Advertisement

ಕೃಷ್ಣಾರ್ಜುನ ಕಾಳಗದಲ್ಲಿ ಮನಸೆಳೆದ ಸಂವಾದ

05:43 PM Aug 29, 2019 | mahesh |

ಶ್ರೀಪತಿಯೆಂದೀವರೆಗೆ ನಾನಾ ಪರಿ ಸ್ತುತಿಸುತಿರಲು ನಿನಗೆ ಗೋಪರ ಜಾತಿ ಸ್ವಭಾವ ಬಿಟ್ಟು ಪೋಪುದೆ ಎಂದು ಅರ್ಜುನನು ಕೃಷ್ಣನನ್ನು ಅಣಕಿಸುವ ಮಾತಿಗೆ ಕೃಷ್ಣ; ಹೌದು ಅರ್ಜುನ, ನಾನು ಗೋಪಾಲನೇ. ಈಗಲೂ ಗೋಪಾಲನ ಬುದ್ಧಿಯನ್ನು ಬಿಡಲಿಲ್ಲ. ಬಿಡುವುದೂ ಇಲ್ಲ. ನೀನು ಗೋವು ಆಗು, ನೀನು ಆ ಗಯನನ್ನು ಕರುವಂತೆ ರಕ್ಷಿಸುತ್ತಾ ಇದ್ದಿಯಲ್ಲಾ, ನನ್ನ ಮುಂದಿಡು. ನಿಮ್ಮಿಬ್ಬರನ್ನು ಕಾಯುವೆನೆಂಬ ಧೈರ್ಯ ನಿನಗಿದ್ದರೆ ನೀವಿಬ್ಬರೂ ನನ್ನ ಮುಂದೆ ಬಂದು ನಿಲ್ಲಿ ಎಂಬ ಮಾತಿಗೆ ಸಭೆಯಲ್ಲಿ ಪ್ರಚಂಡ ಕರತಾಡನದ ಹರ್ಷೋದ್ಗಾರ.

Advertisement

ಇದು ನಡೆದದ್ದು ಆ. 24ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೂಡಬಿದ್ರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದೇವ-ಭಕ್ತನ ಭಾವನೆಗಳನ್ನು, ಭಕ್ತಿಯ ಶಕ್ತಿಯನ್ನು, ಸತ್ಯದ ಸತ್ವವನ್ನು ಪ್ರಚುರಪಡಿಸುವ ಕೃಷ್ಣಾರ್ಜುನ ಕಾಳಗ ತಾಳಮದ್ದಲೆಯಲ್ಲಿ.

ಸಂಕಯ್ಯ ಭಾಗವತರು ರಚಿಸಿದ ಕೃಷ್ಣಾರ್ಜುನ ಕಾಳಗ. ಕೃಷ್ಣನು ಅರ್ಜುನನ ಮನೋಬಲವನ್ನು ಪರೀಕ್ಷಿಸುವ ಸಂದರ್ಭ. ಇದು ಕೃಷ್ಣನ ಕಪಟ ನಾಟಕ. ಮಹಾಭಾರತ ಯುದ್ಧದಲ್ಲಿ ಅರ್ಜುನನ ಕ್ಷಾತ್ರ ದುರಂಧರತೆಯನ್ನು ಒರೆಗೆ ಹಚ್ಚಲು ಸಿದ್ಧಗೊಳಿಸಿದ ಸಂದರ್ಭ.

ಕುಬೇರನ ಮಗ ಗಯನ ಕುದುರೆಯ ಬೆವರ ಹನಿ ಶ್ರೀ ಕೃಷ್ಣನ ಅಘÂì ಜಲವನ್ನು ಮಲಿನಗೊಳಿಸಿತು. ಆಗ ಕೃಷ್ಣ ಎಂಟು ದಿನಗಳೊಳಗಾಗಿ ಗಯನನ್ನು ಕೊಲ್ಲುತ್ತೇನೆ ಇಲ್ಲವಾದರೆ ಅಗ್ನಿ ಕುಂಡದಲ್ಲಿ ಪ್ರಾಣಾರ್ಪಣೆ ಮಾಡುತ್ತೇನೆ ಎನ್ನುವ ಶಪಥ ಮಾಡುತ್ತಾನೆ. ಸತ್ಯವನ್ನು ಮರೆಮಾಚಿ ಗಯನು ಅರ್ಜುನನಲ್ಲಿ ಅಭಯವನ್ನು ಕೇಳಿದಾಗ ಅರ್ಜುನನಿಂದ ಅಭಯ ದೊರೆಯುತ್ತದೆ. ಸಾಧ್ಯವಾಗದೇ ಹೋದರೆ ನನ್ನ ಪ್ರಾಣವನ್ನೇ ಪಣವಾಗಿಡುತ್ತೇನೆ ಎಂದು ಶಪಥ ಮಾಡುತ್ತಾನೆ. ನಂತರ ಶ್ರೀಕೃಷ್ಣ , ಅರ್ಜುನನ ಮಡದಿಯಾದ, ತನ್ನ ತಂಗಿಯಾದ ಸುಭದ್ರೆಯನ್ನು ತನ್ನ ಸಾರಥಿಯಾದ ದಾರುಕನನ್ನು ಸಂಧಾನಕ್ಕೆ ಕಳುಹಿಸುತ್ತಾನೆ.

ಶ್ರೀಕೃಷ್ಣನಾಗಿ ವಾಸುದೇವ ರಂಗಭಟ್‌ ತಮ್ಮ ಮಾತಿನ ಶೈಲಿಯಲ್ಲಿ ವಿಷಯದ ಪ್ರಭುತ್ವದಲ್ಲಿ ಮನ ಸೂರೆಗೊಂಡರು. ಅದನಾಲಿಸುತ ನಿನ್ನ ಗಂಡ …ಎಂಬ ಪದ್ಯವನ್ನು ಹೊಳ್ಳರು ಕಲ್ಯಾಣಿ ರಾಗದಲ್ಲಿ ಸುಂದರವಾಗಿ ಹಾಡಿ ಮುಗಿಸುತ್ತಿದ್ದಂತೆಯೇ ರಂಗ ಭಟ್ಟರು ಕಲ್ಯಾಣಿ… ಎಂದು ಸುಭದ್ರೆಯನ್ನು ಕರೆದು ಮಾತನಾಡಿಸಿದ್ದು ಅವರು ಆ ಪದ್ಯದ ಭಾವವನ್ನು ಅನುಭವಿಸಿದ ಪರಿಯನ್ನು ಸೂಚಿಸಿತು.

Advertisement

ವಾಟೆಪಡು³ ವಿಷ್ಣು ಶರ್ಮರ ಸುಭದ್ರೆ ಭಾವಪೂರ್ಣವಾಗಿ ಮೂಡಿಬಂತು. ನಿನಗೆ ಬಣ್ಣಿಸತಕ್ಕವಳೆ ಯೆನ್ನಿನಿಯ ನಿನಗೆರಡೆಣಿಸುವವನಲ್ಲೆನಲು… ಪದ್ಯಕ್ಕೆ ಅವರ ಭಾವಪೂರ್ಣ ಮಾತುಗಳು ಭಾವುಕರಾಗುವಂತೆ ಮಾಡಿತು.

ಪೆರ್ಮುದೆ ಜಯಪ್ರಕಾಶ ಶೆಟ್ಟಿ ಅರ್ಜುನನ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಿದರು. ದೇವನಲ್ಲಿರುವ ಭಕ್ತಿ, ಪ್ರೀತಿ, ಸಲುಗೆ ಆತನ ಒಂದು ಭಾವವಾದರೆ, ಸತ್ಯದ ಮೇಲಿರುವ ನಿಷ್ಠೆ, ಕ್ಷತ್ರಿಯ ಧರ್ಮದ ಪ್ರಜ್ಞೆ , ಬಂದದ್ದೆಲ್ಲಾ ಬರಲಿ ಭಗವಂತನ ದಯೆಯೊಂದಿರಲಿ ಎಂಬ ಭಾವ ಪೆರ್ಮುದೆಯವರ ಅರ್ಥದಲ್ಲಿ ಒಪ್ಪ ಓರಣವಾಗಿ ಕಡೆದಂತಿತ್ತು.

ಸುಭದ್ರೆಯೊಂದಿಗಿನ ಸಂವಾದದಲ್ಲಿ ಕೊನೆಗೆ ನಿನಗೆ ಅತ್ತೆಯಂದಿರೇ ಮಾರ್ಗಸೂಚಿಗಳು, ಮಾದ್ರಿಯಂತೆ ಸತಿ ಸಹಗಮನ ಅಥವಾ ಕುಂತಿಯಂತೆ ಮಕ್ಕಳನ್ನು ಪೋಷಿಸುವ ಕಾರ್ಯ ಎರಡೇ ಆಯ್ಕೆಗಳು ಎನ್ನುವಾಗ ಅವರ ಕಣ್ಣುಗಳು ಜಿನುಗುವಂತೆ ಸಭಿಕರ ಕಣ್ಣುಗಳು ತೇವಗೊಂಡಿತು.

ಅದು ಅರ್ಜುನ – ಶ್ರೀಕೃಷ್ಣರ ಸಂವಾದದ ಭಾಗವು ತಿಳಿಯಾದ ಹಾಸ್ಯಮಿಶ್ರಿತ, ಭಾವಪೂರ್ಣ, ವಿಚಾರ ಪೂರ್ಣ ಭಾಗವಾಗಿ ಹೊರಹೊಮ್ಮಿತು. ಪೂರ್ಣೇಶ ಆಚಾರ್ಯ ಮಹೇಶ್ವರನ ಪಾತ್ರವನ್ನು ನಿರ್ವಹಿಸಿದರು. ವಿದ್ಯಾ ಕೋಳ್ಯೂರು ಸಂಯೋಜಿಸಿದ್ದರು.

ಭಾಗವತರಾಗಿ ಕಥಾನಕವನ್ನು ಸುಂದರವಾಗಿ ನಡೆಸಿಕೊಟ್ಟವರು ಪುತ್ತಿಗೆ ರಘುರಾಮ ಹೊಳ್ಳರು. ಚೆಂಡೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಮದ್ದಳೆಯಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ, ಚಕ್ರತಾಳದಲ್ಲಿ ಪೂರ್ಣೇಶ ಆಚಾರ್ಯ.

ಗಜಮುಖದವಗೆ ಪದ್ಯವನ್ನು ಅಗರಿ ಶೈಲಿಯಲ್ಲಿ ಹಾಡಿ ಸಭಿಕರಲ್ಲಿ ಹಿತವಾದ ಮಿಂಚೊಂದು ಹರಿಯುವಂತೆ ಮಾಡಿ ನಂತರವೂ ಕೆಲವು ಅಗರಿಶೈಲಿಯ ಹಾಡನ್ನು ಹಾಡಿದರು. ಪ್ರಸಂಗದ ಪ್ರತೀ ಪದ್ಯದ ಕೇಂದ್ರ ಭಾಗವನ್ನು ಅನುಸಂಧಾನಿಸುತ್ತಾ ಅರ್ಥಧಾರಿಗೆ ಅದನ್ನು ಪರಿಣಾಮಕಾರಿಯಾಗಿ ಸಂವಹನ ಮಾಡಿಕೊಂಡು ಹಾಡುತ್ತಿದ್ದ ರೀತಿ ಅನನ್ಯ. ಕವಿಯಾಶಯವನ್ನು ಭಾಗವತನೊಬ್ಬ ಪ್ರೇಕ್ಷಕರಿಗೆ ತಲುಪಿಸುವ ರೀತಿ ಇದು. ಈ ರಸಾನುಭೂತಿ ಅರ್ಥಧಾರಿಗಳಿಗೆ ಪಾತ್ರಾವೇಶವನ್ನು ತಂದುಕೊಟ್ಟದ್ದು ಸುಳ್ಳಲ್ಲ.

ವಿಭಾ ಕೃಷ್ಣಪ್ರಕಾಶ ಉಳಿತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next