿ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಸರ್ಕಾರದ ಹಿಂದಿನ ಆದೇಶದಂತೆ ಸಂಸ್ಥೆಯಲ್ಲಿ ಶಿಸ್ತು ತರುವ ನಿಟ್ಟಿನಲ್ಲಿ ಆರಂಭಿಕವಾಗಿ ವಸ್ತ್ರಸಂಹಿತೆ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಆದೇಶವನ್ನು ಸಿಬ್ಬಂದಿ ಪಾಲನೆ ಮಾಡುತ್ತಾರೆ ಎನ್ನುವ ನಂಬಿಕೆಯಿದೆ. ಪಾಲನೆ ಮಾಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.
– ರಾಜೇಂದ್ರ ಚೋಳನ್‌, ವ್ಯವಸ್ಥಾಪಕ ನಿರ್ದೇಶಕರು

– ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next